ಪಾಕಿಸ್ತಾನಕ್ಕೆ ಭಾರತದ ಸಕ್ಕರೆ, ಹತ್ತಿ ಬೇಕೇ ಬೇಕಂತೆ, ನಿಷೇಧ ರದ್ದಾಗಲಿದೆಯೇ?
ಇಸ್ಲಾಮಾಬಾದ್, ಏಪ್ರಿಲ್ 1: ಪಾಕಿಸ್ತಾನವು ಭಾರತದಿಂದ ಸಕ್ಕರೆ ಹಾಗೂ ಹತ್ತಿಯನ್ನು ಶೀಘ್ರ ಆಮದುಮಾಡಿಕೊಳ್ಳಲಿದೆ ಎಂದು ಪಾಕ್ ಹಣಕಾಸು ಸಚಿವ ಹಮ್ಮದರ್ ಅಜರ್ ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಭಾರತದಿಂದ ಸಕ್ಕರೆ ಮತ್ತು ಹತ್ತಿ ಆಮದಿಗೆ ನಿಷೇಧ ಹೇರಿದ್ದ ಪಾಕಿಸ್ತಾನ ಇದೀಗ ಶೀಘ್ರದಲ್ಲೇ ಸಕ್ಕರೆ ಮತ್ತು ಹತ್ತಿ ಆಮದು ಮಾಡಿಕೊಳ್ಳಲಿದೆ ಎಂದು ಪಾಕಿಸ್ತಾನದ ನೂತನ ಹಣಕಾಸು ಸಚಿವ ಹಮ್ಮದ್ ಅಜರ್ ಹೇಳಿದ್ದಾರೆ.
ಭಾರತದೊಂದಿಗೆ ಪಾಕ್ ಉತ್ತಮ ಬಾಂಧವ್ಯ ಬಯಸುತ್ತಿದೆ; ಮೋದಿಗೆ ಪಾಕ್ ಪ್ರಧಾನಿ ಪತ್ರ
ಭಾರತದಿಂದ ಸಕ್ಕರೆ ಮತ್ತು ಹತ್ತಿ ವ್ಯಾಪಾರವನ್ನು ಮತ್ತೆ ಆರಂಭಿಸಲು ನಿರ್ಧರಿಸಿದ್ದೇವೆ. ಜೂನ್ ನಿಂದ ಆಮದು ಮಾಡಿಕೊಳ್ಳುತ್ತೇವೆ ಎಂದು ಹಮ್ಮದ್ ಅಜರ್ ತಿಳಿಸಿದ್ದಾರೆ.
ಎರಡು ವರ್ಷಗಳಿಂದ ಸಕ್ಕರೆ, ಹತ್ತಿ ಆಮದಿಗೆ ನಿಷೇಧವಿತ್ತು
ಇನ್ನು ಹತ್ತಿ ನಿಷೇಧದ ಹಿನ್ನಲೆಯಲ್ಲಿ ನಮ್ಮ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳ ಮೇಲೆ ನೇರ ಪರಿಣಾಮ ಬೀರಿತ್ತು. ಅವರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಹತ್ತಿ ಆಮದಿಗೆ ಸರ್ಕಾರ ಮುಂದಾಗಿದೆ ಎಂದರು.
ಖಾಸಗಿ ವಲಯಕ್ಕೆ 5 ಲಕ್ಷ ಟನ್ ಸಕ್ಕರೆ
ಖಾಸಗಿ ವಲಯಕ್ಕೆ ಭಾರತದಿಂದ ಐದು ಲಕ್ಷ ಟನ್ ಬಿಳಿ ಸಕ್ಕರೆಯನ್ನು ಆಮದು ಮಾಡಿಕೊಳ್ಳಲು ಆರ್ಥಿಕ ಸಮನ್ವಯ ಸಮಿತಿ(ಇಸಿಸಿ)ಯು ಅವಕಾಶ ನೀಡಿದೆ. ಭಾರತದಲ್ಲಿ ಸಕ್ಕರೆಯ ಬೆಲೆ ಸಾಕಷ್ಟು ಕಡಿಮೆ. ಹೀಗಾಗಿ ನಾವು ಮತ್ತೆ ಭಾರತದೊಂದಿಗೆ ವ್ಯಾಪಾರವನ್ನು ಪುನರಾರಂಭಿಸಲು ನಿರ್ಧರಿಸಿದ್ದೇವೆ ಎಂದರು.
ಭಾರತದೊಂದಿಗೆ ಉತ್ತಮ ಬಾಂಧವ್ಯ ಬೇಕು ಎಂದು ಪಾಕ್ ಪತ್ರ
ಪಾಕಿಸ್ತಾನ ಹಾಗೂ ಭಾರತದ ನಡುವೆ ಉತ್ತಮ ಬಾಂಧವ್ಯ ನಿರ್ಮಾಣ ಮಾಡಬೇಕು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತಕ್ಕೆ ಪತ್ರ ಬರೆದಿದ್ದರು. ಬಹಳ ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳಲು ರಚನಾತ್ಮಕ ಆಧಾರಿತ ಸಂವಾದಕ್ಕೆ ಉತ್ತಮವಾದ ವಾತಾವರಣ ನಿರ್ಮಿಸಬೇಕು ಎಂದು ಕೇಳಿಕೊಂಡಿದ್ದರು.
ಮಾರ್ಚ್ 23 ರಂದು ಭಾರತಕ್ಕೆ ಪತ್ರ
ಮಾರ್ಚ್ 23ರಂದು ನರೇಂದ್ರ ಮೋದಿಯವರು ರಾಷ್ಟ್ರೀಯ ದಿನದ ಸಲುವಾಗಿ ಪಾಕ್ಗೆ ಪತ್ರ ಬರೆದಿದ್ದರು. ಪಾಕಿಸ್ತಾನದೊಂದಿಗೆ ಭಾರತವು 'ಹೃತ್ಪೂರ್ವಕ ಬಾಂಧವ್ಯ' ಹೊಂದಲು ಭಾರತ ಬಯಸಿದೆ. ಆದರೆ ಅದು ಸಾಧ್ಯವಾಗಲು ಭಯೋತ್ಪಾದನೆ ರಹಿತವಾದ 'ವಿಶ್ವಾಸಾರ್ಹ ಪರಿಸರ' ಬಹಳ ಅಗತ್ಯವಾಗಿದೆ ಎಂದು ಹೇಳಿದ್ದರು.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ