ಭಾರತದೊಂದಿಗೆ ಸದ್ಯಕ್ಕಂತೂ ಮಾತುಕತೆ ಸಾಧ್ಯವಿಲ್ಲ; ಖುರೇಶಿ
ಇಸ್ಲಾಮಾಬಾದ್, ಡಿಸೆಂಬರ್ 24: "ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತದೊಂದಿಗೆ ರಾಜತಾಂತ್ರಿಕ ಮಾತುಕತೆ ನಡೆಸಲು ಸಾಧ್ಯವಿಲ್ಲ" ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮದ್ ಖುರೇಶಿ ತಿಳಿಸಿದ್ದಾರೆ.
ಭಾರತದ ಮೇಲೆ ಹಲವು ದಾಳಿ ನಡೆಸಿರುವ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಇಸ್ಲಾಮಾಬಾದ್ ಸೂಕ್ತ ಕ್ರಮ ಕೈಗೊಳ್ಳಬೇಕು. ಇದರ ಹೊರತು "ಮಾತುಕತೆ ಮತ್ತು ಭಯೋತ್ಪಾದನೆ" ಎರಡೂ ಒಟ್ಟಿಗೆ ಹೋಗಲು ಸಾಧ್ಯವೇ ಇಲ್ಲ ಎಂಬ ನಿಲುವನ್ನು ಭಾರತ ಮುಂದುವರೆಸಿದೆ. ಹೀಗಿರುವಾಗ ಸದ್ಯಕ್ಕಂತೂ ಮಾತುಕತೆಯ ಸಾಧ್ಯತೆ ಇಲ್ಲವಾಗಿದೆ ಎಂದು ಹೇಳಿದ್ದಾರೆ.
ಭಾರತದೊಂದಿಗೆ ಸಂವಾದ ನಡೆಸುವ ಅನ್ಯ ಮಾರ್ಗವಿಲ್ಲ. ಮಾತುಕತೆಗೆ ಸೂಕ್ತ ಸಂದರ್ಭಗಳೂ ಒದಗಿಬಂದಿಲ್ಲ ಎಂದಿದ್ದಾರೆ.

2016ರಲ್ಲಿ ಪಠಾಣ್ ವಾಯುನೆಲೆ ಮೇಲೆ ಭಯೋತ್ಪಾದಕ ದಾಳಿ ನಡೆದ ನಂತರ ಪಾಕ್ ಹಾಗೂ ಭಾರತದ ನಡುವಿನ ಸಂಬಂಧ ಹದಗೆಟ್ಟಿತ್ತು. ಆನಂತರ ನಡೆದ ಉರಿ ಹಾಗೂ ಪುಲ್ವಾಮಾ ದಾಳಿ ಈ ಪರಿಸ್ಥಿತಿಯನ್ನು ಇನ್ನಷ್ಟು ಕಠಿಣಗೊಳಿಸಿತು. ಇದರೊಂದಿಗೆ ಕಳೆದ ವರ್ಷ ಆಗಸ್ಟ್ ನಲ್ಲಿ 370ನೇ ವಿಧಿ ರದ್ದುಗೊಳಿಸಿ ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿದ್ದಕ್ಕೆ ಸಂಬಂಧಿಸಿದಂತೆ ಭಾರತದ ವಿರುದ್ಧ ಪಾಕ್ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪತ್ರ ಬರೆದ ಸಂಗತಿಯೂ ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಧಕ್ಕೆ ತಂದಿತ್ತು. ಇದು ಭಾರತದ ಒಳಗಿನ ವಿಚಾರ, ಪರಿಸ್ಥಿತಿ ಬಳಸಿಕೊಂಡು ಪಾಕಿಸ್ತಾನ್ ಭಾರತ ವಿರೋಧಿ ಪ್ರಚಾರ ತಂತ್ರಗಳನ್ನು ಬಳಸಬಾರದು ಎಂದು ಎಚ್ಚರಿಕೆ ನೀಡಿತ್ತು.












Click it and Unblock the Notifications