ವಿಶ್ವಸಂಸ್ಥೆ ಸಭೆಯಲ್ಲಿ ಭಾರತ ಮಿಂಚು; ಭಯೋತ್ಪಾದನೆ, ಪಾಕ್ ವಿರುದ್ಧದ ವಾಗ್ದಾಳಿಗಳಿವು
ನ್ಯೂಯಾರ್ಕ್, ಸೆ. 27: ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಭಾರತ ಬಹಳ ಗಮನ ಸೆಳೆದಿದೆ. ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಗೆ ಭಾರತಕ್ಕಿರುವ ಬದ್ಧತೆ ಬಗ್ಗೆ ವಿಶ್ವದ ಹಲವು ನಾಯಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆಯುತ್ತಿರುವ ಈ ವರ್ಷದ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅನುಪಸ್ಥಿತಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ತಮ್ಮ ಪ್ರಖರ ಮಾತುಗಳ ಮೂಲಕ ಮಿಂಚಿನ ಸಂಚಾರ ಮೂಡಿಸಿದ್ದಾರೆ.
ಗ್ಲೋಬಲ್ ಸೌತ್ ಅಥವಾ ದಕ್ಷಿಣ ಗೋಳಾರ್ಧದಲ್ಲಿನ ಏಷ್ಯಾ, ಆಫ್ರಿಕಾ, ಓಷಾನಿಯಾ, ಲ್ಯಾಟಿನ್ ಅಮೆರಿಕನ್ ಪ್ರದೇಶದ ಪಾರ್ಟ್ನರ್ ದೇಶಗಳ ಜೊತೆ ಜೈಶಂಕರ್ ಸಭೆ ನಡೆಸಿದರು. ಭಾರತದೊಂದಿಗೆ ಸ್ನೇಹ ಹೊಂದಿರುವ ಪಾಶ್ಚಿಮಾತ್ಯ ದೇಶಗಳ ಜೊತೆಯೂ ಅವರು ಸಭೆ ನಡೆಸಿದರು. ಈ ವೇಳೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸುಧಾರಣೆಗಳಾಗಬೇಕು ಎಂಬ ಅಭಿಪ್ರಾಯವನ್ನು ಜೈಶಂಕರ್ ವ್ಯಕ್ತಪಡಿಸಿದರು.
ಸರಕಾರಿ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಉಗ್ರವಾಗಿ ಮಾತನಾಡಿದ ಕೇಂದ್ರ ವಿದೇಶಾಂಗ ಸಚಿವರು, ಈ ವಿಷಮ ಪರಿಸ್ಥಿತಿಯಲ್ಲಿ ಇಡೀ ವಿಶ್ವಕ್ಕೆ ಭಾರತ ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಮಾಡಿದರು.
ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಎಸ್ ಜೈಶಂಕರ್ ಮಾಡಿದ ಭಾಷಣಗಳಿಗೆ ಹಲವು ನಾಯಕರು ತಲೆದೂಗಿದ್ದು ಅವರು. ಪಾಕಿಸ್ತಾನ, ಭಯೋತ್ಪಾದನೆ, ಚೀನಾ, ಹವಾಮಾನ ಬದಲಾವಣೆ ಸೇರಿ ಅನೇಕ ವಿಚಾರಗಳನ್ನು ಜೈಶಂಕರ್ ಚರ್ಚಿಸಿದರು.

ಪಾಕಿಸ್ತಾನದ ಬಗ್ಗೆ
ಅಮೆರಿಕ ಮತ್ತು ಪಾಕಿಸ್ತಾನದ ಮಧ್ಯೆ ಎಫ್-16 ಫೈಟರ್ ಜೆಟ್ ವಿಮಾನ ಒಪ್ಪಂದ ನಡೆದಿರುವ ಔಚಿತ್ಯವನ್ನು ಎಸ್ ಜೈಶಂಕರ್ ಬಲವಾಗಿ ಪ್ರಶ್ನಿಸಿದರು. ವಿಶ್ವಸಂಸ್ಥೆ ಸಭೆಯಲ್ಲಿ ಅವರು ಈ ವಿಚಾರ ಪ್ರಸ್ತಾಪ ಮಾಡದೇ ಹೋದರೂ ಭಾರತೀಯ ಅಮೆರಿಕನ್ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಎಫ್-16 ಯುದ್ಧವಿಮಾನ ಒಪ್ಪಂದದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದರು.
ಭಯೋತ್ಪಾದನೆ ವಿರುದ್ಧ ಹೋರಾಡಲು ಪಾಕಿಸ್ತಾನಕ್ಕೆ ನೆರವಾಗಲೆಂದು ಎಫ್-16 ಫೈಟರ್ ಜೆಟ್ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅಮೆರಿಕ ನೀಡಿದ ಸಬೂಬನ್ನೂ ಜೈಶಂಕರ್ ತರಾಟೆಗೆ ತೆಗೆದುಕೊಂಡರು. ಈ ಫೈಟರ್ ಜೆಟ್ಗಳು ಎಲ್ಲಿಗೆ ಬಳಕೆ ಆಗುತ್ತವೆ ಎಂಬುದು ಅಮೆರಿಕಕ್ಕೆ ಗೊತ್ತಿದೆ ಎಂದು ಟಾಂಟ್ ಕೊಟ್ಟರು..
"ಈ ರೀತಿ ಹೇಳುವ ಮೂಲಕ ನೀವು ಯಾರನ್ನೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ಈ ಸಂಬಂಧವು ಪಾಕಿಸ್ತಾನಕ್ಕೂ ಒಳ್ಳೆಯದಲ್ಲ, ಅಮೆರಿಕಕ್ಕೂ ಒಳ್ಳೆಯದಲ್ಲ. ಈ ಸಂಬಂಧದ ಮೌಲ್ಯ ಏನು, ಅದರಿಂದ ಏನು ಸಿಗುತ್ತದೆ ಎಂಬುದನ್ನು ಅಮೆರಿಕ ತಿಳಿದುಕೊಳ್ಳಲಿ," ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು ತಿಳಿಸಿದರು.

ಭಯೋತ್ಪಾದನೆ ಬಗ್ಗೆ
"ದಶಕಗಳ ಕಾಲ ಭಯೋತ್ಪಾದನೆಯ ಪೈಶಾಚಿಕತೆಯನ್ನು ಅನಭವಿಸಿರುವ ಭಾರತ ಈ ವಿಚಾರದಲ್ಲಿ ಶೂನ್ಯ ತಾಳಿಕೆ ಧೋರಣೆಯನ್ನು ಅಪೇಕ್ಷಿಸುತ್ತದೆ. ಯಾವುದೇ ಉದ್ದೇಶ ಇರಲಿ, ಯಾವುದೇ ರೀತಿಯ ಭಯೋತ್ಪಾದನಾ ಕೃತ್ಯಕ್ಕೆ ಯಾವ ಸಮರ್ಥನೆಯೂ ಸಲ್ಲದು ಎಂಬುದು ನಮ್ಮ ನಿಲುವು. ನಾವೆಷ್ಟೇ ಕಟುವಾಗಿ ಖಂಡಿಸಿದರೂ ರಕ್ತದ ಕಲೆಗಳನ್ನು ಅಳಿಸಲು ಆಗುವುದಿಲ್ಲ" ಎಂದು ಜೈಶಂಕರ್ ಹೇಳಿದರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಚೀನಾ ಬಗ್ಗೆ
ಜಾಗತಿಕ ಅಪಾಯವೆಂದು ಭಯೋತ್ಪಾದಕರನ್ನು ಪರಿಗಣಿಸುವ ಪ್ರಸ್ತಾವಕ್ಕೆ ವಿಶ್ವಸಂಸ್ಥೆಯಲ್ಲಿ ಚೀನಾ ಮತ್ತೊಮ್ಮೆ ಅಡ್ಡಗಾಲು ಹಾಕಿರುವುದಕ್ಕೆ ಜೈಶಂಕರ್ ಕಿಡಿಕಾರಿದರು.
"ವಿಶ್ವಸಂಸ್ಥೆ ಭದ್ರತಾ ಮಂಡಳಿ 1267 ಸ್ಯಾಂಕ್ಷನ್ಸ್ ಯೋಜನೆಯನ್ನು ರಾಜಕೀಯಗೊಳಿಸುತ್ತಿರುವವರು ಕೆಲವೊಮ್ಮೆ ಭಯೋತ್ಪಾದಕರನ್ನು ರಕ್ಷಿಸುವ ಮಟ್ಟಕ್ಕೆ ಹೋಗುತ್ತಾರೆ. ಇದರಿಂದ ತಮ್ಮ ಹಳ್ಳ ತಾವೇ ತೋಡಿಕೊಳ್ಳುತ್ತಾರೆ. ಅವರ ಹಿತಾಸಕ್ತಿಗಾಗಲೀ ಅಥವಾ ಅವರ ಘನತೆಗಾಗಲೀ ಒಳಿತಂತೂ ಆಗುವುದಿಲ್ಲ," ಎಂದು ಎಸ್ ಜೈಶಂಕರ್ ಹೇಳಿದರು. ಆದರೆ, ಅವರು ಈ ಸಂದರ್ಭದಲ್ಲಿ ಚೀನಾದ ಹೆಸರನ್ನು ಎತ್ತದೆಯೇ ಎತ್ತಿ ಜಾಡಿಸಿದರು.
ಮುಂಬೈ ಉಗ್ರ ದಾಳಿ ಘಟನೆಯಲ್ಲಿ ಭಾಗಿಯಾಗಿದ್ದಾನೆನ್ನಲಾಗುವ ಪಾಕ್ ಮೂಲದ ಉಗ್ರ ಸಾಜಿ ಮಿರ್ನನ್ನು ಜಾಗತಿಕ ಭಯೋತ್ಪಾದಕನೆಂದು ಪಟ್ಟಿ ಮಾಡುವ ಅಮೆರಿಕ, ಭಾರತ ಮತ್ತಿತರರ ದೇಶಗಳು ಪ್ರಯತ್ನಿಸಿದ್ದವು. ಆದರೆ, ವಿಶ್ವಸಂಸ್ಥೆಯಲ್ಲಿ ಚೀನಾ ಇದಕ್ಕೆ ಅಡ್ಡಗಾಲು ಹಾಕಿತು. ಚೀನಾದ ಕಿತಾಪತಿ ಇದೇ ಮೊದಲಲ್ಲ. ಈ ಹಿಂದೆಯೂ ಇಂಥ ಕೃತ್ಯವನ್ನು ಎಸಗಿದೆ.
ಅಬ್ದುಲ್ ರೌಫ್ ಅಝರ್ ಮತ್ತು ಅಬ್ದುಲ್ ರೆಹಮಾನ್ ಮಕ್ಕಿ ಅವರಿಬ್ಬರನ್ನು 1267 ಅಲ್-ಖೈದಾ ಸ್ಯಾಂಕ್ಷನ್ಸ್ ಕಮಿಟಿ ಅಡಿಯಲ್ಲಿ ಭಯೋತ್ಪಾದಕರೆಂದು ಪರಿಗಣಿಸಿ ಕಪ್ಪುಪಟ್ಟಿಗೆ ಸೇರಿಸಲು ನಡೆದ ಪ್ರಸ್ತಾವವನ್ನು ಚೀನಾ ಅಡ್ಡಿ ಮಾಡಿತ್ತು.
ಜಾಗತಿಕವಾಗಿ ಭಾರತದ ಪ್ರಭಾವ ಹೆಚ್ಚಿರುವ ಬಗ್ಗೆ:
"ಭಾರತ ಹೆಚ್ಚಿನ ಜವಾಬ್ದಾರಿ ಹೊರಲು ಸಿದ್ಧವಾಗಿದೆ. ಗ್ಲೋಬಲ್ ಸೌತ್ ಪ್ರದೇಶಘಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂಬುದು ಭಾರತದ ಒತ್ತಾಯ.... ಸಾಲ, ಆರ್ಥಿಕ ಬೆಳವಣಿಗೆ, ಆಹಾರ ಇಂಧನ ಭದ್ರತೆ, ಹವಾಮಾನ ಬದಲಾವಣೆ ಮೊದಲಾದ ಸಮಸ್ಯೆಗಳ ಬಗ್ಗೆ ಅಭಿವೃದ್ಧಿಶೀಲ ದೇಶಗಳ ಜೊತೆ ಕೆಲಸ ಮಾಡಲು ಭಾರತ ಸಿದ್ಧ ಇದೆ" ಎಂದು ಜೈಶಂಕರ್ ಹೇಳಿದ್ಧಾರೆ.

ಮಾಧ್ಯಮಗಳ ಬಗ್ಗೆ
ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಭಾರತದ ಬಗ್ಗೆ ಬರುತ್ತಿರುವ ನಕಾರಾತ್ಮಕ ಸುದ್ದಿಗಳ ಬಗ್ಗೆ ಜೈಶಂಕರ್ ಕೋಪ ವ್ಯಕ್ತಪಡಿಸಿದರು.
"ನಾನು ಮಾಧ್ಯಮವನ್ನು ನೋಡುವುದಾದರೆ ಈ ನಗರದಲ್ಲಿರುವ ಒಂದು ಪತ್ರಿಕೆ ಸೇರಿದಂತೆ ಕೆಲ ಪತ್ರಿಕೆಗಳು ಏನು ಬರೆಯುತ್ತವೆ ಎಂಬುದನ್ನು ಗಮನಿಸಬೇಕು. ನಮ್ಮ ದೇಶದೊಳಗೆ ಏನೇನು ಸೂಕ್ಷ್ಮತೆ ಇದೆ ಎಂಬುದು ಬಹುತೇಕ ಅಮೆರಿಕನ್ನರಿಗೆ ಅರಿವಾಗುವುದಿಲ್ಲ..." ಎಂದು ಅಮೆರಿಕನ್ ಭಾರತೀಯ ಸಮುದಾಯದ ಕಾರ್ಯಕ್ರಮದಲ್ಲಿ ಜೈಶಂಕರ್ ತಿಳಿಸಿದರು.

ಟರ್ಕಿ ಮತ್ತು ಸೈಪ್ರಸ್
ಇದೇ ವೇಳೆ, ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರವನ್ನು ಕೆದಕಿದ ಟರ್ಕಿ ಪ್ರಧಾನಿ ಎರ್ಡೋಗನ್ಗೆ ಜೈಶಂಕರ್ ತಿರುಗೇಟು ನೀಡಿದರು. ಟರ್ಕಿಯ ಸೈಪ್ರಸ್ ವಿವಾದದ ಗಾಯವನ್ನು ನೆನಪಿಸಿದರು.
ಟರ್ಕಿಯ ವಿದೇಶಾಂಗ ಸಚಿವ ಮೆವ್ಲುಟ್ ಕವುಸೋಗ್ಲುರನ್ನು ಭೇಟಿ ಮಾಡಿ ಈ ವಿಚಾರ ಚರ್ಚಿಸಿದರೆನ್ನಲಾಗಿದೆ.
ಟರ್ಕಿ ದೇಶ 1974ರಲ್ಲಿ ಸೈಪ್ರಸ್ನ ಉತ್ತರ ಭಾಗವನ್ನು ಆಕ್ರಮಿಸಿಕೊಂಡಿತ್ತು. ಆಗಿನಿಂದಲೂ ಆ ಪ್ರದೇಶವು ವಿವಾದದ ಸ್ಥಳವಾಗಿದೆ. ತಾನೇ ಗಾಜಿನ ಮೇಲಿದ್ದರೂ ಟರ್ಕಿ ಕಲ್ಲೆಸೆಯುವ ಕೆಲಸ ಮಾಡುತ್ತಿರುವುದು ಅಚ್ಚರಿ ಮೂಡಿಸುತ್ತದೆ. ನೀವು ಕಾಶ್ಮೀರ ವಿಚಾರ ಕೆದಕಿದರೆ ನಾವು ಸೈಪ್ರಸ್ ವಿಚಾರ ಎತ್ತುತ್ತೇವೆ ಎಂಬುದು ಭಾರತದ ಹೊಸ ನಿಲುವು.
(ಒನ್ಇಂಡಿಯಾ ಸುದ್ದಿ)
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications