ಇಮ್ರಾನ್ ಖಾನ್ಗೆ ಸಮಸ್ಯೆಯಾದರೆ ಆತ್ಮಹುತಿ ದಾಳಿ: ಸಂಸದನ ಬೆದರಿಕೆ
ಇಸ್ಲಾಮಾಬಾದ್ ಜೂನ್ 7: ಪಾಕಿಸ್ತಾನ್ ತೆಹ್ರೀಕಿ ಇನ್ಸಾಫ್ ಪಕ್ಷದ ಮುಖ್ಯಸ್ಥ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ಗೆ ಯಾವುದೇ ಸಮಸ್ಯೆಯಾದರೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸರಕಾರದ ಉನ್ನತ ಅಧಿಕಾರಿಗಳ ವಿರುದ್ಧ ಆತ್ಮಹತ್ಯಾ ದಾಳಿ ನಡೆಸುವುದಾಗಿ ಪಕ್ಷದ ಸಂಸದ ಅತಾಹುಲ್ಲಾ ಬೆದರಿಕೆ ಹಾಕಿದ್ದಾರೆ.
Recommended Video
"ಇಮ್ರಾನ್ ಖಾನ್ ಅವರ ತಲೆಯ ಮೇಲಿನ ಒಂದು ಕೂದಲಿಗೂ ಹಾನಿಯಾದರೂ ದೇಶವನ್ನು ನಡೆಸುತ್ತಿರುವವರಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ನೀವಾಗಲೀ, ನಿಮ್ಮ ಮಕ್ಕಳಾಗಲೀ ಉಳಿಯುವುದಿಲ್ಲ. ನಿಮ್ಮ ಮೇಲೆ ಆತ್ಮಾಹುತಿ ದಾಳಿ ನಡೆಸುವ ಮೊದಲಿಗ ನಾನೇ. ನಿಮ್ಮನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ನಮ್ಮ ಪಕ್ಷದ ಸಾವಿರಾರು ಕಾರ್ಯಕರ್ತರು ಅದೇ ರೀತಿ ಮಾಡಲು ಸಿದ್ಧರಾಗಿದ್ದಾರೆ,'' ಎಂದು ಟ್ವಟರ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅತಾಹುಲ್ಲಾ ಎಚ್ಚರಿಕೆ ನೀಡಿದ್ದಾರೆ.
"ಇಮ್ರಾನ್ ಖಾನ್ ಅವರಿಗೆ ಸಣ್ಣ ಸಮಸ್ಯೆಯಾದರೂ ಪಾಕಿಸ್ತಾನದ ಆಡಳಿತ ನಡೆಸುತ್ತಿರುವವರ ಮೇಲೆ ಆತ್ಮಹತ್ಯಾ ದಾಳಿ ನಡೆಸಲಾಗುವುದು. ಈ ರೀತಿ ಮಾಡುವ ಮೊದಲ ಆತ್ಮಾಹುತಿ ದಾಳಿಕೋರ ತಾನೇ,'' ಎಂದು ಕರಾಚಿ ಕ್ಷೇತ್ರದ ಸಂಸದ ಅತಾಹುಲ್ಲಾ ಪಾಕ್ ಸರಕಾರಕ್ಕೆ ಬೆದರಿಕೆ ಹಾಕಿದ್ದಾರೆ.

ಇಮ್ರಾನ್ ಖಾನ್ ಹತ್ಯೆಗೆ ಸಂಚು
ಈ ವರ್ಷದ ಆರಂಭದಲ್ಲಿ ಸಂಸತ್ತಿನಲ್ಲಿ ವಿಶ್ವಾಸ ಮತ ಸಾಬೀತುಪಡಿಸಲು ವಿಫಲರಾದ ಇಮ್ರಾನ್ ಖಾನ್ ಅಧಿಕಾರದಿಂದ ಕೆಳಗಿಳಿದರು. ಇಮ್ರಾನ್ ಖಾನ್ರನ್ನು ಹತ್ಯೆ ಮಾಡಲು ಸಂಚು ನಡೆಯುತ್ತಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಅತಾವುಲ್ಲಾ ಅವರಿಂದ ಈ ಎಚ್ಚರಿಕೆ ಮಾತುಗಳು ಬಂದಿವೆ. ಇಮ್ರಾನ್ ಖಾನ್ಗೆ ನೀಡಲಾಗಿದ್ದ ಭದ್ರತೆ ಹೆಚ್ಚಿಸಲಾಗಿದೆ. ಅಲ್ಲದೇ ಅವರ ಇಸ್ಲಾಮಾಬಾದ್ ಮನೆಯ ಹೊರಗೆ ಕೂಡ ಭದ್ರತೆಯನ್ನು ಬಲಪಡಿಸಲಾಗಿದೆ.
ಕಳೆದ ತಿಂಗಳು ಇಸ್ಲಾಮಾಬಾದ್ನಲ್ಲಿ ತೆಹ್ರೀಕಿ ಇನ್ಸಾಫ್ ಪಕ್ಷವು ಕರೆದಿದ್ದ ಪ್ರತಿಭಟನಾ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿತ್ತು. ಈ ಸಂಬಂಧ ಇಮ್ರಾನ್ ಖಾನ್ ವಿರುದ್ಧ ದೇಶದ್ರೋಹದ ಆರೋಪಗಳನ್ನು ಹೊರಿಸಲು ಪಾಕಿಸ್ತಾನ ಸರಕಾರವು ಅಣಿಯಾಗುತ್ತಿದೆ ಎನ್ನುವ ಸುದ್ದಿ ಇದೆ.

ಅತಾವುಲ್ಲಾ ಹೇಳಿಕೆಗೆ ತೀವ್ರ ಆಕ್ಷೇಪ
ಅತಾವುಲ್ಲಾ ಹೇಳಿಕೆಗೆ ಪಾಕಿಸ್ತಾನ ಸರಕಾರದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. "ದೇಶದ ವಿರುದ್ಧ ಬೆದರಿಕೆ ಹಾಕುವವರಿಗೆ ರಾಜಕೀಯ ಕ್ಷೇತ್ರದಲ್ಲಿ ಸ್ಥಾನವಿಲ್ಲ. ಅಂತಹ ಜನರಿಗೆ ಮಾತುಕತೆ ಅಥವಾ ಯಾವುದೇ ರಾಜಕೀಯ ಪ್ರಕ್ರಿಯೆಯಲ್ಲಿ ಅವಕಾಶವಿಲ್ಲ ಹಾಗೂ ಅಂತಹವರನ್ನು ಬಂಧಿಸಲಾಗುವುದು,'' ಎಂದು ಪಾಕಿಸ್ತಾನ ವಾರ್ತಾ ಸಚಿವೆ ಮರ್ಯಮ್ ಔರಂಗಜೇಬ್ ಹೇಳಿದ್ದಾರೆ.

ಆಕ್ರಮಣಕಾರಿ ದಾಳಿ ನಡೆಸುವ ಬೆದರಿಕೆ
ಆದಾಗ್ಯೂ, ಇಮ್ರಾನ್ ಖಾನ್ ಬೆಂಬಲಿಗರು ಈ ರೀತಿಯ ಬೆದರಿಕೆ ಹಾಕುತ್ತಿರುವುದು ಇದು ಮೊದಲೇನಲ್ಲ.
"ನಮ್ಮ ನಾಯಕ ಇಮ್ರಾನ್ ಖಾನ್ ಅವರಿಗೆ ಏನಾದರೂ ಅಪಾಯ ಸಂಭವಿಸಿದರೆ, ಅದನ್ನು ಪಾಕಿಸ್ತಾನದ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ. ಇದರ ವಿರುದ್ಧ ಪರಿಣಾಮ ಆಕ್ರಮಣಕಾರಿಯಾಗಿರುತ್ತದೆ,'' ಎಂದು ಇತ್ತೀಚಿಗೆ ಇಮ್ರಾನ್ ಖಾನ್ ಅವರ ಸೋದರಳಿಯ ಹಸನ್ ನಿಯಾಜಿ ಎಚ್ಚರಿಕೆ ನೀಡಿದ್ದರು.

ನನ್ನ ಸರಕಾರ ದುರ್ಬಲವಾಗಿತ್ತು
ಇತ್ತೀಚಿಗೆ ಪಾಕಿಸ್ತಾನದ ಖಾಸಗಿ ಸುದ್ದಿವಾಹಿನಿ ಒಂದರ ಸಂದರ್ಶನದಲ್ಲಿ ಮಾತನಾಡಿದ್ದ ಇಮ್ರಾನ್ ಖಾನ್, "ಪಾಕಿಸ್ತಾನದಲ್ಲಿ ನನ್ನ ಸರಕಾರ ದುರ್ಬಲವಾಗಿತ್ತು. ನಮ್ಮ ಕೈಗಳನ್ನು ಕಟ್ಟಿ ಹಾಕಲಾಗಿತ್ತು. ಅಧಿಕಾರ ನನ್ನ ಬಳಿ ಇರಲಿಲ್ಲ. ಅದು ಯಾರ ಬಳಿ ಇತ್ತೆಂಬುದು ಎಲ್ಲಿರಿಗೂ ತಿಳಿದಿದೆ,'' ಎಂದು ಪಾಕ್ ಸೇನೆಯ ವಿರುದ್ಧ ದೂರಿದ್ದರು.

ಎಲ್ಲ ಕಡೆಯಿಂದಲೂ ಬ್ಲಾಕ್ ಮೇಲ್
"ನನ್ನ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳುವಂತೆ ಯಾರು ಹಿಂದಿನಿಂದ ಆದೇಶ ನೀಡಿದರು, ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ಪಕ್ಷಗಳ ನಾಯಕರ ವಿರುದ್ಧ ಯಾರು ಪ್ರಕರಣಗಳನ್ನು ದಾಖಲಿಸಿದರು ಎಂಬುದರ ಬಗ್ಗೆ ಎಲ್ಲರಿಗೂ ತಿಳಿದಿದೆ,'' ಎಂದು ಹೇಳಿದ್ದರು.
"ನಮ್ಮ ಕೈಗಳನ್ನು ಕಟ್ಟಿ ಹಾಕಲಾಗಿತ್ತು. ಎಲ್ಲ ಕಡೆಯಿಂದಲೂ ನಮ್ಮನ್ನು ಬ್ಲಾಕ್ ಮೇಲ್ ಮಾಡಲಾಯಿತು. ಎಲ್ಲ ಜನರಿಗೂ ತಿಳಿದಿದೆ ಪಾಕಿಸ್ತಾನದ ಅಧಿಕಾರ ಯಾರ ಬಳಿ ಅಡಗಿದೆ ಎಂದು. ಪ್ರತಿಯೊಂದಕ್ಕೂ ಅದರ ಮೇಲೆ ಅವಲಂಬನೆಯಾಗಬೇಕಿತ್ತು,'' ಎಂದು ಪಾಕ್ ಸೇನೆಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು.












Click it and Unblock the Notifications