ನನ್ನ ಕಾಲಿನಿಂದ ಮೂರು ಗುಂಡುಗಳನ್ನು ಹೊರತೆಗೆಯಲಾಗಿದೆ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್
ಇಸ್ಲಾಮಾಬಾದ್, ನವೆಂಬರ್ 8: ಪಾಕಿಸ್ತಾನದ ಪಂಜಾಬ್ನ ವಜೀರಾಬಾದ್ನಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಕಳೆದ ವಾರ ಗುಂಡಿನ ದಾಳಿ ನಡೆದಿತ್ತು. ಹತ್ಯಾಯತ್ನದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುಂಡಿನ ದಾಳಿಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಇಮ್ರಾನ್ ಖಾನ್, ತಮ್ಮ ಬಲಗಾಲಿನಿಂದ ಮೂರು ಗುಂಡುಗಳನ್ನು ಹೊರತೆಗೆಯಲಾಗಿದೆ ಎಂದು ಹೇಳಿದ್ದಾರೆ.
ಉಡುಗೊರೆ ಮಾರಾಟ: ಇಮ್ರಾನ್ ಅನರ್ಹಗೊಳಸಿದ ಪಾಕಿಸ್ತಾನ ಚುನಾವಣಾ ಆಯೋಗ
ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಮುಖ್ಯಸ್ಥರು ಆಗಿರುವ ಇಮ್ರಾನ್ ಖಾನ್, ಲಾಹೋರ್ನ ಜಮಾನ್ ಪಾರ್ಕ್ನಲ್ಲಿರುವ ತಮ್ಮ ನಿವಾಸದಲ್ಲಿ ಸಿಎನ್ಎನ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ವೈದ್ಯರು ನನ್ನ ಬಲಗಾಲಿನಿಂದ ಮೂರು ಗುಂಡುಗಳನ್ನು ಹೊರತೆಗೆದಿದ್ದಾರೆ. ಎಡಭಾಗದಲ್ಲಿ ಕೆಲವು ಚೂರುಗಳನ್ನು ಬಿಟ್ಟಿದ್ದಾರೆ' ಎಂದು ತಿಳಿಸಿದ್ದಾರೆ.
'ನನ್ನ ಹತ್ಯೆಯ ಸಂಚನ್ನು ಎರಡು ತಿಂಗಳ ಹಿಂದೆಯೇ ರೂಪಿಸಲಾಗಿತ್ತು' ಎಂಬ ಗಂಭೀರ ಆರೋಪವನ್ನು ಇಮ್ರಾನ್ ಖಾನ್ ಮಾಡಿದ್ದಾರೆ.
ಈ ಕುರಿತು ನಿಮಗೆ ಹೇಗೆ ಮಾಹಿತಿ ದೊರೆತಿದೆ ಎಂದು ಇಮ್ರಾನ್ ಅವರನ್ನು ಸಿಎನ್ಎನ್ ಪ್ರಶ್ನಿಸಿದೆ.
ಅದಕ್ಕೆ ಪ್ರತಿಕ್ರಿಯಿಸಿರುವ ಅವರು, 'ನೆನಪಿಡಿ, ನಾನು ಮೂರೂವರೆ ವರ್ಷ ಪ್ರಧಾನಿಯಾಗಿ ಅಧಿಕಾರದಲ್ಲಿದ್ದೆ. ನನಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು, ವಿವಿಧ ಏಜೆನ್ಸಿಗಳೊಂದಿಗೆ ಸಂಪರ್ಕವಿದೆ' ಎಂದು ಹೇಳಿದ್ದಾರೆ.
ನನ್ನ ಪದಚ್ಯುತಿಯ ನಂತರ ಈ ಸಂಚುಗಳು ರೂಪಗೊಂಡಿವೆ. ಅವರು ನನ್ನ ಪಕ್ಷವು ಜನಬೆಂಬಲ ಗಳಿಸುವುದಿಲ್ಲ ಎಂದು ಭಾವಿಸಿದ್ದರು. ಆದರೆ, ಅವರ ನಿರೀಕ್ಷೆ ಹುಸಿಯಾಯಿತು. ಅವರಿಗೆ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಹಿನ್ನಡೆ ಉಂಟಾಗಿತು. ನನ್ನ ಪಕ್ಷವು ನಿರೀಕ್ಷೆಗೂ ಮೀರಿ ಜನಬೆಂಬಲವನ್ನು ಗಳಿಸಿತು' ಎಂದು ತಿಳಿಸಿದ್ದಾರೆ.
ಈಗ ಪಾಕಿಸ್ತಾನದಲ್ಲಿ ಅಧಿಕಾರದಲ್ಲಿರುವ ಸರ್ಕಾರವೇ ತನ್ನ ಮೇಲೆ ದಾಳಿಯ ಸಂಚನ್ನು ರೂಪಿಸಿದೆ. ಆದರೆ, ಧಾರ್ಮಿಕ ಮತಾಂಧನೊಬ್ಬ ಇದೆಲ್ಲವನ್ನೂ ಮಾಡಿದ್ದಾನೆ ಎಂದು ಬಿಂಬಿಸುತ್ತಿದೆ ಎಂಬುದಾಗಿ ಇಮ್ರಾನ್ ಖಾನ್ ಹೇಳಿದ್ದಾರೆ.
ಈ ಘಟನೆಗಳ ಕುರಿತು ಪಾಕಿಸ್ತಾನ ಅಧ್ಯಕ್ಷ ಆರಿಫ್ ಅಲ್ವಿ ಅವರಿಗೆ ಇಮ್ರಾನ್ ಖಾನ್ ಪತ್ರ ಬರೆದಿದ್ದಾರೆ.
ಅಧಿಕಾರದ ದುರುಪಯೋಗ ಮತ್ತು ಕಾನೂನುಗಳ ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.
'ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ನೆಲದ ಕಾನೂನನ್ನು ಮೀರುವಂತಿಲ್ಲ. ಅಧಿಕಾರದಲ್ಲಿ ಇರುವ ಸಂಸ್ಥೆಗಳು ರಾಕ್ಷಸ ಪ್ರವೃತ್ತಿಯನ್ನು ಪ್ರದರ್ಶಿಸುತ್ತಿವೆ. ಅವರು ಸಾಮಾನ್ಯ ನಾಗರಿಕರ ಮೇಲೆ ಭಾರೀ ದೌರ್ಜನ್ಯ ನಡೆಸುತ್ತಿದ್ದಾರೆ. ಕಸ್ಟಡಿ ಕಿರುಕುಳ ಮತ್ತು ಅಪಹರಣಗಳು ಸೇರಿದಂತೆ ಎಲ್ಲ ಅಪರಾಧಗಳೂ ನಿರ್ಭಯದಿಂದ ನಡೆಯುತ್ತಿವೆ' ಎಂದು ತಿಳಿಸಿದ್ದಾರೆ.
ನೀವು(ಪಾಕ್ ಅಧ್ಯಕ್ಷ) ಉನ್ನತ ಹುದ್ದೆಯನ್ನು ಹೊಂದಿದ್ದೀರಿ. ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕುಗಳನ್ನು ಖಾತ್ರಿಪಡಿಸುವ ಜವಾಬ್ದಾರಿ ನಿಮ್ಮದಾಗಿದೆ. ನಮ್ಮ ಸಂವಿಧಾನದ ಅಧಿಕಾರದ ದುರುಪಯೋಗ ಮತ್ತು ಉಲ್ಲಂಘನೆಯನ್ನು ನಿಲ್ಲಿಸಲು ಈಗಲೇ ಕ್ರಮ ಕೈಗೊಳ್ಳಬೇಕು ಎಂಬುದಾಗಿ ವಿನಂತಿಸುತ್ತಿದ್ದೇನೆ' ಎಂದು ಖಾನ್ ಹೇಳಿದ್ದಾರೆ.
ಇಮ್ರಾನ್ ಖಾನ್ ಅವರು ಗುರುವಾರ ವಜೀರಾಬಾದ್ನಲ್ಲಿ ಲಾಂಗ್ ಮಾರ್ಚ್ನಲ್ಲಿ(ಸುದೀರ್ಘ ಯಾತ್ರೆ) ತೊಡಗಿದ್ದರು. ಆಗ ಅವರ ಮೇಳೆ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿದ್ದ. ಅವರ ಕಾಲುಗಳ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿತ್ತು.
ವಜೀರಾಬಾದ್ನಲ್ಲಿ ಗುಂಡಿನ ದಾಳಿಗೆ ಒಳಗಾಗಿರುವ ಇಮ್ರಾನ್ ಖಾನ್ ಲಾಹೋರ್ನಿಂದ ಇಸ್ಲಾಮಾಬಾದ್ವರೆಗೆ ಲಾಂಗ್ ಮಾರ್ಚ್ ನಡೆಸುತ್ತಿದ್ದಾರೆ. ಗುರುವಾರ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, 14 ಜನರಿಗೆ ಗಾಯಗಳಾಗಿವೆ.
ಗುಂಡು ಹಾರಿಸಿದ ಆರೋಪಿಗಳ ಬಂಧನ
ಇಮ್ರಾನ್ ಖಾನ್ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇದರಲ್ಲಿ ಇಬ್ಬರು ಶಾರ್ಪ್ ಶೂಟರ್ಗಳಾಗಿದ್ದು, ಇನ್ನೊಬ್ಬ ಶಂಕಿತನನ್ನು ಸೆಡೆಹಿಡಿಯಲಾಗಿದೆ. ಈ ಘಟನೆಗೂ, ತನಗೂ ಯಾವುದೇ ಸಂಬಂಧವಿಲ್ಲ ಎಂದು ಪಾಕಿಸ್ತಾನ ಸರ್ಕಾರ ಸ್ಪಷ್ಟಪಡಿಸಿದೆ. ಪಾರದರ್ಶನಕ ತನಿಖೆ ನಡೆಸುವುದಾಗಿಯೂ ಅದು ಭರವಸೆ ನೀಡಿದೆ.