ಭಾರತಕ್ಕೆ ಬಂಪರ್ ಆಫರ್ ಕೊಟ್ಟ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್!
ನವದೆಹಲಿ, ಏಪ್ರಿಲ್ 1: ಉಕ್ರೇನ್ ಮತ್ತು ರಷ್ಯಾದ ಯುದ್ಧದ ನಡುವೆ ಜಾಗತಿಕ ಮಟ್ಟದಲ್ಲಿ ಭಾರತ ತೋರಿದ ಸ್ವತಂತ್ರ್ಯ ವಿದೇಶಾಂಗ ನೀತಿಯನ್ನು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಶ್ಲಾಘಿಸಿದ್ದಾರೆ.
ಗುರುವಾರ ಭಾರತಕ್ಕೆ ಭೇಟಿ ನೀಡಿದ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಜೊತೆ ಚರ್ಚೆ ನಡೆಸಿದರು. ಭಾರತ ಮತ್ತು ರಷ್ಯಾ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದರು.
ದುಬಾರಿ ದುನಿಯಾದಲ್ಲಿ ಭಾರತಕ್ಕೆ ಬಂಪರ್ ಆಫರ್ ನೀಡಿರುವ ರಾಷ್ಟ್ರ ಯಾವುದು?
ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಈ ವೇಳೆ "ಭಾರತವು ಏನನ್ನು ಖರೀದಿಸುವುದಕ್ಕೆ ಬಯಸುತ್ತದೆಯೋ ಅದನ್ನು ಪೂರೈಸುವುದಕ್ಕೆ ರಷ್ಯಾ ಸದಾ ಸಿದ್ಧವಾಗಿರುತ್ತದೆ," ಎಂದು ಸಚಿವ ಸೆರ್ಗೆ ಲಾವ್ರೊವ್ ಹೇಳಿದರು.
ಅಮೆರಿಕಾಗೆ ಟಾಂಗ್ ಕೊಟ್ಟ ರಷ್ಯಾ ವಿದೇಶಾಂಗ ಸಚಿವ
ನವದೆಹಲಿಯಲ್ಲಿ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್, ಯುಎಸ್ಎ ಹೆಸರನ್ನು ಉಲ್ಲೇಖಿಸದೇ ಪರೋಕ್ಷವಾಗಿ ಟಾಂಗ್ ಕೊಟ್ಟರು. "ಕೆಲವು ರಾಷ್ಟ್ರಗಳು ಭಾರತ ಮತ್ತು ಚೀನಾದ ಮೇಲೆ ಒಂದು ನಿಲುವು ಪ್ರದರ್ಶಿಸುವಂತೆ ಒತ್ತಡ ಹೇರುತ್ತಿವೆ. ಆದರೆ ಅಂಥ ಒತ್ತಡಗಳು ಭಾರತ ಮತ್ತು ರಷ್ಯಾದ ವಿಷಯದಲ್ಲಿ ಕೆಲಸ ಮಾಡುವುದಿಲ್ಲ ಎಂಬ ವಿಶ್ವಾಸವಿದೆ. ನನಗೆ ನಂಬಿಕೆಯಿದ್ದು, ಭಾರತದ ವಿದೇಶಾಂಗ ನೀತಿಯು ಸ್ವಾತಂತ್ರ್ಯ ಹಾಗೂ ರಾಷ್ಟ್ರೀಯವಾದ ಮತ್ತು ನ್ಯಾಯಸಮ್ಮತವಾಗಿ ಇರುತ್ತದೆ. ಇಂಥ ವಿದೇಶಾಂಗ ನೀತಿಯಲ್ಲಿನ ಬದ್ಧತೆಯೇ ಭಾರತ ಮತ್ತು ರಷ್ಯಾವನ್ನು ಉತ್ತಮ ಮಿತ್ರ ಹಾಗೂ ಪ್ರಾಮಾಣಿಕ ಪಾಲುದಾರರನ್ನಾಗಿ ಮಾಡುತ್ತದೆ," ಎಂದಿದ್ದಾರೆ.
ಮೋದಿಗೆ ಪುಟಿನ್ ಕಳುಹಿಸಿದ ಆಪ್ತ ಸಂದೇಶವೇನು?
ಭಾರತಕ್ಕೆ ಭೇಟಿ ನೀಡಿರುವ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್, ತಮ್ಮ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನೀಡಿರುವ ಸಂದೇಶವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ತಲುಪಿಸಿದ್ದಾರೆ. ವೈಯಕ್ತಿಕ ಗೌರವ ಸೂಚಿಸಿರುವ ಪುಟಿನ್, ಮುಂದಿನ ಬಾರಿಯೂ ನರೇಂದ್ರ ಮೋದಿಯವರೇ ಪ್ರಧಾನಮಂತ್ರಿ ಆಗಿ ಮುಂದುವರಿಯಲಿದೆ ಎಂದು ಹಾರೈಸಿದ್ದಾರೆ.
ಭಾರತ ತನಗೆ ಬೇಕಾದ್ದನ್ನು ರಷ್ಯಾದಿಂದ ಖರೀದಿಸಬಹುದು
ಯುಎಸ್ ಸೇರಿದಂತೆ ದೈತ್ಯ ರಾಷ್ಟ್ರಗಳು ರಷ್ಯಾ ಮೇಲೆ ಹೇರುತ್ತಿರುವ ವ್ಯಾಪಾರ ನಿರ್ಬಂಧದ ನಡುವೆ ಭಾರತವು ತನಗೆ ಬೇಕಾದ್ದನ್ನು ರಷ್ಯಾದಿಂದ ಖರೀದಿಸಬಹುದು ಎಂದು ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಹೇಳಿದ್ದಾರೆ. ರಷ್ಯಾದಿಂದ ಭಾರತವು ತನಗೆ ಅಗತ್ಯ ಎನಿಸಿದ ಕಚ್ಚಾತೈಲ, ಉನ್ನತ ತಂತ್ರಜ್ಞಾನ ಹಾಗೂ ಯಾವುದೇ ಸರಕು ಮತ್ತು ಸೇವೆಯನ್ನು ಖರೀದಿಸುವುದಕ್ಕೆ ಮುಕ್ತವಾಗಿದೆ. ಈ ನಿಟ್ಟಿನಲ್ಲಿ ಪರಸ್ಪರ ಹೊಂದಾಣಿಕೆ ಹಾಗೂ ಸಹಕಾರವನ್ನು ನೀಡಲು ರಷ್ಯಾ ಬದ್ಧವಾಗಿರುತ್ತದೆ," ಎಂದು ಹೇಳಿದರು.
"ಅರೇ ನಾವು ಮಾಡುತ್ತಿರುವುದು ಯುದ್ಧವೇ ಅಲ್ಲ"
ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಆಕ್ರಮಣದ ಬಗ್ಗೆಯೂ ಸಚಿವ ಸೆರ್ಗೆ ಲಾವ್ರೊವ್ ಮಾತನಾಡಿದ್ದಾರೆ. ರಷ್ಯಾ ನಡೆಸುತ್ತಿರುವ ಕಾರ್ಯಾಚರಣೆಯ ಗುರಿ ಒಂದೇ, ದೇಶದ ಸುರಕ್ಷತೆ ಮತ್ತು ರಕ್ಷಣೆಗೆ ಕೀವ್ ನಿಂದ ಯಾವುದೇ ಆಪತ್ತು ಬಾರದು. "ನೀವು ಅದನ್ನೇ ಯುದ್ಧ ಎಂದು ಕರೆಯುತ್ತೀರಿ. ಆದರೆ ಅದು ಸತ್ಯವಲ್ಲ. ಇದೇ ವಿಶೇಷ ಕಾರ್ಯಾಚರಣೆ ಆಗಿದ್ದು, ಸೇನಾ ಮೂಲಸೌಕರ್ಯಗಳನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ರಷ್ಯಾಗೆ ಕೀವ್ ಕಡೆಯಿಂದ ಭವಿಷ್ಯದಲ್ಲಿ ಯಾವುದೇ ಬೆದರಿಕೆಯು ಎದುರಾಗದಂತೆ ಮುನ್ನೆಚ್ಚರಿಕೆ ವಹಿಸುವುದಷ್ಟೇ ಈ ಆಕ್ರಮಣದ ಗುರಿಯಾಗಿದೆ," ಎಂದು ಸಚಿವ ಲಾವ್ರೊವ್ ಹೇಳಿದ್ದಾರೆ.
ಹಗೆತನ ನೀಗಿಸಿಕೊಳ್ಳಲು ಮತ್ಮೊಮ್ಮೆ ಸಂಧಾನ ಸಭೆ
ಉಕ್ರೇನ್ ರಾಜಧಾನಿ ಕೀವ್ ಮತ್ತು ಚೆರ್ನಿಹಿವ್ ಬಳಿ ಸೇನಾ ಚಟುವಟಿಕೆಗಳನ್ನು ಕಡಿತಗೊಳಿಸುವುದಾಗಿ ಈಗಾಗಲೇ ಮಾಸ್ಕೋ ಹೇಳಿದೆ. ಇದರ ಬೆನ್ನಲ್ಲೇ ಉಕ್ರೇನ್ ಮತ್ತು ರಷ್ಯಾ ನಡುವಿನ ಹಗೆತನವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು ಎಂದು ಸಚಿವ ಸೆರ್ಗೆ ಲಾವ್ರೊವ್ ತಿಳಿಸಿದ್ದಾರೆ.
ಕಳೆದ ಮಾರ್ಚ್ 29ರಂದು ಟರ್ಕಿಯ ಇಸ್ತಾಂಬುಲ್ನಲ್ಲಿ ನಡೆದ ಸಂಧಾನ ಸಭೆಯಲ್ಲಿ ರಷ್ಯಾ ಆಕ್ರಮಣಕ್ಕೆ ಬೆದರಿದ ಉಕ್ರೇನ್ ತಟಸ್ಥ ನಿಲುವು ತಾಳುವುದಾಗಿ ಹೇಳಿದೆ. ನಂತರ ಉಕ್ರೇನ್ ರಾಜಧಾನಿ ಕೀವ್ ಮತ್ತು ಚೆರ್ನಿಹಿವ್ ಬಳಿ ಸೇನಾ ಚಟುವಟಿಕೆಗಳನ್ನು ಕಡಿತಗೊಳಿಸುವುದಾಗಿ ಮಾಸ್ಕೋ ಹೇಳಿದೆ. ಆ ಮೂಲಕ ಮಂಗಳವಾರ ನಡೆದ ಸಂಧಾನ ಮಾತುಕತೆ ಯಶಸ್ವಿಯಾಗಿದೆ. ರಷ್ಯಾದೊಂದಿಗಿನ ಇತ್ತೀಚಿನ ಸುತ್ತಿನ ಸಂಧಾನ ಮಾತುಕತೆಗಳಲ್ಲಿ ಭದ್ರತಾ ಒಕ್ಕೂಟವನ್ನು ಸೇರುವುದರ ಬದಲಿಗೆ ತಟಸ್ಥ ನಿಲುವು ತಾಳುವುದಾಗಿ ಕೀವ್ ನಿಯೋಗವು ಪ್ರಸ್ತಾಪಿಸಿದೆ. ಅಂದರೆ ನ್ಯಾಟೋ ಸೇರಿದಂತೆ ಇತರೆ ಯಾವುದೇ ಸೇನಾ ಮೈತ್ರಿಕೂಟವನ್ನು ಸೇರುವುದಿಲ್ಲ ಅಥವಾ ಸೇನೆ ನೆಲೆಗಳನ್ನು ಆಯೋಜಿಸುವುದಿಲ್ಲ ಎಂದು ನಿಯೋಗವು ಹೇಳಿದೆ.