ಬಾಹ್ಯ ಬೆದರಿಕೆ ಎದುರಿಸಲು ಮುಸ್ಲಿಂರೆಲ್ಲ ಒಂದಾಗಲು ಕರೆ
ಕೌಲಾಲಂಪುರ್, ಜನವರಿ.07: ವಿಶ್ವದ ದೊಡ್ಡ ದೊಡ್ಡ ದೇಶಗಳೇ ಬೆದರಿಕೆಯೊಡ್ಡುತ್ತಿರುವ ಕೆಲಸ ಮಾಡುತ್ತಿವೆ. ಇಂಥ ಸಂದರ್ಭದಲ್ಲಿ ಮುಸ್ಲಿಂರೆಲ್ಲ ಒಂದಾಗಬೇಕು ಎಂದು ಮಲೇಶಿಯಾ ಪ್ರಧಾನಮಂತ್ರಿ ಮಹಾಥೀರ್ ಮೊಹಮ್ಮದ್ ಕರೆ ನೀಡಿದ್ದಾರೆ.
ಮುಸ್ಲಿಂ ರಾಷ್ಟ್ರಗಳ ಮೇಲೆ ಅಮೆರಿಕಾ ದಾಳಿ ನಡೆಸಿದ್ದು ಗೊತ್ತಿದೆ. ಅನೈತಿಕವಾಗಿ ಇರಾನ್ ಸೇನಾ ಮುಖ್ಯಸ್ಥ ಖಾಸಿಂ ಸುಲೇಮಾನ್ ರನ್ನು ಹತ್ಯೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿ ವಿಶ್ವದ ದೊಡ್ಡಣ್ಣನೇ ನಡೆದುಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.
ತಾಳೆ ಎಣ್ಣೆ ಖರೀದಿ ನಿಲ್ಲಿಸಬೇಡಿ: ಭಾರತಕ್ಕೆ ಮಲೇಶಿಯಾ ಮನವಿ
ಇತ್ತೀಚಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಲೇಶಿಯಾ ಪ್ರಧಾನಮಂತ್ರಿ ಮಹಾಥೀರ್ ಮೊಹಮ್ಮದ್ ಮಾತನಾಡಿದರು. ಉಗ್ರವಾದಿ ಎಂಬ ಹೆಸರಿನಲ್ಲಿ ಕಳೆದ ಜನವರಿ.03ರ ಶುಕ್ರವಾರ ಬಾಗ್ದಾದಿ ಗಡಿಯಲ್ಲಿ ಖಾಸಿಂ ಸುಲೇಮಾನ್ ರನ್ನು ಹತ್ಯೆಗಯ್ಯಲಾಗಿದೆ. ಇದರ ವಿರುದ್ಧ ಧ್ವನಿ ಎತ್ತಬೇಕಿದೆ. ಈಗ ವಿಶ್ವದ ಮುಸ್ಲಿಂರೆಲ್ಲ ಒಂದಾಗುವ ಸಮಯ ಬಂದಿದೆ ಎಂದು ಮೊಹಮ್ಮದ್ ಕರೆ ನೀಡಿದ್ದಾರೆ.
ಕೌಲಾಲಂಪುರ್ ನಲ್ಲಿ ಅಮೆರಿಕಾ ವಿರುದ್ಧ ಧಿಕ್ಕಾರ:
ಮಲೇಶಿಯಾ ರಾಜಧಾನಿ ಕೌಲಾಲಂಪುರ್ ನಲ್ಲಿರುವ ಅಮೆರಿಕಾದ ರಾಯಭಾರಿ ಕಚೇರಿ ಎದುರು ನೂರಾರು ಮುಸ್ಲಿಂ ಪ್ರತಿಭಟನಾಕಾರರು ನೆರೆದಿದ್ದರು. ವಿಶ್ವದ ದೊಡ್ಡಣ್ಣ ನಡೆಸಿದ ಕಾರ್ಯಾಚರಣೆಗೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಅಮೆರಿಕಾಗೆ ಧಿಕ್ಕಾರ ಕೂಗಿದರು. ಬುರ್ಖಾ ತೊಟ್ಟು ಬಂದ 50ಕ್ಕೂ ಹೆಚ್ಚು ಮಹಿಳಾ ಪ್ರತಿಭಟನಾಕಾರರು ಕೂಡಾ ಅಮೆರಿಕ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.