ಕೊರೊನಾವೈರಸ್ ಬಗ್ಗೆ ಭಾರತೀಯರು ಭಯಪಡಬೇಕಿಲ್ಲ ಏಕೆ?
ಬೀಜಿಂಗ್, ಡಿಸೆಂಬರ್ 21: ಚೀನಾದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಸಿಇಒ ಆದರ್ ಪೂನವಾವಾ, ಭಾರತೀಯರು ಈ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಭಾರತದಲ್ಲಿ "ಅತ್ಯುತ್ತಮ ರೀತಿಯಲ್ಲಿ ಕೊರೊನಾವೈರಸ್ ಲಸಿಕೆಯನ್ನು ವಿತರಣೆ ಮಾಡಲಾಗಿದೆ. ಇದರಿಂದ ಜನರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಬುಧವಾರ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಭಾರತೀಯ ಸರ್ಕಾರ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
"ಚೀನಾದಿಂದ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಸುದ್ದಿಗೆ ಸಂಬಂಧಿಸಿದಂತೆ ನಮ್ಮಲ್ಲಿನ ಅತ್ಯುತ್ತಮ ವ್ಯಾಕ್ಸಿನೇಷನ್ ಕವರೇಜ್ ಮತ್ತು ಟ್ರ್ಯಾಕ್ ರೆಕಾರ್ಡ್ ಅನ್ನು ಗಮನಿಸಿದರೆ ನಾವು ಭಯಪಡಬೇಕಾಗಿಲ್ಲ. ನಾವು ಭಾರತ ಸರ್ಕಾರ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಿದರೆ ಸಾಕು," ಎಂದು ಅದರ್ ಪೂನಾವಾಲಾ ಟ್ವೀಟ್ ಮಾಡಿದ್ದಾರೆ.

ಪ್ರತಿನಿತ್ಯ ಚೀನಾದಲ್ಲಿ 2000 ಪ್ರಕರಣಗಳು ವರದಿ
ಹಾಂಗ್ ಕಾಂಗ್ ಪೋಸ್ಟ್ ಪ್ರಕಾರ, ಚೀನಾದಲ್ಲಿ ಪ್ರತಿನಿತ್ಯ 2000ಕ್ಕೂ ಹೆಚ್ಚು ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಖಾತ್ರಿಯಾಗಿದೆ. ಈ ಹಂತದಲ್ಲಿ ಚೀನಾದ ಜನರು ತಮ್ಮ ಸುತ್ತಲೂ ಅಸಂಖ್ಯಾತ ಕೋವಿಡ್-19 ಸೋಂಕಿತರನ್ನು ಹೊಂದಿದ್ದಾರೆ. ಅಧಿಕೃತ ಎಣಿಕೆಯಲ್ಲಿ ಮಾತ್ರ ಅಂಕಿ-ಸಂಖ್ಯೆಗಳು ಕಡಿಮೆ ಗೋಚರಿಸುತ್ತಿವೆ ಎಂದು ಅದರ್ ಪೂನಾವಾಲಾ ತಿಳಿಸಿದ್ದಾರೆ. ಅದರ್ ಪೂನಾವಾಲಾ, ಭಾರತದಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸುವ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆಗಿದ್ದಾರೆ.

ಚೀನಾದ ಕೋವಿಡ್ ಲಸಿಕೆ ಅಷ್ಟು ಪರಿಣಾಮಕಾರಿಯಾಗಿಲ್ಲ
ಚೀನಾದಲ್ಲಿ ಕೋವಿಡ್ -19 ಪ್ರಕರಣಗಳ ಉಲ್ಬಣದ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾಜಿ ಭಾರತೀಯ ರಾಜತಾಂತ್ರಿಕ ಕೆಪಿ ಫ್ಯಾಬಿಯನ್, "ಚೀನಾದ ಶೇ.60ರಷ್ಟು ಮತ್ತು ವಿಶ್ವದ ಜನಸಂಖ್ಯೆಯಲ್ಲಿ ಶೇ.10ರಷ್ಟು ಜನರು ಕೋವಿಡ್ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ. ಲಕ್ಷಾಂತರ ಜನರು ಸಾಯಬಹುದು," ಎಂದು ಎಚ್ಚರಿಕೆ ನೀಡಿದ್ದಾರೆ.
ಕೊರೊನಾವೈರಸ್ ಪ್ರಕರಣಗಳಲ್ಲಿ ಭಾರಿ ಏರಿಕೆಯನ್ನು ನಿರೀಕ್ಷಿಸುತ್ತಿರುವ ಚೀನಾದ ಕುರಿತು ಮಾತನಾಡಿದ ಅವರು, " ವಿಶ್ವದ ಜನಸಂಖ್ಯೆಯಲ್ಲಿ ಶೇ.10 ಪರ್ಸೆಂಟ್ ಅಂದರೆ 8 ಬಿಲಿಯನ್ ಅಂದರೆ 800 ಮಿಲಿಯನ್ ಮಂದಿಗೆ ಕೋವಿಡ್-19 ಸೋಂಕು ತಗುಲುವ ಸಾಧ್ಯತೆಯಿದೆ. ಈ ಪೈಕಿ ಲಕ್ಷಾಂತರ ಜನರು ಸಾವಿನ ಮನೆ ಸೇರುವ ಅಪಾಯವೂ ಇದೆ. ಈಗ ಇದನ್ನು ಹೇಳುವುದು ಸರಿಯೋ ತಪ್ಪೋ ಎಂದು ಸ್ಪಷ್ಟಪಡಿಸುವ ಪರಿಣಿತಿ ನನಗಿಲ್ಲ, ಅದನ್ನು ಹೇಳಲು ನಾನು ಬಯಸುವುದಿಲ್ಲ. ಆದರೆ ಚೀನಾದ ಸದ್ಯದ ಪರಿಸ್ಥಿತಿಯನ್ನು ನೋಡಿದಾಗ ಹಾಗೆ ಗೋಚರಿಸುತ್ತಿದೆ. ಕೋವಿಡ್-19 ನಿರ್ವಹಣೆಯಲ್ಲಿ ಏನೋ ದೋಷವಾಗಿದೆ. ಚೀನಾದಲ್ಲಿನ ಲಸಿಕೆಯು ಅಷ್ಟು ಪರಿಣಾಮಕಾರಿಯಾಗಿಲ್ಲ," ಎಂದರು.

ಹೊಸ ರೂಪಾಂತರ ಪತ್ತೆಗಾಗಿ ಪ್ರಯೋಗಾಲಯಕ್ಕೆ ಮಾದರಿ
ಕೆಲವು ದೇಶಗಳಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಂಗಳವಾರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂದೇಶವನ್ನು ರವಾನಿಸಲಾಗಿದೆ. ಎಲ್ಲಾ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಮಾದರಿಗಳನ್ನು INSACOG ಲ್ಯಾಬ್ಗಳಿಗೆ ಕಳುಹಿಸಲಾಗಿದೆ. ಈ ಮಾದರಿಯ ಮೂಲಕ ಹೊಸ ರೂಪಾಂತರಗಳನ್ನು ಪತ್ತೆಹಚ್ಚಲು ಕಳುಹಿಸಲು ವಿನಂತಿಸಿದೆ. ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ಮತ್ತು INSACOG ಸದ್ಯದ ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇರಿಸಿದೆ.

ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕೊರೊನಾವೈರಸ್ ಹಠಾತ್ ಏರಿಕೆ
"ಜಪಾನ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ರಿಪಬ್ಲಿಕ್ ಆಫ್ ಕೊರಿಯಾ, ಬ್ರೆಜಿಲ್ ಮತ್ತು ಚೀನಾದಲ್ಲಿ ಕಂಡುಬರುವ ಹಠಾತ್ ಪ್ರಕರಣಗಳ ದೃಷ್ಟಿಯಿಂದ SARS ಮೂಲಕ ರೂಪಾಂತರಗಳನ್ನು ಪತ್ತೆಹಚ್ಚಲು ಸಕಾರಾತ್ಮಕ ಪ್ರಕರಣಗಳ ಮಾದರಿಗಳ ಸಂಪೂರ್ಣ ಜೀನೋಮ್ ಅನುಕ್ರಮವನ್ನು ಸಜ್ಜುಗೊಳಿಸುವುದು ಅತ್ಯಗತ್ಯವಾಗಿದೆ," ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
"ಅಂತಹ ಪ್ರಯೋಗಗಳು ಹೊಸ ರೂಪಾಂತರಗಳನ್ನು ಸಮಯೋಚಿತವಾಗಿ ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ. ಯಾವುದಾದರೂ ಇದ್ದರೆ, ದೇಶದಲ್ಲಿ ಪರಿಚಲನೆಯಾಗುತ್ತದೆ ಮತ್ತು ಅದಕ್ಕಾಗಿ ಅಗತ್ಯವಾದ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ," ಎಂದು ತಿಳಿಸಿದರು.












Click it and Unblock the Notifications