ಉಕ್ರೇನ್ ಯುದ್ಧ ದಿನ 27: ಕೀವ್ನಲ್ಲಿ ಕರ್ಫ್ಯೂ, ಪ್ರಮುಖ ಬೆಳವಣಿಗೆಗಳ ರೌಂಡ್ಅಪ್
ಕೀವ್, ಮಾರ್ಚ್ 22: ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿ, 27 ದಿನಗಳು ಆಗಿದೆ. ರಷ್ಯಾವು ಬಂದರು ನಗರವಾದ ಮಾರಿಯುಪೋಲ್ನಲ್ಲಿ ಜನರನ್ನು ಸ್ಥಳಾಂತರ ಮಾಡುತ್ತೇವೆ. ಅದರ ಬದಲಾಗಿ ನೀವು ಶಸ್ತ್ರಾಸ್ತ್ರವನ್ನು ತ್ಯಜಿಸಿ ಎಂದು ಉಕ್ರೇನ್ ಸೈನ್ಯಕ್ಕೆ ಹೇಳಿದೆ. ಆದರೆ ಅದನ್ನು ಉಕ್ರೇನ್ ತಿರಸ್ಕರಿಸಿದ್ದು, ಶರಣವಾಗುವುದಿಲ್ಲ ಎಂದು ದೃಢವಾಗಿ ತಿಳಿಸಿದೆ. ಉಕ್ರೇನಿಯನ್ ಪಡೆಗಳ ಮೇಲೆ ಒತ್ತಡ ಹೇರಲು ರಷ್ಯಾದ ಮಿಲಿಟರಿ ಮಾರಿಯುಪೋಲ್ನಲ್ಲಿ ಬಾಂಬ್ ದಾಳಿಯನ್ನು ತೀವ್ರಗೊಳಿಸಿದೆ. ಇತರ ನಗರಗಳ ಮೇಲೆ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ.
ಈ ನಡುವೆ ಉಕ್ರೇನ್ ರಾಜಧಾನಿ ಕೀವ್ನ ಜನನಿಬಿಡ ಪೊಡಿಲ್ ಜಿಲ್ಲೆಯಲ್ಲಿ, ರಷ್ಯಾದ ಸೈನ್ಯದ ಶೆಲ್ ದಾಳಿಯಲ್ಲಿ ಶಾಪಿಂಗ್ ಸೆಂಟರ್ ನಾಶವಾಗಿದೆ. ದಾಳಿಯಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ. ಸುಮಿ ನಗರದ ಹೊರವಲಯದಲ್ಲಿರುವ ರಾಸಾಯನಿಕ ಘಟಕದ ಮೇಲೂ ಬಾಂಬ್ ದಾಳಿ ನಡೆದಿದೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಾವರದ ಬಾಂಬ್ ಸ್ಫೋಟವು ಟ್ಯಾಂಕ್ನಲ್ಲಿ ಸಂಗ್ರಹವಾಗಿರುವ 50 ಟನ್ ಅಮೋನಿಯಾ ಅನಿಲ ಸೋರಿಕೆಗೆ ಕಾರಣವಾಗಿದೆ. ಅಜೋವ್ ಸಮುದ್ರದ ಬಳಿ ಇರುವ ದಕ್ಷಿಣ ನಗರವಾದ ಮರಿಯುಪೋಲ್ ಮೂರು ವಾರಗಳಿಗೂ ಹೆಚ್ಚು ಕಾಲ ರಷ್ಯಾದ ಪಡೆಗಳ ಉಗ್ರ ದಾಳಿಗೆ ಒಳಗಾಗಿದೆ. ಮಾರಿಯುಪೋಲ್ನಲ್ಲಿ ನಡೆದ ದಾಳಿಯನ್ನು ಉಕ್ರೇನ್ ಮತ್ತು ಪಾಶ್ಚಿಮಾತ್ಯ ನಾಯಕರುಗಳು ಯುದ್ಧ ಅಪರಾಧ ಎಂದು ಕರೆದಿದ್ದಾರೆ. 27 ದಿನದ ಪ್ರಮುಖ ಬೆಳವಣಿಗೆಗಳು ಇಲ್ಲಿದೆ ಮುಂದೆ ಓದಿ....

ಉಕ್ರೇನ್-ರಷ್ಯಾ ಯುದ್ಧ ದಿನ 27: ಪ್ರಮುಖ ಬೆಳವಣಿಗೆಗಳು
* ಕೀವ್ನ ಮೇಯರ್ ವಿಟಾಲಿ ಕ್ಲಿಟ್ಸ್ಕೊ ಅವರು ಉಕ್ರೇನ್ ರಾಜಧಾನಿಯಲ್ಲಿ ದೀರ್ಘಾವಧಿಯ ಕರ್ಫ್ಯೂ ಹೇರುವುದಾಗಿ ಘೋಷಿಸಿದ್ದಾರೆ. ರಷ್ಯಾದ ಪಡೆಗಳು ನಗರದ ಮೇಲೆ ಹೆಚ್ಚಿನ ಶೆಲ್ ದಾಳಿಯನ್ನು ಪ್ರಾರಂಭಿಸುತ್ತಿದೆ ಎಂಬ ಹಿನ್ನೆಲೆಯಿಂದಾಗಿ ಅಧಿಕಾರಿಗಳು ಉಕ್ರೇನ್ ರಾಜಧಾನಿ ಕೀವ್ನಲ್ಲಿ ಸುದೀರ್ಘ ಕರ್ಫ್ಯೂವನ್ನು ಹೇರಿದ್ದಾರೆ. ಮೇಯರ್ ವಿಟಾಲಿ ಕ್ಲಿಟ್ಸ್ಕೊ ಈ ಹಿಂದೆ ರಾತ್ರಿ 8 ರಿಂದ ಬುಧವಾರ ಬೆಳಿಗ್ಗೆ 7 ರವರೆಗೆ 'ಕರ್ಫ್ಯೂ' ಘೋಷಿಸಿದ್ದರು. ಬಳಿಕ ಅದನ್ನು ವಿಸ್ತರಣೆ ಮಾಡಲಾಗಿದೆ. ನಗರದ ಕೆಲವು ಭಾಗಗಳಲ್ಲಿ ರಷ್ಯಾ ಸೇನೆ ನಿರಂತರವಾಗಿ ದಾಳಿ ನಡೆಸುತ್ತಿದೆ.
* ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವೀಡಿಯೊ ಸಂದೇಶದಲ್ಲಿ ರಷ್ಯಾದ ಮಿಲಿಟರಿಯು ಕಲಾ ಶಾಲೆಯ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಅಧಿಕಾರಿಗಳ ಪ್ರಕಾರ, ಸುಮಾರು 400 ಜನರು ಈ ಸ್ಥಳದಲ್ಲಿ ಆಶ್ರಯ ಪಡೆದಿದ್ದಾರೆ. "ಅಲ್ಲಿದ್ದ ಜನರು ಅವಶೇಷಗಳಡಿಯಲ್ಲಿ ಸಮಾಧಿಯಾಗಿದ್ದಾರೆ. ಅವರಲ್ಲಿ ಎಷ್ಟು ಮಂದಿ ಬದುಕುಳಿದರು ಎಂಬುದು ನಮಗೆ ತಿಳಿದಿಲ್ಲ, ಆದರೆ ಕಲಾ ಶಾಲೆಗೆ ಬಾಂಬ್ ಸ್ಫೋಟಿಸಿದ ಪೈಲಟ್ ಅನ್ನು ನಾವು ಖಂಡಿತವಾಗಿಯೂ ಕೊಲ್ಲುತ್ತೇವೆ ಎಂದು ನಮಗೆ ತಿಳಿದಿದೆ," ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
* ರಷ್ಯಾದ ಕರ್ನಲ್ ಜನರಲ್ ಮಿಖಾಯಿಲ್ ಮಿಜಿಂಟ್ಸೆವ್ ಮಾರಿಯುಪೋಲ್ನಲ್ಲಿ ಜನರ ಸ್ಥಳಾಂತರಕ್ಕೆ ಅನುಮತಿಸುವುದಾಗಿ ಹೇಳಿದರು. ಒಂದು ಪೂರ್ವಕ್ಕೆ ರಷ್ಯಾಕ್ಕೆ ಮತ್ತು ಇನ್ನೊಂದು ಪಶ್ಚಿಮಕ್ಕೆ ಉಕ್ರೇನ್ನ ಇತರ ಭಾಗಗಳಿಗೆ ಜನರನ್ನು ಸ್ಥಳಾಂತರ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಉಕ್ರೇನ್ ಒಪ್ಪದಿದ್ದರೆ ಮಾರಿಯುಪೋಲ್ ಅಧಿಕಾರಿಗಳು ಮಿಲಿಟರಿ ಕೋರ್ಟ್ ಅನ್ನು ಎದುರಿಸಬಹುದು ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ ಎಂದು ರಷ್ಯಾದ ಮಾಧ್ಯಮ ವರದಿ ಮಾಡಿದೆ.
* ರಷ್ಯಾದ ಮಿಲಿಟರಿ ಕಲಾ ಶಾಲೆಯ ಮೇಲೆ ಬಾಂಬ್ ದಾಳಿ ಮಾಡಿದ ಗಂಟೆಗಳ ನಂತರ ಜನರ ಸ್ಥಳಾಂತರ ಮಾಡುವ ವಿಚಾರವನ್ನು ರಷ್ಯಾವು ಪ್ರಸ್ತಾಪ ಮಾಡಿದೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ರಷ್ಯಾದ ಪ್ರಸ್ತಾಪವನ್ನು ಉಕ್ರೇನ್ ತಿರಸ್ಕರಿಸಿದೆ. ಉಕ್ರೇನ್ನ ಉಪ ಪ್ರಧಾನಿ ಐರಿನಾ ವೆರೆಶ್ಚುಕ್, "ಶರಣಾಗತಿ, ಶಸ್ತ್ರಾಸ್ತ್ರಗಳನ್ನು ತ್ಯಜಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾವು ಈಗಾಗಲೇ ರಷ್ಯಾದ ಕಡೆಯವರಿಗೆ ಈ ಬಗ್ಗೆ ತಿಳಿಸಿದ್ದೇವೆ. ಎಂಟು ಪುಟಗಳ ಪತ್ರವನ್ನು ಬರೆಯಲು ಅವರು ಸುಮ್ಮನೇ ಸಮಯವನ್ನು ವ್ಯರ್ಥ ಮಾಡಬಾರದು," ಎಂದು ಖಡಕ್ ಆಗಿ ಹೇಳಿದ್ದಾರೆ.
* ರಷ್ಯಾದ ಮಿಲಿಟರಿಯ ಬಾಂಬ್ ದಾಳಿಯು ವಿದ್ಯುತ್, ನೀರು ಮತ್ತು ಆಹಾರ ಸರಬರಾಜುಗಳನ್ನು ನಾಶಪಡಿಸಿದೆ. ಹೊರಗಿನ ಪ್ರಪಂಚದೊಂದಿಗೆ ನಗರದ ಸಂಪರ್ಕವನ್ನೇ ಸ್ಥಗಿತಗೊಳಿಸಿದೆ ಎಂದು ಮಾರಿಯುಪೋಲ್ ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾದ ದಾಳಿಯ ಪರಿಣಾಮವಾಗಿ ನಗರದಲ್ಲಿ ಕನಿಷ್ಠ 2,300 ಜನರು ಸಾವನ್ನಪ್ಪಿದ್ದಾರೆ. ಕೆಲವರನ್ನು ಸಾಮೂಹಿಕ ಸಮಾಧಿಗಳಲ್ಲಿ ಹೂಳಲಾಗಿದೆ ಎಂದು ಮರಿಯುಪೋಲ್ ಅಧಿಕಾರಿಗಳು ತಿಳಿಸಿದ್ದಾರೆ. ಮಾರಿಯುಪೋಲ್ ಮತ್ತು ಇತರ ಉಕ್ರೇನಿಯನ್ ನಗರಗಳಿಂದ ಜನರನ್ನು ಸ್ಥಳಾಂತರ ಮಾಡುವ ಹಲವಾರು ಪ್ರಯತ್ನಗಳು ವಿಫಲವಾಗಿವೆ ಅಥವಾ ಭಾಗಶಃ ಯಶಸ್ಸನ್ನು ಕಂಡಿವೆ ಎಂದು ಉಲ್ಲೇಖ ಮಾಡಿದ್ದಾರೆ.
* ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿಕೆಗಳು ದ್ವಿಪಕ್ಷೀಯ ಸಂಬಂಧಗಳನ್ನು ಕುಸಿತದ ಅಂಚಿಗೆ ತಳ್ಳಿದೆ ಎಂದು ವಿವರಿಸಲು ಯುಎಸ್ ರಾಯಭಾರಿ ಜಾನ್ ಸುಲ್ಲಿವಾನ್ ಅವರನ್ನು ಕರೆಸಲಾಗಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ. ಕಳೆದ ವಾರ, ಉಕ್ರೇನ್ಗೆ ಸಾವಿರಾರು ಸೈನಿಕರ ಮೂಲಕ ದಾಳಿ ನಡೆಸಿದ್ದಕ್ಕಾಗಿ ಪುಟಿನ್ 'ಯುದ್ಧ ಅಪರಾಧಿ' ಎಂದು ಬೈಡೆನ್ ಆರೋಪ ಮಾಡಿದ್ದಾರೆ.
* ರಷ್ಯಾವು ಫೋನ್ಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಂಡು ನಂತರ ಬಲವಂತವಾಗಿ ಸೈಬೀರಿಯನ್ ನಗರಗಳಿಗೆ ಕರೆದೊಯ್ದಿದೆ. ಅದಕ್ಕೂ ಮುನ್ನ ಉಕ್ರೇನಿಯನ್ನರನ್ನು 'ಫಿಲ್ಟರೇಶನ್ ಸೆಂಟರ್'ಗಳಿಗೆ ಗಡೀಪಾರು ಮಾಡಿದೆ ಎಂದು ಆರೋಪ ಮಾಡಿದೆ. ಉಕ್ರೇನಿಯನ್ ನಾಗರಿಕರನ್ನು ಮೊದಲು 'ಫಿಲ್ಟರೇಶನ್ ಕ್ಯಾಂಪ್'ಗಳಲ್ಲಿ ಇರಿಸಲಾಯಿತು, ನಂತರ ರಷ್ಯಾದಲ್ಲಿ ಗಡೀಪಾರು ಮಾಡಲಾಗಿದೆ. ಅಲ್ಲಿ ಅವರು ಜೀತದಾಳುಗಳಾಗಿ ದುಡಿಯುವಂತೆ ಮಾಡಲಾಗುತ್ತಿದೆ ಎಂದು ಮಾರಿಯುಪೋಲ್ ಸಿಟಿ ಕೌನ್ಸಿಲ್ ಹೇಳಿಕೊಂಡಿದೆ.
* ಮಾಸ್ಕೋ ಮತ್ತು ಕೀವ್ ನಡುವಿನ ಶಾಂತಿ ಮಾತುಕತೆಯ ಸಮಯದಲ್ಲಿ ಉಕ್ರೇನ್ ವಿರುದ್ಧ ಮಿಲಿಟರಿ ಕ್ರಮವನ್ನು ರಷ್ಯಾ ನಿಷೇಧಿಸುವುದಿಲ್ಲ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸೋಮವಾರ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
* ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರದ ಸುತ್ತಲಿನ ವಿಕಿರಣ ಮಾನಿಟರ್ಗಳು ಕೆಲಸ ಮಾಡುವುದನ್ನು ನಿಲ್ಲಿಸಿವೆ ಎಂದು ಉಕ್ರೇನ್ನ ಪರಮಾಣು ನಿಯಂತ್ರಣ ಸಂಸ್ಥೆ ಹೇಳಿದೆ. 1986 ರಲ್ಲಿ ಇದೇ ಸ್ಥಾವರದಲ್ಲಿ ವಿಶ್ವದ ಅತ್ಯಂತ ಭೀಕರ ಪರಮಾಣು ಅಪಘಾತವಾಗಿದೆ. ಸೋಮವಾರ ಬಿಡುಗಡೆ ಮಾಡಿದ ತನ್ನ ಹೇಳಿಕೆಯಲ್ಲಿ, ಕಾಡುಗಳನ್ನು ಉಳಿಸಲು ಈಗ ಈ ಪ್ರದೇಶದಲ್ಲಿ ಅಗ್ನಿಶಾಮಕ ಸೇವೆ ಇಲ್ಲ ಎಂದು ಸಂಸ್ಥೆ ಹೇಳಿದೆ. ಫೆಬ್ರವರಿ 24 ರಂದು ರಷ್ಯಾದ ಪಡೆಗಳು ಈ ಸ್ಥಾವರವನ್ನು ಸ್ವಾಧೀನಪಡಿಸಿಕೊಂಡಿದೆ.
* ರಷ್ಯಾವು ಉಕ್ರೇನ್ನಲ್ಲಿ ಯುದ್ಧ ಅಪರಾಧಗಳನ್ನು ಎಸಗಿದೆ ಎಂದು ಸೋಮವಾರದಂದು ಇಯು ಸದಸ್ಯ ರಾಷ್ಟ್ರಗಳು ಆರೋಪಿಸಿದೆ. ಆದರೆ ಮಾಸ್ಕೋ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸುವ ಯಾವುದೇ ಸೂಚನೆಯನ್ನು ನೀಡಲಿಲ್ಲ. ಉಕ್ರೇನಿಯನ್ ನಗರವಾದ ಮಾರಿಯುಪೋಲ್ನಲ್ಲಿ ನಾಗರಿಕ ಸಾವುನೋವುಗಳ ಸಂಖ್ಯೆಯು ಹೆಚ್ಚಾದಂತೆ, ಜರ್ಮನ್ ವಿದೇಶಾಂಗ ಮಂತ್ರಿ ಅನ್ನಾಲೆನಾ ಬೇಯರ್ಬಾಕ್ ಅವರು ನಾಗರಿಕ ಸೌಲಭ್ಯಗಳು, ಆಸ್ಪತ್ರೆಗಳು ಮತ್ತು ಚಿತ್ರಮಂದಿರಗಳ ಮೇಲೆ ರಷ್ಯಾದ ಹೆಚ್ಚುತ್ತಿರುವ ದಾಳಿಯನ್ನು ಖಂಡಿಸಿದ್ದಾರೆ.












Click it and Unblock the Notifications