ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್, ರಷ್ಯಾ ಒತ್ತೆಯಾಳುಗಳಾಗಿ ಇರಿಸಿದೆಯಾ?
ನವದೆಹಲಿ, ಮಾರ್ಚ್ 03: ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಭಾರತವು ತನ್ನ ಪ್ರಯತ್ನಗಳನ್ನು ಮಾಡುತ್ತಿದೆ. ಈ ನಡುವೆ ರಷ್ಯಾ ಮತ್ತು ಉಕ್ರೇನ್ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ಪರಸ್ಪರ ಆರೋಪ ಮಾಡಿದೆ. ಉಕ್ರೇನ್ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂದು ರಷ್ಯಾ ಆರೋಪ ಮಾಡಿದೆ. ಆದರೆ ಭಾರತ ಮಾತ್ರ ಈ ಆರೋಪವನ್ನು ನಿರಾಕರಿಸಿದೆ.
ಉಕ್ರೇನ್ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿ ಇರಿಸಿದೆ ಎಂದು ರಷ್ಯಾ ಬುಧವಾರ ಹೇಳಿಕೊಂಡಿದೆ. ಖಾರ್ಕಿವ್ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ರಷ್ಯಾ ಪ್ರಯತ್ನಿಸುತ್ತಿರುವಾಗ ಉಕ್ರೇನ್ ಪಡೆಗಳು ಭಾರತೀಯರನ್ನು ಒತ್ತೆಯಾಳಾಗಿ ಇರಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ಸಚಿವಾಲಯದ ಅಧಿಕೃತ ಪ್ರತಿನಿಧಿ ಮೇಜರ್ ಜನರಲ್ ಇಗೊರ್ ಕೊನಾಶೆಂಕೋವ್ ಹೇಳಿಕೆಯ ಪ್ರಕಾರ, "ನಮ್ಮ ಮಾಹಿತಿಯ ಪ್ರಕಾರ, ಖಾರ್ಕಿವ್ನಲ್ಲಿ, ಉಕ್ರೇನಿಯನ್ ಅಧಿಕಾರಿಗಳು ಉಕ್ರೇನಿಯನ್ ಪ್ರದೇಶವನ್ನು ತೊರೆದು ಬೆಲ್ಗೊರೊಡ್ಗೆ ಹೋಗಲು ಬಯಸುವ ಭಾರತೀಯ ವಿದ್ಯಾರ್ಥಿಗಳ ದೊಡ್ಡ ಗುಂಪನ್ನು ಬಲವಂತವಾಗಿ ಬಂಧಿಸಿದೆ," ಎಂದು ಹೇಳಿದ್ದಾರೆ.

"ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಸಶಸ್ತ್ರ ಪಡೆಗಳು ಸಿದ್ಧವಾಗಿವೆ. ಭಾರತ ಸರ್ಕಾರದ ಮನವಿಯಂತೆ ನಮ್ಮ ಮಿಲಿಟರಿ ಸಾರಿಗೆ ವಿಮಾನಗಳು ಅಥವಾ ಭಾರತೀಯ ವಿಮಾನಗಳೊಂದಿಗೆ ಭಾರತೀಯರನ್ನು ನಾವು ಕಳುಹಿಸಲು ಬಯಸುತ್ತೇವೆ," ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಕರೆ ಮಾಡಿದ ಗಂಟೆಗಳ ನಂತರ ರಷ್ಯಾ ಸಚಿವಾಲಯದ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಭಾರತ, ಪಾಕಿಸ್ತಾನ, ಚೀನಾದ ವಿದ್ಯಾರ್ಥಿಗಳು ರಷ್ಯಾದ ಒತ್ತೆಯಾಳುಗಳು?
ಈ ನಡುವೆ ಭಾರತ, ಪಾಕಿಸ್ತಾನ, ಚೀನಾ ಮತ್ತು ಇತರ ದೇಶಗಳ ವಿದ್ಯಾರ್ಥಿಗಳು ರಷ್ಯಾದ ಸಶಸ್ತ್ರ ಆಕ್ರಮಣದ ಒತ್ತೆಯಾಳುಗಳಾಗಿದ್ದಾರೆ ಎಂದು ಉಕ್ರೇನ್ ಆರೋಪ ಮಾಡಿದೆ. ಖಾರ್ಕಿವ್ ಮತ್ತು ಸುಮಿಯಲ್ಲಿ ರಷ್ಯಾದ ಸಶಸ್ತ್ರ ಆಕ್ರಮಣದ ಒತ್ತೆಯಾಳುಗಳಾಗಿರುವ ಭಾರತ, ಪಾಕಿಸ್ತಾನ, ಚೀನಾ ಮತ್ತು ಇತರ ರಾಷ್ಟ್ರಗಳ ವಿದ್ಯಾರ್ಥಿಗಳ ಬಗ್ಗೆ ಆಯಾ ಸರ್ಕಾರಕ್ಕೆ ತಿಳಿಸಿದ್ದೇವೆ ಎಂದು ಉಕ್ರೇನ್ ಸರ್ಕಾರ ಹೇಳಿದೆ.
ಭಾರತ ಸರ್ಕಾರ ಹೇಳುವುದು ಏನು?
ಉಕ್ರೇನ್ನಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳಾಗಿ ಇರಿಸಲಾಗಿದೆ ಎಂಬ ವರದಿಗಳನ್ನು ಭಾರತ ಸರ್ಕಾರ ಇಂದು ನಿರಾಕರಿಸಿದೆ. ಯುದ್ಧ ಪೀಡಿತ ದೇಶದಲ್ಲಿ ಭಾರತೀಯ ಪ್ರಜೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಹೇಳಿದೆ. "ಯಾವುದೇ ವಿದ್ಯಾರ್ಥಿಯೂ ಒತ್ತೆಯಾಳು ಆಗಿರುವ ವರದಿಗಳು ನಮಗೆ ಲಭ್ಯವಾಗಿಲ್ಲ. ಖಾರ್ಕಿವ್ ಮತ್ತು ನೆರೆಯ ಪ್ರದೇಶಗಳಿಂದ ದೇಶದ ಪಶ್ಚಿಮ ಭಾಗಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ಯಲು ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡುವಲ್ಲಿ ನಾವು ಉಕ್ರೇನಿಯನ್ ಅಧಿಕಾರಿಗಳ ಬೆಂಬಲವನ್ನು ಕೋರಿದ್ದೇವೆ," ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
ಫೆಬ್ರವರಿ 24 ರಂದು ರಷ್ಯಾದ ಪಡೆಗಳು ಉಕ್ರೇನ್ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ, ಸಂಘರ್ಷ ಪೀಡಿತ ಉಕ್ರೇನ್ನಿಂದ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ಭಾರತ ಸರ್ಕಾರವು 'ಆಪರೇಷನ್ ಗಂಗಾ'ವನ್ನು ಪ್ರಾರಂಭಿಸಿದೆ. ಈ ಮೂಲಕ ಈಗಾಗಲೇ ವಿದ್ಯಾರ್ಥಿಗಳು ಸೇರಿದಂತೆ ಉಕ್ರೇನ್ನಲ್ಲಿ ಬಾಕಿ ಆಗಿರುವ ಭಾರತೀಯ ಪ್ರಜೆಗಳನ್ನು ವಾಪಾಸ್ ಕರೆತರಲಾಗುತ್ತಿದೆ. ಇನ್ನು ರಷ್ಯಾ ಯುದ್ಧದ ನಡುವೆ ಉಕ್ರೇನ್ ಪೂರ್ವದ ಖಾರ್ಕಿವ್ನಿಂದ ಭಾರತೀಯರನ್ನು ಸ್ಥಳಾಂತರಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಕೇಂದ್ರ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಹೇಳಿದ್ದಾರೆ. ಈಗಾಗಲೇ ಉಕ್ರೇನ್ನಲ್ಲಿ ಹಾವೇರಿ ಮೂಲದ ವಿದ್ಯಾರ್ಥಿ ನವೀನ ಸಾವನಪ್ಪಿದ್ದಾನೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications