ಭಾರತದಿಂದ 60 ಲಕ್ಷ ಸೊಳ್ಳೆ ಪರದೆ ಖರೀದಿಗೆ ಮುಂದಾದ ಪಾಕಿಸ್ತಾನ; ಏನಿದರ ರಹಸ್ಯ?
ಇಸ್ಲಮಾಬಾದ್, ಅಕ್ಟೋಬರ್ 12: ಪಾಕಿಸ್ತಾನದಲ್ಲಿ ಮಲೇರಿಯಾ ಹಾಗೂ ಇತರೆ ರೋಗಕಾರಕ ಸೊಳ್ಳೆಗಳ ಕಾಟ ಮಿತಿ ಮೀರುತ್ತಿದೆ. ಭವಿಷ್ಯ ಸಂಕಷ್ಟವನ್ನು ಎದುರಿಸುವ ನಿಟ್ಟಿನಲ್ಲಿ ಭಾರತದಿಂದ 60 ಲಕ್ಷ ಸೊಳ್ಳೆ ಪರದೆಗಳನ್ನು ಖರೀದಿಸುವುದಕ್ಕೆ ಪಾಕಿಸ್ತಾನ ಸರ್ಕಾರವು ಮಂಗಳವಾರ ಅನುಮೋದನೆ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಒದಗಿಸುವ ಜಾಗತಿಕ ನಿಧಿಯನ್ನು ಸೊಳ್ಳೆ ಪರದೆ ಖರೀದಿಗೆ ಬಳಸಲು ಪಾಕಿಸ್ತಾನವು ಬಯಸುತ್ತಿದೆ. WHO ಅಧಿಕಾರಿಗಳು ಸಾಧ್ಯವಾದಷ್ಟು ಬೇಗ ಸೊಳ್ಳೆ ಪರದೆಗಳನ್ನು ಪಡೆಯಲು ಯೋಜಿಸುತ್ತಿದ್ದಾರೆ. ಮುಂದಿನ ತಿಂಗಳ ಹೊತ್ತಿಗೆ ವಾಘಾ ಗಡಿ ಮಾರ್ಗದ ಮೂಲಕ ಇವುಗಳನ್ನು ಪಡೆಯಲಾಗುವುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಪಾಕ್ನಿಂದ ಡ್ರೋನ್ ಮೂಲಕ ಭಯೋತ್ಪಾದಕ ಚಟುವಟಿಕೆ; ನಿಗಾ ವಹಿಸಲು ಬಿಎಸ್ಎಫ್ಗೆ ಸೂಚನೆ
ಜೂನ್ ಮಧ್ಯಭಾಗದಿಂದ ಪಾಕಿಸ್ತಾನದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಭೀಕರ ಪ್ರವಾಹ ಸೃಷ್ಟಿಯಾಗಿತ್ತು. ಈ ಪ್ರವಾಹದಲ್ಲಿ 1,700ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 3.30 ಕೋಟಿ ಜನರನ್ನು ಸ್ಥಳಾಂತರಗೊಳಿಸಲಾಗಿತ್ತು. ದೇಶದ ಮೂರನೇ ಒಂದು ಭಾಗವು ಪ್ರವಾಹದ ನೀರಿನಲ್ಲೇ ಮುಳುಗಿ ಹೋಗಿತ್ತು.
ವಿಶ್ವ ಆರೋಗ್ಯ ಸಂಸ್ಥೆಯು ನೀಡಿದ ಎಚ್ಚರಿಕೆ ಸಂದೇಶ
ಕಳೆದ ಸೆಪ್ಟೆಂಬರ್ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO)ಯು ಮಲೇರಿಯಾದಂತಹ ರೋಗಗಳ ಉಲ್ಬಣವು "ಎರಡನೇ ವಿಪತ್ತಿಗೆ" ಕಾರಣವಾಗಬಹುದು ಎಂದು ಎಚ್ಚರಿಸಿತ್ತು. 2023ರ ಜನವರಿ ಹೊತ್ತಿಗೆ ಪ್ರವಾಹ ಪೀಡಿತ ಪಾಕಿಸ್ತಾನದ 32 ಜಿಲ್ಲೆಗಳಲ್ಲಿ ಕನಿಷ್ಠ 27 ಲಕ್ಷ ಮಲೇರಿಯಾ ಪ್ರಕರಣಗಳು ವರದಿಯಾಗಬಹುದು ಎಂದು ಕಳೆದ ವಾರವಷ್ಟೇ ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆ ನೀಡಿತ್ತು.
ಮಕ್ಕಳಿಗೆ ಮಲೇರಿಯಾ ಸೋಂಕು ಹರಡುವ ಭೀತಿ
ಪಾಕಿಸ್ತಾನದ 32 ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಾವಿರಾರು ಮಕ್ಕಳು ಸೊಳ್ಳೆಯಿಂದ ಹರಡುವ ಕಾಯಿಲೆಯಿಂದ ಸೋಂಕಿಗೆ ಒಳಗಾಗಿರುವ ಅಪಾಯವಿದೆ. ಈ ಹಂತದಲ್ಲಿ ಮಲೇರಿಯಾ ರೋಗವು ತೀವ್ರಗತಿಯಲ್ಲಿ ಹರಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿಯೇ ಪಾಕಿಸ್ತಾನದ ಆರೋಗ್ಯ ಸಚಿವಾಲಯವು ಕಳೆದ ತಿಂಗಳು ಭಾರತದಿಂದ ಸೊಳ್ಳೆ ಪರದೆಗಳನ್ನು ಖರೀದಿಸಲು ಅನುಮತಿ ಕೋರಿತ್ತು ಎಂದು ತಿಳಿಸಿದ್ದಾರೆ.
ಜಾಗತಿಕ ನಿಧಿಯಲ್ಲಿ ಸೊಳ್ಳೆ ಪರದೆ ಖರೀದಿಗೆ ಸ್ಕೆಚ್
ಪಾಕಿಸ್ತಾನದ ಸಿಂಧ್, ಪಂಜಾಬ್ ಮತ್ತು ಬಲೂಚಿಸ್ತಾನದ 26 ಹೆಚ್ಚು ಜಿಲ್ಲೆಗಳಲ್ಲಿ ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಮ್ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆ ಬಾಧಿತ ಜಿಲ್ಲೆಗಳಿಗೆ ಸೊಳ್ಳೆ ಪರದೆಗಳ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಜಾಗತಿಕ ನಿಧಿಗೆ ವಿನಂತಿಸಲಾಗಿದೆ. ಪಾಕಿಸ್ತಾನ ಸರ್ಕಾರವು ಅಂತಹ ಕ್ರಮವನ್ನು ಅನುಮೋದಿಸಿದರೆ ಭಾರತದಿಂದ ಈ ಪರದೆಗಳನ್ನು ಖರೀದಿಸಲು ಮುಂದಾಗುವುದಾಗಿ ಅಧಿಕಾರಿ ಹೇಳಿದ್ದಾರೆ.
ಹೇಗಿದೆ ಭಾರತ-ಪಾಕಿಸ್ತಾನದ ನಡುವಿನ ನಂಟು?
ಕಾಶ್ಮೀರ ಸಮಸ್ಯೆ ಮತ್ತು ಪಾಕಿಸ್ತಾನದಿಂದ ನಡೆಯುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಈಗಾಗಲೇ ಹಳಸಿದೆ. ಭಾರತವು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡ ನಂತರ ದ್ವಿಪಕ್ಷೀಯ ಸಂಬಂಧಗಳು ಮುರಿದುಬಿದ್ದವು. ಕಳೆದ 2019ರ ಆಗಸ್ಟ್ 5ರಂದು ಈ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗಿತ್ತು.
ಭಾರತದ ನಿರ್ಧಾರವನ್ನು ಅನುಸರಿಸಿ, ಪಾಕಿಸ್ತಾನವು ನವದೆಹಲಿಯೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ತಗ್ಗಿಸಿದ್ದು ಅಲ್ಲದೇ ಭಾರತೀಯ ರಾಯಭಾರಿಯನ್ನು ಹೊರಹಾಕಿತು. ಅಂದಿನಿಂದ ಪಾಕಿಸ್ತಾನ ಮತ್ತು ಭಾರತದ ನಡುವಿನ ವ್ಯಾಪಾರ ಸಂಬಂಧಗಳು ಸ್ಥಗಿತಗೊಂಡವು.