ಜೈಷ್ ಮುಖಂಡ ಮಸೂದ್ ಬದುಕಿದ್ದಾನಾ, ಆಡಿಯೋ ಕ್ಲಿಪ್ ಏನು ಹೇಳುತ್ತೆ?
ಇಸ್ಲಾಮಾಬಾದ್,ಮಾರ್ಚ್ 7: ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ಮುಖಂಡ ಮಸೂದ್ ಅಜರ್ ಮೃತಪಟ್ಟಿದ್ದಾನೆ ಎನ್ನುವ ವದಂತಿ ಹರಿದಾಡಿತ್ತು. ಆದರೆ ಪಾಕಿಸ್ತಾನ ಬಿಡುಗಡೆ ಮಾಡಿರುವ ಆಡಿಯೋ ಕ್ಲಿಪ್ನಲ್ಲಿ ಬೇರೆಯೇ ಮಾಹಿತಿ ಲಭ್ಯವಾಗಿದೆ.
ಈ ಆಡಿಯೋವನ್ನು ಖುದ್ದಾಗಿ ಮಸೂದ್ ಅಜರ್ ಬಿಡುಗಡೆ ಮಾಡಿದ್ದು, ಭಾರತದ ವಿರುದ್ಧ ಜಿಹಾದ್ ಆರಂಭಿಸಲು ಕರೆ ನೀಡಿದ್ದಾನೆ.
ಭಾರತದ ಒತ್ತಾಯದ ಮೇರೆಗೆ ಕ್ರಮ ಕೈಗೊಳ್ಳುತ್ತಿರುವುದನ್ನು ವಿರೋಧಿಸಿದ ಜೈಷ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್, ಮಸೀದಿಗಳು ಹಾಗೂ ನಿಜವಾದ ಮುಸ್ಲಿಮರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕೆಂದು ಎಚ್ಚರಿಕೆ ನೀಡಿದ್ದಾನೆ.
11:41ನಿಮಿಷಗಳ ಆಡಿಯೋ ಕ್ಲಿಪ್ನಲ್ಲಿ ಮಾತನಾಡಿರುವ ಮಸೂದ್ ಅಜರ್ ಭಾರತ, ಪುಲ್ವಾಮಾ ದಾಳಿ ಹಾಗೂ ಪಾಕ್ನಲ್ಲಿರುವ ಪ್ರಗತಿಪರರ ಬಗ್ಗೆಯೂ ಮಾತನಾಡಿದ್ದಾನೆ.
ಮಾಧ್ಯಮಗಳಲ್ಲಿ ಹರಡುತ್ತಿರುವ ತನ್ನ ಸಾವಿನ ಕುರಿತು ಸುಳ್ಳು ಸುದ್ದಿ ಹರಡುತ್ತಿರುವುದರ ಬಗ್ಗೆಯೇ ಮೊದಲು ಮಾತನಾಡಿರುವ ಭಾರತಕ್ಕೆ ಬೇಕಾಗಿರುವ ಉಗ್ರ ಮಸೂದ್ ಅಜರ್, ನಾನು ಇನ್ನೂ ಬದುಕಿದ್ದೇನೆ, ಚೆನ್ನಾಗಿಯೇ ಇದ್ದೇನೆ ಎಂದಿದ್ದಾನೆ.

ಅಲ್ಲದೆ, ಕಾಶ್ಮೀರಿಗಳನ್ನು ಭಾರತದವರು ದಮನ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅಜರ್, ಭಾರತೀಯರ ವಿರುದ್ಧ ಜಿಹಾದ್ ಆರಂಭಿಸಬೇಕೆಂದು ತನ್ನ ಹಿಂಬಾಲಕರಿಗೆ ಕರೆ ನೀಡಿದ್ದಾನೆ.
ಪಾಕ್ ವಿದೇಶಾಂಗ ಸಚಿವ ಶಾಹ್ ಮಹ್ಮೂದ್ ಖುರೇಷಿಯನ್ನು ತರಾಟೆಗೆ ತೆಗೆದುಕೊಂಡ ಜೈಷ್ ಎ ಮೊಹಮ್ಮದ್ ಮುಖ್ಯಸ್ಥ ಉಗ್ರ ಮಸೂದ್ ಅಜರ್, ಅವರು ಒತ್ತಡದಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾನೆ.
ಅಜರ್, ಪಾಕಿಸ್ತಾನದಲ್ಲಿ ಇದ್ದಾನೆ ಎಂದು ಇತ್ತೀಚೆಗೆ ಒಪ್ಪಿಕೊಂಡಿದ್ದ ಪಾಕ್ ವಿದೇಶಾಂಗ ಸಚಿವ, ಅವರಿಗೆ ತೀವ್ರ ಅನಾರೋಗ್ಯವಾಗಿದೆ. ಮನೆಯಿಂದ ಹೊರಬರಲು ಸಹ ಆಗುವುದಿಲ್ಲ ಎಂದಿದ್ದರು.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ಆತ್ಮಾಹುತಿ ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಬಳಿಕ ಭಾರತವು ಪ್ರತಿದಾಳಿಯಾಗಿ ಬಾಲಕೋಟ್ನಲ್ಲಿರುವ ಜೈಷ್ ಸಂಘಟನೆಯ ಅಡಗುತಾಣಗಳ ಮೇಲೆ ಏರ್ಸ್ಟ್ರೈಕ್ ನಡೆಸಿತ್ತು.












Click it and Unblock the Notifications