ಬದುಕಿರುವ ಶಶಿಕಲಾರನ್ನು 'ಸಾಯಿಸಿ' ನಗೆಪಾಟಲಾದ ಇಮ್ರಾನ್!
Recommended Video
"ಶಶಿಕಲಾ, ರಾಜಕಾರಣಿಯಾಗಿ ಬದಲಾದ ದಕ್ಷಿಣ ಭಾರತದ ಪ್ರಸಿದ್ಧ ನಟಿ. ಇತ್ತೀಚೆಗಷ್ಟೇ ಅಸುನೀಗಿದ ತಮಿಳುನಾಡಿನ ಈ ರಾಜಕಾರಣಿಯ ಮನೆಯಲ್ಲಿ ಸಿಕ್ಕ ಚಿನ್ನ, ಒಡವೆ, ಅಕ್ರಮ ಸಂಪತ್ತಿನ ಚಿತ್ರ ಇಲ್ಲಿದೆ. ಇದು ಎಲ್ಲಾ ಭ್ರಷ್ಟ ರಾಜಕಾರಣಿಗಳಿಗೆ ಒಂದು ಸಂದೇಶ..." ಹೀಗೆಂದು ಟ್ವೀಟ್ ಮಾಡಿದವರು ಪಾಕಿಸ್ತಾನದ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್!
ಚೆನ್ನೈನಲ್ಲಿ ಮತ್ತೆ ಐಟಿ ಆಟ: ಶಶಿಕಲಾಗೆ ಶುರುವಾಯ್ತು ಶನಿಕಾಟ!?
ಪಾಕಿಸ್ತಾನದ ಮಾಜಿ ಕ್ರಿಕೆಟಿಗರೂ ಆಗಿರುವ ಇಮ್ರಾನ್ ಖಾನ್ ಇಂಥದೊಂದು ಪ್ರಮಾದ ಮಾಡಿರುವ ಕುರಿತು ಇದೀಗ ಟ್ವಿಟ್ಟರ್ ನಲ್ಲಿ ಹಸಿ ಬಿಸಿ ಚರ್ಚೆ ನಡೆಯುತ್ತಿದೆ. ಜಯಲಲಿತಾ ಎಂದು ಬರೆಯುವುದಕ್ಕೆ ಶಶಿಕಲಾ ಎಂದು ಬರೆಯುವ ಮೂಲಕ, ಬದುಕಿರುವ ಶಶಿಕಲಾರನ್ನು ಅಕ್ಷರಗಳ ಮೂಲಕ ಸಾಯಿಸಿರುವ ಖಾನ್ ಅವರ ನಡೆ ಅವರನ್ನು ನಗೆಪಾಟಲಿಗೀಡಾಗುವಂತೆ ಮಾಡಿದೆ.
ಮಹಿಳೆಗೆ ಅಶ್ಲೀಲ ಸಂದೇಶ ಕಳಿಸಿದ ಮಾಜಿ ಕ್ರಿಕೆಟರ್
ಪಾಕಿಸ್ತಾನದ ಭ್ರಷ್ಟ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ್ದ ಇಮ್ರಾನ್ ಖಾನ್, ಇಲ್ಲಿನ ರಾಜಕೀಯ ನಾಯಕರಲ್ಲಿ ಮುಂಚೂಣಿಯಲ್ಲಿರುವವರು. ಕಿಂಥ ಉನ್ನತ ಸ್ಥಾನದಲ್ಲಿರುವವರು ಸತ್ಯ ತಿಳಿಯದೆ, ಬೇಜವಾಬ್ದಾರಿಯಾಗಿ ಹೀಗೆಲ್ಲ ಟ್ವೀಟ್ ಮಾಡುವುದು ಸರೀನಾ ಎಂಬುದು ಈಗಿರುವ ಪ್ರಶ್ನೆ.
ಐಟಿ ಕಾಟಕ್ಕೆ ಜೈಲಲ್ಲಿ ಶಶಿಕಲಾಗಿಲ್ಲ ನಿದ್ದೆ, ಸೇರುತ್ತಿಲ್ಲ ಮುದ್ದೆ!
ಕೇವಲ ಶಶಿಕಲಾ ಎಂದು ಬರಿದಿದ್ದಷ್ಟೇ ಅಲ್ಲ, ಅವರ ಟ್ವೀಟ್ ನಲ್ಲಿ ಪದ ಪದಕ್ಕೂ ತಪ್ಪುಗಳು ಇಣುಕಿವೆ. ಭಾರತದ ರಾಜಕಾರಣಿಯೊಬ್ಬರನ್ನು ತೆಗಳುವ ಅವಸರದಲ್ಲಿ ಇಮ್ರಾನ್ ಖಾನ್ ಮೊದಲು ಸತ್ಯವನ್ನು ಪರಾಮರ್ಶಿಸುವ ಗೋಜಿಗೆ ಹೋಗಿಲ್ಲ ಎಂಬುದು ವಿಷಾದದ ಸಂಗತಿ.
ತಪ್ಪಿನ ಸರಮಾಲೆ...
ಇಮ್ರಾನ್ ಖಾನ್ ಅವರ ಟ್ವೀಟ್ ನಲ್ಲಿದ್ದಂತೆ, ದಕ್ಷಿಣ ಭಾರತದ ನಟಿ ಕಂ ರಾಜಕಾರಣಿ ಶಶಿಕಲಾ ಎಂದರೆ ಯಾರು? ಶಶಿಕಲಾ ಎಂಬ ನಟಿಯೊಬ್ಬರಿದ್ದಾರೆ, ಅವರು ಬಾಲಿವುಡ್ ನಟಿ. ದಕ್ಷಿಣ ಭಾರತದವರಲ್ಲ! ಹಾಗೆಯೇ ಶಶಿಕಲಾ ನಟರಾಜನ್ ನಟಿಯಲ್ಲ. 'ಇತ್ತೀಚೆಗಷ್ಟೇ ಮೃತರಾದ' ಎಂದು ಬೇರೆ ಬರೆದಿದ್ದಾರೆ! ಶಶಿಕಲಾ ಈಗಲೂ ಪರಪ್ಪನ ಅಗ್ರಹಾರದಲ್ಲಿ ರಾಗಿ ಮುದ್ದೆ ಅಗಿಯುತ್ತಿದ್ದಾರೆ! ಅಕಸ್ಮಾತ್ ಅವರು ಜಯಲಲಿತಾ ಅವರ ಬಗ್ಗೆಯೇ ಬರೆದಿದ್ದರೆ, ಜಯಲಲಿತಾ ಸತ್ತು ಆಗಲೇ ಒಂದು ವರ್ಷವಾಯ್ತು! 'ಇತ್ತೀಚೆಗೆ' ಎಂದರೆ ಯಾವಾಗ? ಯಾರು?!... ಒಟ್ಟಿನಲ್ಲಿ ಇಮ್ರಾನ್ ಖಾನ್ ಅವರ ಟ್ವಿಟ್ಟರ್ ನಲ್ಲಿ ತಪ್ಪಿನ ಸರಮಾಲೆಯೇ ಇದೆ!
ಸುಳ್ಳಿನ ಸಂತೆ...
ತಮ್ಮ ಟ್ವಿಟ್ಟರ್ ನಲ್ಲಿ ಜಯಲಲಿತಾ ಅವರ ಮನೆಯಲ್ಲಿ ಸಿಕ್ಕ ಹಣ, ಒಡವೆ, ಬೆಲೆಬಾಳುವ ವಸ್ತುಗಳ ಚಿತ್ರಗಳು ಎಂದು ಕೆಲವು ಚಿತ್ರಗಳನ್ನು ಇಮ್ರಾನ್ ಖಾನ್ ಹಾಕಿದ್ದಾರೆ. ಆದರೆ ಆದಾಯ ಇಲಾಖೆ ಅಧಿಕಾರಿಗಳು ಜಯಲಲಿತಾ ಅವರ ಕೋಣೆಯಲ್ಲಿ ಯಾವುದೇ ರೀತಿಯ ಪರಿಶೀಲನೆ ಮಾಡಿಲ್ಲ. ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸದಲ್ಲಿ, ಆಪ್ತೆ ಶಶಿಕಲಾ ಅವರಿಗೆ ಸಂಬಂಧಿಸಿದ ಕೆಲವು ಕೋಣೆಗಳಲ್ಲಿ ಮಾತ್ರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಅಷ್ಟೇ ಅಲ್ಲ, ಅಲ್ಲಿ ಸಿಕ್ಕ ಒಡವೆ, ಹಣಗಳ ಚಿತ್ರವನ್ನೂ ಅವರು ಬಿಡುಗಡೆ ಮಾಡಿಲ್ಲ. ಈ ಚಿತ್ರಗಳೆಲ್ಲ 'ಸುಳ್ಳಿನ ಸಂತೆ' ಎಂಬುದು ಇದರಿಂದ ದೃಢವಾಗುತ್ತದೆ!
ಭಾರತೀಯ ರಾಜಕಾರಣಿಗಳನ್ನು ಬೈಯ್ಯುವ ಭರದಲ್ಲಿ...
'ಭ್ರಷ್ಟ ಅಧಿಕಾರಿಗಳಿಗೆ ಇದೊಂದು ಸಂದೇಶ' ಎಂದು ಬರೆದುಕೊಂಡಿರುವ ಇಮ್ರಾನ್ ಖಾನ್, ಪಾಕಿಸ್ತಾನದಲ್ಲೇ ಸಿಗುತ್ತಿದ್ದ ಎಷ್ಟೋ ಭ್ರಷ್ಟ ಅಧಿಕಾರರಿಗಳ ಬಗ್ಗೆ, ರಾಜಕಾರಣಿಗಳ ಬಗ್ಗೆ ಬರೆದುಕೊಳ್ಳಬಹುದಿತ್ತು. ಆದರೆ ಭಾರತೀಯ ರಾಜಕಾರಣಿಗಳ ಮಾನ ಹರಾಜು ಹಾಕುವ ಅವಸರದಲ್ಲಿ ಸತ್ಯ ತಿಳಿಯದೆ, ಎಂತೆಂಥದೋ ಟ್ವೀಟ್ ಮಾಡಿ, ಅವರೇ ನಗೆಪಾಟಲಾಗಿದ್ದಾರೆ!
ಟ್ವೀಟ್ ಡಿಲೀಟ್ ಮಾಡಿದ ಇಮ್ರಾನ್
ಇಮ್ರಾನ್ ಟ್ವೀಟ್ ಕುರಿತು ಭಾರತೀಯ ಮಾಧ್ಯಮಗಳಲ್ಲಿ ಸಾಲು ಸಾಲು ಸುದ್ದಿ ಹರಿದಾಡುತ್ತಿದ್ದಂತೆಯೇ, ತಾವು ಮಾಡಿದ ತಪ್ಪಿನ ಅರಿವಾದ ಇಮ್ರಾನ್ ಖಾನ್, ಪಟ್ಟಂಥ ಆ ಟ್ವೀಟ್ ಅನ್ನೇ ಡಿಲೀಟ್ ಮಾಡಿದ್ದಾರೆ. ಆದರೆ ಈಗಾಗಲೇ ಆ ಟ್ವೀಟ್ ನ ಸ್ಕ್ರೀನ್ ಶಾಟ್ ಗಳನ್ನು ತೆಗೆದಿಟ್ಟುಕೊಂಡಿರುವ ಜನರು, ಅದನ್ನೇ ಶೇರ್ ಮಾಡುತ್ತ ಇಮ್ರಾನ್ ಖಾನ್ ಮಾನವನ್ನು ಹರಾಜುಹಾಕುತ್ತಿದ್ದಾರೆ. ಒಟ್ಟಿನಲ್ಲಿ ಮತ್ತೊಬ್ಬರನ್ನು ಹಳಿಯುವ ರಭಸದಲ್ಲಿ ಸತ್ಯವನ್ನು ಪರಾಮರ್ಶಿಸುವ ಜವಾಬ್ದಾರಿಯನ್ನು ಮರೆಯಬಾರದು ಎಂಬುದನ್ನು ಈ ಘಟನೆ ತೋರಿಸಿಕೊಟ್ಟಿದೆ.