ಅಫ್ಘಾನಿಸ್ತಾನದಲ್ಲಿ ಮುಚ್ಚಿದ ಭಾರತೀಯ ದೂತವಾಸ ಕಚೇರಿಯನ್ನೂ ಬಿಡದ ತಾಲಿಬಾನ್!
ಕಾಬೂಲ್, ಆಗಸ್ಟ್ 20: ಅಫ್ಘಾನಿಸ್ತಾನವನ್ನು ಹಿಡಿತಕ್ಕೆ ತೆಗೆದುಕೊಂಡಿರುವ ತಾಲಿಬಾನ್ ಸಂಘಟನೆಯು ಜಗತ್ತಿನ ಎದುರಿಗೆ ನೀಡಿದ ಮಾತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ಸಾಬೀತಾಗುತ್ತಿದೆ. ಶಾಂತಿಯುತ ಆಡಳಿತ ನೀಡುವ ಅಭಿಲಾಷೆ ಹೊಂದಿದ್ದೇವೆ ಎಂದ ತಾಲಿಬಾನ್ ತನ್ನ ಕ್ರೌರ್ಯದ ಮತ್ತೊಂದು ಮುಖವನ್ನು ಪ್ರಜೆಗಳ ಎದುರು ತೆರೆದಿಡುತ್ತಿದೆ.
ಅಫ್ಘಾನಿಸ್ತಾನದಲ್ಲಿ ಇರುವ ಭಾರತೀಯ ದೂತವಾಸ ಕಚೇರಿಗೆ ನುಗ್ಗಿದ ತಾಲಿಬಾನ್ ಉಗ್ರರು ಎಲ್ಲ ದಾಖಲೆಗಳನ್ನು ಕೆದರಿದ್ದಾರೆ. ಅಲ್ಲದೇ ಕಚೇರಿ ಬಳಿಯಿದ್ದ ಎಲ್ಲ ಕಾರುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಕಂದಾಹಾರ್ ಮತ್ತು ಹೆರಾತ್ ಪ್ರದೇಶದಲ್ಲಿದ್ದ ಭಾರತೀಯ ದೂತವಾಸ ಕಚೇರಿಗೆ ನುಗ್ಗಿದ ತಾಲಿಬಾನ್ ಉಗ್ರರು ದಾಖಲೆ ಪತ್ರಗಳನ್ನು ಕಿತ್ತು ಹಾಕಿದ್ದು, ಸ್ಥಳದಲ್ಲಿದ್ದ ಕಾರು ಮತ್ತು ವಾಹನಗಳಲ್ಲಿ ತೆಗೆದುಕೊಂಡು ಹೋಗಿದ್ದಾರೆ ಎಂಬುದು ಗೊತ್ತಾಗಿದೆ.
Fact Check: ಭಾರತಕ್ಕೆ ಬೆದರಿಕೆ ಹಾಕಿದರಾ ತಾಲಿಬಾನ್ ಉಗ್ರರು!?
"ನಾವು ಇದನ್ನು ನಿರೀಕ್ಷಿಸಿದ್ದೆವು, ಅವರು ಎರಡು ರಾಯಭಾರಿ ಕಚೇರಿಗಳಿಗೆ ನುಗ್ಗಿ ದಾಖಲೆಗಳನ್ನು ಹುಡುಕಾಡಿ ಕದ್ದೊಯ್ಯುತ್ತಾರೆ ಹಾಗೂ ಅಲ್ಲಿ ಪಾರ್ಕ್ ಮಾಡಿದ್ದ ವಾಹನಗಳನ್ನು ತೆಗೆದುಕೊಂಡು ಹೋಗುತ್ತಾರೆ ಎಂಬುದು ಗೊತ್ತಿತ್ತು," ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಫ್ಘಾನ್ ದೂತವಾಸ ಕಚೇರಿಗಳಷ್ಟೇ ಅಲ್ಲ, ರಾಜಧಾನಿ ಕಾಬೂಲ್ ನಗರದ ಮನೆ ಮನೆಗೂ ನುಗ್ಗಿದ ತಾಲಿಬಾನ್ ಉಗ್ರರು ಕ್ರೌರ್ಯ ಮೆರೆಯುತ್ತಿದ್ದಾರೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.
ಮನೆ ಮನೆಗೆ ನುಗ್ಗಿ ತಾಲಿಬಾನ್ ಕ್ರೌರ್ಯ ಪ್ರದರ್ಶನ
ಅಫ್ಘಾನಿಸ್ತಾನದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವ ತಾಲಿಬಾನ್ ಉಗ್ರರು ಕಾಬೂಲ್ ನಗರದಲ್ಲಿ ಅಟ್ಟಹಾಸ ತೋರುತ್ತಿದ್ದಾರೆ. ಪ್ರತಿಯೊಂದು ಮನೆ ಮನೆಗಳಿಗೆ ನುಗ್ಗಿ ದಾಖಲೆಗಳನ್ನು ದಾಖಲೆಗಳನ್ನು ಹುಡುಕಾಡುತ್ತಿದ್ದಾರೆ. ರಾಷ್ಟ್ರೀಯ ಭದ್ರತಾ ಮಂಡಳಿ ಮತ್ತು ರಾಜ್ಯ ಗುಪ್ತಚರ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರನ್ನು ಗುರುತು ಹಾಕಿಕೊಳ್ಳುತ್ತಿದ್ದಾರೆ. ವಿಶ್ವಸಂಸ್ಥೆ ಮತ್ತು ನ್ಯಾಟೋ ಪಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಪತ್ತೆ ಮಾಡುವುದಕ್ಕಾಗಿಯೇ ತಾಲಿಬಾನ್ ಉಗ್ರರು ಪ್ರತಿಯೊಂದು ಮನೆಗಳಿಗೂ ನುಗ್ಗಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಮೂಲಗಳಿಂದ ತಿಳಿದು ಬಂದಿದೆ.
ಅಫ್ಘಾನಿಸ್ತಾನದಲ್ಲಿ 4 ದೂತವಾಸ ಕಚೇರಿ ಹೊಂದಿರುವ ಭಾರತ
ಭಾರತವು ಅಫ್ಘಾನಿಸ್ತಾನದ ನಾಲ್ಕು ನಗರಗಳಲ್ಲಿ ದೂತವಾಸ ಕಚೇರಿಯನ್ನು ಹೊಂದಿದೆ. ರಾಜಧಾನಿ ಕಾಬೂಲ್ ಸೇರಿದಂತೆ ಕಂದಾಹಾರ್, ಹೆರಾತ್ ಮತ್ತು ಮಜರ್-ಐ-ಶರೀಫ್ ನಗರದಲ್ಲಿ ದೂತವಾಸ ಕಚೇರಿಗಳಿವೆ. ಕಾಬೂಲ್ ಮೇಲೆ ತಾಲಿಬಾನ್ ಹಿಡಿತ ಸಾಧಿಸುವುದಕ್ಕೂ ಮುನ್ನ ದಿನವೇ ನಾಲ್ಕರ ಪೈಕಿ ಮೂರು ದೂತವಾಸ ಕಚೇರಿಗಳನ್ನು ಬಂದ್ ಮಾಡಲಾಗಿದೆ. ಅಲ್ಲಿದ್ದ ಸಿಬ್ಬಂದಿಯನ್ನು ದೇಶಕ್ಕೆ ವಾಪಸ್ ಕರೆಸಿಕೊಳ್ಳಲಾಗಿದೆ. ಈ ಮಧ್ಯೆ ಕಾಬೂಲ್ ನಗರದಲ್ಲಿ ಭಾರತದ ದೂತವಾಸ ಕಚೇರಿಯಲ್ಲಿ ಸ್ಥಳೀಯರ ನೆರವಿನಿಂದ ಕಾರ್ಯ ಚಟುವಟಿಕೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ತಾಲಿಬಾನಿಗಳಿಗೆ ಹಲವು ಉಗ್ರ ಸಂಘಟನೆಗಳಿಂದ ಬೆಂಬಲ
ಅಫ್ಘಾನಿಸ್ತಾನದಲ್ಲಿ ಅಧಿಕಾರದ ಗದ್ದುಗೆ ಏರಲು ಸಿದ್ಧವಾಗಿರುವ ತಾಲಿಬಾನ್ ಉಗ್ರ ಸಂಘಟನೆಗೆ ಜಗತ್ತಿನ ಹಲವು ಉಗ್ರ ಸಂಘಟನೆಗಳು ಶುಭಾಷಯಗಳೊಂದಿಗೆ ಬೆಂಬಲ ಸೂಚಿಸಿರುವುದು ಮತ್ತಷ್ಟು ಆತಂಕ ಸೃಷ್ಟಿಸುತ್ತಿದೆ. ಸರ್ಕಾರದ ಗುಪ್ತಚರ ಇಲಾಖೆ ಮೂಲಗಳ ಪ್ರಕಾರ, "ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಗುಂಪಿನ ವಿಮೋಚನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ಅಲ್ ಖೈದಾ ಸಂಘಟನೆಯು ಅಭಿನಂದನೆ ಸಲ್ಲಿಸಿದೆ. ಸಿರಿಯಾದ ಹಯಾತ್ ತಹ್ರಿರ್-ಅಲ್-ಶಾಮ್ ಕೂಡ ತಾಲಿಬಾನ್ ಸಂಘಟನೆಯನ್ನು ಬೆಂಬಲಿಸಿ ಪ್ರಕಟಣೆ ಹೊರಡಿಸಿದೆ. ಇದು ಹಯಾತ್ ತಹ್ರಿರ್ ಅಲ್-ಶಾಮ್ ಸಂಘಟನೆಯು ತಾಲಿಬಾನ್ ಅನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳುವ ಸಾಧ್ಯತೆಯಿದೆ. ಅವರು ಬಷಾರನ್ನು ಬಹಿಷ್ಕರಿಸುವ ಮತ್ತು ಸಿರಿಯಾದಲ್ಲಿ ತನ್ನದೇ ಆದ ಇಸ್ಲಾಮಿಕ್ ಎಮಿರೇಟ್ ಅನ್ನು ಜಾರಿಗೆ ತರುವ ಆಶಯ ಹೊಂದಿದ್ದಾರೆ ಎಂದು ಸರ್ಕಾರವು ನಿರ್ಣಯಿಸುತ್ತದೆ.
"ಪಶ್ಚಿಮ ಚೀನಾದಲ್ಲಿ ನೆಲೆಸಿರುವ ಟರ್ಕಿಸ್ತಾನ್ ಇಸ್ಲಾಮಿಕ್ ಪಾರ್ಟಿ (TIP) ಕೂಡ ತಾಲಿಬಾನ್ ಅನ್ನು ಅಭಿನಂದಿಸುವ ಹೇಳಿಕೆ ನೀಡಿದೆ. ಕ್ಷಿಪ್ರಗತಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಮೇಲೆ ನಾವೂ ನಿಗಾ ವಹಿಸುತ್ತೇವೆ," ಎಂದು ಸರ್ಕಾರದ ಹಿರಿಯ ಮೂಲಗಳಿಂದ ತಿಳಿದು ಬಂದಿದೆ.
ತಾಲಿಬಾನ್ ವರ್ತನೆಯಿಂದ ಜಾಗತಿಕ ಮಟ್ಟದಲ್ಲಿ ಹೆಚ್ಚಿದ ಆತಂಕ
ಅಲ್ ಖೈದಾ ಸೇರಿದಂತೆ ಜಗತ್ತಿನ ಹಲವು ಭಯೋತ್ಪಾದನಾ ಸಂಘಟನೆಗಳು ತಾಲಿಬಾನಿಗಳಿಗೆ ಬೆಂಬಲ ಸೂಚಿಸುತ್ತಿರುವುದು ಮತ್ತಷ್ಟು ಆತಂಕ ಸೃಷ್ಟಿಸುತ್ತಿದೆ. ಕಾಬೂಲ್ ನಗರದಿಂದ ಭಾರತದ ದೂತವಾಸ ಕಚೇರಿ ಸಿಬ್ಬಂದಿಯನ್ನು ವಾಪಸ್ ಕರೆ ತರುವ ಕಾರ್ಯಾಚರಣೆಯನ್ನು ಈಗಾಗಲೇ ಒಂದು ಹಂತದಲ್ಲಿ ಪೂರ್ಣಗೊಳಿಸಲಾಗಿದೆ. ಮಂಗಳವಾರ ಕಾಬೂಲ್ ವಿಮಾನ ನಿಲ್ದಾಣದಿಂದ 120 ಮಂದಿ ಭಾರತೀಯ ಸಿಬ್ಬಂದಿಯನ್ನು ಸ್ವದೇಶಕ್ಕೆ ಕರೆ ತರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಹೇಳುವುದು ಒಂದು, ತಾಲಿಬಾನ್ ಉಗ್ರರು ಮಾಡುವುದು ಇನ್ನೊಂದು!
"ಅಫ್ಘಾನಿಸ್ತಾನ ವಿಮೋಚನೆ ಆಗಿರುವ ಈ ಸಂದರ್ಭದಲ್ಲಿ ತಾಲಿಬಾನ್ ಯಾರ ವಿರುದ್ಧವೂ ಸೇಡು ತೀರಿಸಿಕೊಳ್ಳುವುದಕ್ಕೆ ಬಯಸುವುದಿಲ್ಲ ಎಂದು ತಾಲಿಬಾನ್ ಹೇಳಿತ್ತು. ಹೀಗೆ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಉಗ್ರರು ತಮ್ಮ ಹಳೆಚಾಳಿ ಮುಂದುವರಿಸಿದ್ದರು. ಕಾಬೂಲ್ ವಿಮಾನ ನಿಲ್ದಾಣದಲ್ಲಿ ದೇಶ ತೊರೆದು ಹೊರಟ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಮನೆ ಮನೆಗಳಿಗೆ ನುಗ್ಗಿ ಕ್ರೌರ್ಯ ತೋರುವುದಕ್ಕೆ ಶುರು ಮಾಡಿದ್ದರು.
ತಾಲಿಬಾನಿಗಳು ಹೇಳಿದ ಮಾತುಗಳೆಲ್ಲ ಹುಸಿ:
ಕಾಬೂಲ್ನಲ್ಲಿ ಇರುವ ವಿದೇಶಿ ದೂತವಾಸ ಕಚೇರಿಗಳು, ರಾಯಭಾರಿ ಸಿಬ್ಬಂದಿ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಭದ್ರತೆ ಮತ್ತು ಸುರಕ್ಷತೆಗೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ನಾವು ಭರವಸೆ ನೀಡುತ್ತೇವೆ. ನಾವು ಈಗ ಎಲ್ಲಾ ವಿದೇಶಿ ಸಂಸ್ಥೆಗಳಿಗೆ ಭದ್ರತೆ ಒದಗಿಸುತ್ತೇವೆ. ನಾವು ಅಫ್ಘಾನಿಸ್ತಾನದ ಒಳಗೆ ಅಥವಾ ಹೊರಗೆ ಯಾವುದೇ ಶತ್ರುಗಳನ್ನು ಹುಡುಕುವುದಿಲ್ಲ," ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದರು. ಇದರ ಜೊತೆಗೆ ತಾಲಿಬಾನ್ ನೆಲದಲ್ಲಿದ್ದುಕೊಂಡು ಯಾವುದೇ ದೇಶಗಳ ವಿರುದ್ಧ ಸಮರ ಸಾರುವುದಕ್ಕೆ ಅಥವಾ ಕೆಡಕು ಮಾಡುವುದಕ್ಕೆ ಪ್ರೋತ್ಸಾಹ ನೀಡುವುದಿಲ್ಲ. ಅಂಥ ಚಟುವಟಿಕೆಗಳಿಗೆ ಯಾವುದೇ ರೀತಿ ಅವಕಾಶ ನೀಡುವುದಿಲ್ಲ. ಆಂತರಿಕವಾಗಿ ಸಮಾಜಮುಖಿ ಸರ್ಕಾರ ರಚನೆ ಮತ್ತು ಆಡಳಿತ ನೀಡುವುದೇ ತಾಲಿಬಾನ್ ಮುಂದಿನ ಗುರಿ ಎಂದು ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದರು.
Recommended Video