ವಿಶ್ವಯುದ್ಧದಲ್ಲಿ ಮಡಿದ ಸೈನಿಕರಿಗೆ ಗೌರವ ಸಲ್ಲಿಸಿದ ಮೋದಿ, ನೇತನ್ಯಾಹು
ಹೈಫಾ, ಜುಲೈ 6: ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಜತೆಗೂಡಿ ಮೊದಲ ವಿಶ್ವಯುದ್ಧದಲ್ಲಿ ಮಡಿದ ಭಾರತೀಯರಿಗೆ ಹೈಫಾ ಸ್ಮಶಾನದಲ್ಲಿ ಗೌರವ ಸಲ್ಲಿಸಿದರು.
ತಮ್ಮ ಇಸ್ರೇಲ್ ಪ್ರವಾಸದ ಮೂರನೇ ಹಾಗೂ ಕೊನೆಯ ದಿನ ಉಭಯ ಪ್ರಧಾನಿಗಳು ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದಲ್ಲದೆ, ವಿವಿಧ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಂಡರು.
ಇಸ್ರೇಲ್-ಭಾರತದ ನಡುವೆ 7 ಮಹತ್ವದ ಒಪ್ಪಂದಗಳ ವಿನಿಮಯ
ಹೈಫಾ ಇಸ್ರೇಲಿನ ಮೂರನೇ ದೊಡ್ಡ ನಗರ ಹಾಗೂ ಯುನೆಸ್ಕೋದಿಂದ ವಿಶ್ವ ಪಾರಂಪರಿಕ ತಾಣ ಎಂದು ಗುರುತಿಸಿಕೊಂಡಿದೆ. ಇಲ್ಲಿ 1918ರಲ್ಲಿ ನಡೆದಿದ್ದ 'ಹೈಫಾ ಯುದ್ಧ'ದಲ್ಲಿ ಭಾರತೀಯರು ಪಾಲ್ಗೊಂಡಿದ್ದರು. ಇದರಲ್ಲಿ ಮಡಿದ ಹಿಂದೂ ಸೈನಿಕರಿಗೆ ಮತ್ತು ಮುಸ್ಲಿಂ ಸೈನಿಕರಿಗೆ ಪ್ರತ್ಯೇಕ ಸ್ಮಾಶಾನಗಳಿದ್ದು ಎರಡೂ ಕಡೆ ಹೂಗುಚ್ಚ ಇಟ್ಟು ಪ್ರಧಾನಿ ಗೌರವ ಸಲ್ಲಿಸಿದರು.
ಫಲಕ ಅನಾವರಣ
ಇದೇ ವೇಳೆ ಮೇಜರ್ ದಲ್ಫತ್ ಸಿಂಗ್ ರನ್ನು ನೆನಪಿಸುವ ಫಲಕವನ್ನು ಉಭಯ ನಾಯಕರು ಅನಾವರಣ ಮಾಡಿದರು. ಮೇಜರ್ ದಲ್ಫತ್ ಸಿಂಗ್ ಮೊದಲ ಮಹಾಯುದ್ಧದಲ್ಲಿ ಪಾಲ್ಗೊಂಡು ಹುತಾತ್ಮರಾಗಿದ್ದರು.
ಇಸ್ರೇಲ್ ನಲ್ಲಿ ಮೋದಿ: ಭಾರತಕ್ಕಾಗಲಿರುವ 10 ಪ್ರಯೋಜನ
ಸಿಇಒಗಳ ಜತೆ ಸಭೆ
ಇಂದು ಸಂಜೆ ಇಸ್ರೇಲ್ ಸಿಇಒಗಳ ಜತೆ ಮೋದಿ ಔತಣಕೂಟದಲ್ಲಿ ಪಾಲ್ಗೊಂಡರು. ಸ್ಥಳೀಯ ಕಾಲಮಾನ 5 ಗಂಟೆಗೆ ಪ್ರಧಾನಿ ಜರ್ಮನಿಗೆ ಪ್ರಯಾಣ ಬೆಳೆಸಲಿದ್ದಾರೆ.
"ಭಾರತ ಮತ್ತು ಇಸ್ರೇಲ್ ನ ಸಿಇಒಗಳ ವೇದಿಕೆ ಹಲವು ವಲಯಗಳಲ್ಲಿ ಜತೆಯಾಗಿ ಕೆಲಸ ಮಾಡಲು ಒಪ್ಪಿಕೊಂಡಿವೆ. ಎರಡೂ ದೇಶಗಳ ಕಂಪೆನಿಗಳ ನಡುವೆ 12 ಒಪ್ಪಂದಗಳು ನಡೆದಿವೆ. ಇವುಗಳ ಮೌಲ್ಯ 4.5 ಬಿಲಿಯನ್ ಡಾಲರ್," ಎಂದು ಇಂಡಿಯಾ-ಇಸ್ರೇಲ್ ಸಿಇಒಗಳ ವೇದಿಕೆಯ ಉಪಾಧ್ಯಕ್ಷ ಪಂಕಜ್ ಪಟೇಲ್ ಹೇಳಿದ್ದಾರೆ.
ತಂತ್ರಜ್ಞಾನ ಪ್ರದರ್ಶನದಲ್ಲಿ ಮೋದಿ
ತಮ್ಮ ಪ್ರವಾಸದ ವೇಳೆ ಪ್ರಧಾನಿ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಇಂದು ಟೆಲ್ ಅವಿವ್ ನಲ್ಲಿ ತಂತ್ರಜ್ಞಾನ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ತಂತ್ರಜ್ಞರು ಇಸ್ರೇಲಿನ ಹಲವು ಅನ್ವೇಷಣೆಗಳ ಬಗ್ಗೆ ಪ್ರಧಾನಿಗಳಿಗೆ ವಿವರ ನೀಡಿದರು.
ಟೆಲ್ ಅವಿವ್ ನಲ್ಲಿ ಮೋದಿ ಭಾಷಣ: ಅವಿಸ್ಮರಣೀಯ 5 ಸಂಗತಿ
|
ಡೋರ್ ಬೀಚ್ ನಲ್ಲಿ ಪ್ರಧಾನಿ
ಇನ್ನು ಹೈಫಾದಲ್ಲಿರುವ ಡೋರ್ ಬೀಚಿಗೆ ಉಭಯ ದೇಶಗಳ ಪ್ರಧಾನಿಗಳು ಭೇಟಿ ನೀಡಿದರು. ಸ್ವತಃ ಪ್ರಧಾನಿ ನೇತನ್ಯಾಹು ಜೀಪ್ ಚಾಲನೆ ಮಾಡಿಕೊಂಡು ನರೇಂದ್ರ ಮೋದಿಯನ್ನು ಕರೆದುಕೊಂಡು ಹೋದರು.
ಅಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮೊಬೈಲ್ ನೀರು ಶುದ್ಧೀಕರಿಸುವ ಪ್ಲಾಂಟ್ ನ ಪ್ರಾತ್ಯಕ್ಷಿಕೆ ನೀಡಲಾಯಿತು.
ಪ್ರಧಾನಿ ಭೇಟಿಗೆ ಕಾರಟ್ ಟೀಕೆ
ಇಸ್ರೇಲಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿರುವುದನ್ನು ಸಿಪಿಐಎಂನ ಪ್ರಕಾಶ್ ಕಾರಟ್ ಟೀಕಿಸಿದ್ದಾರೆ. "ಇಸ್ರೇಲಿಗೆ ಭೇಟಿ ನೀಡಿ ಪ್ಯಾಲೆಸ್ಟೀನ್ ಗೆ ಭೇಟಿ ನೀಡದೇ ಇರುವುದು ಪ್ಯಾಲೆಸ್ಟೀನ್ ಸಮಸ್ಯೆಗಳಿಗೆ ಭಾರತ ಇನ್ನು ಮುಂದೆ ಬೆಂಬಲ ನೀಡುವುದಿಲ್ಲ ಎಂಬ ಸಂದೇಶ ನೀಡಿದಂತಾಗಿದೆ. ಇಸ್ರೇಲಿಗೆ ಭೇಟಿ ನೀಡುವ ಮೂಲಕ ಪ್ಯಾಲೆಸ್ಟೀನ್ ಸಮಸ್ಯೆಯನ್ನು ಬೆಂಬಲಿಸುವ ತನ್ನ ನೀತಿಯಿಂದ ಭಾರತ ನಿರ್ಗಮಿಸಿದೆ," ಎಂದು ಅಭಿಪ್ರಾಯಪಟ್ಟಿದ್ದಾರೆ.