ಅಫ್ಘಾನಿಸ್ತಾನ ಕುರಿತು ಚರ್ಚಿಸಲು ಪ್ರತ್ಯೇಕ ಸಭೆ ಕರೆದ ಪಾಕಿಸ್ತಾನ
ಇಸ್ಲಾಮಾಬಾದ್, ನವೆಂಬರ್ 10: ಪಾಕಿಸ್ತಾನವು ಅಫ್ಘಾನಿಸ್ತಾನ ಕುರಿತು ಚರ್ಚಿಸಲು ಪ್ರತ್ಯೇಕ ಸಭೆ ಕರೆದಿದೆ. ಭಾರತವು ಅಫ್ಘಾನಿಸ್ತಾನ ಪರಿಸ್ಥಿತಿ ಕುರಿತು ಚರ್ಚಿಸಲು ಪಾಕಿಸ್ತಾನ ಸೇರಿದಂತೆ ಹಲವು ದೇಶಗಳಿಗೆ ಆಹ್ವಾನ ನೀಡಿತ್ತು.
ಆದರೆ ಪಾಕಿಸ್ತಾನ ಹಾಗೂ ಚೀನಾ ಈ ಸಭೆಯಿಂದ ಹೊರಗುಳಿದಿದೆ. ಇದೀಗ ಪ್ರತ್ಯೇಕ ಸಭೆ ಕರೆದು ಹಲವು ದೇಶಗಳನ್ನು ಆಹ್ವಾನಿಸಿದೆ.
ಭಾರತ ಒಳಗೊಂಡ 8 ದೇಶಗಳ ಭದ್ರತಾ ಸಲಹೆಗಾರರ ಮಟ್ಟದ ಸಭೆ ದಿಲ್ಲಿಯಲ್ಲಿ ನಡೆಯುತ್ತಿದೆ. ತಾಲಿಬಾನ್ ಆಕ್ರಮಣದ ನಂತರ ಅಫ್ಘಾನಿಸ್ತಾನ ಸದ್ಯದ ಪರಿಸ್ಥಿತಿ ಕುರಿತು ಎನ್ಎಸ್ಎ ಮಟ್ಟದ ಸಂವಾದದಲ್ಲಿ ಚರ್ಚೆ ನಡೆಸಲಾಗುತ್ತಿದೆ.

ಪಾಕಿಸ್ತಾನದ ವಿದೇಶಾಂಗ ಮಂತ್ರಿ ಶಾ ಮೆಹಮೂದ್ ಖುರೇಶಿ ಹಾಗೂ ಅಲ್ಲಿನ ಭದ್ರತಾ ಸಲಹೆಗಾರ ಮೋಯಿದ್ ಯುಸೂಫ್ ಮುಂದಾಳತ್ವದಲ್ಲಿ ಈ ಸಂವಾದ ನಡೆಯಲಿದೆ. ಗುರುವಾರದಂದು ನಡೆಯಲಿರುವ ಈ ಟ್ರೋಯ್ಕಾ ಪ್ಲಸ್ ಸಭೆಯಲ್ಲಿ ಯಾವ್ಯಾವ ರಾಷ್ಟ್ರಗಳ ರಾಜತಾಂತ್ರಿಕರು ಭಾಗವಸುತ್ತಿದ್ದಾರೆ ಅನ್ನೋ ಬಗ್ಗೆ ಈವರೆಗೆ ಮಾಹಿತಿ ಹೊರಬಿದ್ದಿಲ್ಲ.
ಅತ್ಯಂತ ಮಹತ್ವ ಪಡೆದುಕೊಂಡಿರುವ ದೆಹಲಿ ಸಭೆಯಲ್ಲಿ ಇರಾನ್, ರಷ್ಯಾ, ತಜಕಿಸ್ತಾನ್, ಕಿರ್ಗಿಸ್ತಾನ್, ಕಜಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ತುರ್ಕಿಮೆನಿಸ್ತಾನ್ ರಾಷ್ಟ್ರಗಳು ಭಾಗವಹಿಸಿವೆ. ಆದರೆ, ಈ ಸಭೆಗೆ ಪಾಕಿಸ್ತಾನ, ಚೈನಾ ರಾಷ್ಟ್ರಗಳಿಗೂ ಆಹ್ವಾನ ನೀಡಲಾಗಿತ್ತು. ಆದರೆ, ಎರಡೂ ರಾಷ್ಟ್ರಗಳು ಈ ಸಭೆ ತಿರಸ್ಕಾರ ಮಾಡಿವೆ.
ಈ ಮಧ್ಯೆ, ಅಫ್ಘಾನಿಸ್ತಾನ ಕುರಿತಂತೆ ಪ್ರಮುಖ ರಾಷ್ಟ್ರಗಳೊಂದಿಗೆ ಚರ್ಚೆ ನಡೆಸಲು ಪಾಕಿಸ್ತಾನ ಪ್ರತ್ಯೇಕ ಸಭೆಯೊಂದನ್ನು ಆಯೋಜನೆ ಮಾಡಿದೆ. ಈ ಟ್ರೋಯ್ಕಾ ಪ್ಲಸ್ ಸಂವಾದದಲ್ಲಿ ಚೀನಾ, ಅಮೆರಿಕ, ರಷ್ಯಾ ದೇಶದ ಹಿರಿಯ ರಾಜತಂತ್ರಿಕರಿಗೆ ಆಹ್ವಾನ ನೀಡಲಾಗಿದೆ.
ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಕೈವಶ ಮಾಡಿಕೊಂಡ ಮೇಲೆ ಸದ್ಯದ ಪರಿಸ್ಥಿತಿ ಕುರಿತು ಚರ್ಚೆ ಮಾಡಲು 8 ರಾಷ್ಟ್ರಗಳನ್ನೊಳಗೊಂಡ ಭದ್ರತಾ ಸಲಹೆಗಾರರ ಸಭೆ ದೆಹಲಿಯಲ್ಲಿ ನಡೆಯುತ್ತಿದೆ. ಭಯೋತ್ಪಾದನೆ, ಮಹಿಳೆಯರ ಮೇಲಿನ ಹಲ್ಲೆ, ಹಿಂಸಾಚಾರ ಸೇರಿದಂತೆ ಅನೇಕ ವಿಚಾರಗಳ ಕುರಿತಂತೆ ಚರ್ಚಿಸಲಾಗುತ್ತಿದೆ.
ಸುಸ್ಥಿರ ಸರ್ಕಾರ ಹಾಗೂ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲಸುವ ದೃಷ್ಟಿಯಿಂದ ದೆಹಲಿ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಇರಾನ್, ರಷ್ಯಾ, ಮಧ್ಯ ಏಷ್ಯಾದ ದೇಶಗಳಾದ ತಜಕಿಸ್ತಾನ್, ಕಿರ್ಗಿಸ್ತಾನ್, ಕಜಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ತುರ್ಕಿಮೆನಿಸ್ತಾನ್ ಸಹ ಈ ಸಭೆಯಲ್ಲಿ ಪಾಲ್ಗೊಂಡಿವೆ.
ಸಭೆಯಲ್ಲಿ, ಎಲ್ಲಾ ದೇಶಗಳು ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಆ ರಾಷ್ಟ್ರದಲ್ಲಿನ ಭಯೋತ್ಪಾದನೆ ಮತ್ತು ಮಾದಕವಸ್ತುಗಳ ಕಳ್ಳಸಾಗಣೆಯನ್ನು ಅಲ್ಲಿಂದ ನಿಲ್ಲಿಸಬೇಕು ಅನ್ನೋ ಬಗ್ಗೆ ಗಡಿ ಹಂಚಿಕೊಂಡಿರುವ ರಾಷ್ಟ್ರಗಳ ಒತ್ತಾಯವಾಗಿದೆ.
ರಷ್ಯಾದ ನಂತರ ಭಾರತದಲ್ಲಿ ಅಪ್ಘಾನಿಸ್ತಾನ ಕುರಿತಾದ ಮೊದಲ ಮಹತ್ವದ ಚರ್ಚೆ ನಡೆಯುತ್ತಿದೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಆಗಿರುವ ಅಜಿತ್ ಧೋವಲ್ ಅಧ್ಯಕ್ಷತೆಯಲ್ಲಿ ಈ ಮಹತ್ವದ ಚರ್ಚೆ ನಡೆಯುತ್ತಿವೆ.
ಈ ಸಭೆಯಲ್ಲಿ ಭಾಗವಹಿಸುವಂತೆ ಪಾಕಿಸ್ತಾನಕ್ಕೆ ಆಹ್ವಾನ ನೀಡಲಾಗಿತ್ತು. ಆದರೆ, ಪಾಕಿಸ್ತಾನದ ಭದ್ರತಾ ಸಲಹೆಗಾರರಾಗಿರುವ ಮೋಯಿದ್ ಯೂಸುಫ್ ದೆಹಲಿ ಭೇಟಿ ತಿರಸ್ಕರಿಸಿದ್ದರು. ಇನ್ನು ಪಾಕ್ ನ ವಿಶೇಷ ಸ್ನೇಹಿತನಾಗಿರುವ ಚೀನಾ ಕೂಡ ವೇಳಾಪಟ್ಟಿಯ ನೆಪದಲ್ಲಿ ಸಭೆಗೆ ಬರಲು ನಿರಾಕರಿಸಿದೆ.
ಪ್ರಾದೇಶಿಕ ಭದ್ರತೆಗೆ ಸಂಬಂಧಪಟ್ಟಂತೆ ಈ ಹಿಂದೆ ಎರಡು ಸಭೆಗಳು ನಡೆದಿವೆ. 2018ರ ಸೆಪ್ಟೆಂಬರ್ನಲ್ಲಿ ಮತ್ತು 2019ರ ಡಿಸೆಂಬರ್ನಲ್ಲಿ ಇರಾನ್ನಲ್ಲಿ ಸಭೆ ನಡೆದಿತ್ತು. ಆದರೆ 2020ರಲ್ಲಿ ಮೂರನೇ ಸಭೆ ಭಾರತದಲ್ಲಿ ನಡೆಯಬೇಕಿತ್ತು.
ಆದರೆ ಕೊವಿಡ್ 19 ಸಾಂಕ್ರಾಮಿಕದ ಕಾರಣದಿಂದ ಈ ಸಭೆ ನಡೆದಿರಲಿಲ್ಲ. ಇದೀಗ ದೆಹಲಿಯಲ್ಲಿ ನವೆಂಬರ್ 10-11ರಂದು ನಡೆಯಲಿದ್ದು, ಅಫ್ಘಾನಿಸ್ತಾನದ ಬೆಳವಣಿಗೆಯ ಬಗೆಗಿನ ಚರ್ಚೆಗೆ ಆದ್ಯತೆ ನೀಡಲಾಗಿದೆ. ಅದರ ಹೊರತಾಗಿ ಕೂಡ ಇನ್ನಿತರ ಭದ್ರತೆ ವಿಚಾರಗಳಿಗೆ ಸಂಬಂಧಪಟ್ಟಂತೆ ವ್ಯಾಪಕ ಚರ್ಚೆ ನಡೆಯಲಿದೆ.
ಪಾಕಿಸ್ತಾನ ಆಮಂತ್ರಣ ತಿರಸ್ಕಾರ ಮಾಡಿದ ಬಗ್ಗೆ ಭಾರತ ಸ್ವಲ್ಪವೂ ತಲೆಕೆಡಿಸಿಕೊಂಡಿಲ್ಲ. ಇದು ನಿರೀಕ್ಷತವೇ ಆಗಿದೆ ಮತ್ತು ಪಾಕ್ನ ತಿರಸ್ಕಾರ ಅದಕ್ಕೆ ಅಫ್ಘಾನಿಸ್ತಾನದ ಬಗ್ಗೆ ಇರುವ ಮನಸ್ಥಿತಿಯ ಪ್ರತಿಬಿಂಬಕವಾಗಿದೆ ಎಂದು ಭಾರತ ಸರ್ಕಾರದ ಮೂಲಗಳು ಹೇಳಿದ್ದಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಹಾಗೇ, ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿಯನ್ನು ವಿನಾಶಕಾರಿಯಾಗಿ ಬಳಸಿಕೊಳ್ಳಲು ಪಾಕ್ ಮುಂದಾಗಿದೆ ಎಂದೂ ಭಾರತ ಪ್ರತ್ಯುತ್ತರ ನೀಡಿದೆ. ಇನ್ನು ಇಂಥ ಸಭೆಗಳಲ್ಲಿ ಪಾಕಿಸ್ತಾನ ಹಿಂದೆಯೂ ಕೂಡ ಪಾಲ್ಗೊಂಡಿಲ್ಲ ಎಂದೂ ಹೇಳಿದೆ.












Click it and Unblock the Notifications