ಶ್ರೀಲಂಕಾದಲ್ಲಿ ಜುಲೈ 15ರವರೆಗೂ ಶಾಲೆಗಳು ಬಂದ್, 4 ವಿವಿ ಕಥೆ ಕ್ಲೋಸ್!
ಕೊಲಂಬೋ, ಜುಲೈ 9: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಉಲ್ಬಣಗೊಂಡಿರುವುದರ ಮಧ್ಯೆ ರಾಜಧಾನಿ ಕೊಲಂಬೋದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವತಃ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ದೇಶವನ್ನೇ ತೊರೆದು ಹೋಗುವಂತಾ ದುಸ್ಥಿತಿ ಸೃಷ್ಟಿಯಾಗಿದೆ.
ದೇಶದ ಆರ್ಥಿಕ ಬಿಕ್ಕಟ್ಟು ಹಾಗೂ ಶನಿವಾರ ನಡೆಯುತ್ತಿರುವ ಪ್ರತಿಟನೆಗಳು ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಮುಂಬರುವ ಜುಲೈ 15ರವರೆಗೂ ಶಾಲೆಗಳನ್ನು ಮುಚ್ಚಲಾಗುವುದು ಎಂದು ತಿಳಿದು ಬಂದಿದೆ.
ದ್ವೀಪ ರಾಷ್ಟ್ರದಲ್ಲಿ ಈಗಾಗಲೇ ಆರ್ಥಿಕ ಬಿಕ್ಕಟ್ಟಿನಿಂದಾಗಿ ಕನಿಷ್ಠ ನಾಲ್ಕು ವಿಶ್ವವಿದ್ಯಾಲಯಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ನಡುವೆಯೇ ಪ್ರತಿಭಟನಾಕಾರರು ಅಧ್ಯಕ್ಷ ಗೋಟಬಯ ರಾಜಪಕ್ಸೆ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ. ಈ ಮಧ್ಯೆ ಪ್ರಧಾನಮಂತ್ರಿ ರಾನಿಲ್ ವಿಕ್ರಮಸಿಂಘೆ ರಾಜಕೀಯ ಪಕ್ಷದ ನಾಯಕರ ತುರ್ತು ಸಭೆ ಕರೆದಿದ್ದಾರೆ. ಇದರ ಜೊತೆಗೆ ಸಂಸತ್ ಸಭೆ ಕರೆಯುವಂತೆ ಸ್ಪೀಕರ್ಗೆ ರಾನಿಲ್ ವಿಕ್ರಮಸಿಂಘೆ ಮನವಿ ಮಾಡಿದ್ದಾರೆ.

ಸರ್ವಪಕ್ಷ ಸಭೆಯಿಂದ ಅಂತರ ಕಾಯ್ದುಕೊಂಡ ಪ್ರತಿಪಕ್ಷಗಳು:
ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಕರೆದಿರುವ ಸರ್ವ ಪಕ್ಷದ ನಾಯಕರ ಸಭೆಗೆ ತಾವು ಅಥವಾ ತಮ್ಮ ಪಕ್ಷದ ನಾಯಕರು ಭಾಗವಹಿಸುವುದಿಲ್ಲ ಎಂದು ಪ್ರತಿಪಕ್ಷ ಮತ್ತು ಎಸ್ಜೆಬಿ ನಾಯಕ ಸಜಿತ್ ಪ್ರೇಮದಾಸ ಹೇಳಿದ್ದಾರೆ.
ರಾಜೀನಾಮೆ ಸಲ್ಲಿಸಲು ಸಿದ್ಧ ಎಂದ ರಾಜಪಕ್ಸೆ?:
ದೇಶದ ಆರ್ಥಿಕ ಬಿಕ್ಕಟ್ಟಿನಿಂದ ತೀವ್ರ ಇಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಎಲ್ಲಿದ್ದಾರೆ ಎಂಬುದೇ ತಿಳಿದು ಬಂದಿಲ್ಲ. ಕೊಲಂಬೊದ ಅವರ ಅಧಿಕೃತ ನಿವಾಸಕ್ಕೆ ಸಾವಿರಾರು ಪ್ರತಿಭಟನಾಕಾರರು ನುಗ್ಗುವ ಮುನ್ನ ಅಲ್ಲಿಂದ ರಾಜಪಕ್ಸೆಯನ್ನು ಸ್ಥಳಾಂತರಿಸಲಾಗಿತ್ತು. ಇದರ ಮಧ್ಯೆಯಲ್ಲಿ ಪಕ್ಷದ ನಾಯಕರ ಸಭೆಯಲ್ಲಿ ಕೈಗೊಳ್ಳುವ ಯಾವುದೇ ನಿರ್ಧಾರವನ್ನು ತಾವು ಗೌರವಿಸುವುದಾಗಿ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆಯು ಪ್ರಧಾನಮಂತ್ರಿ ರಾನಿಲ್ ವಿಕ್ರಮಸಿಂಘೆಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications