ಭಾರತೀಯ ಯೋಧರ ಮೇಲೆ ಹಲ್ಲೆಗೆ ಬಳಸಿದ ಆಯುಧ ಭಯಂಕರ!
ನವದೆಹಲಿ, ಜೂನ್.19: ಭಾರತ-ಚೀನಾ ಗಡಿ ಪ್ರದೇಶದ ಲಡಾಖ್ ಪೂರ್ವ ಗಡಿಯಲ್ಲಿರುವ ಗಾಲ್ವಾನ್ ನದಿ ಕಣಿವೆ ಮೇಲೆ ಡ್ರ್ಯಾಗನ್ ರಾಷ್ಟ್ರವು ಕಣ್ಣಿಟ್ಟಿದೆ. ಇದೇ ವಿಚಾರಕ್ಕೆ ಕಳೆದ ಜೂನ್.15 ಮತ್ತು 16ರಂದು ಉಭಯ ರಾಷ್ಟ್ರಗಳ ಸೇನೆಗಳು ಮುಖಾಮುಖಿಯಾಗಿ ಘರ್ಷಣೆ ನಡೆದಿದೆ.
Recommended Video
ಭಾರತ-ಚೀನಾ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಪ್ರಾಣ ಬಿಟ್ಟಿದ್ದು, ಇದಕ್ಕೆ ಪ್ರತಿಯಾಗಿ ನಡೆಸಿದ ದಾಳಿಯಲ್ಲಿ 35 ಮಂದಿ ಚೀನಾ ಯೋಧರನ್ನು ಹೊಡೆದುರುಳಿಸಲಾಗಿದೆ ಎಂದು ಅಮೆರಿಕಾ ಗುಪ್ತಚರ ಇಲಾಖೆಯು ಮಾಹಿತಿ ನೀಡಿದೆ. ಆದರೆ ಚೀನಾ ಸರ್ಕಾರವು ತಮ್ಮ ಸೈನಿಕರ ಸಾವು ಹಾಗೂ ಹಾನಿಗೆ ಸಂಬಂಧಿಸಿದಂತೆ ಯಾವುದೇ ರೀತಿ ಮಾಹಿತಿಯನ್ನು ನೀಡಿಲ್ಲ.
1962ರ ಭಾರತ-ಚೀನಾ ಯುದ್ಧದ ನಂತರ ಅಂತಾರಾಷ್ಟ್ರೀಯ ಗಡಿರೇಖೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ನಾಲ್ಕು ದಶಕಗಳ ನಂತರ ಗಡಿಯು ಯೋಧರ ಸಾವಿಗೆ ಸಾಕ್ಷಿಯಾಗಿದ್ದು ಹೇಗೆ, ಮದ್ದು-ಗುಂಡುಗಳನ್ನು ಬಳಸದೇ ಭಾರತೀಯ ಯೋಧರೊಂದಿಗೆ ಚೀನೀ ಸೈನಿಕರು ಜಟಾಪಟಿ ನಡೆಸಿದ್ದು ಏಕೆ ಎಂಬುದರ ಕುರಿತು ಸಂಪೂರ್ಣ ಚಿತ್ರಣ ಇಲ್ಲಿದೆ ನೋಡಿ.

ಚೀನಾದ ಸೈನಿಕರು ಬಳಸಿದ ಆಯುಧ ಹೀಗಿತ್ತು
ಗಲ್ವಾನ್ ನದಿ ಕಣಿವೆಯ ಪೆಟ್ರೋಲ್ ಪಾಯಿಂಟ್ 14ರ ಬಳಿ ಸಂಘರ್ಷದಲ್ಲಿ ಚೀನೀ ಸೈನಿಕರು ರೌಡಿಗಳಂತೆ ವರ್ತಿಸಿದ್ದರು. ಭಾರತೀಯ ಯೋಧರ ಮೇಲೆ ಕಬ್ಬಿಣದ ಸರಳುಗಳು, ಉಗುರು ತುಂಬಿದ ಕ್ಲಬ್ಗಳು ಮತ್ತು ಮುಳ್ಳುತಂತಿಯಿಂದ ಸುತ್ತಿದ ಬಂಡೆ, ರಾಡ್ ಗಳಿಂದ ಹಲ್ಲೆ ನಡೆಸಿದ್ದಾರೆ. ಚೀನೀ ಸೈನಿಕರು ಭಾರತೀಯ ಯೋಧರ ಮೇಲೆ ಹಲ್ಲೆ ಬಳಸಿದ ಆಯುಧಗಳೇ ಚೀನಾದ ಕ್ರೌರ್ಯವನ್ನು ಎತ್ತಿ ತೋರಿಸುವಂತಿದೆ. ಈ ಆಯುಧದ ಫೋಟೋವನ್ನು ರಕ್ಷಣಾ ವಿಶ್ಲೇಷಕರಾಗಿರುವ ಅಜಯ್ ಶುಕ್ಲಾ ಟ್ವೀಟ್ ಮಾಡಿದ್ದಾರೆ.

1996ರಲ್ಲಿ ಭಾರತ-ಚೀನಾ ನಡುವೆ ಮಹತ್ವದ ಒಪ್ಪಂದ
ಉಭಯ ರಾಷ್ಟ್ರಗಳ ನಡುವೆ 1996ರಲ್ಲಿ ಮಹತ್ವದ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಭಾರತ-ಚೀನಾದ ಗಡಿ ಪ್ರದೇಶದಲ್ಲಿ ಎರಡು ರಾಷ್ಟ್ರಗಳ ಯೋಧರು ಯಾವುದೇ ರೀತಿ ಬಂದೂಕು-ಗುಂಡುಗಳನ್ನು ಹಾಗೂ ಸ್ಫೋಟಕಗಳನ್ನು ಬಳಸುವಂತಿಲ್ಲ. ಗುಂಡಿನ ಚಕಮಕಿ ನಡೆಸುವಂತಿಲ್ಲ ಎಂದು ಒಪ್ಪಂದದಲ್ಲಿ ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲೇ ವಿಚಿತ್ರ ಹಾಗೂ ವಿಕೃತ ಆಯುಧಗಳನ್ನು ಭಾರತೀಯ ಸೇನಾ ಯೋಧರ ಮೇಲೆ ಹಲ್ಲೆ ನಡೆಸುವುದಕ್ಕೆ ಚೀನೀ ಯೋಧರು ಬಳಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.

ಹರಿಯುವ ಗಾಲ್ವಾನ್ ನದಿಗೆ ಬಿದ್ದರಾ ಸೈನಿಕರು?
ಭಾರತ-ಚೀನಾ ನಡುವಿನ ಗಡಿಯ ಕಡಿದಾದ ಪ್ರದೇಶದ 4300 ಮೀಟರ್ ಅಂದರೆ 14,000 ಅಡಿ ಎತ್ತರದಲ್ಲಿ ಎರಡು ರಾಷ್ಟ್ರಗಳ ಸೇನಾ ಯೋಧರು ಪರಸ್ಪರ ಘರ್ಷಣೆ ನಡೆಸಿದರು. ಉಪ-ಶೂನ್ಯ ತಾಪಮಾನದಲ್ಲಿ ನಡೆದ ಸಂಘರ್ಷದಲ್ಲಿ ಕೆಲವು ಸೈನಿಕರು ಗಾಲ್ವಾನ್ ನದಿಗೆ ಬಿದ್ದರು ಎಂದು ಕೆಲವು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಗಡಿಯಲ್ಲಿ 45 ವರ್ಷಗಳ ಬಳಿಕ ಮೊದಲ ಸಾವು
ಭಾರತ-ಚೀನಾ ನಡುವಿನ ಸೇನಾ ಯೋಧರ ನಡುವೆ ನಡೆದ ಸಂಘರ್ಷದಲ್ಲಿ 45 ವರ್ಷಗಳ ಬಳಿಕ ಮೊದಲ ಬಾರಿಗೆ ಯೋಧರು ಹುತಾತ್ಮರಾಗಿದ್ದಾರೆ. 20 ಯೋಧರು ಮೃತಪಟ್ಟಿರುವ ಬಗ್ಗೆ ಭಾರತೀಯ ಸೇನೆಯು ಸ್ಪಷ್ಟಪಡಿಸಿದೆ. ಆದರೆ ಚೀನಾ ಸರ್ಕಾರವು ತಮ್ಮ ಸೈನಿಕರ ಸಾವು-ನೋವಿನ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಪ್ರಾಥಮಿಕ ಹಂತದಲ್ಲಿ 40ಕ್ಕಿಂತ ಹೆಚ್ಚು ಚೀನೀ ಯೋಧರು ಸಂಘರ್ಷದಲ್ಲಿ ಹತರಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಭಾರತದ ವಿರುದ್ಧ ಬೊಟ್ಟು ಮಾಡುತ್ತಿರುವ ಚೀನಾ
ಗಲ್ವಾನ್ ಗಡಿಯಲ್ಲಿ ನಡೆದ ಸಂಘರ್ಷಕ್ಕೆ ಭಾರತವೇ ಕಾರಣ ಎಂದು ಚೀನಾ ದೂಷಿಸುತ್ತಿದೆ. ಈ ಬಗ್ಗೆ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಾಯೋ ಲಿಜಿಯಾಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಭಾರತೀಯ ಸೈನಿಕರು ಗಡಿಯಲ್ಲಿ ಅಪ್ರಚೋದಿತ ದಾಳಿ ನಡೆಸಿದ್ದು, ಕದನ ವಿರಾಮ ಉಲ್ಲಂಘಿಸಿದ್ದಾರೆ. ಚೀನಾದ ಸೈನಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಎರಡೂ ಕಡೆಯ ಸೇನೆಗೆ ಹಾನಿಯಾಗಿದೆ ಎಂದು ಆರೋಪಿಸಿದ್ದಾರೆ. ಇದರ ಜೊತೆಗೆ ಚೀನಾ ಬುಧವಾರ "ಗಾಲ್ವಾನ್ ಕಣಿವೆ ಪ್ರದೇಶದ ಮೇಲೆ ಸಾರ್ವಭೌಮತ್ವ ಹೊಂದಿರುವುದಾಗಿ ಹೇಳಿಕೊಂಡಿತು. ಭಾರತವು ಇದೊಂದು "ಉತ್ಪ್ರೇಕ್ಷಿತ ಮತ್ತು ಒಪ್ಪಲಾಗದ" ವಾದ ಎಂದು ಖಂಡಿಸಿದೆ.

ಸಮಸ್ಯೆ ಇತ್ಯರ್ಥಕ್ಕೆ ಉಭಯ ರಾಷ್ಟ್ರಗಳ ಮಾತುಕತೆ
ಚೀನಾ ವಿದೇಶಾಂಗ ವ್ಯವಹಾರಗಳ ವಕ್ತಾರರ ಜೊತೆಗೆ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ದೂರವಾಣಿ ಮೂಲಕ ಮಾತನಾಡಿದ್ದಾರೆ. ಉತ್ಪ್ರೇಕ್ಷಿತ ಮತ್ತು ಒಪ್ಪಲಾಗದ ಹಕ್ಕುಗಳನ್ನು ನೀಡುವುದು ಈ ತಿಳುವಳಿಕೆಗೆ ವಿರುದ್ಧವಾಗಿದೆ. ಉಭಯ ರಾಷ್ಟ್ರಗಳ ನಡುವಿನ ಸಮಸ್ಯೆಯನ್ನು ಶಾಂತಿಯುತ ಮತ್ತು ಜವಾಬ್ದಾರಿಯುತ ವಿಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲಾಗುತ್ತದೆ ಎಂದು ಹೇಳಿದರು.

1975ರಲ್ಲೂ ಕಾಲ್ಕೆರೆದು ಜಗಳಕ್ಕೆ ನಿಂತಿದ್ದ ಚೀನಾ
ಭಾರತ-ಚೀನಾ ನಡುವೆ ಪೂರ್ವದಿಂದ ಪಶ್ಚಿಮ ಗಡಿಯವರೆಗೂ 3,440 ಕಿಲೋ ಮೀಟರ್ ಗಡಿ ನಿಯಂತ್ರಣ ರೇಖೆಯಲ್ಲಿ ಮದ್ದು-ಗುಂಡುಗಳನ್ನು ಬಳಕೆ ಮಾಡುವಂತಿಲ್ಲ. ಈ ನಿಟ್ಟಿನಲ್ಲಿ 1996ರಲ್ಲೇ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಆದರೆ ಇದಕ್ಕೂ ಮೊದಲು ಅರುಣಾಚಲ ಪ್ರದೇಶದಲ್ಲಿ 1975ರಲ್ಲಿ ಘಟನೆಯೊಂದು ನಡೆದಿತ್ತು. ಗಡಿಯಲ್ಲಿ ಗಸ್ತು ಕಾಯುತ್ತಿದ್ದ ಭಾರತೀಯ ಯೋಧರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ದಟ್ಟ ಮಂಜಿನ ಅಡಿಯಲ್ಲಿ ಸಿಲುಕಿಯೇ ಭಾರತೀಯ ಯೋಧರು ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಇನ್ನೊಂದು ಹಂತದಲ್ಲಿ ಚೀನಾ ಯೋಧರೇ ನಾಲ್ವರು ಭಾರತೀಯ ಯೋಧರ ಮೇಲೆ ಗುಂಡು ಹಾರಿಸಿ ಕೊಂದಿದ್ದರು ಎಂದು ಆರೋಪವೂ ಕೇಳಿ ಬಂದಿತ್ತು.

1962ರಲ್ಲಿ ಭಾರತೀಯ ಸೇನಾ ಶಿಬಿರಗಳ ಮೇಲೆ ದಾಳಿ
ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಸೇನೆ 1962 ಅಕ್ಟೋಬರ್.20ರ ಮುಂಜಾನೆ ನಡೆಸಿದ ದಾಳಿಯಲ್ಲಿ ಭಾರತೀಯ ಸೇನಾ ಶಿಬಿರಗಳನ್ನು ಹೊಡೆದುರುಳಿಸಲಾಯಿತು. ಅದಾಗಿಯೂ ಮುಂದಿನ 24 ಗಂಟೆಗಳ ಕಾಲ ಭಾರತೀಯ ಸೇನೆಯಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಭಾರತೀಯ ಸೇನೆಯು ಆಶಾದಾಯವಾಗಿದ್ದರೂ, ಶಸ್ತ್ರಾಸ್ತ್ರಗಳ ಅಭಾವ ಸೇನೆಗೆ ಹಿನ್ನಡೆಯನ್ನು ಉಂಟು ಮಾಡಿತು. ಗಲ್ವಾನ್ ನದಿ ಕಣಿವೆಯಲ್ಲಿನ ವಿವಿಧ ಸೇನಾ ಶಿಬಿರಗಳಲ್ಲಿದ್ದ 68 ಯೋಧರ ಪೈಕಿ 34ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡರು. ಶಿಯಾಕ್-ಗಾಲ್ವಾನ್ ನದಿ ಸಂಗಮದ ಪ್ರದೇಶದಲ್ಲಿ ಚೀನಾ ತನ್ನ ಪ್ರಬಲ ಹಿಡಿತವನ್ನು ಸಾಧಿಸಿತು. ಅಂದು ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಸೇನೆಯ ಮೇಜರ್ ಎಚ್.ಎಸ್.ಹಸಬ್ನಿಸ್ ರನ್ನು ಚೀನಾ ಸೇನೆಯು ಬಂಧಿಸಿತು. 1962ರ ಯುದ್ಧದ ನಂತರ, ಈ ವಲಯದಲ್ಲಿ ಹೆಚ್ಚೇನೂ ಸಂಭವಿಸಲಿಲ್ಲ ಮತ್ತು ಇಲ್ಲಿಯವರೆಗೆ ಅದು ಸುಪ್ತವಾಗಿದೆ.












Click it and Unblock the Notifications