ರಾತ್ರೋರಾತ್ರಿ ಚೀನಾ ಸೇನಾಪಡೆ ಭಾರತೀಯ ಗಡಿ ಪ್ರವೇಶಿಸಿದ್ದು ಹೇಗೆ?
ನವದೆಹಲಿ, ಸಪ್ಟೆಂಬರ್.01: ಭಾರತ-ಚೀನಾ ನಡುವೆ ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ಪ್ರದೇಶದಲ್ಲಿ ಸೃಷ್ಟಿಯಾಗಿರುವ ಉದ್ವಿಗ್ನತೆ ನಿವಾರಣೆಗೆ ಮಂಗಳವಾರ ಚುಶುಲ್ ಪ್ರದೇಶದಲ್ಲಿ ಮೂರನೇ ಹಂತದ ಸೇನಾಧಿಕಾರಿಗಳ ಸಭೆ ನಡೆಸಲಾಗುತ್ತಿದೆ.
Recommended Video
ಬೆಳಗ್ಗೆ 10 ಗಂಟೆ ಸುಮಾರಿಗೆ ಬ್ರಿಗೇಟ್ ಅಧಿಕಾರಿಗಳ ಮಟ್ಟದ ಸಭೆ ಆರಂಭವಾಗಿರುವ ಬಗ್ಗೆ ಭಾರತೀಯ ಸೇನಾ ಮೂಲಗಳಿಂದ ತಿಳಿದು ಬಂದಿದೆ. ಬ್ಲ್ಯಾಕ್ ಟಾಪ್ ಮತ್ತು ಹೆಲ್ಮೆಟ್ ಟಾಪ್ ಸಮೀಪದ ಪ್ರದೇಶಗಳಲ್ಲಿ ಚೀನಾ ನಿಯೋಜಿಸಿರುವ ಬಗ್ಗೆ ಭಾರತವು ಪ್ರಸ್ತಾಪಿಸಿದೆ.
ಚೀನಾಗೆ ಪ್ರತಿಯಾಗಿ ಭಾರತೀಯ ಸೇನಾಪಡೆಗಳು ಬೆಟ್ಟದ ತುದಿಯ ಪ್ರದೇಶವನ್ನು ಅತಿಕ್ರಮಿಸಿಕೊಂಡಿವೆ. ಭಾರತವು ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಚೀನಾ ವಾದಿಸುತ್ತಿದೆ. ಇದಕ್ಕೂ ಮೊದಲು ಸೋಮವಾರ ಎರಡು ರಾಷ್ಟ್ರಗಳ ಬ್ರಿಗೇಡ್ ಅಧಿಕಾರಿಗಳ ನಡುವೆ ಐದು ಗಂಟೆಗಳ ಕಾಲ ಸಭೆ ನಡೆಸಲಾಗಿತ್ತು.

ಚೀನಾದ 450 ಪಡೆಗಳು ಪ್ಯಾಂಗಾಂಗ್ ಗಡಿಗೆ ಲಗ್ಗೆ
ಕಳೆದ ಆಗಸ್ಟ್.29 ಮತ್ತು 30ರ ಮಧ್ಯರಾತ್ರಿ ಪ್ಯಾಂಗಾಂಗ್ ತ್ಸೋ ಸರೋವರ ಪ್ರದೇಶದಲ್ಲಿ ಚೀನಾ ಸೇನಾಪಡೆಗಳು ಪ್ರಚೋದನಾತ್ಮಕ ಸೇನಾ ಚಟುವಟಿಕೆಗಳನ್ನು ನಡೆಸಿತು. ದಕ್ಷಿಣ ಪ್ರದೇಶದಲ್ಲಿ ಚೀನಾದ 450 ಸೇನಾ ಪಡೆಗಳನ್ನು ಕರೆಸಿಕೊಳ್ಳಲಾಗಿದೆ. ಚೀನಾದ ನಡೆಯಿಂದ ಗಡಿಯಲ್ಲಿ ಯಥಾಸ್ಥಿತಿಗೆ ಧಕ್ಕೆ ಉಂಟಾಗಿದೆ ಎಂದು ಭಾರತೀಯ ಸೇನಾಧಿಕಾರಿ ಆರೋಪಿಸಿದ್ದಾರೆ.

ಚೀನಾದ ಕಾರ್ಯದಿಂದ ಎಚ್ಚೆತ್ತುಕೊಂಡ ಭಾರತೀಯ ಸೇನೆ
ಬೆಟ್ಟವನ್ನು ಏರುವುದಕ್ಕೆ ಬಳಸುವ ರೋಪ್ ಮತ್ತು ಸಾಧನಗಳನ್ನು ಬಳಸಿಕೊಂಡು ಮಧ್ಯರಾತ್ರಿ ಚೀನಾದ ಪೀಪಲ್ಸ್ ಆಫ್ ಲಿಬರೇಷನ್ ಪಡೆಯು ಕಾರ್ಯಾಚರಣೆ ಶುರು ಮಾಡಿತು. ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ಪ್ರದೇಶದ ತುದಿಯಲ್ಲಿರುವ ಬ್ಲ್ಯಾಕ್ ಟಾಪ್ ಮತ್ತು ಠಾಕುಂಗ್ ಹೈಟ್ಸ್ ನ್ನು ಏರುವುದಕ್ಕೆ ಮುಂದಾಯಿತು. ಈ ವೇಳೆ ಕೇಳಿ ಬಂದ ಸದ್ದಿನಿಂದ ಭಾರತೀಯ ಸೇನಾಪಡೆಯು ಎಚ್ಚೆತ್ತುಕೊಂಡಿತು. ತತ್ ಕ್ಷಣದಿಂದಲೇ ಕಾರ್ಯಾಚರಣೆ ಶುರು ಮಾಡಿತು ಎಂದು ಮೂಲಗಳಿಂದ ತಿಳಿದು ಬಂದಿದೆ.

ಭಾರತೀಯ ಸೇನೆಗೆ ಮೊದಲೇ ಎಚ್ಚರಿಕೆ ನೀಡಿದ್ದ ಗುಪ್ತಚರ ಇಲಾಖೆ
ಪ್ಯಾಂಗಾಂಗ್ ತ್ಸೋ ಸರೋವರದಲ್ಲಿ ಪ್ರಚೋದನಾತ್ಮಕ ಸೇನಾ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಭಾರತೀಯ ಸೇನೆಗೆ ಮಾಹಿತಿ ಸಿಕ್ಕಿತ್ತು. ಇದರ ಬೆನ್ನಲ್ಲೇ ಗಡಿ ಪ್ರದೇಶದ ಇತರೆ ಕಡೆಗಳಲ್ಲಿ ಚೀನಾ ಸೇನೆಯು ಅತಿಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸುವ ಸಾಧ್ಯತೆಗಳಿವೆ ಎಂದು ಭಾರತೀಯ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು. ಉಭಯ ಸೇನಾಪಡೆಗಳ ನಡುವೆ ಚಕಮಕಿ ಏರ್ಪಟ್ಟಿದ್ದು, ಇದೀಗ ಪರಿಸ್ಥಿತಿ ಕೊಂಚ ತಿಳಿಗೊಂಡಿದೆ. ಇದರ ನಡುವೆಯೂ ಭಾರತ ಮತ್ತು ಚೀನಾ ಸೇನಾ ಪಡೆಗಳು ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತೀಯ ಸೇನಾ ಮೂಲಗಳು ಯಾವುದೇ ಚಕಮಕಿ ನಡೆದಿಲ್ಲ ಎಂದು ಹೇಳುತ್ತಿವೆ.

ಭಾರತೀಯ ಸೇನೆಯು ಹಿಡಿತ ಸಾಧಿಸಿರುವ ಬಗ್ಗೆ ಉಲ್ಲೇಖ
ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ಬ್ಯಾಂಕ್ ಪ್ರದೇಶದಲ್ಲಿ ಭಾರತೀಯ ಸೇನೆಯು ಪೂರ್ವಭಾವಿಯಾಗಿ ಭದ್ರತಾ ವ್ಯವಸ್ಥೆಯನ್ನು ಮಾಡಿಕೊಂಡಿದೆ. ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ಸೇನೆಯ ಕರ್ನಲ್ ಅಮನ್ ಆನಂದ್ ತಿಳಿಸಿದ್ದಾರೆ. ಪಾಂಗೊಂಗ್ ಸರೋವರದ ದಕ್ಷಿಣ ಪ್ರದೇಶದಲ್ಲಿ ಭಾರತೀಯ ಪಡೆಗಳು ಪೀಪಲ್ಸ್ ಲಿಬರೇಷನ್ ಆರ್ಮಿಯ ಚಟುವಟಿಕೆಗಳನ್ನು ತಡೆದಿದ್ದು, ತಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳಲಾಗಿತ್ತು ಎಂದು ಭಾರತೀಯ ಸೇನೆಯು ತಿಳಿಸಿದೆ.












Click it and Unblock the Notifications