ರಷ್ಯಾದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್!
ರಷ್ಯಾ ಮತ್ತು ಉಕ್ರೇನ್ ನಡುವೆ ಭೀಕರ ಯುದ್ಧ ನಡೆಯುವ ಸಮಯದಲ್ಲಿ, ಭಾರತದಿಂದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ರಷ್ಯಾಗೆ ತೆರಳಿದ್ದಾರೆ. ಹಾಗಾದ್ರೆ ವಿದೇಶಾಂಗ ಸಚಿವರಾದ ಎಸ್.ಜೈಶಂಕರ್ ದಿಢೀರ್ ರಷ್ಯಾಗೆ ಹಾರಿದ್ದು ಏಕೆ? ಭಾರತ & ರಷ್ಯಾ ನಡುವೆ ಏನೆಲ್ಲಾ ಮಹತ್ವದ ಮಾತುಕತೆ ನಡೆಯಬಹುದು? ಸಂಪೂರ್ಣ ಮಾಹಿತಿಗೆ ತಿಳಿಯೋಣ ಬನ್ನಿ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದ ನಂತರ ಅಮೆರಿಕ ನೂರಾರು ಕಾನೂನು ಹೇರಿದ್ದು, ರಷ್ಯಾಗೆ ಉಸಿರು ಬಿಗಿ ಹಿಡಿದಂತಾಗಿದೆ. ಪರಿಸ್ಥಿತಿ ಹೀಗಿದ್ದಾಗ ಭಾರತದ ಸರ್ಕಾರ ರಷ್ಯಾ ನೆರವಿಗೆ ನಿಲ್ಲುತ್ತಿದೆ. ಅದರಲ್ಲೂ ರಷ್ಯಾದ ತೈಲವನ್ನು ಭಾರಿ ಪ್ರಮಾಣದಲ್ಲಿ ಖರೀದಿ ಮಾಡಿ, ಅದು ಯುರೋಪ್ಗೆ ತಲುಪುವಂತೆ ಮಾಡುತ್ತಿರುವುದು ಭಾರತ. ಹೀಗಾಗಿ ಭಾರತದ ಜೊತೆ ರಷ್ಯಾ ಉತ್ತಮ ಸಂಬಂಧ ಹೊಂದಲು ನೋಡುತ್ತಿದೆ. ಈ ವಾತಾವರಣದಲ್ಲಿ ದಿಢೀರ್ ವಿದೇಶಾಂಗ ಸಚಿವ ಎಸ್.ಜೈಶಂಕರ್ ರಷ್ಯಾಗೆ ಹಾರಿದ್ದಾರೆ.

ಅಂದಹಾಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾದ ಜೈಶಂಕರ್ 5 ದಿನಗಳ ರಷ್ಯಾದ ಪ್ರವಾಸಕ್ಕೆ ಮಾಸ್ಕೋಗೆ ಹಾರಿದ್ದಾರೆ. ಈ ಪ್ರವಾಸ ಸಂದರ್ಭದಲ್ಲಿ ಅವರು ರಷ್ಯಾ ವಿದೇಶಾಂಗ ವ್ಯವಹಾರಗಳ ಸಚಿವರ ಜೊತೆಯಲ್ಲಿ ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚೆ ಮಾಡಲಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ವಾಣಿಜ್ಯ, ಇಂಧನ, ರಕ್ಷಣೆ ಮತ್ತು ಸಂಪರ್ಕ ವಿಚಾರಗಳ ಬಗ್ಗೆ ಎರಡು ದೇಶದ ನಾಯಕರು ಚರ್ಚೆ ನಡೆಸಬಹುದು ಎಂದು ನಿರೀಕ್ಷಿಸಲಾಗಿದೆ. ರಷ್ಯಾ ಉಪ ಪ್ರಧಾನಿ ಹಾಗೂ ಕೈಗಾರಿಕೆ & ವಾಣಿಜ್ಯ ಸಚಿವರನ್ನ ಕೂಡ ಜೈಶಂಕರ್ ಅವರೀಗ ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.
ಯುದ್ಧದ ಸಮಯದಲ್ಲಿ ಪಕ್ಕಾ ನಿರ್ಧಾರ!
ಜಗತ್ತು ಈಗ 2 ಭಾಗವಾಗಿ ಹೋಗಿದ್ದು ಹಲವು ದೇಶಗಳು ಅಮೆರಿಕ ಪರವಾಗಿ ನಿಂತುಬಿಟ್ಟಿದ್ದು, ಇನ್ನೂ ಕೆಲವು ದೇಶಗಳು ರಷ್ಯಾ ಪರವಾಗಿ ನಿಂತಿವೆ. ಆದರೆ ಇದೇ ಸಮಯದಲ್ಲಿ ಭಾರತ ಮಾತ್ರ ಜಾಣ ನಡೆ ಮುಂದಿಟ್ಟಿದೆ. ಅತ್ತ ಅಮೆರಿಕ ಪರವೂ ಉತ್ತಮ ಸಂಬಂಧ ಉಳಿಸಿಕೊಂಡು ಮತ್ತೊಂದು ಕಡೆ ರಷ್ಯಾ ಜೊತೆಗೂ ಸ್ನೇಹ ಉಳಿಸಿಕೊಂಡಿದೆ. ಹೀಗಾಗಿ ರಷ್ಯಾ ಕೂಡ ಈಗ ಭಾರತದ ಜೊತೆಗೆ ಸಂಬಂಧ ಮತ್ತಷ್ಟು ಗಟ್ಟಿಗೊಳಿಸಲು ಯತ್ನಿಸುತ್ತಿದೆ. ಹೀಗಾಗಿ ಭಾರತವು ಈ ವಿಚಾರದಲ್ಲಿ ದೇಶದ ಹಿತಾಸಕ್ತಿಯನ್ನ ಕಾಪಾಡುತ್ತಾ, ಯುದ್ಧವನ್ನು ವಿರೋಧಿಸುತ್ತಿದೆ.
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ ಯುದ್ಧ ಯಾರ ಯಾರ ನಡುವೆಯಾದ್ರೂ ನಡೆಯುತ್ತಿರಲಿ. ಆದರೆ ಭಾರತ ಮಾತ್ರ ಉತ್ತಮವಾದ ನಿರ್ಧಾರ ಕೈಗೊಂಡಿದೆ ಎನ್ನುವುದು ತಜ್ಞರ ಅಭಿಪ್ರಾಯ. ಅದರಲ್ಲೂ ಅಮೆರಿಕ VS ರಷ್ಯಾ ನಡುವೆ ಕಿತ್ತಾಟ ನಡೆಯುವಾಗ ಭಾರತ ಎರಡೂ ದೇಶಗಳ ಸಂಬಂಧ ಸರಿದೂಗಿಸುತ್ತಿರುವುದು ವಿಶೇಷ. ಇದರ ಭಾಗವಾಗಿ ಇದೀಗ ಭಾರತದ ವಿದೇಶಾಂಗ ಸಚಿವರು ರಷ್ಯಾಗೆ ತೆರಳಿದ್ದಾರೆ ಎಂಬ ಮಾತು ಓಡಾಡುತ್ತಿದ್ದು. ಭಾರತ & ರಷ್ಯಾ ನಡುವೆ ಸಂಬಂಧ ಮತ್ತಷ್ಟು ಗಟ್ಟಿಯಾಗುವ ನಿರೀಕ್ಷೆ ದಟ್ಟವಾಗಿದೆ.












Click it and Unblock the Notifications