ಸವಿತಾ ಸಾವಿಗೆ ನ್ಯಾಯ: ಗರ್ಭಪಾತ ನಿಷೇಧ ಕಾನೂನು ರದ್ದು
ಬೆಂಗಳೂರು, ಮೇ 27: ಐರ್ಲೆಂಡ್ ನಲ್ಲಿ ಮೃತಪಟ್ಟ ಬೆಳಗಾವಿ ಮೂಲದ ದಂತವೈದ್ಯೆ ಸವಿತಾ ಹಾಲಪ್ಪನವರ್ ಸಾವಿನ ನಂತರ ಕೊನೆಗೂ ಐರ್ಲೆಂಡ್ ಮಹಿಳೆಯರಿಗೆ ಅಬಾರ್ಷನ್ ಹಕ್ಕು ನೀಡಲು ಮುಂದಾಗಿದೆ. ಈ ಮೂಲಕ ಹೊಸ ಇತಿಹಾಸ ನಿರ್ಮಾಣವಾಗಲಿದ್ದು, ಸಾರ್ವಜನಿಕರ ಆಗ್ರಹಕ್ಕೆ ಐರ್ಲೆಂಡ್ ಸರ್ಕಾರ ಮಣಿದಿದೆ.
'ಗರ್ಭಪಾತ ಮಾಡಲು ನಿರಾಕರಿಸಿದ್ದರಿಂದ ಸವಿತಾ ಅವರು ಮೃತಪಟ್ಟಿಲ್ಲ. ವೈದ್ಯರ ನಿರ್ಲಕ್ಷದಿಂದಾಗಿ ಸವಿತಾ ಸಾವನ್ನಪ್ಪಿದ್ದಾಳೆ' ಎಂಬುದು ದೃಢಪಟ್ಟಿತ್ತು. ಈ ಬಗ್ಗೆ ಐರ್ಲೆಂಡ್ ಸಂಸತ್ತಿನಲ್ಲಿ ಭಾರಿ ಚರ್ಚೆ ನಡೆದು ಗರ್ಭಪಾತದ ವಿಶೇಷ ಮಸೂದೆ 2013ರಲ್ಲೇ ಅಂಗೀಕಾರವಾಗಿತ್ತು. ಆದರೆ, ಕಾನೂನಿನ ಮಾನ್ಯತೆ ಸಿಕ್ಕಿರಲಿಲ್ಲ.
ಐರ್ಲೆಂಡ್ ಕಣ್ತೆರೆಸಿದ ಕನ್ನಡ ಗರ್ಭಿಣಿಯ ಸಾವು
ಸವಿತಾ ಹಾಲಪ್ಪನವರ್ ಅವರ ಸಾವನ್ನು ಖಂಡಿಸಿ ಐರ್ಲೆಂಡ್ನಲ್ಲಿ ನೆಲೆಸಿರುವ ಭಾರತೀಯರು, ಐರಿಷ್ ಮಹಿಳೆಯರು ಕಳೆದ ಆರು ವರ್ಷಗಳಿಂದ ಸತತವಾಗಿ ಹೋರಾಟ ನಡೆಸುತ್ತಾ ಬಂದಿದ್ದರು.
ಈಗ ಮೂರೂವರೆ ದಶಕದಿಂದ ಜಾರಿಯಿದ್ದ ಗರ್ಭಪಾತ ನಿಷೇಧ ಕಾನೂನು ರದ್ದತಿಯ ಐತಿಹಾಸಿಕ ನಿರ್ಣಯಕ್ಕೆ ಐರ್ಲೆಂಡ್ ಸರ್ಕಾರ ನಿರ್ಧರಿಸಿದೆ.
ಗರ್ಭಪಾತ ನಿಷೇಧ ಕಾನೂನು ರದ್ದುಪಡಿಸಲು ವೋಟಿಂಗ್
ಗರ್ಭಪಾತ ನಿಷೇಧ ಕಾನೂನು ರದ್ದುಪಡಿಸುವ ಸಂಬಂಧ ಮೂರು ದಿನಗಳಿಂದ ಸಾರ್ವಜನಕರ ಅಭಿಪ್ರಾಯವನ್ನು ಸಂಗ್ರಹಿಸಲು ಐರ್ಲೆಂಡ್ ಸರ್ಕಾರ ಮುಂದಾಗಿತ್ತು. ಶನಿವಾರ ರಾತ್ರಿ ವೇಳೆಗೆ ಜನಮತದ ಫಲಿತಾಂಶ ಹೊರಬಂದಿತ್ತು. ಗರ್ಭಪಾತ ನಿಷೇಧ ಕಾನೂನು ರದ್ದುಪಡಿಸುವಂತೆ ಶೇ. 67.09 ಹಾಗೂ ವಿರೋಧವಾಗಿ ಶೇ.32.91 ಮತಗಳು ಬಂದಿವೆ. ಜನಮತ ಗರ್ಭಪಾತ ನಿಷೇಧ ಕಾನೂನು ರದ್ಧತಿ ಪರವಾಗಿ ಬಂದ ಕಾರಣ, ಐರ್ಲೆಂಡ್ನಲ್ಲಿ ಗರ್ಭಪಾತ ಶೀಘ್ರವೇ ಕಾನೂನು ಬದ್ಧವಾಗಲಿದೆ.
ಐರ್ಲೆಂಡ್ ಕಟ್ಟುಪಾಡುಗಳಿಂದ ಹೊರ ಬರುತ್ತಿದೆ
ಭಾರತೀಯ ಮಹಿಳೆ ಸವಿತಾ ಹಾಲಪ್ಪ ಎಂಬುವರು ಗರ್ಭಪಾತಕ್ಕೆ ಅವಕಾಶವಿಲ್ಲದ್ದರಿಂದ ಹೆರಿಗೆ ವೇಳೆ ಸಾವನ್ನಪ್ಪಿದ ಘಟನೆ ವಿಶ್ವದೆಲ್ಲೆಡೆ ಸುದ್ದಿ ಮಾಡಿದ್ದ ಹಿನ್ನೆಲೆಯಲ್ಲಿ 2013ರಲ್ಲಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿತ್ತು.
ಮಸೂದೆಯ ಪರವಾಗಿ 177 ಮತಗಳು ಬಿದ್ದರೆ ವಿರುದ್ಧವಾಗಿ 31 ಮತಗಳು ಚಲಾವಣೆಯಾಗಿದ್ದವು. ಕ್ಯಾಥೋಲಿಕ್ ಧರ್ಮದವರ ಪ್ರಕಾರ, ಮಹಿಳೆ ಯಾವುದೇ ಕಾರಣಕ್ಕೂ ಗರ್ಭಪಾತ ಮಾಡಿಸಿಕೊಳ್ಳಬಾರದು ಎಂಬುದು ಒಂದು ಸಂಪ್ರದಾಯವಾಗಿದೆ.
ಸಾಂಪ್ರದಾಯಿಕ ರೋಮನ್ ಕ್ಯಾಥೋಲಿಕ್ ರಾಷ್ಟ್ರವಾಗಿದ್ದ ಐರ್ಲೆಂಡ್ ಇಂಥಹ ಕಟ್ಟುಪಾಡುಗಳಿಂದ ಹೊರ ಬರುತ್ತಿದೆ.
ಮತದಾರರಿಗೆ ನನ್ನ ಕೃತಜ್ಞತೆ : ಅಂದಾನಪ್ಪ
'ಐರ್ಲೆಂಡ್ ಸರಕಾರ ಕೊನೆಗೂ ಎಚ್ಚೆತ್ತುಕೊಂಡು ತನ್ನ ಕರಾಳ ನೀತಿಯನ್ನು ಮಾರ್ಪಾಡು ಮಾಡಲು ನಿರ್ಧರಿಸಿರುವುದು ತುಸುಮಟ್ಟಿಗೆ ಸಮಾಧಾನ ತಂದಿದೆ' ಐರ್ಲೆಂಡ್ ದೇಶದ ಮತದಾರರಿಗೆ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಪುತ್ರಿಗೆ ಬಂದ ಸ್ಥಿತಿ ಇನ್ನೋರ್ವ ಮಹಿಳೆಗೆ ಬರಬಾರದು. ಆದರೆ ಆ ತಿದ್ದುಪಡಿ ಕಾಯಿದೆಗೆ ತಮ್ಮ ಮಗಳ ಹೆಸರನ್ನಿಡಬೇಕು. So that ಆ ಕಾಯಿದೆಯಲ್ಲಿ ಸವಿತಾ ಹೆಸರು ಶಾಶ್ವತವಾಗಿ ಕಾಣಿಸಿಕೊಳ್ಳಬೇಕು. ಹಾಗಾದರೂ ನಮ್ಮ ಮಗಳು ಜೀವಂತವಾಗಿರಲಿ ಎಂದು ಅವರು ಆಶಿಸಿದ್ದಾರೆ.
ಸವಿತಾ ಸಾವಿಗೆ ಕಾರಣವಾಗಿದ್ದ ಕಾಯ್ದೆ
ಅಕ್ಟೋಬರ್ ನಲ್ಲಿ 17 ವಾರದ ಗರ್ಭಿಣಿಯಾಗಿದ್ದ ಸವಿತಾ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಬೆನ್ನುನೋವುನಿಂದ ಬಳಲುತ್ತಿದ್ದ ಅವರು, ವೈದ್ಯರ ಬಳಿ ಗರ್ಭಪಾತ ಮಾಡುವಂತೆ ಮನವಿ ಮಾಡಿದ್ದರು. ಸವಿತಾ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟು ಅವರು ಗಂಭೀರ ಸ್ಥಿತಿಗೆ ತಲುಪಿದಾಗಲೂ ವೈದ್ಯರು ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದರು. ಆಸ್ಪತ್ರೆಗೆ ದಾಖಲಾದ ನಂತರ ರಕ್ತ ಪರೀಕ್ಷೆ, ರಕ್ತ ದೊತ್ತಡ, ದೇಹದ ಉಷ್ಣಾಂಶ ಮುಂತಾದ ಪರೀಕ್ಷೆಗಳನ್ನು ವೈದ್ಯರು ನಡೆಸಿದ್ದಾರೆ ಎಂಬುದಕ್ಕೆ ಆಸ್ಪತ್ರೆಯಲ್ಲಿ ಯಾವುದೇ ದಾಖಲೆಗಳು ತನಿಖಾ ತಂಡಕ್ಕೆ ಲಭ್ಯವಾಗಿಲ್ಲ. ಇದರಿಂದ ವೈದ್ಯರ ನಿರ್ಲಕ್ಷ್ಯದಿಂದಲೇ ಆಕೆ ಸಾವನ್ನಪ್ಪಿದ್ದಾಳೆ ಎಂದು ವರದಿ ಬಂದಿತ್ತು. ಇದೆಕ್ಕಲ್ಲ ಗರ್ಭಪಾತ ನಿಷೇಧ ಕಾಯ್ದೆಯೇ ಕಾರಣವಾಗಿತ್ತು.