ನಮ್ಮ ತಂಟೆಗೆ ಬಂದು ನಾಶವಾಗಬೇಡಿ, ಭಾರತಕ್ಕೆ ಪಾಕ್ ಎಚ್ಚರಿಕೆ
ಇಸ್ಲಮಾಬಾದ್, ಸೆ 4: (ಪಿಟಿಐ): ಭಾರತದ ಜೊತೆ ಲಘು ಅಥವಾ ದೀರ್ಘಾವಧಿ ಯುದ್ದಕ್ಕೆ ಪಾಕಿಸ್ತಾನ ತಯಾರಾಗಿದೆ. ನಾವೇನು ದುರ್ಭಲರಲ್ಲ, ನಮ್ಮ ರಕ್ಷಣೆ ಹೇಗೆ ಮಾಡಬೇಕು ಎನ್ನುವುದು ನಮಗೆ ತಿಳಿದಿದೆ.
ನಮ್ಮ ಮೇಲೆ ಭಾರತ ಯುದ್ದ ಘೋಷಿಸಿದರೆ ನಾವು ಆ ದೇಶಕ್ಕೆ ಭಾರೀ ನಷ್ಟ ಮಾಡಲಿದ್ದೇವೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಕ್ವಾಜಾ ಮೊಹಮ್ಮದ್ ಆಸಿಫ್ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಭಾರತದ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಹೇಳಿಕೆ ನೀಡಿದ ಎರಡು ದಿನದ ನಂತರ, ಪಾಕ್ ರಕ್ಷಣಾ ಸಚಿವ ಆಸಿಫ್ ಭಾರತಕ್ಕೆ ಈ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ರೇಡಿಯೋ ಪಾಕಿಸ್ತಾನದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಆಸಿಫ್, ಪಾಕಿಸ್ತಾನ ಯುದ್ದವನ್ನು ಬಯಸುತ್ತಿಲ್ಲ. ಆದರೆ ನಮ್ಮ ತಂಟೆಗೆ ಬಂದರೆ ನಾವು ಸುಮ್ಮನಿರುವುದಿಲ್ಲ.
1965ರಲ್ಲಿ ನಡೆದ ಭಾರತ-ಪಾಕ್ ಯುದ್ದದ ವಾತಾವರಣವೇ ಬೇರೆ. ಈಗಿನ ಪಾಕಿಸ್ತಾನದ ಶಕ್ತಿಯೇ ಬೇರೆ. ಒಂದು ವೇಳೆ ಭಾರತ ಯುದ್ದ ಘೋಷಿಸಿದರೆ ಆ ದೇಶ ಭಾರೀ ನಷ್ಟ ಅನುಭವಿಸ ಬೇಕಾಗುವುದಂತೂ ನಿಶ್ಚಿತ ಎಂದು ಕ್ವಾಜಾ ಆಸಿಫ್ ಎಚ್ಚರಿಕೆ ನೀಡಿದ್ದಾರೆ.
ನಮ್ಮ ಶಕ್ತಿಯನ್ನು ವೃದ್ದಿಸಿಕೊಂಡಿದ್ದೇವೆ, ಮುಂದೆ ಓದಿ...
ನಮ್ಮ ಶಕ್ತಿ ವೃದ್ದಿಸಿ ಕೊಂಡಿದ್ದೇವೆ
ಐವತ್ತು ವರ್ಷದ ಹಿಂದಿನ ನಮ್ಮ ಶಕ್ತಿಯೇ ಬೇರೆ, ಈಗಿನ ಪಾಕಿಸ್ತಾನದ ಮಿಲಿಟರಿ ಶಕ್ತಿಯೇ ಬೇರೆ. ನಾವು ಶಾಂತಿ ಬಯಸುತ್ತೇವೆ, ಹಾಗಂತ ನಮ್ಮ ತಂಟೆಗೆ ಬಂದರೆ ನಾವು ಸುಮ್ಮನಿರುವುದಿಲ್ಲ. ಭಾರತಕ್ಕೆ ಭಾರೀ ನಷ್ಟ ಮಾಡುವ ಶಕ್ತಿಯನ್ನು ನಾವು ಹೊಂದಿದ್ದೇವೆ - ಕ್ವಾಜಾ ಆಸಿಫ್.
ನಮ್ಮ ಪ್ರಧಾನಿ ಕೂಡಾ ಶಾಂತಿ ಬಯಸುತ್ತಾರೆ
ನಮ್ಮ ಮಿಲಿಟರಿಗೆ ಯುದ್ದವನ್ನು ಹೇಗೆ ಎದುರಿಸ ಬೇಕು ಎನ್ನುವುದು ಗೊತ್ತಿದೆ. ನಾವು ದೇಶದಲ್ಲಿನ ಆಂತರಿಕ ಉಗ್ರರ ವಿರುದ್ದ ಹೋರಾಡುತ್ತಲೇ ಇದ್ದೇವೆ. ನಮ್ಮ ಪ್ರಧಾನಿ ನವಾಜ್ ಶರೀಫ್ ಕೂಡಾ ಶಾಂತಿ, ಸಮಾಧಾನವನ್ನೇ ಬಯಸುತ್ತಾರೆ ಎಂದು ಆಸಿಫ್ ಹೇಳಿದ್ದಾರೆ.
ಭಾರತದ ಸೇನಾ ಮುಖ್ಯಸ್ಥರ ಹೇಳಿಕೆ
ದೇಶದ ಸೇನೆ ಲಘು ಯುದ್ದಗಳಿಗೆ ತಯಾರಾಗಬೇಕಾಗಿದೆ. ಗಡಿ ಭಾಗದಲ್ಲಿ ಪಾಕಿಸ್ತಾನ ಶಾಂತಿಯನ್ನು ಕದಡುತ್ತಿದೆ. ವಿನಾಕಾರಣ ನಮ್ಮ ಸೈನಿಕರ ಮತ್ತು ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸುತ್ತಿದೆ. ಗಡಿ ಭಾಗದಲ್ಲಿ ಕದನ ವಿರಾಮ ಉಲ್ಲಂಘನೆಯಾಗುತ್ತಲೇ ಇದೆ ಎಂದು ಭಾರತದ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಹೇಳಿದ್ದರು.
ಉಗ್ರರು ನುಸುಳುವಿಕೆ
ಭಯೋತ್ಪಾದಕರು ಗಡಿಯೊಳಗೆ ನುಗ್ಗುವ ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ. ಹಾಗಾಗಿ ನಾವು ಲಘು ಯುದ್ದಕ್ಕೆ ಸಿದ್ದವಾಗಬೇಕಾಗಿದೆ ಎಂದು ಸುಹಾಗ್, 1965ರ ಇಂಡೋ - ಪಾಕ್ ಯುದ್ದದ ಸ್ಮರಣಾರ್ಥ ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೇಳಿದ್ದರು.
ಬಿಜೆಪಿ ಟೀಕೆ
ಪಾಕ್ ರಕ್ಷಣಾ ಸಚಿವರ ಹೇಳಿಕೆ ಅವರ ಬುದ್ದಿಮಟ್ಟವನ್ನು ತೋರಿಸುತ್ತದೆ. ಪಾಕಿಸ್ತಾನ ಅಣುಶಕ್ತಿಯನ್ನು ಹೊಂದಿರುವ ದೇಶ. ಆ ದೇಶದ ನಾಯಕರು ನೀಡುವ ಹೇಳಿಕೆ ಹುಡುಗಾಟದ್ದು ಎಂದು ಬಿಜೆಪಿ ವಕ್ತಾರ ಎಂ ಜೆ ಅಕ್ಬರ್ ಟೀಕಿಸಿದ್ದಾರೆ.