ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ವಿಶ್ವಸಂಸ್ಥೆಯಲ್ಲಿ ಕಾಳಜಿ ತೋರಿದ ಭಾರತ
ನ್ಯೂಯಾರ್ಕ್, ಸೆಪ್ಟೆಂಬರ್ 23: ರಷ್ಯಾ-ಉಕ್ರೇನ್ ಯುದ್ಧದ ಕುರಿತು ಹೇಳಿಕೆ ನೀಡಿರುವ ಭಾರತವು ಬಲವಾದ ಸಶಸ್ತ್ರ ಸಂಘರ್ಷವನ್ನು ಕೊನೆಗೊಳಿಸುವಂತೆ ಕರೆ ನೀಡಿದ್ದು, ಪರಿಸ್ಥಿತಿಯ ಬಗ್ಗೆ ಕಾಳಜಿಯನ್ನು ತೋರಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, "ಉಕ್ರೇನ್ ಸಂಘರ್ಷದ ಪಥವು ಇಡೀ ಅಂತರರಾಷ್ಟ್ರೀಯ ಸಮುದಾಯಕ್ಕೆ ಕಳವಳಕಾರಿ ವಿಷಯವಾಗಿದೆ. ಇಂಥ ದೃಷ್ಟಿಕೋನವು ನಿಜವಾಗಿಯೂ ಗೊಂದಲದ ಸಂಗತಿಯಾಗಿದೆ," ಎಂದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಉನ್ನತ ಮಟ್ಟದ 77 ನೇ ಅಧಿವೇಶನಕ್ಕಾಗಿ ವಿಶ್ವ ನಾಯಕರು ಯುಎನ್ ಪ್ರಧಾನ ಕಛೇರಿಯಲ್ಲಿ ಜಮಾಯಿಸಿದಾಗ ಯುರೋಪ್ ಮತ್ತು ವಿದೇಶಾಂಗ ವ್ಯವಹಾರಗಳ ಫ್ರೆಂಚ್ ಸಚಿವ ಕ್ಯಾಥರೀನ್ ಕೊಲೊನ್ನಾ ಅವರ ಅಧ್ಯಕ್ಷತೆಯಲ್ಲಿ 15 ಸದಸ್ಯರು ಮಾತನಾಡಿದರು.
ರಷ್ಯಾದಲ್ಲಿ ಸೇನೆ ಸಜ್ಜುಗೊಳಿಸಿದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
"ಭಾರತವು ಎಲ್ಲಾ ಯುದ್ಧಗಳನ್ನು ತಕ್ಷಣವೇ ನಿಲ್ಲಿಸುವ ಮತ್ತು ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಮರಳುವ ಅಗತ್ಯವನ್ನು ಬಲವಾಗಿ ಪುನರುಚ್ಚರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದಂತೆ ಇದು ಯುದ್ಧದ ಯುಗವಾಗಿರಲು ಸಾಧ್ಯವಿಲ್ಲ," ಎಂದು ಜೈಶಂಕರ್ ಪುನರುಚ್ಛರಿಸಿದರು. ಪ್ರಾದೇಶಿಕ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಪ್ರಧಾನಿ ಮೋದಿ ಇದೇ ಸಂದೇಶವನ್ನು ನೀಡಿದ್ದರು.
ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಗೆ ಸಮರ್ಥನೆಯಿಲ್ಲ:
ಯುದ್ಧದ ಸಂದರ್ಭಗಳಲ್ಲಿ ಸಹ ಮಾನವ ಹಕ್ಕುಗಳ ಅಥವಾ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಗೆ ಯಾವುದೇ ಸಮರ್ಥನೆ ಇರುವುದಿಲ್ಲ. ಅಂತಹ ಯಾವುದೇ ಕೃತ್ಯಗಳು ಸಂಭವಿಸಿದಾಗ ಅವುಗಳನ್ನು ವಸ್ತುನಿಷ್ಠ ಮತ್ತು ಸ್ವತಂತ್ರ ರೀತಿಯಲ್ಲಿ ತನಿಖೆ ನಡೆಸುವುದು ಕಡ್ಡಾಯವಾಗಿದೆ, "ಎಂದು ಡಾ ಜೈಶಂಕರ್ ಹೇಳಿದರು. ಜಾಗತೀಕರಣಗೊಂಡ ಜಗತ್ತಿನಲ್ಲಿ ಸಂಘರ್ಷದ ಪರಿಣಾಮ ದೂರದ ಪ್ರದೇಶಗಳಲ್ಲಿಯೂ ಕಂಡುಬರುತ್ತಿದೆ ಎಂದು ಡಾ.ಜೈಶಂಕರ್ ಕೌನ್ಸಿಲ್ಗೆ ತಿಳಿಸಿದರು. "ನಾವೆಲ್ಲರೂ ಅದರ ಪರಿಣಾಮಗಳನ್ನು ಹೆಚ್ಚುತ್ತಿರುವ ವೆಚ್ಚಗಳು ಮತ್ತು ಆಹಾರ ಧಾನ್ಯಗಳು, ರಸಗೊಬ್ಬರಗಳು ಮತ್ತು ಇಂಧನದ ನಿಜವಾದ ಕೊರತೆಯನ್ನು ಅನುಭವಿಸಿದ್ದೇವೆ ಎಂಬುದನ್ನು ಉಲ್ಲೇಖಿಸಿದರು.
ಕೌನ್ಸಿಲ್ ಬ್ರೀಫಿಂಗ್ ಅನ್ನು ಉದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್, ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಮತ್ತು ಯುಕೆ ವಿದೇಶಾಂಗ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ವ್ಯವಹಾರಗಳ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಮತ್ತು ಇತರ ಯುಎನ್ಎಸ್ಸಿ ಸದಸ್ಯರು ಮಾತನಾಡಿದರು.