ಆರ್ಟಿಕಲ್ 370 ಬೆಂಬಲಿಸಿದರೆ ಕೇಸು ಕೈಬಿಡುವುದಾಗಿ ಆಮಿಷ: ಝಕೀರ್ ನಾಯ್ಕ್
ಕೌಲಾಲಂಪುರ, ಜನವರಿ 11: ಭಾರತಕ್ಕೆ ಬೇಕಾಗಿರುವ ಇಸ್ಲಾಂ ಧರ್ಮದ ವಿವಾದಾತ್ಮಕ ಪ್ರಚಾರಕ ಝಕೀರ್ ನಾಯ್ಕ್ ವಿಡಿಯೋ ಬಿಡುಗಡೆ ಮಾಡಿದ್ದು, ವಿಡಿಯೋದಲ್ಲಿ ಭಾರತದ ಕಡೆಯಿಂದ ನನಗೆ ಆಮಿಷ ಒಡ್ಡಲಾಗಿತ್ತು ಎಂದಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಭಾರತದ ಒಬ್ಬ ವಿದೇಶಾಂಗ ಅಧಿಕಾರಿ ನನ್ನನ್ನು ಸಂಪರ್ಕಿಸಿ, 'ಆರ್ಟಿಕಲ್ 370 ಕುರಿತಾಗಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದರೆ ಪ್ರಕರಣಗಳಿಂದ ಖುಲಾಸೆಗೊಳಿಸಿ, ಭಾರತಕ್ಕೆ ಬರಲು ಇರುವ ಅಡೆ-ತಡೆಗಳನ್ನು ತೆಗೆಯುವುದಾಗಿ ಆಮಿಷ ಒಡ್ಡಿದ್ದರು' ಎಂದಿದ್ದಾರೆ.
ಯಾಸಿರ್ ಖಾದಿ ಎಂಬ ಇಸ್ಲಾಂ ಧರ್ಮ ಪ್ರಚಾರಕರ ಫೇಸ್ಬುಕ್ ಪೋಸ್ಟ್ಗೆ ಪ್ರತಿಕ್ರಿಯೆಯಾಗಿ ವಿಡಿಯೋ ಪ್ರಕಟಿಸಿರುವ ಝಕೀರ್ ನಾಯ್ಕ್ ವಿಡಿಯೋದಲ್ಲಿ ಮೇಲ್ಕಂಡ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.

'ಮೋದಿ, ಅಮಿತ್ ಶಾ ಕಡೆಯಿಂದ ನನಗೆ ಆಫರ್ ಬಂದಿತ್ತು. ನಾನು ಆರ್ಟಿಕಲ್ 370 ತೆಗೆದಿದ್ದನ್ನು ಬೆಂಬಲಿಸಿದರೆ ನನಗೆ ಭಾರತಕ್ಕೆ ಪುನಃ ಬರಲು ಮತ್ತು ನನ್ನ ಮೇಲಿರುವ ಕೇಸುಗಳನ್ನು ಹಿಂಪಡೆಯುವ ಆಮೀಷ ನೀಡಲಾಗಿತ್ತು ' ಎಂದಿದ್ದಾರೆ.
ಝಕೀರ್ ನಾಯ್ಕ್ ಹೇಳಿರುವ ಪ್ರಕಾರ, ಅವರನ್ನು ಭೇಟಿ ಮಾಡಿದ ಭಾರತದ ಅಧಿಕಾರಿಗೆ ನೇರವಾಗಿ ಮೋದಿ, ಅಮಿತ್ ಶಾ ಇಂದಲೇ ನಿರ್ದೇಶನ ದೊರೆತಿತ್ತಂತೆ. ಆ ಅಧಿಕಾರಿಯು ಖಾಸಗಿಯಾಗಿ ಭೇಟಿಯಾಗಿ ಆರ್ಟಿಕಲ್ 370 ಗೆ ಬೆಂಬಲ ನೀಡುವ ಬಗ್ಗೆ ಮಾತನಾಡಿದ್ದನೆಂದು ಝಕೀರ್ ಹೇಳಿದ್ದಾರೆ.
ಝಕೀರ್ ನಾಯ್ಕ್ ವಿರುದ್ಧ ದ್ವೇಷ ಭಾಷಣ, ಅಕ್ರಮ ಹಣ ವರ್ಗಾವಣೆ ಪ್ರಕರಣಗಳು ದಾಖಲಾಗಿದ್ದು, ಪೊಲೀಸರಿಗೆ ಬೇಕಾದ ವ್ಯಕ್ತಿ ಆಗಿದ್ದಾರೆ. ಝಕೀರ್ ನಾಯ್ಕ್ ಮಲೇಷ್ಯಾದಲ್ಲಿ ಆಶ್ರಯ ಪಡೆದಿದ್ದಾರೆ.












Click it and Unblock the Notifications