ಶಾಕಿಂಗ್: ಶ್ರೀಲಂಕಾ ಬಾಂಬ್ ಸ್ಫೋಟಕ್ಕೆ ದಕ್ಷಿಣ ಭಾರತದ ನಂಟು
ಕೊಲಂಬೊ, ಏಪ್ರಿಲ್ 27: ಶ್ರೀಲಂಕಾದಲ್ಲಿ ಕಳೆದ ಭಾನುವಾರ ಸಂಭವಿಸಿದ ಸರಣಿ ಬಾಂಬ್ ದಾಳಿಗೆ ನೀಲ ನಕ್ಷೆ ಸಿದ್ಧಪಡಿಸಿದ್ದು ದಕ್ಷಿಣ ಭಾರತದ ರಾಜ್ಯವೊಂದರಲ್ಲೇ ಎಂದು ಲಂಕಾದ ರಕ್ಷಣಾ ಇಲಾಖೆ ಹೇಳಿದೆ.
ಲಂಕಾ ಸರಣಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಎಂದು ಪರಿಗಣಿಸಲಾಗಿರುವ ಉಗ್ರಗಾಮಿ ನಾಯಕ ಝಹ್ರಾನ್ ಹಶಿಮ್ ಒಂದಷ್ಟು ಸಮಯನ್ನು ದಕ್ಷಿಣ ಭಾರತದಲ್ಲೇ ಕಳೆದಿದ್ದ ಎನ್ನಲಾಗುತ್ತಿದೆ, ಇದೇ ಸಮಯದಲ್ಲಿ ದಾಳಿಯ ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂಬ ಅನುಮಾನವೂ ಇದೆ.
ಹಶೀಮ್ ಅನ್ನು ನ್ಯಾಷನಲ್ ತೌಹೀದ್ ಜಮಾತ್ ಉಗ್ರ ಸಂಘಟನೆಯ ಮುಖ್ಯ ಸದಸ್ಯನೆಂದು ಗುರುತಿಸಲಾಗಿದ್ದು, ಆತನೇ ಲಂಕಾ ದಾಳಿಯ ಮಾಸ್ಟರ್ ಮೈಂಡ್ ಎಂದು ಗುರುತಿಸಲಾಗಿದೆ. ದಾಳಿಯ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.
ಉಗ್ರರರಿಂದ ಆತಂಕ, ಕರಾವಳಿ ಕಾವಲು ಪಡೆಗೆ ಸನ್ನದ್ಧರಾಗುವಂತೆ ಸೂಚನೆ
ಒಬ್ಬ ಮಹಿಳೆ ಸೇರಿದಂತೆ ಒಂಬತ್ತು ಆತ್ಮಹತ್ಯಾ ದಾಳಿಕೋರರ ಸುಳಿವನ್ನು ಈಗಾಗಲೇ ಶ್ರೀಲಂಕಾ ಸರ್ಕಾರ ಪತ್ತೆ ಹಚ್ಚಿದ್ದು, ಕೆಲವು ಯುವಕರು ದಾಳಿಯ ಭಾಗವಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ದಾಳಿಯಲ್ಲಿ ಭಾಗಿಯಾಗಿರುವ ಕೆಲವು ಯುಕವರಿಗೆ ದಕ್ಷಿಣ ಭಾರತದ ರಾಜ್ಯದಲ್ಲಿ ತರಬೇತಿ ನೀಡಲಾಗಿದೆ ಎನ್ನಲಾಗಿದೆ. ತಮಿಳುನಾಡಿನಲ್ಲಿ ಈ ತರಬೇತಿ ನಡೆದಿದೆಯೆಂದು ಲಂಕಾ ರಕ್ಷಣಾ ಇಲಾಖೆ ಗುಮಾನಿ ವ್ಯಕ್ತಪಡಿಸಿದೆ.
ಭಾರತ ಸರ್ಕಾರ ಮಾಹಿತಿ ನೀಡಿಲ್ಲ
ಹಶೀಮ್ ಭಾರತಕ್ಕೆ ಬಂದಿದ್ದನೆಂಬ ಬಗ್ಗೆ ಭಾರತದ ಗುಪ್ತಚರ ಇಲಾಖೆ ಈ ಬಗ್ಗೆ ಯಾವುದೇ ಸ್ಪಷ್ಟೀಕರಣ ನೀಡಿಲ್ಲ, ಆದರೆ ಹಶೀಮ್ನ ಫೇಸ್ಬುಕ್ ಪೇಜ್ನಲ್ಲಿರುವ ನೂರಕ್ಕೂ ಹೆಚ್ಚು ಗೆಳೆಯರನ್ನು ಒಬ್ಬೊಬ್ಬರನ್ನಾಗಿ ತನಿಖೆ ನಡೆಸಲಾಗುತ್ತಿದೆ.
ಇದಪ್ಪಾ ತಾಕತ್ತು! ದಾಳಿಯಾಗಿ ವಾರದೊಳಗೆ ಉಗ್ರರ ಚೆಂಡಾಡಿದ ಶ್ರೀಲಂಕಾ
ಭಾರತದಲ್ಲಿ ವ್ಯಾಸಾಂಗ ಮಾಡಿದ್ದ ಹಶೀಮ್
ಹಶೀಮ್ ಭಾರತದಲ್ಲಿ ವ್ಯಾಸಾಂಗ ಮಾಡಿದ್ದ ಎನ್ನಲಾಗಿದ್ದು, ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಶ್ರೀಲಂಕಾದ ಕಟ್ಟನ್ಕುಡಿಯಲ್ಲಿ ನೆಲೆಸಿ ಅಲ್ಲಿನ ಮಸೀದಿಯೊಂದರ ಮೌಲ್ವಿಯಾಗಿದ್ದ ಹಾಗೂ ಫೇಸ್ಬುಕ್ ಮೂಲಕ ದ್ವೇಷ ಹರಡುವ ಕಾರ್ಯದಲ್ಲಿ ತೊಡಗಿದ್ದ ಎಂದು ಪ್ರಾಥಮಿಕ ತನಿಖೆಯಿಂದ ಶ್ರೀಲಂಕಾ ಸರ್ಕಾರ ಪತ್ತೆ ಹಚ್ಚಿದೆ.
'ಶ್ರೀಲಂಕಾ ಸ್ಫೋಟದ ಮುಖ್ಯ ಶಂಕಿತ ಹಶೀಮ್ ದಾಳಿ ವೇಳೆಯೇ ಸತ್ತಿದ್ದಾನೆ'
ಶಾಂಗ್ರಿಲಾ ನಲ್ಲಿ ಬಾಂಬ್ ಸ್ಫೋಟಿಸಿದ್ದು ಈತನೇ?
ಕೊಲಂಬೊದ ಶಾಂಗ್ರಿಲಾ ಹೊಟೆಲ್ ನಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಿಸಿದ್ದು ಇದೇ ಹಶೀಮ್ ಎಂದು ಕೆಲವು ಮೂಲಗಳು ಹೇಳಿವೆಯಾದರೂ ಈವರೆಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ, ಶ್ರೀಲಂಕಾ ರಕ್ಷಣಾ ಇಲಾಖೆ ಗುರುತಿಸಿರುವ ಒಂಬತ್ತು ಆತ್ಮಾಹುತಿ ದಾಳಿಕೋರರ ಹೆಸರನ್ನೂ ಸಹ ಈವರೆಗೆ ಬಹಿರಂಗಪಡಿಸಲಾಗಿಲ್ಲ.
ಕಳೆದ ಭಾನುವಾರ ಶ್ರೀಲಂಕಾದಲ್ಲಿ ಸರಣಿ ಸ್ಫೋಟ
ಶ್ರೀಲಂಕಾದಲ್ಲಿ ಕಳೆದ ಭಾನುವಾರ ಸರಣಿ ಸ್ಫೋಟವನ್ನು ಉಗ್ರರು ನಡೆಸಿದರು. ಇದರಲ್ಲಿ 359 ಮಂದಿ ಹತರಾಗಿ ಸುಮಾರು 500 ಕ್ಕೂ ಹೆಚ್ಚು ಮಂದಿ ಗಾಯಾಳುಗಳಾಗಿದ್ದಾರೆ. ಶ್ರೀಲಂಕಾದಲ್ಲಿ ಇನ್ನೂ ಬಾಂಬ್ ದಾಳಿಗಳು ನಡೆಯುತ್ತಲೇ ಇದ್ದು, ನಿನ್ನೆ ರಾತ್ರಿ ಸಹ ಮೂರು ಆತ್ಮಾಹುತಿ ದಾಳಿ ನಡೆದಿದೆ ಎನ್ನಲಾಗಿದೆ.