War News: ಭಾರತದ ಬೆಂಬಲ ಕೋರಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ
ನವದೆಹಲಿ, ಡಿಸೆಂಬರ್ 26: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉಕ್ರೇನ್ ಮತ್ತು ರಷ್ಯಾ ನಡುವಿನ ಹಗೆತನವನ್ನು ತಕ್ಷಣವೇ ನಿಲ್ಲಿಸುವ ತಮ್ಮ ಕರೆಯನ್ನು ಪುನರುಚ್ಚರಿಸಿದರು.
ತಮ್ಮ ಭಿನ್ನಾಭಿಪ್ರಾಯಗಳಿಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯಲು ಎರಡೂ ಕಡೆಯವರು ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಮರಳಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ಈ ಕುರಿತು ಟ್ವೀಟ್ನಲ್ಲಿ, ಝೆಲೆನ್ಸ್ಕಿ ಅವರು ಜಿ-20 ವೇದಿಕೆಯಲ್ಲಿ ಪ್ರಸ್ತಾಪಿಸಿದ ಅವರ "ಶಾಂತಿ ಸೂತ್ರ"ದ ಅನುಷ್ಠಾನಕ್ಕೆ ಭಾರತದ ಬೆಂಬಲವನ್ನು ಕೋರಿದ್ದಾರೆ.
ಉಕ್ರೇನ್ನಲ್ಲಿ ಯುದ್ಧ ಕೊನೆಗೊಳಿಸಲು ಮನಸು ಮಾಡಿದ ಪುಟಿನ್!
ಈ ವರ್ಷದ ಆರಂಭದಲ್ಲಿ ಪೂರ್ವ ಯುರೋಪಿಯನ್ ದೇಶದಿಂದ ಹಿಂತಿರುಗಬೇಕಾದ ಭಾರತೀಯ ವಿದ್ಯಾರ್ಥಿಗಳ ಮುಂದುವರಿದ ಶಿಕ್ಷಣಕ್ಕೆ ಉಕ್ರೇನಿಯನ್ ಅಧಿಕಾರಿಗಳು ವ್ಯವಸ್ಥೆ ಮಾಡುವಂತೆ ಮೋದಿ ವಿನಂತಿಸಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ (PMO) ತಿಳಿಸಿದೆ.
ಪ್ರಧಾನಮಂತ್ರಿ ಕಚೇರಿ ಟ್ವೀಟ್ ಹೇಳುವುದೇನು?
ಉಕ್ರೇನ್ನಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಉಭಯ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಈ ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕೆಂಬ ತಮ್ಮ ಕರೆಯನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು ಮತ್ತು ತಮ್ಮ ಭಿನ್ನಾಭಿಪ್ರಾಯಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಎರಡೂ ಕಡೆಯವರು ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಮರಳಬೇಕು ಎಂದು ಹೇಳಿದರು," ಎಂಬುದನ್ನು ಪಿಎಂಒ ಹೇಳಿಕೆಯಲ್ಲಿ ತಿಳಿಸಿದೆ.
ಭಾರತವು ಯಾವುದೇ ಶಾಂತಿಯ ಪ್ರಯತ್ನಗಳಿಗೆ ಬೆಂಬಲ ನೀಡುವುದಾಗಿ ಮೋದಿ ತಿಳಿಸಿದ್ದಾರೆ. ಇದರ ಜೊತೆಗೆ ಪೀಡಿತ ನಾಗರಿಕರಿಗೆ ಮಾನವೀಯ ನೆರವು ನೀಡುವುದನ್ನು ಮುಂದುವರಿಸಲು ಭಾರತ ಬದ್ಧವಾಗಿದೆ ಎಂಬುದರ ಬಗ್ಗೆ ಉಕ್ರೇನಿಯನ್ ಅಧ್ಯಕ್ಷರಿಗೆ ಭರವಸೆ ನೀಡಿದರು. ಈ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಅವಕಾಶಗಳ ಕುರಿತು ಉಭಯ ನಾಯಕರು ಚರ್ಚಿಸಿದರು. ಇದೇ ವರ್ಷದ ಆರಂಭದಲ್ಲಿ ಉಕ್ರೇನ್ನಿಂದ ಹಿಂತಿರುಗಬೇಕಾದ ಭಾರತೀಯ ವಿದ್ಯಾರ್ಥಿಗಳ ಮುಂದುವರಿದ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲು ಉಕ್ರೇನ್ ಅಧಿಕಾರಿಗಳಿಗೆ ಪ್ರಧಾನಿ ವಿನಂತಿಸಿದರು," ಎಂದು ಪಿಎಂಒ ಹೇಳಿದೆ.
ಭಾರತಕ್ಕೆ ನೂರಾರು ವಿದ್ಯಾರ್ಥಿಗಳು ಉಕ್ರೇನ್ ನಿಂದ ವಾಪಸ್
ಕಳೆದ ಫೆಬ್ರವರಿ 24 ರಂದು ಪ್ರಾರಂಭವಾದ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನಂತರ ನೂರಾರು ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಭಾರತಕ್ಕೆ ಮರಳಿದರು. ಭಾರತದ ಜಿ-20 ಅಧ್ಯಕ್ಷರಾಗಲು ಝೆಲೆನ್ಸ್ಕಿ ಅವರು ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ ಎಂದು ಪಿಎಂಒ ಹೇಳಿದೆ. "ಆಹಾರ ಮತ್ತು ಇಂಧನ ಭದ್ರತೆಯಂತಹ ವಿಷಯಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಕಳವಳಗಳಿಗೆ ಧ್ವನಿ ನೀಡುವುದು ಸೇರಿದಂತೆ ಭಾರತದ G-20 ಪ್ರೆಸಿಡೆನ್ಸಿಯ ಪ್ರಮುಖ ಆದ್ಯತೆಗಳನ್ನು ಪ್ರಧಾನ ಮಂತ್ರಿ ವಿವರಿಸಿದರು," ಎಂದು PMO ಹೇಳಿದೆ.
ಪ್ರಧಾನಿ ಜೊತೆಗಿನ ಮಾತಿನದ ಬಗ್ಗೆ ಝೆಲೆನ್ಸ್ಕಿ ಟ್ವೀಟ್
"ನಾನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಕರೆ ಮಾಡಿದ್ದೇನೆ. ಯಶಸ್ವಿ #G20 ಅಧ್ಯಕ್ಷ ಸ್ಥಾನವನ್ನು ಬಯಸುತ್ತೇನೆ. ಈ ವೇದಿಕೆಯಲ್ಲಿ ನಾನು ಶಾಂತಿ ಸೂತ್ರವನ್ನು ಘೋಷಿಸಿದೆ. ಈಗ ಅದರ ಅನುಷ್ಠಾನದಲ್ಲಿ ಭಾರತದ ಭಾಗವಹಿಸುವಿಕೆಯನ್ನು ನಾನು ನಂಬುತ್ತೇನೆ. ಯುಎನ್ನಲ್ಲಿ ಮಾನವೀಯ ನೆರವು ಮತ್ತು ಬೆಂಬಲಕ್ಕಾಗಿ ನಾನು ಧನ್ಯವಾದ ಹೇಳಿದ್ದೇನೆ. ಡಿಸೆಂಬರ್ 16ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಮೋದಿ ಅವರು ಉಕ್ರೇನ್ ಸಂಘರ್ಷವನ್ನು "ಸಂವಾದ ಮತ್ತು ರಾಜತಾಂತ್ರಿಕತೆ" ಮೂಲಕ ಪರಿಹರಿಸುವ ಕರೆಯನ್ನು ಪುನರುಚ್ಚರಿಸಿದರು ಎಂದು ಝೆಲೆನ್ಸ್ಕಿ ತಮ್ಮ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಪುಟಿನ್ ಜೊತೆಗೆ ಮಾತನಾಡಿರುವ ಪ್ರಧಾನಿ ಮೋದಿ
ಕಳೆದ ಫೆಬ್ರವರಿಯಲ್ಲಿ ಉಕ್ರೇನ್ ಸಂಘರ್ಷ ಪ್ರಾರಂಭವಾದಾಗಿನಿಂದ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಝೆಲೆನ್ಸ್ಕಿಯೊಂದಿಗೆ ಹಲವಾರು ಬಾರಿ ಮಾತನಾಡಿದ್ದಾರೆ. ಅಕ್ಟೋಬರ್ 4 ರಂದು ಝೆಲೆನ್ಸ್ಕಿಯೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ, "ಯಾವುದೇ ಮಿಲಿಟರಿ ಪರಿಹಾರ" ಸಾಧ್ಯವಿಲ್ಲ, ಆದರೆ ಯಾವುದೇ ರೀತಿಯ ಶಾಂತಿ ಪ್ರಯತ್ನಗಳಿಗೆ ಭಾರತವು ನೆರವು ನೀಡಲು ಸಿದ್ಧವಾಗಿದೆ ಎಂದು ಪ್ರಧಾನಿ ಹೇಳಿದ್ದರು. ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಭಾರತ ಇನ್ನೂ ಖಂಡಿಸಿಲ್ಲ. ಈ ಬಿಕ್ಕಟ್ಟನ್ನು ರಾಜತಾಂತ್ರಿಕತೆ ಮತ್ತು ಮಾತುಕತೆಯ ಮೂಲಕ ಪರಿಹರಿಸಬೇಕು ಎಂದು ಸಮರ್ಥಿಸಿಕೊಂಡಿದೆ.