ಶ್ರೀಲಂಕಾ ಕಡಿಮೆಯಾದ ಪ್ರತಿಭಟನೆ ಕಾವು: ರಾಜಪಕ್ಸೆ ರಾಜೀನಾಮೆಗೆ ಸಂತಸ
ಕೊಲಂಬೊ, ಜುಲೈ 10: ಶ್ರೀಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ರಾಜೀನಾಮೆ ನೀಡಲು ಒಪ್ಪಿಕೊಂಡಿದ್ದರ ಪರಿಣಾಮ ಶ್ರೀಲಂಕಾದಲ್ಲಿ ಪರಿಸ್ಥಿತಿ ಸ್ವಲ್ಪ ಶಾಂತವಾಗಿದೆ. ರಾಜಪಕ್ಸೆ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸುತ್ತಿದ್ದಂತೆ ಪ್ರತಿಭಟನಾಕಾರರು ಸಂಭ್ರಮಿಸಿದ್ದಾರೆ.
ಶನಿವಾರ ದೇಶದಲ್ಲಿ ತೀವ್ರ ಪ್ರತಿಭಟನೆಯಾದ ನಂತರ ಶಾಂತಿ ಕಾಪಾಡುವಂತೆ ಶ್ರೀಲಂಕಾ ಸೇನಾ ಮುಖ್ಯಸ್ಥ ಜನರಲ್ ಶವೇಂದ್ರ ಸಿಲ್ವಾ ಭಾನುವಾರ ಜನರ ಬೆಂಬಲವನ್ನು ಕೋರಿದ್ದರು.
ಶ್ರೀಲಂಕಾದಲ್ಲಿ ಜುಲೈ 15ರವರೆಗೂ ಶಾಲೆಗಳು ಬಂದ್, 4 ವಿವಿ ಕಥೆ ಕ್ಲೋಸ್!
ಭಾನುವಾರ ಕೊಲಂಬೊದಲ್ಲಿ ಅಧ್ಯಕ್ಷರ ನಿವಾಸದಲ್ಲಿ ಪ್ರತಿಭಟನಾಕಾರರು ಇನ್ನೂ ಇದ್ದಾರೆ. ದೇಶದಲ್ಲಿ ಶಾಂತಿ ಕಾಪಾಡಲು ಸಶಸ್ತ್ರ ಪಡೆಗಳು ಮತ್ತು ಪೊಲೀಸರ ಜೊತೆ ಸಹಕರಿಸುವಂತೆ ಜನರಲ್ ಶವೇಂದ್ರ ಸಿಲ್ವಾ ಜನರಿಗೆ ಮನವಿ ಮಾಡಿದ್ದಾರೆ.
ಶ್ರೀಲಂಕಾ ಸೇನಾ ಮುಖ್ಯಸ್ಥ ಜನರಲ್ ಶವೇಂದ್ರ ಸಿಲ್ವಾ ಅವರು ಪ್ರಸ್ತುತ ರಾಜಕೀಯ ಬಿಕ್ಕಟ್ಟನ್ನು ಶಾಂತಿಯುತ ರೀತಿಯಲ್ಲಿ ಪರಿಹರಿಸುವ ಅವಕಾಶ ಈಗ ಲಭ್ಯವಾಗಿದೆ ಮತ್ತು ದ್ವೀಪ ರಾಷ್ಟ್ರದಲ್ಲಿ ಶಾಂತಿಯನ್ನು ಕಾಪಾಡಬೇಕಿದೆ ಎಂದಿದ್ದಾರೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನಗದು ಕೊರತೆಯಿರುವ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಐಎಂಎಫ್ ಬೆಂಬಲಿತ ಕಾರ್ಯಕ್ರಮದ ಕುರಿತು ಸಂವಾದವನ್ನು ಪುನರಾರಂಭಿಸಲು ರಾಜಕೀಯ ಬಿಕ್ಕಟ್ಟನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಆಶಿಸಿದೆ. ಶ್ರೀಲಂಕಾದ ಒಟ್ಟು ವಿದೇಶಿ ಸಾಲವು 51 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ.
ಸಮಸ್ಯೆ ಪರಿಹರಿಸಲು ಕೆಲಸ ಮಾಡಿ ಎಂದ ಅಮೆರಿಕ
ಜನರ ಆಕ್ರೋಶವನ್ನು ಕಡಿಮೆ ಮಾಡಲು ಸಮಸ್ಯೆಗೆ ದೀರ್ಘಾವಧಿಯ ಪರಿಹಾರ ಕಂಡುಕೊಳ್ಳಲು ಕೆಲಸ ಮಾಡುವಂತೆ ಶ್ರೀಲಂಕಾದ ರಾಜಕಾರಣಿಗಳಿಗೆ ಕೆಲಸ ಮಾಡುವಂತೆ ಅಮೆರಿಕ ಒತ್ತಾಯಿಸಿದೆ.
ಶನಿವಾರ ಶ್ರೀಲಂಕಾದಲ್ಲಿ ನಡೆದ ಹಿಂಸಾಚಾರವನ್ನು ಅಮೆರಿಕ ಟೀಕಿಸಿದೆ, ಆದರೆ ಪ್ರತಿಭಟನಾಕಾರರು ಮತ್ತು ಪತ್ರಕರ್ತರ ಮೇಲೆ ಯಾವುದೇ ದಾಳಿ ಮಾಡದಂತೆ ಲಂಕಾ ಪಡೆಗಳಿಗೆ ಎಚ್ಚರಿಕೆ ನೀಡಿದೆ.
Sri Lanka crisis:ಪ್ರಮುಖ 10 ಅಂಶಗಳು
ಹಲವು ಸಚಿವರ ರಾಜೀನಾಮೆ
ಧಮ್ಮಿಕಾ ಪೆರೇರಾ ಭಾನುವಾರ ಹೂಡಿಕೆ ಪ್ರಚಾರ ಸಚಿವ ಸ್ಥಾನದಿಂದ ಕೆಳಗಿಳಿದ್ದಾರೆ. ಕಳೆದ ಎರಡು ದಿನಗಳಲ್ಲಿ ಹರಿನ್ ಫೆರ್ನಾಂಡೋ, ಮಾನುಷ ನಾಣಯ್ಯ ಮತ್ತು ಬಂಡುಲ ಗುಣವರ್ಧನ ನಂತರ ಸಂಪುಟಕ್ಕೆ ರಾಜೀನಾಮೆ ನೀಡಿದ ನಾಲ್ಕನೇ ಸಚಿವ ಧಮ್ಮಿಕಾ ಪೆರೇರಾ.
ಅಧ್ಯಕ್ಷ ಗೋಟಬಯ ರಾಜಪಕ್ಸೆ ರಾಜೀನಾಮೆಗೆ ಒತ್ತಾಯಿಸಿ ಸಾವಿರಾರು ಪ್ರತಿಭಟನಾಕಾರರು ಶನಿವಾರ ರಾಜಪಕ್ಸೆ ಅಧಿಕೃತ ನಿವಾಸಕ್ಕೆ ನುಗ್ಗಿದರು. ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ರಾಜೀನಾಮೆ ನೀಡಲು ಮುಂದಾದ ನಂತರವೂ ಅವರ ಮನೆಗೆ ಬೆಂಕಿ ಹಚ್ಚಲಾಯಿತು.
ಅಧ್ಯಕ್ಷ ರಾಜಪಕ್ಸೆ ನಿವಾಸದಲ್ಲಿ ಹಣ ಪತ್ತೆ
ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು, ಅವರ ಭವನದಲ್ಲಿ ಲಕ್ಷಾಂತರ ರೂಪಾಯಿ ಪತ್ತೆಯಾಗಿದೆ ಎಂದು ಹೇಳಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ವಶಪಡಿಸಿಕೊಂಡ ಹಣವನ್ನು ಭದ್ರತಾ ಘಟಕಗಳಿಗೆ ಹಸ್ತಾಂತರಿಸಲಾಗಿದೆ.
ಪ್ರತಿಭಟನೆಯ ನಂತರ, ಅಧ್ಯಕ್ಷ ರಾಜಪಕ್ಸೆ ಜುಲೈ 13 ರಂದು ರಾಜೀನಾಮೆ ನೀಡುವುದಾಗಿ ಸಂಸತ್ತಿನ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಅವರಿಗೆ ತಿಳಿಸಿದರು, ಆದರೆ ಪ್ರಧಾನಿ ವಿಕ್ರಮಸಿಂಘೆ ಅವರು ಸರ್ವಪಕ್ಷ ಸರ್ಕಾರವು ಅಧಿಕಾರ ವಹಿಸಿಕೊಳ್ಳಲು ಸಿದ್ಧವಾದ ತಕ್ಷಣ ರಾಜೀನಾಮೆ ನೀಡುವುದಾಗಿ ಹೇಳಿದರು.
ಅಜ್ಞಾತ ಸ್ಥಳಕ್ಕೆ ತೆರಳಿದ ಅಧ್ಯಕ್ಷ ರಾಜಪಕ್ಸೆ
ಅಧ್ಯಕ್ಷ ರಾಜಪಕ್ಸೆ ಪ್ರಸ್ತುತ ಎಲ್ಲಿದ್ದಾರೆ? ಎಂಬುದು ಸದ್ಯಕ್ಕೆ ತಿಳಿದಿಲ್ಲ. ಶನಿವಾರ, ಶ್ರೀಲಂಕಾ ನೌಕಾಪಡೆಯ ಹಡಗಿನಲ್ಲಿ ಸೂಟ್ಕೇಸ್ಗಳನ್ನು ಲೋಡ್ ಮಾಡುತ್ತಿರುವ ವೀಡಿಯೊಗಳು ಬಿಡುಗಡೆಯಾಗಿದ್ದವು. ಸೂಟ್ಕೇಸ್ಗಳು ಅಧ್ಯಕ್ಷ ರಾಜಪಕ್ಸೆ ಅವರದ್ದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ರಾಜಪಕ್ಸೆ ರಾಜೀನಾಮೆ ನೀಡಿದ ನಂತರ ಸ್ಪೀಕರ್ ಹಂಗಾಮಿ ಅಧ್ಯಕ್ಷರಾಗುತ್ತಾರೆ. ನಂತರ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಂಸದರ ನಡುವೆ ಚುನಾವಣೆ ನಡೆಯಲಿದೆ ಎಂದು ವರದಿ ತಿಳಿಸಿವೆ.
ಅಗತ್ಯ ವಸ್ತುಗಳ ಆಮದು ಮಾಡಿಕೊಳ್ಳಲು ವಿದೇಶಿ ಕರೆನ್ಸಿ ಖಾಲಿಯಾದ ನಂತರ ಶ್ರೀಲಂಕಾ ಮೂಲಭೂತ ಸರಕುಗಳ ಕೊರತೆ, ದೀರ್ಘಾವಧಿಯ ಅಲಭ್ಯತೆ ಮತ್ತು ಹಣದುಬ್ಬರದ ಸಮಸ್ಯೆಯಿಂದ ಬಳಲುತ್ತಿದೆ. ಇಂಧನವನ್ನು ಸಂರಕ್ಷಿಸುವ ಪ್ರಯತ್ನದಲ್ಲಿ ದೇಶವು ಅನಿವಾರ್ಯವಲ್ಲದ ಸಾರ್ವಜನಿಕ ಸೇವೆಗಳನ್ನು ಸ್ಥಗಿತಗೊಳಿಸಿದೆ.
Recommended Video