ದಯವಿಟ್ಟು ಸಹಕರಿಸಿ: ಉಕ್ರೇನ್ ವಿಷಯದಲ್ಲಿ ಭಾರತದ ಬೆಂಬಲ ಕೋರಿದ ಯುಎಸ್
ವಾಶಿಂಗ್ಟನ್, ಫೆಬ್ರವರಿ 25: ಉಕ್ರೇನ್ನಲ್ಲಿ ರಷ್ಯಾ ನಡೆಸುತ್ತಿರುವ ಸೇನಾ ಕಾರ್ಯಾಚರಣೆ ಕುರಿತು ಭಾರತದ ಜೊತೆಗೆ ಯುನೈಟೆಡ್ ಸ್ಟೇಟ್ಸ್ ಸಮಾಲೋಚನೆ ನಡೆಸುತ್ತಿದೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಉಕ್ರೇನ್ನಲ್ಲಿ ಯುದ್ಧ ಘೋಷಿಸುವ ಕುರಿತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ದೂರದರ್ಶನದಲ್ಲಿ ಸ್ಪಷ್ಟಪಡಿಸಿದ್ದರು. "ನಾನು ಸೇನಾ ಕಾರ್ಯಾಚರಣೆ ನಡೆಸಲು ನಿರ್ಧಾರ ತೆಗೆದುಕೊಂಡಿದ್ದೇನೆ," ಎಂದು ಅವರು ಮಾಸ್ಕೋದಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಪ್ರಕಟಣೆ ಹೊರಡಿಸಿದ್ದರು. ಇದೇ ವೇಳೆ ರಷ್ಯಾದ ಸೇನಾ ಕಾರ್ಯಾಚರಣೆಯಲ್ಲಿ ಯಾರಾದರೂ ಮಧ್ಯಪ್ರವೇಶ ಮಾಡಿದರೆ, ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಮಧ್ಯಪ್ರವೇಶ ಮಾಡಿದವರು ಎಂದೂ ನೋಡದ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ರಷ್ಯಾ ಅಧ್ಯಕ್ಷ ಪುಟಿನ್ ಎಚ್ಚರಿಕೆ ಮತ್ತು ಉಕ್ರೇನ್ನಲ್ಲಿ ನಡೆಸುತ್ತಿರುವ ಯುದ್ಧದ ಕುರಿತು ಗುರುವಾರ ಯುಎಸ್ ಅಧ್ಯಕ್ಷ ಜೋ ಬೈಡನ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. "ನಾವು ಉಕ್ರೇನಿಯನ್ ಬಿಕ್ಕಟ್ಟಿನ ಕುರಿತು ಭಾರತದೊಂದಿಗೆ ಸಮಾಲೋಚನೆ ನಡೆಸಲಿದ್ದೇವೆ. ನಾವು ಅದನ್ನು ಸಂಪೂರ್ಣವಾಗಿ ಪರಿಹರಿಸಿಲ್ಲ" ಎಂದು ಬೈಡನ್ ತಿಳಿಸಿದ್ದಾರೆ.

ಭಾರತ ಮತ್ತು ರಷ್ಯಾದ ನಡುವೆ ಐತಿಹಾಸಿಕ ಬಾಂಧವ್ಯ
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಕುರಿತು ಭಾರತವು ಸಂಪೂರ್ಣವಾಗಿ ಯುನೈಟೆಡ್ ಸ್ಟೇಟ್ಸ್ನೊಂದಿಗೆ ನಿಂತುಕೊಳ್ಳಲಿದೆಯೇ ಎಂಬ ಪ್ರಶ್ನೆಗೆ ಜೋ ಬೈಡನ್ ಉತ್ತರಿಸಿದರು. ಉಕ್ರೇನ್ ಬಿಕ್ಕಟ್ಟಿನಲ್ಲಿ ಭಾರತ ಮತ್ತು ಯುಎಸ್ ಒಂದೇ ಪುಟದಲ್ಲಿಲ್ಲ. ಏಕೆಂದರೆ ಭಾರತವು ರಷ್ಯಾದೊಂದಿಗೆ ಐತಿಹಾಸಿಕ ಮತ್ತು ಸಮಯ ಪರೀಕ್ಷಿತ ಸ್ನೇಹವನ್ನು ಹೊಂದಿದೆ. ಇದೇ ವೇಳೆ ಕಳೆದ ಐದು ವರ್ಷಗಳಲ್ಲಿ ಯುಎಸ್ ಜೊತೆಗಿನ ಭಾರತದ ಕಾರ್ಯತಾಂತ್ರಿಕ ಪಾಲುದಾರಿಕೆಯು ಅಭೂತಪೂರ್ವ ವೇಗದಲ್ಲಿ ಬೆಳೆದಿದೆ ಎಂದಿದ್ದಾರೆ.

ಉಕ್ರೇನ್ ಬಿಕ್ಕಟ್ಟಿನ ವಿಷಯದಲ್ಲಿ ಬೆಂಬಲಕ್ಕೆ ಮನವಿ
ಯುನೈಟೆಡ್ ಸ್ಟೇಟ್ಸ್ ಶ್ವೇತ ಭವನ ಮತ್ತು ವಿವಿಧ ಹಂತಗಳಲ್ಲಿ ಭಾರತೀಯ ಸಹವರ್ತಿಗಳನ್ನು ಸಂಪರ್ಕಿಸುತ್ತಿದೆ. ಉಕ್ರೇನ್ ಮತ್ತು ರಷ್ಯಾ ಬಿಕ್ಕಟ್ಟಿನ ವಿಷಯದಲ್ಲಿ ಭಾರತದ ಸಂಪೂರ್ಣ ಬೆಂಬಲವನ್ನು ನೀಡಬೇಕು ಎಂದು ಸ್ಟೇಟ್ ಡಿಪಾರ್ಟ್ಮೆಂಟ್ ಮತ್ತು ಅದರ ರಾಷ್ಟ್ರೀಯ ಭದ್ರತಾ ಮಂಡಳಿಯು ಕೋರಿದೆ. ಉಕ್ರೇನ್ ಬಿಕ್ಕಟ್ಟಿನ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ನಿಲುವು ಏನು ಎಂಬ ಬಗ್ಗೆ ಪ್ರಶ್ನೆಗೆ ಶ್ವೇತ ಭವನದ ಕೆಲವು ಹಿರಿಯ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ತನ್ನದೇ ಆದ ಕಾರ್ಯತಂತ್ರದ ಸ್ವಾತಂತ್ರ್ಯವನ್ನು ಉಳಿಸಿಕೊಂಡಿರುವು ಯುಎಸ್ ಅಸಮಾಧಾನಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಪುಟಿನ್ ಜೊತೆ ಪ್ರಧಾನಿ ಮೋದಿ ಚರ್ಚೆ
ಉಕ್ರೇನ್ ಬಿಕ್ಕಟ್ಟಿನ ಕುರಿತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಗುರುವಾರವೇ ದೂರವಾಣಿ ಮೂಲಕ ಚರ್ಚೆ ನಡೆಸಿದ್ದಾರೆ. ರಷ್ಯಾ ಮತ್ತು ನ್ಯಾಟೋ ನಡುವಿನ ಭಿನ್ನಾಭಿಪ್ರಾಯಗಳನ್ನು ಪ್ರಾಮಾಣಿಕ ಮಾತುಕತೆಯ ಮೂಲಕ ಮಾತ್ರ ಪರಿಹರಿಸಬಹುದು ಎಂಬ ನಮ್ಮ ನಂಬಿಕೆಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಪಿಎಂ ಮೋದಿ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ಮನವಿ ಮಾಡಿದರು. ಸಂವಾದದ ಹಾದಿಗೆ ಮರಳಲು ಕರೆ ನೀಡಿದರು ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿದೆ.
Recommended Video

ರಷ್ಯಾದ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸುವ ಎಚ್ಚರಿಕೆ
ಅಮೆರಿಕಾದಲ್ಲಿರುವ ರಷ್ಯಾದ ಎಲ್ಲಾ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಗುರುವಾರ ರಾತ್ರಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಧ್ಯಕ್ಷ ಜೋ ಬೈಡನ್, "ಇಂದು ರಷ್ಯಾದ ರಫ್ತು ನಿಯಮಗಳ ಮೇಲೆ ಹೆಚ್ಚುವರಿ ನಿರ್ಬಂಧ ಹಾಗೂ ನಿಯಂತ್ರಣ ಘೋಷಿಸುತ್ತಿದ್ದೇನೆ. ಅಮೆರಿಕಾದಲ್ಲಿ ಇರುವ ರಷ್ಯಾದ ಎಲ್ಲಾ ಸ್ವತ್ತನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ," ಎಂದು ತಿಳಿಸಿದರು. ಆ ಮೂಲಕ ರಷ್ಯಾದ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಲು ಯುಎಸ್ ನಿರ್ಧರಿಸಿದೆ.
ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸಿರುವ ರಷ್ಯಾ ನಮ್ಮ ನೇರ ಎಚ್ಚರಿಕೆಯ ಹೊರತಾಗಿಯೂ ಉಕ್ರೇನ್ ಮೇಲೆ ಯುದ್ಧ ಘೋಷಿಸಿದೆ. ಭವಿಷ್ಯದಲ್ಲಿ ರಷ್ಯಾ ತನ್ನ ತಪ್ಪಿಗೆ ಸರಿಯಾದ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಬೈಡನ್ ಎಚ್ಚರಿಸಿದ್ದಾರೆ.












Click it and Unblock the Notifications