ಯುದ್ಧ ಸಂಕಷ್ಟದಲ್ಲಿರುವ ಉಕ್ರೇನ್ ಜನರ ಪರ ನಿಂತ ಭಾರತ!
ರಷ್ಯಾ ಮತ್ತು ಉಕ್ರೇನ್ ಯುದ್ಧ ದಿನದಿಂದ ಭೀಕರವಾಗುತ್ತಿದೆ. ಅದರಲ್ಲೂ ಉಕ್ರೇನ್ ಸೇನೆ ತನ್ನ ಮೇಲೆ ಪದೇ ಪದೆ ದಾಳಿ ಮಾಡಿದ ನಂತರ ರಷ್ಯಾ ರೊಚ್ಚಿಗೆದ್ದಿದೆ. ಇದೇ ಕಾರಣಕ್ಕೆ ತಾನು ನೀಡಿದ್ದ ಹಲವು ಒಪ್ಪಿಗೆಗಳನ್ನು ರಷ್ಯಾ ಹಿಂದಕ್ಕೆ ಪಡೆದಿದೆ. ಪ್ರಮುಖವಾಗಿ ಅಲ್ಲಿನ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಗೂ ಸಮಸ್ಯೆಯಾಗುತ್ತಿದೆ. ಆದರೆ ಈ ಹೊತ್ತಲ್ಲೇ ಭಾರತ ಮಾನವೀಯ ಮೌಲ್ಯ ಪ್ರತಿಪಾದಿಸಿದ್ದು, ಉಕ್ರೇನ್ ಪರ ವಿಶ್ವಸಂಸ್ಥೆಯಲ್ಲಿ ಧ್ವನಿ ಎತ್ತಿದೆ.
ಅಂದಹಾಗೆ ಉಕ್ರೇನ್ನಿಂದ ಕಪ್ಪು ಸಮುದ್ರದ ಮಾರ್ಗವಾಗಿ ಹಡುಗುಗಳ ಮೂಲಕ ಆಫ್ರಿಕಾ & ಮಧ್ಯಪ್ರಾಚ್ಯ ಸೇರಿ, ಏಷ್ಯಾದ ದೇಶಗಳಿಗೆ ಆಹಾರ ಧಾನ್ಯಗಳ ಸಾಗಾಟಕ್ಕೆ ನೀಡಿದ್ದ ಅನುಮತಿ ರದ್ದಾಗಿದೆ. ಉಕ್ರೇನ್ ವಿರುದ್ಧ ರಷ್ಯಾ ಇಂತಹ ಕಠಿಣ ನಿಲುವು ತೆಗೆದುಕೊಂಡಿದೆ. ಆದರೆ ಈ ಹೊತ್ತಲ್ಲಿ ಯುದ್ಧಕಾಲದ ಒಪ್ಪಂದ ಮುಂದುವರಿಸುವಲ್ಲಿ ವಿಶ್ವಸಂಸ್ಥೆ ಮಧ್ಯಸ್ಥಿಕೆ ಕುರಿತು ಭಾರತ ಬೆಂಬಲ ವ್ಯಕ್ತಪಡಿಸಿದೆ. ಉಕ್ರೇನ್ ಬಂದರಿಂದ ಆಹಾರ ಧಾನ್ಯ ಹಾಗೂ ರಸಗೊಬ್ಬರ ರಫ್ತಿಗೆ ಅವಕಾಶ ನೀಡುವ ಮಧ್ಯಸ್ಥಿಕೆ ಒಪ್ಪಂದ ರದ್ದುಪಡಿಸುವುದಾಗಿ ರಷ್ಯಾ ಘೋಷಿಸಿತ್ತು. ರಷ್ಯಾ ಘೋಷಣೆ ಬೆನ್ನಲ್ಲೇ ಭಾರತ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದಿದೆ. ರಷ್ಯಾದ ಜೊತೆ ಭಾರತ ಉತ್ತಮ ಒಡನಾಟ ಹೊಂದಿದ್ದರೂ ಮಾನವೀಯ ಮೌಲ್ಯ ಪ್ರತಿಪಾದಿಸಿದೆ.

ಸಂಕಷ್ಟದಲ್ಲಿ ಉಕ್ರೇನ್ ಬೆನ್ನಿಗೆ ಭಾರತ!
ಇನ್ನು ವಿಶ್ವಸಂಸ್ಥೆಯಲ್ಲಿ ನಡೆದ ಉಕ್ರೇನ್ನ ತಾತ್ಕಾಲಿಕ ಆಕ್ರಮಿತ ಪ್ರದೇಶಗಳ ಸ್ಥಿತಿಗತಿ ಕುರಿತ ವಾರ್ಷಿಕ ಚರ್ಚೆಯಲ್ಲಿ ಭಾರತದ ಪ್ರತಿನಿಧಿ ಮಾತನಾಡಿದರು. ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಆಗಿರುವ ರುಚಿರಾ ಕಾಂಬೋಜ್, ಉಕ್ರೇನ್ ಪರಿಸ್ಥಿತಿ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸುತ್ತಾ ಬಂದಿದೆ. ಈ ಯುದ್ಧದಿಂದ ಹಲವರು ಪ್ರಾಣ ಕಳೆದುಕೊಂಡಿದ್ದು ಮಕ್ಕಳು ಮತ್ತು ವೃದ್ಧರು ಸೇರಿ ಅಸಂಖ್ಯಾತ ಜನ ನೆರೆ ದೇಶಗಳಲ್ಲಿ ಆಶ್ರಯ ಪಡೆಯುವ ಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈಗ ಉದ್ಭವಿಸಿರುವ ಬಿಕ್ಕಟ್ಟಿಗೆ ಶೀಘ್ರವೇ ಪರಿಹಾರ ಸಿಗುವ ಭರವಸೆ ಕೂಡ ವ್ಯಕ್ತವಾಗಿದೆ. ಈ ಮೂಲಕ ಭಾರತವು ಜಗತ್ತಿಗೆ ಮಾದರಿಯಾಗುವ ಕೆಲಸವನ್ನ ಮತ್ತೊಮ್ಮೆ ಮಾಡಿದೆ.
ಮಹಾಯುದ್ಧದ ರೂಪ ಪಡೆದ ವಾರ್!
ಕೋಳಿ ಜಗಳದಂತೆ ಶುರುವಾಗುವ ಅದೆಷ್ಟೋ ಕಿತ್ತಾಟಗಳೇ ಮುಂದೆ ವಿನಾಶ ತಂದುಬಿಡುತ್ತವೆ. 1ನೇ ಮಹಾಯುದ್ಧ & 2ನೇ ಮಹಾಯುದ್ಧಗಳು ಶುರುವಾಗಿದ್ದು ಕೂಡ ಹೀಗೆ. ಆದರೆ ಈ ಎರಡೂ ಯುದ್ಧಗಳಲ್ಲಿ ಕೋಟಿ ಕೋಟಿ ಜನ ಪ್ರಾಣಬಿಟ್ಟರು. ಅದ್ರಲ್ಲೂ 2ನೇ ಮಹಾಯುದ್ಧ ವಿನಾಶದಲ್ಲೇ ಅತಿ ವಿನಾಶಕ ಎನಿಸಿಕೊಂಡಿತು. ಹೀಗಾಗಿ ಮುಂದೆ ಮತ್ತೆಂದೂ ಮಹಾಯುದ್ಧ ನಡೆಯಲ್ಲ ಎಂಬ ನಂಬಿಕೆ ಇರುವಾಗಲೇ ಸಣ್ಣ ಜಗಳವಾಗಿದ್ದ ರಷ್ಯಾ & ಉಕ್ರೇನ್ ಯುದ್ಧವು ಭೀಕರವಾಗುತ್ತಿದೆ. ಅದರಲ್ಲೂ ಒಂದು ಕಡೆ ಪಾಶ್ಚಿಮಾತ್ಯರು ಹಾಗೇ ಇನ್ನೊಂದು ಕಡೆ ರಷ್ಯಾ ನಡುವೆ ಘನಘೋರ ಕಾಳಗ ಸದ್ದೇ ಇಲ್ಲದೆ ಶುರುವಾಗಿಬಿಟ್ಟಿದೆ.

ಲಕ್ಷ ಲಕ್ಷ ಕೋಟಿ ನೆರವು!
ರಷ್ಯಾ ವಿರುದ್ಧ ಹೋರಾಡಲು ಅಮೆರಿಕ ಶಸ್ತ್ರಾಸ್ತ್ರಗಳನ್ನ ಉಕ್ರೇನ್ಗೆ ಕಳುಹಿಸುತ್ತಿದೆ. ಉಕ್ರೇನ್ ಮೇಲೆ ರಷ್ಯಾದ ಸೇನೆ ಆಕ್ರಮಣ ಆರಂಭಿಸಿದ ಬಳಿಕ ಅಮೆರಿಕ ಭಾರಿ ನೆರವು ನೀಡ್ತಿದೆ. ರಷ್ಯಾ ದೀರ್ಘಕಾಲದ ಯುದ್ಧಕ್ಕೆ ಸಿದ್ಧವಾಗಿ ಬಂದಿದೆ. ರಷ್ಯಾ ಅಧ್ಯಕ್ಷ ಪುಟಿನ್ರ ಆಪ್ತರೇ ಈ ಮಾಹಿತಿ ನೀಡಿದ್ದರು. ಮುಂದಿನ 10 ವರ್ಷಗಳಲ್ಲೂ ರಷ್ಯಾ & ಉಕ್ರೇನ್ ಯದ್ಧ ನಿಲ್ಲಲ್ಲ ಎಂದಿದ್ದರು. ಹೀಗೆ ಅಮೆರಿಕಗೆ ಕೂಡ ತನ್ನ ತಂತ್ರಗಳಲ್ಲಿ ಫ್ಲಾಪ್ ಆಗುತ್ತಿದ್ದಿದ್ದು ಗೊತ್ತಾಗಿದೆ. ಈ ಕಾರಣಕ್ಕೆ ಅಮೆರಿಕ & ನ್ಯಾಟೋ ಪಡೆಗಳು ಕೂಡ ರಷ್ಯಾ ವಿರುದ್ಧ ದೀರ್ಘ ಕಾಲದ ಯುದ್ಧಕ್ಕೆ ಸನ್ನದ್ಧವಾಗಿ ಉಕ್ರೇನ್ ಪರ ನಿಲ್ಲುತ್ತಿವೆ. ಆದರೆ ಭಾರತ ಮಾತ್ರ ಸಂಕಷ್ಟದಲ್ಲಿರುವ ಉಕ್ರೇನ್ ಜನರ ಪರ ಮಾತನಾಡುವ ಮೂಲಕ, ಮಾನವೀಯ ಮೌಲ್ಯ ಪ್ರತಿಪಾದಿಸಿದೆ. ಆದರೆ ವಿಶ್ವಸಂಸ್ಥೆಯ ಮಧ್ಯಸ್ಥಿತಿಕೆ ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕು.












Click it and Unblock the Notifications