ಬೂದುಪಟ್ಟಿಯಲ್ಲೇ ಉಳಿದ ಪಾಕಿಸ್ತಾನ; ಟರ್ಕಿ, ಜೋರ್ಡಾನ್, ಮಾಲಿ ಹೊಸ ಎಂಟ್ರಿ
ಪ್ಯಾರೀಸ್, ಅಕ್ಟೋಬರ್ 21: ಗ್ಲೋಬಲ್ ವಾಚ್ ಡಾಗ್ ಸಿದ್ಧ ಪಡಿಸಿರುವ ಹಣಕಾಸು ಕ್ರಿಯಾ ಯೋಜನೆಯ(ಎಫ್ಎಟಿಎಫ್) 27 ಅಂಶಗಳಲ್ಲಿ ಆರು ಅಂಶಗಳನ್ನು ಅನುಸರಿಸುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಪಾಕಿಸ್ತಾನ ಮತ್ತೊಮ್ಮೆ ಬೂದು ಪಟ್ಟಿಯಲ್ಲೇ ಉಳಿದಿದೆ ಎಂದು ಗುರುವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ.
ವರ್ಚುಯಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಮಾರ್ಕಸ್ ಪ್ಲೇಯರ್, ಪಾಕಿಸ್ತಾನವು 27 ಅಂಶಗಳ ಪೈಕಿ 26 ಪೂರ್ಣಗೊಳಿಸಿದ್ದು 6 ಅಂಶಗಳ ಬಗ್ಗೆ ಕೈಗೊಂಡ ಕ್ರಮಗಳು ಪರಿಣಾಮಕಾರಿಯಾಗಿಲ್ಲ ಎಂದರು. ಪಾಕಿಸ್ತಾನದ ನಡೆ ಬಗ್ಗೆ ಇನ್ನೊಮ್ಮೆ ಯೋಚಿಸುವಂತೆ ಈ ಹಿಂದೆ ಟರ್ಕಿ ಎಫ್ಎಟಿಎಫ್ ಸಭೆಯಲ್ಲಿ ಪ್ರತಿಪಾದಿಸಿ, ಪಾಕಿಸ್ತಾನಕ್ಕೆ ಬೆಂಬಲಿಸಿತ್ತು, ಈಗ ಟರ್ಕಿ ಕೂಡಾ ಬೂದು ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿದೆ. ಟರ್ಕಿ, ಜೋರ್ಡಾನ್, ಮಾಲಿ ದೇಶಗಳು ಪಟ್ಟಿಯಲ್ಲಿ ಕಾಣಿಸಿಕೊಂಡ ಹೊಸ ದೇಶಗಳಾಗಿವೆ. ಚೀನಾ, ಮಲೇಷಿಯಾ, ಸೌದಿ ಅರೇಬಿಯಾ ಸೇರಿದಂತೆ ಸದಸ್ಯ ರಾಷ್ಟ್ರಗಳ ಪೈಕಿ 38 ಸದಸ್ಯರ ಮತಗಳ ಎಣಿಕೆ ಮೇರೆಗೆ ದೇಶಗಳ ಸ್ಥಿತಿಗತಿ ನಿರ್ಧಾರವಾಗಲಿದೆ.
ಎಫ್ಎಟಿಎಫ್ ಪಾಕಿಸ್ತಾನವನ್ನು ಜೂನ್ 2018ರಲ್ಲಿ ಬೂದು ಪಟ್ಟಿಗೆ ಸೇರಿಸಿತ್ತು. 2019ರೊಳಗೆ ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದು ಮತ್ತು ಅಕ್ರಮ ಹಣ ವರ್ಗಾವಣೆಯನ್ನು ನಿಯಂತ್ರಿಸುವಂತೆ ಸೂಚಿಸಿತ್ತು.
ಆದರೆ, ಕೋವಿಡ್ 19 ಸಾಂಕ್ರಾಮಿಕ ರೋಗದ ಕಾರಣದಿಂದ ಪಾಕಿಸ್ತಾನಕ್ಕೆ ನೀಡಿದ್ದ ಗಡುವನ್ನು ವಿಸ್ತರಿಸಿತ್ತು. ಮುಂದಿನ ವರ್ಷದ ಜೂನ್ ವೇಳೆಗೆ ಎಫ್ಎಟಿಎಫ್ನ (FATF) ಗ್ರೇ ಪಟ್ಟಿಯಿಂದ ನಿರ್ಗಮಿಸುವಲ್ಲಿ ಪಾಕಿಸ್ತಾನ ಯಶಸ್ವಿಯಾಗಲಿದೆ ಎಂದು ಪಾಕಿಸ್ತಾನದ ರಾಜತಾಂತ್ರಿಕ ಕಚೇರಿಯ ಮೂಲಗಳನ್ನು ಉಲ್ಲೇಖಿಸಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿತ್ತು. ಆದರೆ, 2020ರಲ್ಲೂ ಬೂದು ಪಟ್ಟಿಯಿಂದ ಹೊರ ಬರುವಲ್ಲಿ ವಿಫಲವಾಗಿತ್ತು.

ಅಂತಾರಾಷ್ಟ್ರೀಯ ಹಣಕಾಸು ಕ್ರಿಯಾ ಕಾರ್ಯಪಡೆ ಸಿದ್ಧ ಪಡಿಸಿರುವ 27 ಅಂಶಗಳಲ್ಲಿ ಆರು ಅಂಶಗಳನ್ನು ಅನುಸರಿಸುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಪಾಕಿಸ್ತಾನ ಗ್ರೇ ಪಟ್ಟಿಯಲ್ಲೇ ಉಳಿಯಲಿದೆ.
ಬೂದು ಪಟ್ಟಿಯಿಂದ ಹೊರಬರಲು ಪಾಕಿಸ್ತಾನಕ್ಕೆ ನಿಷೇಧಿತ 88 ಭಯೋತ್ಪಾದಕ ಗುಂಪುಗಳು ಮತ್ತು ಅವರ ನಾಯಕರ ಮೇಲೆ ಆರ್ಥಿಕ ನಿರ್ಬಂಧಗಳನ್ನು ವಿಧಿಸಲು ಸೂಚಿಸಲಾಗಿತ್ತು. ಆದರೆ, ಮೂಲ ಪಟ್ಟಿಯಲ್ಲಿದ್ದ 7,600 ಭಯೋತ್ಪಾದಕರ ಹೆಸರಿನ ಪೈಕಿ 4,000 ಹೆಸರು ಮಾಯವಾಗಿತ್ತು. ಈ ಪಟ್ಟಿಯಲ್ಲಿ ದಾವೂದ್ ಇಬ್ರಾಹಿಂ, ಮೌಲಾನಾ ಮಸೂದ್ ಅಜರ್, ಹಫೀಜ್ ಸಯೀದ್ ಹಾಗೂ ಝಾಕೀರ್ ಉರ್ ರೆಹಮಾನ್ ಲಖ್ವಿ ಹೆಸರನ್ನು ಸೇರಿಸಿಲ್ಲ.
ಹಫೀಜ್ ಸಯೀದ್ ಮತ್ತು ಮಸೂದ್ ಅಜರ್ ಸೇರಿದಂತೆ ಮನಿ ಲಾಂಡರಿಂಗ್ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ವಿರುದ್ಧದ ಕಠಿಣ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿತ್ತು. ವಿಶ್ವಸಂಸ್ಥೆ ಗೊತ್ತುಪಡಿಸಿದ ಭಯೋತ್ಪಾದಕ ಸಂಘಟನೆಗಳ ಮುಖ್ಯಸ್ಥರು ಮತ್ತು ಕಮಾಂಡರ್ಗಳನ್ನು ತನಿಖೆ ಮಾಡಿ ಕಾನೂನು ಕ್ರಮ ಜರುಗಿಸಿದ್ದರೆ ಗ್ರೇ ಪಟ್ಟಿಯಿಂದ ಹೊರ ಬರುವ ಸಾಧ್ಯತೆಯಿತ್ತು. ಆದರೆ, ಈ ರೀತಿಯ ಯಾವ ಪ್ರಯತ್ನವನ್ನು ಪಾಕಿಸ್ತಾನ ಇಲ್ಲಿ ತನಕ ಕೈಗೊಂಡಿಲ್ಲ
26/11 ಮುಂಬೈ ಭಯೋತ್ಪಾದಕ ದಾಳಿ ಮತ್ತು 2019ರಲ್ಲಿ ಭಾರತದ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್ಪಿಎಫ್ ಬಸ್ ಮೇಲೆ ಬಾಂಬ್ ದಾಳಿ ಸೇರಿದಂತೆ ಹಲವಾರು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಅಜರ್, ಸಯೀದ್ ಮತ್ತು ಲಖ್ವಿ ಭಾರತದಲ್ಲಿ ಮೋಸ್ಟ್ ವಾಂಟೆಡ್ ಭಯೋತ್ಪಾದಕರಾಗಿದ್ದಾರೆ. ಇವರ ಮೇಲೆ ಕ್ರಮ ಜರುಗಿಸಲು ಸೂಚನೆ ಕಳೆದ ಕೆಲ ವರ್ಷಗಳಿಂದ ನೀಡಲಾಗಿತ್ತು. ಭ್ರಷ್ಟಾಚಾರ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವಿಗೆ ಕಾರಣವಾಗಿದೆ. ಹೀಗಾಗಿ ಪಾಕಿಸ್ತಾನವು ಪಟ್ಟಿಯಿಂದ ಹೊರ ಬರಲು ಸಾಧ್ಯವಾಗಿಲ್ಲ ಎಂದು ಅಧ್ಯಕ್ಷ ಮಾರ್ಕಸ್ ಪ್ಲೇಯರ್ ಹೇಳಿದರು.
ಜೈಷ್-ಎ-ಮೊಹಮ್ಮದ್(ಜೆಎಂ) ಮುಖ್ಯಸ್ಥ ಅಜರ್, ಲಷ್ಕರ್-ಎ-ತೊಯ್ಬಾ(ಎಲ್ಇಟಿ) ಸಂಸ್ಥಾಪಕ ಸಯೀದ್ ಮತ್ತು ಅದರ 'ಕಾರ್ಯಾಚರಣಾ ಕಮಾಂಡರ್' ಜಕಿಯೂರ್ ರೆಹಮಾನ್ ಲಖ್ವಿ ಮುಂತಾದ ಭಯೋತ್ಪಾದಕರ ವಿರುದ್ಧ ಕ್ರಮ ಜರುಗಿಸುವಂತೆ ಪಾಕಿಸ್ತಾನಕ್ಕೆ ಮತ್ತೊಮ್ಮೆ ಎಫ್ಎಟಿಎಫ್ ಸೂಚಿಸಿದೆ.












Click it and Unblock the Notifications