ಜಾಗತಿಕ ಉಗ್ರ ಮಸೂದ್ ಅಜರ್ನನ್ನು ಗುಟ್ಟಾಗಿ ಬಿಡುಗಡೆಗೊಳಿಸಿದ ಪಾಕಿಸ್ತಾನ
ನವದೆಹಲಿ, ಸೆಪ್ಟೆಂಬರ್ 9: ಜಾಗತಿಕ ಉಗ್ರ ಮಸೂದ್ ಅಜರ್ನನ್ನು ಪಾಕಿಸ್ತಾನವು ಸದ್ದಿಲ್ಲದೆ ಬಿಡುಗಡೆ ಮಾಡಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಭಾರತ ವಿರುದ್ಧ ಪಾಕಿಸ್ತಾನ ಭಾರಿ ಸಂಚು ರೂಪಿಸುತ್ತಿದ್ದು, ಇದಕ್ಕಾಗಿ ಜಾಗತಿಕ ಉಗ್ರ ಹಣೆಪಟ್ಟಿಯ ಜೆಇಎಂ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ನನ್ನು ರಹಸ್ಯವಾಗಿ ಬಿಡುಗಡೆ ಮಾಡಿದೆ ಎಂದು ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ.
ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಭಾರತ ಹಾಗೂ ಪಾಕಿಸ್ತಾನ ನಡುವಣ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುವುದಕ್ಕಾಗಿಯೇ ಪಾಕಿಸ್ತಾನ ರಹಸ್ಯವಾಗಿ ಮಸೂದ್ ಅಜಾರ್ ನನ್ನು ಬಿಡುಗಡೆ ಮಾಡಿದೆ. ಬೇರೆ ಭಯೋತ್ಪಾದನಾ ಸಂಘಟನೆಗಳು ಕೂಡಾ ಬಹಿರಂಗವಾಗಿಯೇ ಕೆಲಸ ಮಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಸ್ತಾನ ಮತ್ತು ಜಮ್ಮು ಬಳಿಯ ಪಾಕಿಸ್ತಾನ ಗಡಿಯಲ್ಲಿ ಈಗಾಗಲೇ ಹೆಚ್ಚುವರಿ ಸೈನಿಕರನ್ನು ಪಾಕಿಸ್ತಾನ ನಿಯೋಜಿಸುತ್ತಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಜಮ್ಮು- ಕಾಶ್ಮೀರದ ಪುಲ್ವಾಮದಲ್ಲಿ ಫೆಬ್ರವರಿ 14 ರಂದು ಬಾಂಬ್ ದಾಳಿಯ ಸಂಚುಕೋರ ಎಂದು ವಿವಿಧ ವರದಿಗಳು ಬಂದ ನಂತರ ಪಾಕಿಸ್ತಾನ ಅಜರ್ ನನ್ನು ರಕ್ಷಣಾ ಬಂಧನದಲ್ಲಿರಿಸಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.
ವಿಶ್ವಸಂಸ್ಥೆಯಲ್ಲಿ ಉಗ್ರ ಮಸೂದ್ ಅಜರ್ನನ್ನು ಜಾಗತಿಕ ಉಗ್ರ ಎಂದು ಘೋಷಿಸಿದ್ದು ಭಾರತಕ್ಕೆ ಸಿಕ್ಕ ಐತಿಹಾಸಿಕ ಜಯ. ಇತ್ತೀಚಿನ ಪುಲ್ವಾಮಾ ದಾಳಿ ಸೇರಿದಂತೆ ಹಲವು ಭಯೋತ್ಪಾದಕ ದಾಳಿಗಳ ಸೂತ್ರದಾರ ಮಸೂದ್ ಅಜರ್ ಎಂದು ಹೇಳಲಾಗುತ್ತದೆ. ಲೋಕಸಭಾ ಚುನಾವಣೆಗೂ ಮುನ್ನ ಕೊಟ್ಟ ಭರವಸೆಯಂತೆ ನರೇಂದ್ರ ಮೋದಿ ಸರ್ಕಾರ ಉಗ್ರ ಸಂಘಟನೆಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ.

ಪಾಕಿಸ್ತಾನ ಯಾವಾಗ ಬೇಕಾದರೂ ದಾಳಿ ನಡೆಸಬಹುದು
ಪಾಕಿಸ್ತಾನ ಯಾವಾಗಲಾದರೂ ದಾಳಿ ನಡೆಸಬಹುದು ಎಲ್ಲದಕ್ಕೂ ಸಿದ್ಧವಾಗಿರಿ ಎನ್ನುವಂತೆ ಗುಪ್ತಚರ ಇಲಾಖೆ ಜಮ್ಮು ಹಾಗೂ ರಾಜಸ್ಥಾನ ಗಡಿ ಭದ್ರತಾ ಪಡೆಗೆ ತಿಳಿಸಿದೆ. ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುವುದಕ್ಕಾಗಿಯೇ ಪಾಕಿಸ್ತಾನ ಸದ್ದಿಲ್ಲದೆ ಮಸೂದ್ ಅಜರ್ನನ್ನು ಬಿಡುಗಡೆ ಮಾಡಿದೆ. ಬೇರೆ ಭಯೋತ್ಪಾದನಾ ಸಂಘಟನೆಗಳೂ ಬಹಿರಂಗವಾಗಿಯೇ ಕೆಲಸ ಮಾಡುತ್ತಿದೆ.

ಭಾರತಕ್ಕೆ ತಕ್ಕಪಾಠ ಕಲಿಸುವೆ ಎಂದಿದ್ದ ಇಮ್ರಾನ್ ಖಾನ್
ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಭಾರತದ ನಡೆಗೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬೆದರಿಕೆಯ ಸಂದೇಶವನ್ನು ರವಾನಿಸಿದ್ದರು. ಜೊತೆಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಕಾಶ್ಮೀರಕ್ಕಾಗಿ ನಾವು ಯಾವ ಹಂತಕ್ಕೆ ಹೋಗಲೂ ಸಿದ್ಧ ಎಂದು ಹೇಳಿಕೆ ನೀಡಿದ್ದರು.

ಜಮ್ಮು ಕಶ್ಮೀರದಲ್ಲಿ 370 ವಿಧಿ ರದ್ದುಗೊಳಿಸಿದ್ದು ಎಲ್ಲದಕ್ಕೂ ಕಾರಣ
ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನ ವಿಧಿ 370 ರದ್ದುಗೊಳಿಸಿದ್ದೇ ಎಲ್ಲದಕ್ಕೂ ಕಾರಣವಾಗಿದೆ. ಭಾರತದ ನಿರ್ಧಾರದ ಪ್ರತಿಯಾಗಿ ಪಾಕಿಸ್ತಾನವು ಸಂಚು ರೂಪಿಸುತ್ತಿದೆ. ಅದರ ಭಾಗವಾಗಿಯೇ ರಾಜಸ್ತಾನ ಹಾಗೂ ಜಮ್ಮು ಬಳಿಯ ಭಾರತ-ಪಾಕಿಸ್ತಾನ ಗಡಿಯಲ್ಲಿ ಈಗಾಗಲೇ ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉಗ್ರರ ಅಂಡರ್ ವಾಟರ್ ತರಬೇತಿ
ಇತ್ತೀಚೆಗಷ್ಟೇ ಭಾರತೀಯ ನೌಕಾದಳ ಗುಪ್ತಚರ ಮಾಹಿತಿಯೊಂದನ್ನು ಬಹಿರಂಗಪಡಿಸಿತ್ತು. ಜೈಷ್-ಎ-ಮೊಹಮ್ಮದ್ ಭಾರತದ ಮೇಲೆ ದಾಳಿ ನಡೆಸಲು ಕೆಲ ಉಗ್ರರಿಗೆ 'ಅಂಡರ್ ವಾಟರ್' ತರಬೇತಿ ನೀಡುತ್ತಿದೆ ಎಂದು ನೌಕಾದಳ ಹೇಳಿತ್ತು. ಈ ಬಗ್ಗೆ ಮಾತನಾಡಿದ್ದ ನೌಕಾದಳದ ಮುಖ್ಯಸ್ಥ ಅಡ್ಮಿರಲ್ ಕರಂಬಿರ್ ಸಿಂಗ್, ಕರಾವಳಿ ರಕ್ಷಣಾ ಪಡೆಗಳು ಯಾವುದೇ ಉಗ್ರರನ್ನು ಭಾರತದೊಳಗೆ ನುಸುಳಲು ಬಿಡುವುದಿಲ್ಲ. ಸೂಕ್ತ ಕ್ರಮ ಈಗಾಗಲೇ ತೆಗೆದುಕೊಂಡಿದ್ದೇವೆ ಎಂದಿದ್ದರು.












Click it and Unblock the Notifications