ಭಾರತದೊಂದಿಗೆ ತಾಲಿಬಾನ್ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತಿದೆ: ಮುಜಾಹಿದ್
ಕಾಬೂಲ್, ಆಗಸ್ಟ್ 28: ಭಾರತದೊಂದಿಗೆ ತಾಲಿಬಾನ್ ಉತ್ತಮ ಬಾಂಧವ್ಯವನ್ನು ಬಯಸುವುದಾಗಿ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ.
ಭಾರತವೂ ಸೇರಿದಂತೆ ಎಲ್ಲಾ ದೇಶಗಳೊಂದಿಗೂ ನಾವು ಉತ್ತಮ ಬಾಂಧವ್ಯದಲ್ಲಿರುವುದನ್ನು ಬಯಸುತ್ತೇವೆ. ಆದ್ದರಿಂದ ಭಾರತ ಅಫ್ಘಾನ್ ಜನರ ಹಿತಾಸಕ್ತಿಯ ದೃಷ್ಟಿಯಿಂದ ತನ್ನ ನೀತಿಯನ್ನು ರೂಪಿಸಲಿ ಎಂಬುದು ನಮ್ಮ ಆಶಯವಾಗಿದೆ ಎಂದು ಮುಜಾಹಿದ್ ಹೇಳಿದ್ದಾರೆ.
ನಾವು ನಮ್ಮ ನೆಲವನ್ನು ಬೇರೆ ರಾಷ್ಟ್ರದ ವಿರುದ್ಧ ಬಳಕೆ ಮಾಡಲು ಬಿಡುವುದಿಲ್ಲ ಎಂದು ಈ ಹಿಂದೆಯೂ ಹೇಳಿದ್ದೆವು. ನಮ್ಮ ನೀತಿ ಸ್ಪಷ್ಟವಾಗಿದೆ ಎಂದು ಮುಜಾಹಿದ್ ತಿಳಿಸಿದ್ದಾರೆ.
ಇದೇ ವೇಳೆ ಭಾರತ-ಪಾಕ್ ಸಂಬಂಧಗಳ ಬಗ್ಗೆಯೂ ಮಾತನಾಡಿರುವ ಮುಜಾಹಿದ್, ಉಭಯ ದೇಶಗಳೂ ನೆರೆ ರಾಷ್ಟ್ರಗಳಾಗಿದ್ದು, ಹಿತಾಸಕ್ತಿಗಳು ಪರಸ್ಪರ ಸಂಬಂಧಿಸಿದ್ದಾಗಿರುತ್ತದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಎಆರ್ ವೈ ಸುದ್ದಿ ವಾಹಿನಿ ಈ ಹೇಳಿಕೆಯನ್ನು ವರದಿ ಮಾಡಿದ್ದು, ಆಫ್ಘಾನಿಸ್ತಾನದಲ್ಲಿ ಈಗ ಆಡಳಿತ ನಡೆಸುತ್ತಿರುವ ತಾಲಿಬಾನ್ ಭಾರತವನ್ನು ಈ ಪ್ರದೇಶದಲ್ಲಿ ಪ್ರಮುಖ ಭಾಗ ಎಂದು ಗುರುತಿಸುವುದಾಗಿ ಹೇಳಿಕೊಂಡಿದೆ.
ಆ.15 ರಂದು ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ರೀತಿಯಲ್ಲಿ ಸ್ಥಾಪಿತವಾದ ಸರ್ಕಾರದಿಂದ ಅಧಿಕಾರವನ್ನು ಕಸಿದುಕೊಂಡು ತಾಲಿಬಾನ್ ಆ ರಾಷ್ಟ್ರವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು.

ಕಾಶ್ಮೀರ ವಿಚಾರದಲ್ಲಿ ನಾವಿಲ್ಲ ಎಂದ ತಾಲಿಬಾನ್
ಕಾಶ್ಮೀರ ವಿಚಾರ ಎರಡು ದೇಶಗಳಿಗೆ ಬಿಟ್ಟಿದ್ದು, ಭಾರತ-ಪಾಕಿಸ್ತಾನ ಕುಳಿತು ಬಗೆಹರಿಸಿಕೊಳ್ಳಲಿ ಎಂದು ತಾಲಿಬಾನ್ ವಕ್ತಾರ ಜಬಿಯುಲ್ಲಾ ಮುಜಾಹಿದ್ ಹೇಳಿದ್ದಾರೆ. ನಿಮ್ಮ ನಗರದಲ್ಲಿ ಅತ್ಯುತ್ತಮ ಎಸ್ಯುವಿ ಟೆಸ್ಟ್ ಡ್ರೈವ್ - ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಪಾಕಿಸ್ತಾನ ನಮಗೆ ಎರಡನೇ ಮನೆ ಇದ್ದಂತೆ ಆದರೆ ಎರಡು ದೇಶಗಳ ನಡುವಿನ ವಿಚಾರಕ್ಕೆ ನಾವು ತಲೆ ಹಾಕುವುದಿಲ್ಲ ಅದನ್ನು ಅವರೇ ಬಗೆಹರಿಸಿಕೊಳ್ಳಲಿ ಎಂದಿದ್ದಾರೆ.
ಪಾಕಿಸ್ತಾನದ ಟಿವಿ ಚಾನೆಲ್ ಎಆರ್ವೈ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮುಜಾಹಿದ್, ವಿವಾದಿತ ಪ್ರದೇಶದ ಬಗ್ಗೆ ಭಾರತವು ಸಕಾರಾತ್ಮಕ ಧೋರಣೆ ಹೊಂದಬೇಕಿದೆ ಎಂದು ಹೇಳಿದ್ದಾರೆ.

ಭಾರತ ಯೋಜನೆಗಳನ್ನು ಪೂರ್ಣಗೊಳಿಸಲಿ
ಅಫ್ಘಾನಿಸ್ತಾನ ನೆಲವನ್ನು ಬಳಸಿಕೊಳ್ಳಲು ಬೇರೆ ರಾಷ್ಟ್ರಗಳಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿರುವ ತಾಲಿಬಾನ್, ಭಾರತ ಬಯಸುವುದಾದರೆ ಮೂಲಭೂತ ಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಲಿ ಎಂದು ಅದರ ವಕ್ತಾರ ಸುಹೈಲ್ ಶಹೀನ್ ಹೇಳಿದ್ದಾರೆ.
ತಾಲಿಬಾನ್ ಉಗ್ರರೊಂದಿಗೆ ಮಾತುಕತೆ, ಸಂವಹನಕ್ಕೆ ಸಿದ್ಧ ಎಂದು ಭಾರತ ಸರ್ಕಾರ ಈಗಾಗಲೇ ಸೂಚನೆ ನೀಡಿದ್ದರೂ ಕೂಡ ತಾಲಿಬಾನ್ ಒಂದು ಅಧಿಕೃತ ಸಂಘಟನೆಯಾಗಿ ಗುರುತಿಸಿಕೊಳ್ಳಬೇಕು ಎಂದು ಹೇಳಿದೆ. ಅಫ್ಘಾನಿಸ್ತಾನದ 34 ಪ್ರಾಂತ್ಯಗಳಲ್ಲಿ ಅಭಿವೃದ್ಧಿ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ವೃತ್ತಿಪರರನ್ನು ಭಾರತ ಇತ್ತೀಚೆಗೆ ಹಿಂದಕ್ಕೆ ಕರೆಸಿಕೊಂಡಿತ್ತು.
ಯಾರ ವಿರುದ್ಧವೂ ಅಫ್ಘಾನಿಸ್ತಾನ ನೆಲವನ್ನು ಬಳಸಿಕೊಳ್ಳಲು ಯಾವುದೇ ದೇಶಕ್ಕೆ ನಾವು ಬಿಡುವುದಿಲ್ಲ. ಇದು ಸ್ಪಷ್ಟ, ಅಫ್ಘಾನಿಸ್ತಾನದಲ್ಲಿ ಭಾರತ ಹಲವು ಯೋಜನೆಗಳನ್ನು, ನಿರ್ಮಾಣಗಳನ್ನು ಮತ್ತು ಮೂಲಭೂತ ಸೌಕರ್ಯ ಯೋಜನೆಗಳನ್ನು ಮಾಡಿದೆ. ಭಾರತ ಬಯಸುವುದಾದರೆ ಅಪೂರ್ಣಗೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸಲಿ, ಏಕೆಂದರೆ ಯೋಜನೆಗಳು ಜನರ ಪರವಾಗಿದೆ ಎಂದು ವಕ್ತಾರ ಶಹೀನ್ ಪಾಕಿಸ್ತಾನದ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಉರ್ದುವಿನಲ್ಲಿ ಹೇಳಿದ್ದಾರೆ.

ಅಮೆರಿಕ ವಸ್ತುಗಳನ್ನು ನಾಶಮಾಡಲೆಂದೇ ದಾಳಿ
ಅಮೆರಿಕ ತನ್ನ ವಸ್ತುಗಳನ್ನು ನಾಶ ಮಾಡಲೆಂದೇ ಸ್ವಯಂ ಬಾಂಬ್ ದಾಳಿ ನಡೆಸಿದೆ ಎಂದು ಆಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡಿರುವ ತಾಲಿಬಾನ್ ಹೇಳಿದೆ.
ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಸಂಭವಿಸಿದ ಸ್ಫೋಟಗಳಲ್ಲಿ ಅಮೆರಿಕ ಸೈನಿಕರೂ ಸೇರಿದಂತೆ 60 ಕ್ಕೂ ಹೆಚ್ಚು ಮಂದಿಯ ಜೀವಗಳನ್ನು ಬಲಿ ತೆಗೆದುಕೊಂಡಿದ್ದು, ಅಮೆರಿಕ ಪಡೆಗಳ ವಸ್ತುಗಳನ್ನು ನಾಶಮಾಡಲು ಈ ದಾಳಿ ನಡೆಸಲಾಗಿದೆ ಎಂದು ತಾಲಿಬಾನ್ ವಕ್ತಾರರು ಹೇಳಿದ್ದಾರೆ.
"ಕಾಬೂಲ್ನಲ್ಲಿ ಸಂಜೆ ಹಲವಾರು ಸ್ಫೋಟಗಳು ಕೇಳಿಬಂದವು. ಕಾಬೂಲ್ ವಿಮಾನ ನಿಲ್ದಾಣದ ಒಳಗೆ ಅಮೆರಿಕ ಪಡೆಗಳ ವಸ್ತುಗಳನ್ನು ನಾಶ ಮಾಡಲು ಸ್ಫೋಟಗಳನ್ನು ನಡೆಸಿದ್ದವು. ಈ ಸ್ಫೋಟದಿಂದ ಕಾಬೂಲ್ ನಿವಾಸಿಗಳು ಚಿಂತಿಸಬೇಡಿ" ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಟ್ವೀಟ್ ಮಾಡಿದ್ದಾರೆ.
ವಿಮಾನ ನಿಲ್ದಾಣದ ಹೊರಗೆ ಅವಳಿ ಆತ್ಮಹತ್ಯಾ ಬಾಂಬ್ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಕಾಬೂಲ್ ನಗರದಲ್ಲಿ ಕನಿಷ್ಠ ಏಳು ಕಡೆಗಳಲ್ಲಿ ಸ್ಫೋಟಗಳು ಸಂಭವಿಸಿವೆ. ಇದು ಅಮೆರಿಕ ಸೈನಿಕರು ಸೇರಿದಂತೆ 60 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತು.
ಇನ್ನು ಮೊದಲ ಸ್ಫೋಟ ಸಂಭವಿಸಿದ ಕೆಲವೇ ನಿಮಿಷಗಳ ಅಂತರದಲ್ಲಿ 2ನೇ ಸ್ಫೋಟ ಸಂಭವಿಸಿದ್ದು, ಇದರ ಬೆನ್ನಲ್ಲೇ ಮತ್ತೆ 6 ಸ್ಫೋಟಗಳು ವಿವಿಧೆಡೆಯಿಂದ ವರದಿಯಾಗಿದೆ. ನಾನು ಇದನ್ನು ಬರೆಯುತ್ತಿರುವಾಗ ಇನ್ನೊಂದು ಅಂದರೆ 7ನೇ ಸ್ಫೋಟದ ಶಬ್ಧ ಕೇಳಿಸಿತು ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಲಿಬಾನ್ ನೆರವು ಕೋರಿದ ಉಗ್ರ ಮಸೂದ್ ಅಜರ್
ಜಮ್ಮು-ಕಾಶ್ಮೀರದಲ್ಲಿ ಉಪಟಳ ಮಾಡಲು ಯತ್ನಿಸಿ ಹಲವು ಬಾರಿ ವಿಫಲವಾಗಿರುವ ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನ ಮಸೂದ್ ಅಜರ್, ಈಗ ಅಫ್ಘಾನಿಸ್ತಾನದ ಹಿಡಿತ ಸಾಧಿಸಿದ ತಾಲಿಬಾನಿಗಳನ್ನು ಭೇಟಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಉಗ್ರರು ಆಫ್ಘನ್ ಮೇಲೆ ಸಂಪೂರ್ಣವಾಗಿ ಹಿಡಿತ ಸಾಧಿಸುತ್ತಲೇ, ಅಂದರೆ ಆಗಸ್ಟ್ ಮೂರನೇ ವಾರದಲ್ಲಿ ಕಂದಹಾರ್ಗೆ ತೆರಳಿದ ಮಸೂದ್, ಕಾಶ್ಮೀರ ವಿಚಾರದಲ್ಲಿ ಬೆಂಬಲ ನೀಡುವಂತೆ ತಾಲಿಬಾನಿಗಳಿಗೆ ಮನವಿ ಮಾಡಿದ್ದಾನೆ.
ತಾಲಿಬಾನ್ ಹಿರಿಯ ಮುಖಂಡ, ಆಫ್ಘನ್ ಮುಂದಿನ ಅಧ್ಯಕ್ಷ ಎಂದೇ ಬಿಂಬಿತನಾಗಿರುವ ಮುಲ್ಲಾಅಬ್ದುಲ್ ಘನಿ ಬರಾದರ್ ಸೇರಿ ಹಲವು ನಾಯಕರನ್ನು ಭೇಟಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳುತ್ತಲೇ 'ಇದು ದೊಡ್ಡ ವಿಜಯ' ಎಂದು ಅಜರ್ ಸಂತಸ ವ್ಯಕ್ತಪಡಿಸಿದ್ದ. ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ 2019ರಲ್ಲಿ ನಡೆದ ದಾಳಿ, ಭಾರತದಲ್ಲಿ ನಡೆದ ಹಲವು ದಾಳಿಗಳ ಸಂಚುಕೋರ ಈ ಮಸೂದ್ ಅಜರ್.












Click it and Unblock the Notifications