ಮುಸುಕು ಧರಿಸಿದ ಮಹಿಳೆಗೆ ಪ್ರವೇಶ ನಿರಾಕರಿಸಿದ ಬಹ್ರೇನ್ನ ಭಾರತೀಯ ರೆಸ್ಟೋರೆಂಟ್ ಈಗ ಬಂದ್
ಬಹ್ರೇನ್, ಮಾರ್ಚ್ 27: ಮುಸುಕು ಧರಿಸಿದ ಮಹಿಳೆಗೆ ಪ್ರವೇಶವನ್ನು ನಿರಾಕರಿಸಿದ ಆರೋಪದ ಮೇಲೆ ಬಹ್ರೇನ್ನ ಅಧಿಕಾರಿಗಳು ಬಹ್ರೇನ್ನಲ್ಲಿನ ಭಾರತೀಯ ರೆಸ್ಟೋರೆಂಟ್ ಅನ್ನು ಮುಚ್ಚಿದ್ದಾರೆ ಎಂದು ಸುದ್ದಿ ವೆಬ್ಸೈಟ್ ಜಿಡಿಎನ್ ಆನ್ಲೈನ್ ವರದಿ ಮಾಡಿದೆ.
ಬಹ್ರೇನ್ ಪ್ರವಾಸೋದ್ಯಮ ಮತ್ತು ವಸ್ತುಪ್ರದರ್ಶನ ಪ್ರಾಧಿಕಾರವು ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ. ಬಹ್ರೇನ್ನ ರಾಜಧಾನಿ ಮನಾಮಾದ ಅದ್ಲಿಯಾ ಪ್ರದೇಶದಲ್ಲಿರುವ ಲ್ಯಾಂಟರ್ನ್ಸ್ ರೆಸ್ಟೋರೆಂಟ್ನಲ್ಲಿ ಈ ಘಟನೆ ನಡೆದಿದೆ ಎಂದು ವರದಿ ಉಲ್ಲೇಖ ಮಾಡಿದೆ.
'ಸೀರೆ ಹಾಕಿದವರು ಬರಬೇಡಿ' ಎಂದಿದ್ದ ರೆಸ್ಟೋರೆಂಟ್ ಈಗ ಬಂದ್ಗೆ ಸೂಚನೆ!
ದೇಶದ ಕಾನೂನುಗಳನ್ನು ಉಲ್ಲಂಘಿಸುವ ನೀತಿಗಳನ್ನು ಜಾರಿಗೊಳಿಸುವುದನ್ನು ರೆಸ್ಟೋರೆಂಟ್ಗಳು ತಪ್ಪಿಸಬೇಕು ಎಂದು ಬಹ್ರೇನ್ನ ಅಧಿಕಾರಿಗಳು ಸೂಚನೆ ನೀಡಿ ಈ ಬಹ್ರೇನ್ನಲ್ಲಿನ ಭಾರತೀಯ ರೆಸ್ಟೋರೆಂಟ್ ಅನ್ನು ಮುಚ್ಚಿದ್ದಾರೆ ಎಂದು ದಿ ಡೈಲಿ ಟ್ರಿಬ್ಯೂನ್ ವರದಿ ಹೇಳಿದೆ.
"ಜನರ ನಡುವೆ ತಾರತಮ್ಯ ಮಾಡುವ ಎಲ್ಲಾ ಕ್ರಮಗಳನ್ನು ನಾವು ತಿರಸ್ಕರಿಸುತ್ತೇವೆ, ವಿಶೇಷವಾಗಿ ಅವರ ರಾಷ್ಟ್ರೀಯ ಗುರುತಿನ ಬಗ್ಗೆ ತಾರತಮ್ಯ ಮಾಡುವುದನ್ನು ನಾವು ಸಹಿಸಲಾರೆವು," ಎಂದು ಬಹ್ರೇನ್ ಪ್ರವಾಸೋದ್ಯಮ ಮತ್ತು ವಸ್ತುಪ್ರದರ್ಶನ ಪ್ರಾಧಿಕಾರವು ತಿಳಿಸಿದೆ. ಪ್ರವಾಸೋದ್ಯಮ-ಸಂಬಂಧಿತ ಸಂಸ್ಥೆಗಳಿಗೆ ಸಂಬಂಧಿಸಿದ 1986 ರ ಡಿಕ್ರಿ ಕಾನೂನು ಸಂಖ್ಯೆ 15 ರ ಪ್ರಕಾರ ರೆಸ್ಟೋರೆಂಟ್ ಅನ್ನು ಮುಚ್ಚಲಾಗಿದೆ ಎಂದು ಬಹ್ರೇನ್ ಪ್ರವಾಸೋದ್ಯಮ ಮತ್ತು ವಸ್ತುಪ್ರದರ್ಶನ ಪ್ರಾಧಿಕಾರವು ಸೇರಿಸಿದೆ.
ಮಹಿಳೆಗೆ ಪ್ರವೇಶ ನಿರಾಕರಿಸಿದ್ದ ಭಾರತೀಯ ರೆಸ್ಟೋರೆಂಟ್
ಗುರುವಾರ ಬಹ್ರೇನ್ನಲ್ಲಿನ ಭಾರತೀಯ ರೆಸ್ಟೋರೆಂಟ್ ಲ್ಯಾಂಟರ್ನ್ಸ್ ಮಹಿಳೆಯೊಬ್ಬರನ್ನು ರೆಸ್ಟೋರೆಂಟ್ಗೆ ಪ್ರವೇಶ ಮಾಡುವುದಕ್ಕೆ ಅವಕಾಶ ನೀಡಿಲ್ಲ. ಮಹಿಳೆ ಮುಸುಕು ಧರಿಸಿದ್ದ ಕಾರಣಕ್ಕೆ ಈ ಮಹಿಳೆಗೆ ಈ ರೆಸ್ಟೋರೆಂಟ್ನಲ್ಲಿ ಅವಕಾಶ ನೀಡಿಲ್ಲ ಎಂದು ವರದಿ ಹೇಳಿದೆ. ಈ ಕಾರಣದಿಂದಾಗಿ ಈ ರೆಸ್ಟೋರೆಂಟ್ ಅನ್ನು ಈಗ ಮುಚ್ಚಲಾಗಿದೆ.
ಲ್ಯಾಂಟರ್ನ್ಗೆ ಎಲ್ಲರಿಗೂ ಸ್ವಾಗತ
ಈ ನಡುವೆ "ಸುಂದರವಾದ ಬಹ್ರೇನ್ನಲ್ಲಿ 35 ವರ್ಷಗಳಿಂದ ನಾವು ಎಲ್ಲಾ ರಾಷ್ಟ್ರೀಯತೆಗಳಿಗೆ ಸೇವೆ ಸಲ್ಲಿಸುತ್ತಿದ್ದೇವೆ. ಲ್ಯಾಂಟರ್ನ್ಗೆ ಎಲ್ಲರಿಗೂ ಸ್ವಾಗತವಿದೆ," ಎಂದು ರೆಸ್ಟೋರೆಂಟ್ ಇನ್ಸ್ಟಾಗ್ರಾಮ್ನಲ್ಲಿ ತಿಳಿಸಿದೆ. ಮಾರ್ಚ್ 29 ರಂದು ವಿಶೇಷ ಆಹಾರ ಸೇವನೆ ಮಾಡಲು ಜನರು ಆಗಮಿಸಿ ಎಂದು ರೆಸ್ಟೋರೆಂಟ್ ಆಹ್ವಾನವನ್ನು ಕೂಡಾ ನೀಡಿದೆ.
ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿರುವ ನಡುವೆಯೇ ಬಹ್ರೇನ್ನಲ್ಲಿ ಈ ಘಟನೆ ನಡೆದಿದೆ. ಫೆಬ್ರವರಿಯಲ್ಲಿ ಹಲವಾರು ವಾರಗಳವರೆಗೆ ಮುಸ್ಲಿಂ ವಿದ್ಯಾರ್ಥಿನಿಯರು ತಮಗೆ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ಹೇಳಿದರೆ, ಇನ್ನೊಂದೆಡೆ ಹಿಜಾಬ್ ಧರಿಸಿದರೆ ನಾವು ಕೇಸರಿ ಶಾಲು ಧರಿಸುತ್ತೇವೆ ಎಂದು ಹೇಳಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ್ದರು. ಈ ಬೆನ್ನಲ್ಲೇ ಹಿಜಾಬ್ ಅನ್ನು ಶಾಲಾ ವಾತಾವರಣದಲ್ಲಿ ನಿಷೇಧ ಮಾಡಲಾಗಿದೆ. ಹೈಕೋರ್ಟ್ ಸರ್ಕಾರದ ಈ ಆದೇಶವನ್ನು ಎತ್ತಿ ಹಿಡಿದಿದೆ.