ಕಾಬೂಲ್ನ ಗುರುದ್ವಾರದಲ್ಲಿ ಸಿಲುಕಿರುವ 260ಕ್ಕೂ ಹೆಚ್ಚು ಅಫ್ಘನ್ ಸಿಖ್ಖರು
ಕಾಬೂಲ್, ಆಗಸ್ಟ್ 23: ಕಾಬೂಲ್ನ ಗುರುದ್ವಾರದಲ್ಲಿ 260ಕ್ಕೂ ಹೆಚ್ಚು ಮಂದಿ ಅಫ್ಘನ್ ಸಿಖ್ಖರು ಸಿಲುಕಿಕೊಂಡಿದ್ದಾರೆ.
ಅವರು, ಭಾರತಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇಲ್ಲಿಯವರೆಗೆ, ಭಾರತ ಸರ್ಕಾರ ಅಫ್ಘನ್ ಸಿಖ್ ರನ್ನು ಮಾತ್ರ ಸ್ಥಳಾಂತರಗೊಳಿಸಿದೆ. ನಾವು ಅಮೆರಿಕ, ಕೆನಡಾ, ಪಾಕಿಸ್ತಾನ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ತಜಕಿಸ್ತಾನ್, ಇರಾನ್ ಮತ್ತು ಇಂಗ್ಲೆಂಡ್ ದೇಶಗಳ ಸರ್ಕಾರಗಳೊಂದಿಗೆ ಸಹ ಮಾತುಕತೆ ನಡೆಸುತ್ತಿದ್ದೇವೆ ಎಂದು ಯುನೈಟೆಡ್ ಸಿಖ್ ತಿಳಿಸಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣಕ್ಕೆ ಐಎಸ್ಐಎಸ್ ಉಗ್ರರ ದಾಳಿ ಭೀತಿ
ಅಫ್ಘಾನಿಸ್ತಾನದಲ್ಲಿ ಅಂತರಾಷ್ಟ್ರೀಯ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳೊಂದಿಗೆ ನಾವು ನೆರವು ಕೋರಲು ನಿರಂತರ ಸಂಪರ್ಕ ನಡೆಸುತ್ತಿದ್ದೇವೆ. ಇದರ ಜೊತೆಗೆ, ನಮ್ಮ ತಂಡಗಳು ಅಫ್ಘಾನಿಸ್ತಾನದಲ್ಲಿ ರಕ್ಷಣಾ ಪ್ರಯತ್ನಗಳನ್ನು ನಿರ್ವಹಿಸಬಲ್ಲ ಕಂಪನಿಗಳೊಂದಿಗೆ ಸಂವಹನ ನಡೆಸುತ್ತಿವೆ.
ಯುನೈಟೆಡ್ ಸಿಖ್ಖರ ಪ್ರಕಾರ, ಗುರುದ್ವಾರ ಕಾರ್ಟೆ ಪರ್ವಾನ್ ನಿಂದ ವಿವಿಧ ಚೆಕ್ಪೋಸ್ಟ್ಗಳ ಮೂಲಕ ಕಾಬೂಲ್ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 10 ಕಿಲೋಮೀಟರ್ ಪ್ರಯಾಣವು ರಕ್ಷಣಾ ಪ್ರಯತ್ನಗಳಲ್ಲಿ ಒಂದು ದೊಡ್ಡ ಸವಾಲಾಗಿದೆ.
ಕೆಲವು ಅಫ್ಘಾನ್ ಅಲ್ಪಸಂಖ್ಯಾತ ಸದಸ್ಯರು ಕಳೆದ ವಾರ ಈ ಪ್ರವಾಸವನ್ನು ಮಾಡಲು ವಿಫಲರಾಗಿದ್ದಾರೆ ಎಂದು ಅದು ಹೇಳಿದೆ. ನಾವು ವಿಮಾನ ನಿಲ್ದಾಣಕ್ಕೆ ಹೋಗಲು ಸಿದ್ಧರಿದ್ದೇವೆ, ಆದರೆ ಕಾಬೂಲ್ ವಿಮಾನ ನಿಲ್ದಾಣದಿಂದ ಸ್ಥಳಾಂತರಿಸುವ ವಿಮಾನಗಳ ರದ್ದಾಗಬಹುದು ಎಂದು ಹೆದರುತ್ತಿದ್ದೇವೆ. ಮಹಿಳೆಯರು, ಮಕ್ಕಳು, ವೃದ್ಧರು ಮತ್ತು ಶಿಶುಗಳನ್ನು ಇಲ್ಲಿಂದ ಸುರಕ್ಷಿತವಾಗಿ ಕಳುಹಿಸುವುದು ನಮ್ಮ ಉದ್ದೇಶ ಎಂದು ಹೇಳಿದೆ.
ಕಾಬುಲ್ ನ ಕರ್ಟೆ ಪರ್ವನ್ ಗುರುದ್ವಾರದಲ್ಲಿ 260ಕ್ಕೂ ಹೆಚ್ಚು ಅಫ್ಘನ್ ಪ್ರಜೆಗಳು ಆಶ್ರಯ ಪಡೆದಿದ್ದು ಅವರಲ್ಲಿ 50ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳಿದ್ದಾರೆ. ಮೂರು ನವಜಾತ ಶಿಶುಗಳು ಕೂಡ ಇದ್ದು ಅವುಗಳಲ್ಲಿ ಒಂದು ಶಿಶು ನಿನ್ನೆ ಜನಿಸಿದೆ ಎಂದು ಅಮೆರಿಕ ಸಿಖ್ ಸಂಸ್ಥೆ ತಿಳಿಸಿದೆ.
ತಾಲಿಬಾನ್ ಅಧಿಕಾರಕ್ಕೆ ಬರುತ್ತಲೇ ಅಫ್ಘಾನಿಸ್ತಾನದಿಂದ ಹೊರಹೋಗಲು ಸಾವಿರಾರು ಜನರು ಪ್ರಯತ್ನಿಸುತ್ತಿದ್ದಾರೆ. ಭಾರತ, ಅಮೆರಿಕ ಸೇರಿದಂತೆ ವಿವಿಧ ದೇಶಗಳು ತಮ್ಮ ನಾಗರಿಕರನ್ನು ಅಫ್ಘಾನಿಸ್ತಾನದಿಂದ ವಾಪಸ್ ಕರೆಸಿಕೊಳ್ಳುವ ಪ್ರಯತ್ನದಲ್ಲಿವೆ.
ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ ಅಲ್ಲಿನ ಪರಿಸ್ಥಿತಿ ಭೀಕರವಾಗಿದ್ದು, ವಿದೇಶಿಗರು ಮಾತ್ರವಲ್ಲದೆ ಅಫ್ಘಾನಿಸ್ತಾನಿಗಳೇ ದೇಶ ಬಿಟ್ಟು ತೆರಳುತ್ತಿದ್ದಾರೆ. ಇದರಿಂದ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಲ್ತುಳಿತ ಮತ್ತು ಗುಂಡಿನ ದಾಳಿ ಕೂಡ ನಡೆದಿದೆ.
ಇಂಥ ಧಾರುಣ ಪರಿಸ್ಥಿತಿಯಿಂದ ಈವರೆಗೆ ಆಫ್ಘಾನಿಸ್ತಾನದಿಂದ 537 ಜನ ಭಾರತಕ್ಕೆ ಸುರಕ್ಷಿತವಾಗಿ ಮರಳಿದ್ದು, ಈ ಪೈಕಿ ಭಾನುವಾರ ಕಾಬೂಲ್ ವಿಮಾನ ನಿಲ್ದಾಣದಿಂದ 168 ಮಂದಿ ಬಂದಿದ್ದಾರೆ. ಅದರಲ್ಲಿ 7 ಜನ ಕನ್ನಡಿಗರು ಸುರಕ್ಷಿತವಾಗಿ ಮರಳಿದ್ದಾರೆ ಎಂದು ತಿಳಿದುಬಂದಿದೆ.
ಭಾರತ ವಿವಿಧ ರೀತಿಯಲ್ಲಿ ತನ್ನ ನಾಗರಿಕರನ್ನ ಅಲ್ಲಿಂದ ತೆರವುಗೊಳಿಸಿ ವಾಪಸ್ ಕರೆಸಿಕೊಳ್ಳುತ್ತದೆ. ಸೋಮವಾರ ಬೆಳಿಗ್ಗೆ ಎರಡು ವಿಮಾನಗಳ ಮೂಲಕ ಒಟ್ಟು 145 ಜನ ಅಫ್ಘಾನಿಸ್ತಾನದಿಂದ ಭಾರತಕ್ಕೆ ಆಗಮಿಸಿದ್ದಾರೆ.
ಇದರಿಂದ ಈವರೆಗೆ ಆಫ್ಘಾನಿಸ್ತಾನದಿಂದ ಭಾರತಕ್ಕೆ ಸುರಕ್ಷಿತವಾಗಿ ಮರಳಿದವರ ಸಂಖ್ಯೆ 537ಕ್ಕೆ ಏರಿದೆ. ಇದರಲ್ಲಿ ಕೆಲವರು ವಿದೇಶಿಗರೂ ಇದ್ದಾರೆ. ಅವರು ಭಾರತಕ್ಕೆ ಬಂದು ನಂತರ ಅವರವರ ದೇಶಕ್ಕೆ ಮರಳುತ್ತಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ಗಳಿಂದ ಘರ್ಷಣೆ ಆರಂಭವಾದ ವೇಳೆ ಕನ್ನಡಿಗರೂ ಸಹ ಕಾಬೂಲ್ನಲ್ಲಿ ಸಿಲುಕಿದ್ದರು. ಕಳೆದ ಭಾನುವಾರವೇ 2 ಸೇನಾ ವಿಮಾನವನ್ನು ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳುಹಿಸಿದ್ದ ಭಾರತ ಸರ್ಕಾರ ರಾಯಭಾರಿ ಕಚೇರಿ ಅಧಿಕಾರಿಗಳು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಜನರನ್ನು ರಕ್ಷಿಸಿತ್ತು. ಇದರಲ್ಲಿ ಅನೇಕರು ಕನ್ನಡಿಗರೂ ಸಹ ಇದ್ದರು. ಇದೀಗ ಇಂದೂ ಸಹ ಅಫ್ಘಾನಿಸ್ತಾನದಿಂದ ರಕ್ಷಿಸಲ್ಪಟ್ಟವರಲ್ಲಿ 7 ಜನ ಕನ್ನಡಿಗರಿದ್ದಾರೆ ಎಂದು ತಿಳಿದುಬಂದಿದೆ.