ಪಾಕಿಸ್ತಾನ ಸೇನೆ ವಿರುದ್ಧ ತಿರುಗಿಬಿದ್ದ ಇಮ್ರಾನ್ ಖಾನ್!
ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪಾಕ್ ಸೇನೆ ನಡುವೆ ನಡೆಯುತ್ತಿರುವ ತಿಕ್ಕಾಟ ಕೊನೆಯಾಗುತ್ತಿಲ್ಲ. ಸೇನೆ ವಿರುದ್ಧ ಮಾತನಾಡಿ ಟಾರ್ಗೆಟ್ ಆದ ಇಮ್ರಾನ್ ಖಾನ್ಗೆ ಜೀವ ಬೆದರಿಕೆ ಇದೆ ಎನ್ನಲಾಗುತ್ತಿದೆ. ಈ ಹೊತ್ತಲ್ಲೇ ಸೇನೆ ನನ್ನ ಕಿಡ್ನಾಪ್ ಮಾಡಿತ್ತೆಂದು ಇಮ್ರಾನ್ ಈಗ ಗಂಭೀರ ಆರೋಪ ಮಾಡಿದ್ದು, ಬೆಂಬಲಿಗರಿಗೆ ತೀವ್ರ ಹೋರಾಟ ಆರಂಭಿಸುವಂತೆ ಕರೆ ನೀಡಿದ್ದಾರೆ.
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ಗೆ ಜಾಮೀನು ನೀಡಿದ ಹಿನ್ನೆಲೆ ಜೈಲಿಂದ ಬಿಡುಗಡೆ ಆಗಿದ್ದಾರೆ. ಆದ್ರೆ ಹೊರ ಬರುತ್ತಿದ್ದಂತೆ ಪಾಕಿಸ್ತಾನ ಸೇನೆ ಮತ್ತು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐ ವಿರುದ್ಧ ತಮ್ಮ ಸೇಡು ತೀರಿಸಿಕೊಳ್ಳಲು ತೊಡೆತಟ್ಟಿದ್ದಾರೆ. ಆಡಳಿತ ಪಕ್ಷದ ವಿರುದ್ಧ ಕೆಂಡ ಕಾರಿರುವ ಇಮ್ರಾನ್, ಪ್ರಧಾನಿ ಶೆಹಬಾಜ್ ಷರೀಷ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮತ್ತೊಂದ್ಕಡೆ ಸೇನೆ ಅಪರಹಣ ಮಾಡಿತ್ತೆಂಬ ಆರೋಪವು ಪಾಕಿಸ್ತಾನದಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿದೆ.

ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಿದೆ
ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿದೆ. ನಮಗಿರುವ ಏಕೈಕ ಭರವಸೆ ನ್ಯಾಯಾಂಗ ಮಾತ್ರ ಎಂದು ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೊಸ ಬಾಂಬ್ ಸಿಡಿಸಿದ್ದಾರೆ. ನನಗೆ ಮೊದಲ ಬಾರಿಗೆ ಅರೆಸ್ಟ್ ವಾರಂಟ್ ತೋರಿಸಿದ್ದು ಜೈಲಿನಲ್ಲಿ. ಈ ರೀತಿಯ ವರ್ತನೆ ನಡೆಯುವುದು ಕಾಡಿನಲ್ಲಿ ಮಾತ್ರ. ಹೀಗಾಗಿ ಸೇನೆ ಅಪಹರಣ ಮಾಡಿ ನನ್ನ ಕರೆದೊಯ್ದಿತ್ತು. ಆಗ ಪೊಲೀಸರು ಎಲ್ಲಿದ್ರು? ಇದು ಕಾಡಿನ ಕಾನೂನು ಅಲ್ವಾ? ಎಂದು ಖಾನ್ ಸಂದರ್ಶನ ಒಂದರಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಚುನಾವಣೆಗೆ ಪ್ರಧಾನಿ ಹೆದರಿದ್ದಾರೆ!
ಇದೇ ಸಂದರ್ಶನದಲ್ಲಿ ಮತ್ತೊಂದು ಗಂಭೀರ ಆರೋಪವನ್ನೂ ಇಮ್ರಾನ್ ಖಾನ್ ಮಾಡಿದ್ದಾರೆ. ಪಾಕ್ ಪಿಎಂ ಶೆಹಬಾಜ್ ಷರೀಫ್ ಎಲೆಕ್ಷನ್ ಎದುರಿಸಲು ಭಯಗೊಂಡಿದ್ದಾರೆ ಎಂದಿದ್ದಾರೆ ಖಾನ್. ನಮ್ಮ ಪಕ್ಷದ ಎದುರು ಆ ಪಕ್ಷ ಧೂಳೀಪಟವಾಗುತ್ತೆ. ಇದನ್ನ ನೋಡಿ ಪಾಕಿಸ್ತಾನ ಹಾಲಿ ಪ್ರಧಾನಿ ಶೆಹಬಾಜ್ ಷರೀಫ್ ಭಯಪಟ್ಟಿದ್ದಾರೆ. ಇದೇ ಕಾರಣಕ್ಕೆ ನನ್ನನ್ನು ತುಳಿಯುವ ಪ್ರಯತ್ನಗಳು ಸಾಗಿವೆ, ಹೀಗಾಗಿ ಹೋರಾಟ ಅನಿವಾರ್ಯ ಎಂದಿದ್ದಾರೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್.
ಏನಿದು ಇಮ್ರಾನ್ ವಿರುದ್ಧದ ಕೇಸ್?
ಅಷ್ಟಕ್ಕೂ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಅಧ್ಯಕ್ಷ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿಯೂ ಆದ ಇಮ್ರಾನ್ ಖಾನ್ ವಿರುದ್ಧ ಸುಮಾರು 5 ಸಾವಿರ ಕೋಟಿ ರೂಪಾಯಿ ಲ್ಯಾಂಡ್ ಡೀಲಿಂಗ್ ಹಗರಣವಿದೆ. ಈ ಕೇಸ್ ಸಂಬಂಧ ಇಮ್ರಾನ್ ಖಾನ್ ಜೈಲು ಸೇರಿದ್ದರು. ಪಾಕಿಸ್ತಾನದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ಖಾನ್ನ ಅರೆಸ್ಟ್ ಮಾಡಿತ್ತು. ಆದರೆ ಪಾಕ್ ಸುಪ್ರೀಂಕೋರ್ಟ್ ಮಧ್ಯಪ್ರವೇಶದ ನಂತರ ಇಮ್ರಾನ್ ಖಾನ್ ಬಿಡುಗಡೆ ಆಗಿದ್ದಾರೆ. ಇದೀಗ ತಮ್ಮ ವಿರೋಧಿಗಳ ವಿರುದ್ಧ ತೊಡೆತಟ್ಟಿದ್ದಾರೆ.

ಕೊಲೆ ಆರೋಪವೇ ಮುಳುವಾಯ್ತಾ?
ಪಾಕಿಸ್ತಾನ ಅಂದ್ರೆ ಅಲ್ಲಿ ಜೀವಕ್ಕೆ ಬೆಲೆ ಇಲ್ಲ. ಅದರಲ್ಲೂ ಸತ್ಯ ಮಾತನಾಡುವ ರಾಜಕಾರಣಿ, ಪತ್ರಕರ್ತರನ್ನ ಹೆಣ ಮಾಡದೆ ಬಿಡುವುದಿಲ್ಲ ಅಲ್ಲಿನ ವ್ಯವಸ್ಥೆ. ಹೀಗೆ ಪತ್ರಕರ್ತನೊಬ್ಬನ ಹತ್ಯೆ ಸಂಬಂಧ ಇಮ್ರಾನ್ ಖಾನ್ ISI ಸಂಸ್ಥೆ ವಿರುದ್ಧ ಗಂಭೀರ ಆರೋಪ ಮಾಡಿದ್ರು. ಇಮ್ರಾನ್ ಖಾನ್ ಆರೋಪ ಮಾಡುತ್ತಿದ್ದಂತೆ ಐಎಸ್ಐ ಜೊತೆ ಪಾಕಿಸ್ತಾನ ಮಿಲಿಟರಿ ಕೂಡ ರೊಚ್ಚಿಗೆದ್ದು ಮೈಕೊಡವಿ ನಿಂತಿತ್ತು. ಅದರ ಪರಿಣಾಮ ಇಮ್ರಾನ್ ಅನುಭವಿಸಿದ್ದಾರೆ. ಹೀಗಾಗಿ ಪಾಕ್ ಸೇನೆ ಮತ್ತು ಐಎಸ್ಐ ವಿರುದ್ಧ ಸೇಡು ತೀರಿಸಿಕೊಳ್ಳಲು ಇಮ್ರಾನ್ ತೊಡೆತಟ್ಟಿದ್ದಾರೆ.
ಒಟ್ನಲ್ಲಿ ನೆರೆ ರಾಷ್ಟ್ರ, ಭಯೋತ್ಪಾದಕರ ಪೋಷಕ ಪಾಕಿಸ್ತಾನದಲ್ಲಿ ಕಿರಿಕಿರಿ ಮುಂದುವರಿದಿದೆ. ಅದರಲ್ಲೂ ಇಮ್ರಾನ್ ಖಾನ್ ಬಂಧನದ ವಿಚಾರ ಪಾಕಿಸ್ತಾನದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಇಮ್ರಾನ್ ಖಾನ್ ಬಿಡುಗಡೆಗಾಗಿ ಅವರ ಬೆಂಬಲಿಗರು ಪಾಕಿಸ್ತಾನದಲ್ಲಿ ರಕ್ತಪಾತ ನಡೆಸಿದ್ದರು. ಆದರೆ ಇಮ್ರಾನ್ ರಿಲೀಸ್ ಆದ ನಂತರ ಹಿಂಸೆಗೆ ಕಡಿವಾಣ ಬೀಳಲಿದೆ ಎಂದೇ ಭಾವಿಸಲಾಗಿತ್ತು. ಈಗಿನ ಸ್ಥಿತಿ ಇನ್ನಷ್ಟು ಭೀಕರವಾಗ್ತಿದ್ದು ಇಮ್ರಾನ್ ಬೆಂಬಲಿಗ ಪಡೆ ಜೊತೆ ಸೇರಿ ಇನ್ನಷ್ಟು ಉಗ್ರ ಹೋರಾಟ ನಡೆಸಲು ಸಿದ್ಧತೆ ನಡೆಸಿದಂತೆ ಕಾಣ್ತಿದೆ.












Click it and Unblock the Notifications