ಬಾಲಕೋಟ್ ದಾಳಿ ಸ್ಥಳಕ್ಕೆ ವಿದೇಶಿ ಪತ್ರಕರ್ತರನ್ನು ಕರೆದೊಯ್ದ ಪಾಕ್
ಇಸ್ಲಾಮಾಬಾದ್, ಏಪ್ರಿಲ್ 11: ಪಾಕಿಸ್ತಾನದ ಬಾಲಕೋಟ್ನಲ್ಲಿ ಜೈಶ್ ಎ ಮೊಹಮ್ಮದ್ ಸಂಘಟನೆಯ ಭಯೋತ್ಪಾದನಾ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದ 43 ದಿನಗಳ ಬಳಿಕ ಅಲ್ಲಿನ ಸರ್ಕಾರ ಇಸ್ಲಾಮಾಬಾದ್ನಲ್ಲಿರುವ ಕೆಲವು ವಿದೇಶಿ ಮಾಧ್ಯಮಗಳ ಪತ್ರಕರ್ತರು ಮತ್ತು ರಾಜತಾಂತ್ರಿಕರನ್ನು ಆ ಸ್ಥಳಕ್ಕೆ ಕರೆದೊಯ್ದಿದೆ.
ಆದರೆ, ಸ್ಥಳೀಯ ನಿವಾಸಿಗಳೊಂದಿಗೆ ಹೆಚ್ಚು ಹೊತ್ತು ಮಾತನಾಡದಂತೆಯೂ ಪಾಕಿಸ್ತಾನ ಸರ್ಕಾರ ಪತ್ರಕರ್ತರಿಗೆ ಕರಾರು ಹಾಕಿತ್ತು ಎನ್ನಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭಾರತದ ವಾಯು ಪಡೆ ಬಾಂಬ್ ದಾಳಿ ನಡೆಸಿದ ಸ್ಥಳಕ್ಕೆ ತಮ್ಮ ವರದಿಗಾರರಲ್ಲಿ ಒಬ್ಬರು ಕೂಡ ಆ ತಂಡದಲ್ಲಿ ತೆರಳಿದ್ದರು ಎಂದು ಬಿಬಿಸಿಯ ಹಿಂದಿ ವೆಬ್ಸೈಟ್ ತಿಳಿಸಿದೆ.
ಭಾರತ ದಾಳಿ ನಡೆಸಿದ ಸ್ಥಳಕ್ಕೆ ಕರೆದೊಯ್ಯುವುದಾಗಿ ಪಾಕ್ ಸರ್ಕಾರ ಅಲ್ಲಿನ ಮಾಧ್ಯಮಗಳಿಗೆ ಘಟನೆ ನಡೆದ ಕೆಲವು ದಿನಗಳ ಬಳಿಕ ಭರವಸೆ ನೀಡಿತ್ತು. ಆದರೆ, ಬಳಿಕ ಅದರಿಂದ ಹಿಂದಕ್ಕೆ ಸರಿದಿತ್ತು.
ಈ ಭೇಟಿಯನ್ನು ವಿಳಂಬ ಮಾಡಿದ್ದಕ್ಕೆ ಕಾರಣ ಕೇಳಿದಾಗ, ಇಲ್ಲಿನ ಅಸ್ಥಿರ ಸನ್ನಿವೇಶ ಜನರನ್ನು ಕರೆದುಕೊಂಡು ಬರುವುದಕ್ಕೆ ತೊಡಕು ಉಂಟುಮಾಡುತ್ತಿತ್ತು. ಪ್ರವಾಸಕ್ಕೆ ಈ ಸಮಯ ಸೂಕ್ತ ಎನಿಸಿತು ಎಂದು ಸಮಜಾಯಿಷಿ ನೀಡಿದ್ದಾರೆ.
ಆವರಣದ ಒಳಗೆ ಪ್ರವೇಶಿಸಲು ಸುದ್ದಿ ಸಂಸ್ಥೆಯೊಂದಕ್ಕೆ ಮತ್ತು ಸ್ಥಳೀಯ ಪತ್ರಕರ್ತರಿಗೆ ಅವಕಾಶ ನೀಡಲಿಲ್ಲ.
| Array |
ದಾಳಿಯ ಗುರುತು ಕಾಣಿಸಲಿಲ್ಲ
ಇಸ್ಲಾಮಾಬಾದ್ನಿಂದ ಹೆಲಿಕಾಪ್ಟರ್ ಹೊರಟು ಮನ್ಸೆಹ್ರಾ ಬಳಿ ಇಳಿಸಲಾಯಿತು. ಬಳಿಕ ಗುಡ್ಡಗಾಡಿನ ದುರ್ಗಮ ಪ್ರದೇಶದಲ್ಲಿ ಒಂದೂವರೆ ಗಂಟೆ ಸಾಗಿದರು. ದಾರಿಯಲ್ಲಿ ಒಂದು ಮದರಸಾ ಮತ್ತು ಮೂರು ವಿಭಿನ್ನ ಪ್ರದೇಶಗಳನ್ನು ತೋರಿಸಲಾಯಿತು. ಭಾರತ ಈ ಸ್ಥಳಗಳಲ್ಲಿ ದಾಳಿ ಮಾಡಿರುವುದಾಗಿ ಹೇಳಿಕೊಂಡಿತ್ತು. ಭಾರತ ಬಾಂಬ್ ಎಸೆದಿದ್ದು ಇಲ್ಲಿಯೇ ಎಂದು ಹೇಳಲಾಯಿತು. ಅಲ್ಲಿ ಒಂದಷ್ಟು ಕುಳಿಗಳು ಮತ್ತು ಬುಡಮೇಲಾಗಿ ಬಿದ್ದ ಮರಗಳು ಮಾತ್ರ ಕಂಡುಬಂದವು ಎಂದು ವರದಿಗಾರ ತಿಳಿಸಿದ್ದಾರೆ.

ಹೊಸದಾಗಿ ಕಟ್ಟಿದ ಕಟ್ಟಡವಲ್ಲ
ಈ ಪ್ರದೇಶವು ಮಾನವ ವಸತಿ ಪ್ರದೇಶದಿಂದ ದೂರವಿದೆ. ಬೆಟ್ಟದ ಮೇಲಿನ ಮದರಸಾದ ಬಳಿ ಕರೆದೊಯ್ಯಲಾಯಿತು. ಅದರ ರಚನೆಯನ್ನು ನೋಡಿದಾಗ ಹೊಸ ಕಟ್ಟಡದಂತೆ ಕಾಣಿಸಲಿಲ್ಲ. ಅದರಲ್ಲಿ ದಾಳಿಯಿಂದ ಹಾನಿಯಾದ ಯಾವ ಲಕ್ಷಣಗಳೂ ಕಾಣಿಸಲಿಲ್ಲ. ಅದು ಹಳೆಯ ಕಟ್ಟಡದಂತೆ ಗೋಚರಿಸುತ್ತಿತ್ತು. ಮಸೀದಿ ಸಭಾಂಗಣಕ್ಕೆ ಹೊಂದಿಕೊಂಡಂತೆ ಇದ್ದ ಅಲ್ಲಿ 150-200 ಮಕ್ಕಳು ಓದುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಫಲಕದಲ್ಲಿ ಉಗ್ರ ಅಜರ್ ಭಾವನ ಹೆಸರು
ಅಲ್ಲಿನ ಮದರಸಾದಲ್ಲಿ ಜೈಶ್ ಎ ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ನ ಭಾವ ಮೌಲಾನಾ ಯೂಸುಫ್ ಅಜರ್ನ ಹೆಸರು ಇರುವುದನ್ನು ಕೆಲವು ಪತ್ರಕರ್ತರು ಗುರುತಿಸಿದರು. ಅದರ ಬಗ್ಗೆ ಪ್ರಶ್ನಿಸಿದಾಗ ಸೇನಾ ಪಡೆಗಳ ವಕ್ತಾರ ಮೇಜರ್ ಜನರಲ್ ಆಸಿಫ್ ಘಫೂರ್ ನೇರ ಉತ್ತರ ನೀಡಲಿಲ್ಲ. ಮದರಸಾಗೆ ಸಹಾಯ ಮಾಡುವವರಿಗಾಗಿ ನೋಡುತ್ತಿದ್ದೇವೆ ಮತ್ತು ಅಲ್ಲಿ ಒದಗಿಸುವ ಕೋರ್ಸ್ಗಳ ಬಗ್ಗೆ ಗಮನ ಹರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
|
ಸ್ಥಳೀಯರೊಂದಿಗೆ ಮಾತಾಡಲು ಬಿಡಲಿಲ್ಲ
ಮದರಸಾವು ಫೆಬ್ರವರಿ 27 ರಿಂದ ಮಾರ್ಚ್ 14ರ ವರೆಗೆ ಮುಚ್ಚಿರುತ್ತದೆ ಎಂಬ ಫಲಕ ಕೂಡ ಶಾಲೆಯಲ್ಲಿತ್ತು. 'ತುರ್ತು ಕಾರ್ಯದ ಸಲುವಾಗಿ' ಈ ಕ್ರಮ ತೆಗೆದುಕೊಳ್ಳಲಾಗಿತ್ತು ಎಂದು ಅಲ್ಲಿನ ಶಿಕ್ಷಕರು ಉತ್ತರಿಸಿದರು.
ಮಾಧ್ಯಮದವರು ಅಲ್ಲಿನ ಸ್ಥಳೀಯರ ಜತೆಗೆ ಮಾತನಾಡಲು ಪ್ರಯತ್ನಿಸಿದರು. ಆಗ 'ಬೇಗ ಹೊರಡಿ, ಹೆಚ್ಚು ಸಮಯ ಮಾತನಾಡಬೇಡಿ' ಎಂದು ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಅವರು ವರದಿ ಮಾಡಿದ್ದಾರೆ.












Click it and Unblock the Notifications