Get Updates
Get notified of breaking news, exclusive insights, and must-see stories!

ಮೋದಿ ವಿರುದ್ಧ ಪುಟಿನ್ 'ಛೂ' ಬಾಣ; ರಷ್ಯಾ ಪರವಾಗಿ ಭಾರತಕ್ಕೆ ಬಂತಾ ಚೀನಾ!?

ನವದೆಹಲಿ, ಮಾರ್ಚ್ 25: ರಷ್ಯಾ ವಿರುದ್ಧ ಯುರೋಪ್ ರಾಷ್ಟ್ರಗಳನ್ನು ಎತ್ತಿ ಕಟ್ಟುವುದಕ್ಕೆ ಯುನೈಟೆಡ್ ಸ್ಟೇಟ್ಸ್ ಪಣ ತೊಟ್ಟಿದೆ. ವ್ಲಾಡಿಮಿರ್ ಪುಟಿನ್ ವಿರುದ್ಧ ತೊಡೆ ತಟ್ಟಿರುವ ಜೋ ಬೈಡನ್ ಚೀನಾದ ಅಧ್ಯಕ್ಷರಿಗೂ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ನಿಮ್ಮ ಆರ್ಥಿಕತೆ ನೆಟ್ಟಗಿರಬೇಕಾದರೆ, ನೀವು ಸೈಲೆಂಟ್ ಆಗಿರಬೇಕು ಅನ್ನೋ ವಾರ್ನಿಂಗ್ ಪಾಸ್ ಮಾಡಿದ್ದು ಆಗಿದೆ.

ಒಂದು ಕಡೆಯಲ್ಲಿ ಉಕ್ರೇನ್-ರಷ್ಯಾ ಯುದ್ಧ ಇನ್ನೊಂದು ಮಗ್ಗಲಿನಲ್ಲಿ ಯುಎಸ್-ರಷ್ಯಾ ವಾಗ್ಯುದ್ಧ. ಇದರ ಮಧ್ಯೆ ಭಾರತಕ್ಕೆ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭೇಟಿ ನೀಡಿರುವುದು ಹಲವು ರೀತಿ ರಾಜಕೀಯ ಹಾಗೂ ಭವಿಷ್ಯ ಲೆಕ್ಕಾಚಾರಗಳನ್ನು ಹಾಕುವಂತೆ ಮಾಡಿದೆ.

ಲಡಾಖ್, ಪ್ಯಾಂಗಾಂಗ್, ಗಲ್ವಾನ್ ಗಡಿರೇಖೆಯಲ್ಲಿ ಭಾರತ-ಚೀನಾ ಯೋಧರ ಸಂಘರ್ಷದ ನಂತರದಲ್ಲಿ ಸುಮಾರು ಎರಡು ವರ್ಷಗಳ ನಂತರ ಮೊದಲ ಬಾರಿಗೆ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭಾರತಕ್ಕೆ ಭೇಟಿ ಕೊಟ್ಟಿದ್ದಾರೆ. ನವದೆಹಲಿಯ ಹೈದ್ರಾಬಾದ್ ನಿವಾಸದಲ್ಲಿ ನಡೆದ ಬಿಸಿ ಬಿಸಿ ಚರ್ಚೆಗಳ ಕುರಿತು ಸ್ವತಃ ಜೈಶಂಕರ್ ಮಾಹಿತಿ ನೀಡಿದ್ದಾರೆ. ಅದೆಲ್ಲದರ ಹೊರತಾಗಿ ಚೀನಾದ ವಿದೇಶಾಂಗ ಸಚಿವರ ಭಾರತ ಭೇಟಿ ಹಿಂದಿರುವ ಒಂದೇ ಒಂದು ಶಕ್ತಿ ಎಂದರೆ ಅದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್.

ಚೀನಾ ವಿದೇಶಾಂಗ ಸಚಿವರ ಭಾರತ ಭೇಟಿಗೂ ರಷ್ಯಾ ಅಧ್ಯಕ್ಷರಿಗೂ ಏನು ನಂಟು? ಎನ್ನುವ ಒಂದು ಪ್ರಶ್ನೆಯ ಸುತ್ತಲೂ ಹಲವು ಲೆಕ್ಕಾಚಾರಗಳ ಜೊತೆ ಅನುಮಾನಗಳು ಹುಟ್ಟಿಕೊಂಡಿವೆ. ಇಡೀ ಭಾರತವನ್ನು ಪ್ರತಿನಿಧಿಸುವ ಪ್ರಧಾನಿ ನರೇಂದ್ರ ಮೋದಿಯನ್ನು ತನ್ನತ್ತ ಸೆಳೆದುಕೊಳ್ಳುವ ನಿಟ್ಟಿನಲ್ಲಿ ರಷ್ಯಾದ ಅಧ್ಯಕ್ಷರು ಚೀನಾವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರಾ ಎಂಬ ಅನುಮಾನಗಳಿಗೆ ಉತ್ತರವನ್ನು ಈ ವರದಿಯಲ್ಲಿ ತಿಳಿದುಕೊಳ್ಳಿರಿ.

ಚೀನಾ ವಿದೇಶಾಂಗ ಸಚಿವರ ಭೇಟಿಗೆ ಏಕೆ ಮಹತ್ವ?

ಚೀನಾ ವಿದೇಶಾಂಗ ಸಚಿವರ ಭೇಟಿಗೆ ಏಕೆ ಮಹತ್ವ?

ಈ ಹಿಂದೆ 2019ರ ಡಿಸೆಂಬರ್ ತಿಂಗಳಿನಲ್ಲಿ ಕೊನೆಯ ಬಾರಿಗೆ ವಾಂಗ್ ಯಿ ಭಾರತಕ್ಕೆ ಭೇಟಿ ನೀಡಿದ್ದರು. ಲಡಾಖ್ ಗಡಿಯಲ್ಲಿ ಭಾರತ-ಚೀನಾ ಯೋಧರ ಸಂಘರ್ಷದ ಹಿನ್ನೆಲೆ ಎರಡು ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಮಾತುಕತೆಯು ಸಾಕಷ್ಟು ಮಹತ್ವ ಪಡೆದುಕೊಂಡಿದೆ. 2020ರ ಮೇ 5ರಂದು ಲಡಾಖ್ ಸಂಘರ್ಷ ನಡೆದಿದ್ದು, ಪ್ಯಾಂಗಾಂಗ್ ತ್ಸೋ ಸರೋವಾರದ ಎರಡೂ ಕಡೆಗಳಲ್ಲಿ ಶಸ್ತ್ರ-ಸಜ್ಜಿತ ಸೇನಾ ಯೋಧರನ್ನು ನಿಯೋಜನೆ ಮಾಡಲಾಗಿತ್ತು.

ಉಭಯ ರಾಷ್ಟ್ರಗಳ ಸರಣಿ ಸೇನಾ ದ್ವಿಪಕ್ಷೀಯ ಮಾತುಕತೆ ನಂತರದಲ್ಲಿ ಎರಡು ಕಡೆಯ ಸೇನಾ ನಿಷ್ಕ್ರಿಯತೆಗೆ ಸಮ್ಮತಿಸಲಾಗಿತ್ತು. 2021ರ ಫೆಬ್ರವರಿ ತಿಂಗಳಿನಲ್ಲಿ ಪ್ಯಾಂಗಾಂಗ್ ತ್ಸೋ ಮತ್ತು 2021ರ ಆಗಸ್ಟ್ ತಿಂಗಳಿನಲ್ಲಿ ಗೋಗ್ರಾ ಪ್ರದೇಶದಲ್ಲಿ ಸೇನಾ ನಿಷ್ಕ್ರಿಯತೆಗೆ ಒಪ್ಪಿಕೊಳ್ಳಲಾಯಿತು. ಅದಾಗ್ಯೂ, ವಾಸ್ತವಿಕ ಗಡಿ ರೇಖೆಯಲ್ಲಿ ವಿವಾದ ಹಾಗೆ ಮುಂದುವರಿದಿದ್ದು, ಎರಡೂ ಕಡೆಗಳಲ್ಲಿ 50,000ಕ್ಕೂ ಹೆಚ್ಚು ಸೇನಾ ಯೋಧರನ್ನು ನಿಯೋಜನೆ ಮಾಡಲಾಗಿದೆ.

ವಾಂಗ್ ಯಿ ಭೇಟಿ ಹಿಂದೆ ಬ್ರಿಕ್ಸ್ ಶೃಂಗಸಭೆಯ ತಂತ್ರ

ವಾಂಗ್ ಯಿ ಭೇಟಿ ಹಿಂದೆ ಬ್ರಿಕ್ಸ್ ಶೃಂಗಸಭೆಯ ತಂತ್ರ

2022ರಲ್ಲಿ ಚೀನಾದಲ್ಲಿ ನಡೆಯಲಿರುವ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆಗಾಗಿ ಭಾರತವನ್ನು ಆಹ್ವಾನಿಸುವ ಉದ್ದೇಶದಿಂದ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನವದೆಹಲಿಯ ಭೇಟಿಯು ಮಹತ್ವದ ಪಡೆದುಕೊಂಡಿದೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳನ್ನು ಒಳಗೊಂಡ ಬ್ರಿಕ್ಸ್ ಸದಸ್ಯರ ಸಭೆಗೆ ಚೀನಾ ವೇದಿಕೆ ಆಗಲಿದೆ. ಬ್ರಿಕ್ಸ್ ಸಭೆಯಲ್ಲಿ ಉನ್ನತ ಮಟ್ಟದ ಸಭೆ ಮತ್ತು ಚರ್ಚೆಗಳ ಕುರಿತಾಗಿ ವಾಂಗ್ ಯಿ ಭಾರತ ಭೇಟಿಯು ಹೆಚ್ಚು ಮಹತ್ವ ಪಡೆದುಕೊಂಡಿದೆ.

ಎರಡೂ ದೇಶಗಳಲ್ಲಿ ‘ಭಾರತ-ಚೀನಾ ನಾಗರಿಕತೆಯ ಸಂವಾದ' ನಡೆಸುವಂತೆ ಚೀನಿಯರು ಸಲಹೆ ನೀಡಿದ್ದಾರೆ. ಇದಲ್ಲದೆ, ಭಾರತ-ಚೀನಾ ವ್ಯಾಪಾರ ಮತ್ತು ಹೂಡಿಕೆ ಸಹಕಾರ ವೇದಿಕೆ ಮತ್ತು ಭಾರತ-ಚೀನಾ ಚಲನಚಿತ್ರ ವೇದಿಕೆ ಕುರಿತು ಪ್ರಸ್ತಾಪಿಸಿದ್ದಾರೆ.

ಭಾರತಕ್ಕೆ ಚೀನಾ ಆಹ್ವಾನದ ಹಿಂದೆ ಪುಟಿನ್-ಮೋದಿ ಭೇಟಿ ತಂತ್ರ

ಭಾರತಕ್ಕೆ ಚೀನಾ ಆಹ್ವಾನದ ಹಿಂದೆ ಪುಟಿನ್-ಮೋದಿ ಭೇಟಿ ತಂತ್ರ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾಗವಹಿಸಲಿರುವ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಭಾಗವಹಿಸುವಂತೆ ನೋಡಿಕೊಳ್ಳುವುದೇ ಚೀನಾದ ಮುಖ್ಯ ಉದ್ದೇಶವಾಗಿದೆ. ಬ್ರಿಕ್ಸ್ ಶೃಂಗಸಭೆಯ ಹೊರತಾಗಿಯೂ ಈ ವರ್ಷ ರಷ್ಯಾ, ಭಾರತ ಮತ್ತು ಚೀನಾದ (RIC) ಸದಸ್ಯ ರಾಷ್ಟ್ರಗಳ ಸಭೆಯನ್ನು ನಡೆಸುವುದಕ್ಕೆ ಚೀನಾ ಯೋಜನೆ ಹಾಕಿಕೊಳ್ಳುತ್ತಿದೆ.

ಕ್ಸಿ ಜಿನ್ ಪಿಂಗ್ ಭೇಟಿ ಮಾಡುತ್ತಾರಾ ಪ್ರಧಾನಿ ಮೋದಿ?

ಕ್ಸಿ ಜಿನ್ ಪಿಂಗ್ ಭೇಟಿ ಮಾಡುತ್ತಾರಾ ಪ್ರಧಾನಿ ಮೋದಿ?

ಭಾರತ ಮತ್ತು ಚೀನಾದ ನಡುವೆ ಇಂದಿರುವ ಪರಿಸ್ಥಿತಿಯನ್ನು ಅವಲೋಕಿಸಿದಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿ ಮಾಡುತ್ತಾರೆಯೇ ಎಂಬ ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಏಕೆಂದರೆ ಎರಡು ರಾಷ್ಟ್ರಗಳ ನಡುವಿನ ಗಡಿ ಗುದ್ದಾಟ ಇನ್ನೂ ಇತ್ಯರ್ಥವಾಗಿಲ್ಲ. 2019ರ ನವೆಂಬರ್ ತಿಂಗಳಿನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿಯೇ ಕೊನೆಯದಾಗಿ ಮೋದಿ ಮತ್ತು ಕ್ಸಿ ಜಿನ್ ಪಿಂಗ್ ಭೇಟಿ ಆಗಿದ್ದರು. ಇದಕ್ಕೂ ಪೂರ್ವದಲ್ಲಿ 2019ರ ಅಕ್ಟೋಬರ್ ತಿಂಗಳಿನಲ್ಲಿ ಕ್ಸಿ ಜಿನ್ ಪಿಂಗ್ ಭಾರತಕ್ಕೆ ಭೇಟಿ ನೀಡಿದ್ದರು.

ಕಳೆದ 2017ರ ಸೆಪ್ಟೆಂಬರ್ ತಿಂಗಳಿನಲ್ಲಿ ಚೀನಾದ ಕ್ಸಿಯೆಮೆನ್ ನಗರದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಜರಾಗಿದ್ದರು. ಈ ಬ್ರಿಕ್ಸ್ ಶೃಂಗಸಭೆಯು ನಡೆಯುವ ಎರಡು ತಿಂಗಳ ಮುಂಚೆಯಷ್ಟೇ ಡೋಕ್ಲಾಂ ಗಡಿ ಸಂಘರ್ಷವು ಇತ್ಯರ್ಥಗೊಂಡಿತ್ತು.

2022ರ ಶೃಂಗಸಭೆಯ ಹಿಂದೆ ಯಾವೆಲ್ಲ ಅವಕಾಶ?

2022ರ ಶೃಂಗಸಭೆಯ ಹಿಂದೆ ಯಾವೆಲ್ಲ ಅವಕಾಶ?

ಎರಡು ರಾಷ್ಟ್ರಗಳ ವಿದೇಶಾಂಗ ಸಚಿವರ ಹಂತದ ಉನ್ನತ ಮಟ್ಟದ ಸಭೆಯು ಭಾರತ ಮತ್ತು ಚೀನಾದ ನಡುವಿನ ಸಂಬಂಧವನ್ನು ಮರಳಿ ಹಳಿಗೆ ತರುವ ಸೂಚನೆಗಳನ್ನು ನೀಡುತ್ತಿದೆ. ಆದರೆ, ವಾಸ್ತವದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ಅಂದುಕೊಂಡಂತೆ ಇಲ್ಲ. ಕಳೆದ 2020ರ ಮೇ 5ರಂದು ಪ್ಯಾಂಗಾಂಗ್ ತ್ಸೋ ಸರೋವಾರದ ಬಳಿ ನಡೆದ ಸಂಘರ್ಷದಲ್ಲಿ ಭಾರತ ಮತ್ತು ಚೀನಾದ ಯೋಧರು ಸಾವಿನ ಮನೆ ಸೇರಿದ್ದರು. ತದನಂತರ ಎರಡು ಗಡಿ ರೇಖೆಯಲ್ಲಿ ಸಶಸ್ತ್ರ ಸೇನಾ ಪಡೆಗಳನ್ನು ನಿಯೋಜನೆ ಮಾಡಲಾಗಿತ್ತು.

ಈ ವರ್ಷ ಚೀನಾದಲ್ಲಿ ಆಯೋಜನೆ ಆಗುತ್ತಿರುವ 14ನೇ ಬ್ರಿಕ್ಸ್ ಶೃಂಗಸಭೆಯ ವೇಳೆಗೆ ಈ ಗಡಿ ವಿವಾದವೂ ಇತ್ಯರ್ಥವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಏಕೆಂದರೆ ಈ ಹಿಂದೆ 2017ರ ಸೆಪ್ಟೆಂಬರ್ ತಿಂಗಳಿನಲ್ಲಿ ಬ್ರಿಕ್ಸ್ ಸಭೆ ಪ್ರಾರಂಭವಾಗುವುದಕ್ಕೂ ಎರಡು ತಿಂಗಳ ಮೊದಲು ಡೋಕ್ಲಾಂ ಗಡಿ ವಿವಾದವು ಇತ್ಯರ್ಥಗೊಂಡಿತ್ತು.

ರಷ್ಯಾ ಪಾಲಿಗೆ ಲಾಭದಾಯಕವಾಗುತ್ತಾ 14ನೇ ಬ್ರಿಕ್ಸ್ ಸಭೆ?

ರಷ್ಯಾ ಪಾಲಿಗೆ ಲಾಭದಾಯಕವಾಗುತ್ತಾ 14ನೇ ಬ್ರಿಕ್ಸ್ ಸಭೆ?

ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾಗೆ ಜಾಗತಿಕ ಮಟ್ಟದಲ್ಲಿ ಮುಂದುವರಿದ ರಾಷ್ಟ್ರಗಳು ನಿರ್ಬಂಧಗಳ ಸರಮಾಲೆಯನ್ನು ಹಾಕುತ್ತಿವೆ. ಈ ಹಂತದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಾವು ರಾಜಕೀಯ ಅಸ್ಪಶ್ಯರಲ್ಲ ಎಂಬುದನ್ನು ಸಾಬೀತುಪಡಿಸಬೇಕಿದೆ. ತಮ್ಮ ರಾಷ್ಟ್ರಗಳೊಂದಿಗೆ ನಿಂತುಕೊಳ್ಳುವುದಕ್ಕೂ ಮಿತ್ರರಾಷ್ಟ್ರಗಳಿವೆ ಎಂಬುದನ್ನು ಯುಎಸ್ ಎದುರಿಗೆ ಸಾಬೀತುಪಡಿಸಬೇಕಿದೆ. ಈ ನಿಟ್ಟಿನಲ್ಲಿ ಭಾರತದ ಬೆಂಬಲವನ್ನು ಪಡೆದುಕೊಳ್ಳುವುದು ರಷ್ಯಾದ ಮುಖ್ಯ ಗುರಿ ಆಗಿದೆ. ಏಕೆಂದರೆ ಇನ್ನೊಂದು ಮಗ್ಗಲಿನಲ್ಲಿ ರಷ್ಯಾಗೆ ಬೆಂಬಲಿಸದೇ ತನ್ನೊಂದಿಗೆ ನಿಂತುಕೊಳ್ಳುವಂತೆ ಯುಎಸ್ ಅಧ್ಯಕ್ಷ ಜೋ ಬೈಡನ್ ಭಾರತದ ಮೇಲೆ ಒತ್ತಡ ಹೇರುತ್ತಿದ್ದಾರೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಭಾರತದ ನಿಲುವು ಹೇಗಿರುತ್ತದೆ. ಯಾವ ದೇಶದ ಪರವಾಗಿ ನಿಲ್ಲಬೇಕಾಗುತ್ತದೆ ಎಂಬುದು ಸಾಕಷ್ಟು ಗೊಂದಲಮಯ ಹಾಗೂ ದೊಡ್ಡ ಸವಾಲಾಗಿದೆ.

Recommended Video

    ಕಾಲಿಗೆ ಒಂಚೂರು ಕೆಸರು ತಾಕಿಸಿಕೊಳ್ಳದೆ ರಸ್ತೆ ದಾಟ್ಬೇಕಾ? ಹಾಗಾದ್ರೆ ಈ ವಿಡಿಯೋ ನೋಡಿ | Oneindia Kannada
    ಭಾರತದ ಮುಂದಿರುವ ಆಯ್ಕೆ ಮತ್ತು ಲೆಕ್ಕಾಚಾರ?

    ಭಾರತದ ಮುಂದಿರುವ ಆಯ್ಕೆ ಮತ್ತು ಲೆಕ್ಕಾಚಾರ?

    ಗಡಿ ಪರಿಸ್ಥಿತಿ ದ್ವಿಪಕ್ಷೀಯ ಬಾಂಧವ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಭಾರತ ಯಾವಾಗಲೂ ಸಮರ್ಥಿಸಿಕೊಂಡಿದೆ. ಅದಾಗ್ಯೂ, ಗಡಿ ವಿವಾದವನ್ನು ಸೂಕ್ತವಾಗಿ ನಿಭಾಯಿಸಬೇಕು ಮತ್ತು ದ್ವಿಪಕ್ಷೀಯ ಬಾಂಧವ್ಯವನ್ನು ಗಣನೆಗೆ ತೆಗೆದುಕೊಳ್ಳಬೇಕೆಂದು ಚೀನಾ ಒತ್ತಾಯಿಸಿದೆ. ಈ ಹಂತದಲ್ಲಿ ಯಾವುದೇ ದ್ವಿಪಕ್ಷೀಯ ಭೇಟಿ ಸಾಧ್ಯವಿರುವುದಿಲ್ಲ. ಹೀಗಿರುವಾಗ ಭಾರತ ಮತ್ತು ಚೀನಾದ ವಿದೇಶಾಂಗ ಸಚಿವರ ಹಂತದ ಮಾತುಕತೆ ಹಾಗೂ ಚರ್ಚೆಗಳಿಗೆ ಬೇರೆ ರಾಷ್ಟ್ರಗಳಲ್ಲಿ ನಡೆಯುವ ಸಭೆಗಳು ವೇದಿಕೆ ಆಗುತ್ತವೆ. ಈ ನಿಟ್ಟಿನಲ್ಲಿ ಬ್ರಿಕ್ಸ್, ಜಿ-20 ಮತ್ತು ಎಸ್‌ಸಿಓ ರೀತಿಯ ಅಂತಾರಾಷ್ಟ್ರೀಯ ಸಭೆಗಳು ಮುಖ್ಯವಾಗಿರುತ್ತವೆ.

    ಇಂದಿನ ಪರಿಸ್ಥಿತಿಯಲ್ಲಿ ಭಾರತದ ರೀತಿಯಲ್ಲೇ ರಷ್ಯಾ ಕೂಡ ಆಲೋಚಿಸುತ್ತಿದೆ. ಈ ಹಿನ್ನೆಲೆ ಚೀನಾದಲ್ಲಿ ನಡೆಯುತ್ತಿರುವ 14ನೇ ಶೃಂಗಸಭೆಯನ್ನು ತನ್ನ ಉದ್ದೇಶ ಈಡೇರಿಕೆಗೆ ಬಳಸಿಕೊಳ್ಳಲು ಚಿಂತನೆ ನಡೆಸುತ್ತಿದೆ. ಭಾರತವನ್ನು ಒಲಿಸಿಕೊಳ್ಳುವ ಮೂಲಕ ಜಗತ್ತಿನಲ್ಲಿ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಎರಡು ರಾಷ್ಟ್ರಗಳು ತಮ್ಮ ಪರವಾಗಿವೆ ಎಂಬ ಸಂದೇಶವನ್ನು ಯುಎಸ್ ಒಕ್ಕೂಟ ರಾಷ್ಟ್ರಗಳಿಗೆ ತಲುಪಿಸುವ ತಂತ್ರವನ್ನು ಹೆಣೆದಿದ್ದಾರೆ.

    ಜಾಗತಿಕ ಮಟ್ಟದಲ್ಲಿ ರಷ್ಯಾ ವಿರುದ್ಧ ಮಾತಾಡದ ಭಾರತ

    ಜಾಗತಿಕ ಮಟ್ಟದಲ್ಲಿ ರಷ್ಯಾ ವಿರುದ್ಧ ಮಾತಾಡದ ಭಾರತ

    ಜಾಗತಿಕ ವೇದಿಕೆಗಳಲ್ಲಿ ಯುಎಸ್ ಒಕ್ಕೂಟದಲ್ಲಿ ಗುರುತಿಸಿಕೊಂಡ ಹಲವು ಮುಂದುವರಿದ ರಾಷ್ಟ್ರಗಳು ರಷ್ಯಾ ವಿರುದ್ಧ ಎದ್ದು ನಿಂತಿವೆ. ಆದರೆ ಯುಎಸ್ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಭಾರತ ತಟಸ್ಥ ನಿಲುವು ಪಾಲನೆ ಮಾಡುತ್ತಿದೆ. ಉಕ್ರೇನ್ ವಿರುದ್ಧದ ಯುದ್ಧವನ್ನು ನಿಲ್ಲಿಸುವಂತೆ ಹೇಳುತ್ತಿರುವ ಭಾರತ, ರಷ್ಯಾದ ಮೇಲೆ ನಿರ್ಬಂಧ ಹಾಕುವ ವಿಷಯದಲ್ಲಿ ಮಾತ್ರ ಮೌನಕ್ಕೆ ಶರಣಾಗಿದೆ. ಇದೊಂದು ನಡೆಯೇ ಯುಎಸ್ ಕಣ್ಣು ಕೆಂಪಾಗುವಂತೆ ಮಾಡಿದ್ದು, ಮೇಲಿಂದ ಮೇಲೆ ಎಚ್ಚರಿಕೆಯನ್ನು ನೀಡುತ್ತಿದೆ. ಇಂಥ ಯುದ್ಧ ಸನ್ನಿವೇಶದಲ್ಲಿ ಭಾರತ ತೆಗೆದುಕೊಳ್ಳುವ ಒಂದೇ ಒಂದು ನಿರ್ಧಾರವು ಭವಿಷ್ಯದ ರಾಜಕೀಯ, ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+