ಕಿಂಗ್ ಫಿಷರ್ To ಲಂಡನ್: ಮಲ್ಯ ಪ್ರಕರಣ ನಡೆದು ಬಂದ ಹಾದಿ
ಸದ್ಯ ಮಲ್ಯ ವಿರುದ್ಧ ಲಂಡನ್ನಿನಲ್ಲಿ ವಿಚಾರಣೆ ನಡೆಯಲಿದೆ. ಅದಾದ ನಂತರ ಭಾರತಕ್ಕೆ ಹಸ್ತಾಂತರವಾಗಬೇಕು. ಈ ಸಂದರ್ಭದಲ್ಲಿ ಮಲ್ಯ ಕೇಸ್ ನಡೆದು ಬಂದ ಹಾದಿಯ ಸಂಪೂರ್ಣ ಚಿತ್ರಣ ಇಲ್ಲಿದೆ..
ಬೆಂಗಳೂರು, ಏಪ್ರಿಲ್ 19: ಉದ್ಯಮಿ, ಮಾಜಿ ಮದ್ಯದ ದೊರೆ ವಿಜಯ್ ಮಲ್ಯರನ್ನು ಸ್ಕಾಟ್ಲ್ಯಾಂಡ್ ಯಾರ್ಡ್ ಪೊಲೀಸರು ಮಂಗಳವಾರ ಬಂಧಿಸಿ ವೆಸ್ಟ್ ಮಿನಿಸ್ಟರ್ ಕೋರ್ಟ್ ಗೆ ಹಾಜಾರು ಪಡಿಸಿದ್ದರು. ನಂತರ ಜಾಮೀನು ಪಡೆದು ಮಲ್ಯ ಹೊರ ಬಂದಿದ್ದಾರೆ.
ಕಿಂಗ್ ಫಿಷರ್ ಏರ್ಲೈನ್ಸ್ ಸಂಸ್ಥೆ ಉಳಿಸಲು ಮಲ್ಯ 9,000 ಕೋಟಿ ಸಾಲ ತೆಗೆದು ಕಟ್ಟದೆ ಲಂಡನಿಗೆ ಪರಾರಿಯಾದವರು ವಿಜಯ್ ಮಲ್ಯ. ಮಾರ್ಚ್ 2, 2016ರಂದು ದೇಶ ಬಿಟ್ಟು ಹೋದ ಮಲ್ಯರನ್ನು ದೇಶಕ್ಕೆ ಹಸ್ತಾಂತರಿಸುವಂತೆ ಭಾರತ ಬ್ರಿಟನ್ ಗೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಅಲ್ಲಿನ ಪೊಲೀಸರು ಮಲ್ಯರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.[ಮಲ್ಯ ಭಾರತಕ್ಕೆ ಬರಲು ಕನಿಷ್ಠ 10 ವರ್ಷವಾದರೂ ಬೇಕು!]
ಸದ್ಯ ಮಲ್ಯ ವಿರುದ್ಧ ಲಂಡನ್ನಿನಲ್ಲಿ ವಿಚಾರಣೆ ನಡೆಯಲಿದೆ. ಅದಾದ ನಂತರ ಭಾರತಕ್ಕೆ ಹಸ್ತಾಂತರವಾದರೆ ಭಾರತದ ಕಾನೂನುಗಳ ಪ್ರಕಾರ ಮಲ್ಯ ಕೋರ್ಟ್ ನಲ್ಲಿ ವಿಚಾರಣೆ ಎದುರಿಸಬೇಕಾಗುತ್ತದೆ.
ಈ ಸಂದರ್ಭದಲ್ಲಿ ಮಲ್ಯ ಕೇಸ್ ನಡೆದು ಬಂದ ಹಾದಿಯ ಸಂಪೂರ್ಣ ಚಿತ್ರಣ ಇಲ್ಲಿದೆ..
2008
ಯುನೈಟೆಟ್ ಬೇವರೇಜಸ್ (ಹೋಲ್ಡಿಂಗ್ಸ್) ಅಧ್ಯಕ್ಷರಾಗಿದ್ದ ಮಲ್ಯ ಏರ್ ಡೆಕ್ಕನ್ ಖರೀದಿಸಿದ್ದು 2008ರಲ್ಲಿ. ಒಟ್ಟು 550 ಕೋಟಿ ರೂಪಾಯಿ ನೀಡಿ ಯುಬಿ ಗ್ರೂಪ್ ಏರ್ ಡೆಕ್ಕನ್ ನಲ್ಲಿ ಶೇಕಡಾ 26 ಶೇರುಗಳನ್ನು ಖರೀದಿಸಿತ್ತು. ನಂತರ ಮಲ್ಯ ಬ್ಯಾಂಕುಗಳಿಂದ ಸಾಲ ಪಡೆದು ವಿಮಾನಗಳನ್ನು ಖರೀದಿಸಿದ್ದರು.
ಮಾರ್ಚ್ 2008
ವಿಮಾನದ ಇಂಧನ ದರದಲ್ಲಿ ತೀವ್ರ ಏರಿಕೆಯಾದ ಹಿನ್ನಲೆಯಲ್ಲಿ ಮಲ್ಯ ಕಂಪೆನಿಯ ಸಾಲ ಏರುತ್ತಾ ಸಾಗಿತು. ಮಾರ್ಚ್ ವೇಳೆಗಾಗಲೇ ಕಿಂಗ್ ಫಿಷರ್ ಏರ್ಲೈನ್ಸ್ 934 ಕೋಟಿ ರೂಪಾಯಿ ಸಾಲ ಪಡೆದುಕೊಂಡಿತ್ತು.[ಸಾಲ ಮಾಡಿ ತುಪ್ಪ ತಿಂದವ್ರು ಮಲ್ಯ ಒಬ್ರೇ ಅಲ್ಲ ಸ್ವಾಮೀ!]
2009
ಕಿಂಗ್ ಫಿಷರ್ ಏರ್ಲೈನ್ಸ್ ಬ್ಯಾಂಕುಗಳಿಂದ ಪಡೆದಿದ್ದ ಸಾಲ 5,665 ಕೋಟಿಯಿಂದ 7,000 ಕೋಟಿಗೆ ಏರಿಕೆಯಾಯಿತು. ಯುಬಿ ಗ್ರೂಪ್ ಗೆ ಆರಂಭದಲ್ಲಿ ಸಾಲ ನೀಡಲು ನಿರಾಕರಿಸಿದ್ದ ಐಡಿಬಿಐ ಬ್ಯಾಂಕ್ 900 ಕೋಟಿ ಸಾಲ ನೀಡಿದ್ದರಿಂದ ಕಂಪೆನಿಯ ಸಾಲ ಮತ್ತಷ್ಟು ಹೆಚ್ಚಾಯಿತು.
ನವೆಂಬರ್ 2009
2009ರ ನವೆಂಬರ್ ಮುಗಿಯುವಾಗ ಎರಡನೇ ತ್ರೈಮಾಸಿಕದಲ್ಲಿ ಕಂಪೆನಿ ಬರೋಬ್ಬರಿ 418.77 ಕೋಟಿ ನಿವ್ವಳ ನಷ್ಟ ಅನುಭವಿಸಿತ್ತು. ಸುಮಾರು 100 ಪೈಲಟ್ ಗಳನ್ನು ಕೆಲಸದಿಂದ ಬಿಡುಗಡೆ ಆಡಬೇಕಾಗಿ ಬಂದಿತ್ತು. ಅಂದು ತೈಲ ಬೆಲೆಗಳು ಏರಿಕೆಯಾಗುತ್ತಿದ್ದಂತೆ ತನ್ನ ಟಿಕೆಟ್ ದರಗಳನ್ನೂ ಕಿಂಗ್ ಫಿಷರ್ ಏರ್ಲೈನ್ಸ್ ಏರಿಕೆ ಮಾಡಿತ್ತು.[ಮಲ್ಯ ಬಂಧನ- ಬಿಡುಗಡೆ: ಮೋದಿ ಪ್ರತಿಕ್ರಿಯೆ ಏನು?]
ನವೆಂಬರ್ 2010 & 2011
2010ರ ನವೆಂಬರಿನಲ್ಲಿ ಸಾಲ ಪಾವತಿಗೆ ಬ್ಯಾಂಕುಗಳು ಮಲ್ಯಗೆ 9 ತಿಂಗಳ ಸಮಯಾವಕಾಶ ನೀಡಿದವು. 2011ರ ವೇಳೆಗೆ ವಿಮಾನಯಾನ ಸಂಸ್ಥೆಯ ಕುಸಿತ ಆರಂಭವಾಯಿತು. ದುಡ್ಡಿಲ್ಲದೆ, ಹಾಳಾಗಿ ವಿಮಾನಗಳೆಲ್ಲಾ ನೆಲದಲ್ಲೇ ಉಳಿಯಲು ಆರಂಭವಾಯಿತು. ವಿಮಾನಗಳ ಹಾರಾಟ ಸಂಪೂರ್ಣ ನಿಂತಿತು.[ಜಾಮೀನು ಪಡೆಯುತ್ತಲೇ ಭಾರತೀಯ ಮಾಧ್ಯಮಗಳ ಮೇಲೆ ಮಲ್ಯ ಕಿಡಿ]
ಮಾರ್ಚ್-ಏಪ್ರಿಲ್ 2012
ಮಾರ್ಚ್ ನಲ್ಲಿ ತೆರಿಗೆ ಇಲಾಖೆ ಕಿಂಗ್ ಫಿಷರ್ ಏರ್ಲೈನ್ಸ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿತು. ಏಪ್ರಿಲ್ ವೇಳೆಗೆ ಕಿಂಗ್ ಫಿಷರ್ ಏರ್ಲೈನ್ಸ್ ಭಾರಿ ನಷ್ಟ ಅನುಭವಿಸಿತು. 444.26 ಕೋಟಿ ನಷ್ವವಾಯಿತು. ಬ್ಯಾಂಕ್ ಅಕೌಂಟುಗಳನ್ನು ತಡೆ ಹಿಡಿದಿದ್ದರಿಂದ ಸಿಬ್ಬಂದಿಗಳಿಗೆ ಸಂಬಳ ನೀಡಲಾಗಲಿಲ್ಲ. ಸಂಬಳ ನೀಡದಿದ್ದಾಗ ಸಿಬ್ಬಂದಿಗಳು ಪ್ರತಿಭಟನೆ ಆರಂಭಿಸಿದರು. ಹೀಗೆ ಇಡಿ ಏರ್ಲೈನ್ಸ್ ಹಳ್ಳ ಹಿಡಿಯಿತು.
ಅಕ್ಟೋಬರ್ 2012
ವಿಜಯ್ ಮಲ್ಯ ಹಾಗೂ ಇತರ ನಾಲ್ವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಯಿತು. ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಆದರೆ ವಿಚಾರಣೆಗೆ ಮಲ್ಯ ಮತ್ತವರ ತಂಡ ಹಾಜರಾಗದಿದ್ದಾಗ ಈ ವಾರಂಟ್ ಹೊರಡಿಸಲಾಗಿತ್ತು.
ಅಕ್ಟೋಬರ್ 2012
ಕಿಂಗ್ ಫಿಷರ್ ವಿಮಾನಗಳ ಹಾರಾಟದ ಪರ್ಮಿಟನ್ನೇ ರದ್ದು ಮಾಡಿತು ಡಿಜಿಸಿಎ. ಡಿಸೆಂಬರಿನಲ್ಲಿ ಹಾರಾಟದ ಲೈಸನ್ಸ್ ಅವಧಿ ಮುಗಿದಾಗ ಡಿಜಿಸಿಎ ಮತ್ತೆ ಲೈಸನ್ಸ್ ನೀಡಲು ಒಪ್ಪಲಿಲ್ಲ. ಹೀಗೆ ಕಂಪೆನಿಗೆ ಲೈಸನ್ಸ್ ಇಲ್ಲದಾಯಿತು.
ಫೆಬ್ರವರಿ 2013
ಹಣಕಾಸು ಅಪರಾಧಗಳಿಗೆ ಸಂಬಂಧಿಸಿದ ವಿಶೇಷ ಕೋರ್ಟ್ ಮಲ್ಯಗೆ ಸಮನ್ಸ್ ನೀಡಿತು. ಕಡಿತ ಮಾಡದ ಟ್ಯಾಕ್ಸ್ ಗಳನ್ನು ಕಟ್ಟಿಲ್ಲ ಎನ್ನುವ ಕಾರಣಕ್ಕೆ ಅವರಿಗೆ ಸಮನ್ಸ್ ನೀಡಲಾಗಿತ್ತು. ಆದಾಯ ತೆರಿಗೆ ಇಲಾಖೆಯ ಅರ್ಜಿಯ ಮೇರೆ ಈ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು.
ಆಗಸ್ಟ್ 2014
ಸಾಲ ನೀಡಿದ ಐಡಿಬಿಐ ಬ್ಯಾಂಕ್ ಹಾಗೂ ಕಿಂಗ್ ಫಿಷರ್ ಏರ್ಲೈನ್ಸ್ ಬಿರುದ್ಧ ಸಿಬಿಐ ಪ್ರಾಥಮಿಕ ತನಿಖೆ ಆರಂಭಿಸಿತು. ಏರ್ಲೈನ್ಸ್ ನೆಗೆಟಿವ್ ರೇಟಿಂಗ್ ತೋರಿಸುತ್ತಿದ್ದರೂ ಸಾಲ ನೀಡಿದ ಕಾರಣಕ್ಕೆ ಬ್ಯಾಂಕ್ ವಿರುದ್ಧವೇ ತನಿಖೆ ಆರಂಭಿಸಲಾಗಿತ್ತು.
ಫೆಬ್ರವರಿ - ಏಪ್ರಿಲ್ 2015
ಫೆಬ್ರವರಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 17 ಬ್ಯಾಂಕುಗಳು ಸೇರಿಕೊಂಡು 1200 ಕೋಟಿ ಸಾಲ ಬಾಕಿಗೆ ಸಂಬಂಧಿಸಿದಂತೆ ಕಿಂಗ್ ಫಿಷರ್ ಹೌಸನ್ನು ವಶಕ್ಕೆ ಪಡೆದುಕೊಂಡವು.
ಏಪ್ರಿಲ್ ನಲ್ಲಿ ಯುನೈಟೆಡ್ ಸ್ಪಿರಿಟ್ಸ್ ಹೊಸ ಮಾಲಿಕ ಡಿಯಾಜಿಯೋ ಕಂಪೆನಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಮಲ್ಯಗೆ ಸೂಚಿಸಿತು.
ಡಿಸೆಂಬರ್ 10, 2015
ಅಪರಿಚಿತ ಅಧಿಕಾರಿಗಳ ಜತೆ ಕೈಜೋಡಿಸಿ ಐಡಿಬಿಐ ಬ್ಯಾಂಕಿಗೆ 900 ಕೋಟಿ ಪಂಗನಾಮ ಹಾಕಿದ ಪ್ರಕರಣದಲ್ಲಿ ಸಿಬಿಐ ಮೊದಲ ಬಾರಿಗೆ ಮಲ್ಯರನ್ನು ವಿಚಾರಣೆ ನಡೆಸಿತು.
ಫೆಬ್ರವರಿ 27, 2016
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕುಗಳ ಒಕ್ಕೂಟ ಸಾಲ ಮರುಪಾವತಿ ನ್ಯಾಯಾಧೀಕರಣದ ಮೊರೆ ಹೋದವು. ಕಿಂಗ್ ಫಿಷರ್ ಏರಲೈನ್ಸ್ ಮಾಲಿಕ ವಿಜಯ್ ಮಲ್ಯ ಪಾಸ್ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳುವಂತೆ ಅವು ಒತ್ತಾಯಿಸಿದವು.
ಮಾರ್ಚ್ 2, 2016
ಮಲ್ಯ ದೇಶಬಿಟ್ಟಿದ್ದಾರೆ ಎಂಬ ವರದಿಗಳು ಬರಲು ಆರಂಭವಾಯಿತು. ಕೊನೆಗೆ ಮಾರ್ಚ್ 9ರಂದು ಕೋರ್ಟ್ ನಲ್ಲಿ ಮಲ್ಯ ದೇಶ ಬಿಟ್ಟಿದ್ದನ್ನು ಸರಕಾರವೇ ನ್ಯಾಯಾಲಯಕ್ಕೆ ಖಚಿತಪಡಿಸಿತು. ಮುಂದೆ ಇದೇ ಮಾರ್ಚ್ ನಲ್ಲಿ ಜಾರಿ ನಿರ್ದೇಶನಾಲಯ ಲೇವಾದೇವಿ ಕಾಯ್ದೆಯಡಿ ಮಲ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತು.
ಏಪ್ರಿಲ್ - ಮೇ 2016
ಏಪ್ರಿಲ್ ನಲ್ಲಿ ವಿಜಯ್ ಮಲ್ಯ ಪಾಸ್ಪೋರ್ಟನ್ನು ವಿದೇಶಾಂಗ ಇಲಾಖೆ ರದ್ದು ಮಾಡಿತು. ಮೇನಲ್ಲಿ ರಾಜ್ಯಸಭಾ ಸ್ಥಾನಕ್ಕೆ ಮಲ್ಯ ರಾಜೀನಾಮೆ ನೀಡಿದರು. ಮಲ್ಯಗೆ ಸೇರಿದ 1,411 ಕೋಟಿ ಆಸ್ತಿಯನ್ನು ವಶಕ್ಕೆ ಪಡೆದುಕೊಂಡ ಜಾರಿ ನಿರ್ದೇಶನಾಲಯ ಮಲ್ಯ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಹೊರಡಿಸುವಂತೆ ಒತ್ತಾಯಿಸಿತು.
ಜೂನ್ -ಸೆಪ್ಟೆಂಬರ್ 2016
ಜೂನಿನಲ್ಲಿ ವಿಶೇಷ ನ್ಯಾಯಾಲಯ ಮಲ್ಯನನ್ನು ಉದ್ದೇಶ ಪೂರ್ವಕ ಸುಸ್ತಿದಾರ ಎಂದು ಘೋಷಿಸಿತು. ಆಗಸ್ಟ್ ನಲ್ಲಿ ಬ್ಯಾಂಕುಗಳ ಒಕ್ಕೂಟ ಮಲ್ಯ ವಿರುದ್ಧ ಸಿಬಿಐನಲ್ಲಿ ಕೇಸು ದಾಖಲಿಸಿತು. ಸೆಪ್ಟೆಂಬರಿನಲ್ಲಿ ಮತ್ತೆ 6,630 ಕೋಟಿ ರೂಪಾಯಿ ಮಲ್ಯ ಆಸ್ತಿಯನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದುಕೊಂಡಿತು.
ಅಕ್ಟೋಬರ್ - ನವೆಂಬರ್ 2016
ಹೊಸ ಅಫಿಡವಿಟ್ ಸಲ್ಲಿಸಿ ಆಸ್ತಿ ಘೋಷಣೆ ಮಾಡಿಕೊಳ್ಳುವಂತೆ ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತು.
ಇದಾಗಿ ನವೆಂಬರಿನಲ್ಲಿ ಸಿಬಿಐ, ಮುಂಬೈ ವಿಶೇಷ ನ್ಯಾಯಾಲಯದ ಮೂಲಕ ಮಲ್ಯ ವಿರುದ್ದ ಹೊಸ ಜಾಮೀನು ರಹಿತ ವಾರಂಟ್ ಹೊರಡಿಸಿತು.
ಜನವರಿ 2017
ಏರ್ಲೈನ್ಸ್ ಗೆ ಸಾಲ ನೀಡಿದ್ದ ಐಡಿಬಿಐ ಬ್ಯಾಂಕ್ ಅಧ್ಯಕ್ಷ ಯೋಗೇಶ್ ಅಗರ್ ವಾಲ್ ನ್ನೇ ಸಿಬಿಐ ಬಂಧಿಸಿತು. ಇವರ ಜತೆಗೆ ನಾಲ್ವರು ಕಿಂಗ್ ಫಿಷರ್ ಅಧಿಕಾರಿಗಳನ್ನೂ ಬಂಧಿಸಲಾಗಿತ್ತು.
ಅದೇ ವೇಳೆಗೆ ಸೆಬಿ ಮಲ್ಯ ಮತ್ತು ಇತರ ಆರು ಜನ ಅಧಿಕಾರಿಗಳನ್ನು ಇತರ ಯಾವುದೇ ಉದ್ಯಮಗಳನ್ನು ನಡೆಸದಂತೆ ನಿರ್ಬಂಧಿಸಿತು.
ಫೆಬ್ರವರಿ 2017
ಮಲ್ಯ ಗಡಿಪಾರು ಪ್ರಕ್ರಿಯೆ ಚಾಲನೆ ಪಡೆದುಕೊಂಡಿತು. ಭಾರತ ಬ್ರಿಟನಿಗೆ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಮನವಿ ಮಾಡಿಕೊಂಡಿತು. ಇದೇ ವೇಳೆ ಯುನೈಟೆಡ್ ಬ್ರೇವರೀಸ್ ಆಡಳಿತ ಮಂಡಳಿ ಕಾರ್ಯಕಾರೇತರ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುವಂತೆ ವಿಜಯ್ ಮಲ್ಯಗೆ ಸೂಚಿಸಿತು.
ಫೆಬ್ರವರಿ 2017
ಐದು ಸದಸ್ಯರ ಬ್ರಿಟೀಷ್ ಅಧಿಕಾರಿಗಳ ನಿಯೋಗ ಭಾರತಕ್ಕೆ ಬಂದು ವಿದೇಶಾಂಗ ಇಲಾಖೆ, ಗೃಹ ಇಲಾಖೆ ಸಿಬಿಐ ಅಧಿಕಾರಿಗಳ ಜತೆ ಚರ್ಚೆ ನಡೆಸಿತು. ವಿಜಯ್ ಮಲ್ಯ ಗಡಿಪಾರಿಗೆ ಸಂಬಂಧಿಸಿದಂತೆ ಈ ಚರ್ಚೆ ನಡೆದಿತ್ತು. ಇದೇ ವೇಳೆ ತಪ್ಪಿತಸ್ಥ ಎಂದು ಸಾಬೀತಾದರೆ ಎಷ್ಟು ವರ್ಷ ಜೈಲು ಶಿಕ್ಷೆ ನೀಡಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆದಿತ್ತು.
ಮಾರ್ಚ್ 2017
ಬ್ರಿಟೀಷ್ ಸರಕಾರ ಮಲ್ಯ ಗಡಿಪಾರಿಗೆ ಒಪ್ಪಿಕೊಂಡಿತು. ಭಾರತದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಗಡಿಪಾರು ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ಹೇಳಿತು.
ಏಪ್ರಿಲ್ 18, 2017
ವಿಜಯ್ ಮಲ್ಯರನ್ನು ಸ್ಕಾಟ್ ಲ್ಯಾಂಟ್ ಯಾರ್ಡ್ ಪೊಲೀಸರು ಬಂಧಿಸಿದದರು. ಆದರೆ ಬಂಧನವಾದ ಕೆಲವೇ ಗಂಟೆಗಳಲ್ಲಿ ಮಲ್ಯ ಜಾಮೀನು ಪಡೆದು ಹೊರ ಬಂದರು.