11 ಗಂಟೆಗಳ ಸಭೆಯಲ್ಲಿ ಭಾರತ-ಚೀನಾ ಕಮಾಂಡರ್ಸ್ ಚರ್ಚಿಸಿದ್ದೇನು?
ನವದೆಹಲಿ, ಜೂನ್.23: ಭಾರತ-ಚೀನಾ ಗಡಿಭಾಗದ ಲಡಾಖ್ ಪೂರ್ವಭಾಗದಲ್ಲಿರುವ ಗಾಲ್ವಾನ್ ನದಿ ಕಣಿವೆ ಸಂಘರ್ಷದ ಬಳಿಕ ಉಭಯ ರಾಷ್ಟ್ರಗಳ ಕಾರ್ಪ್ ಕಮಾಂಡರ್ ಹಂತದಲ್ಲಿ ಸುದೀರ್ಘ ಸಭೆಯೊಂದನ್ನು ನಡೆಸಲಾಗಿದೆ.
Recommended Video
ಸೋಮವಾರ ಬೆಳಗ್ಗೆ 11.30ಕ್ಕೆ ಆರಂಭಗೊಂಡ ಕಮಾಂಡರ್ ಹಂತದ ಸಭೆಯು ಬರೋಬ್ಬರಿ 11 ಗಂಟೆಗಳ ನಂತರ ಮುಕ್ತಾಯಗೊಂಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಮೊಲ್ಡೊ ಪ್ರದೇಶದಲ್ಲಿ ನಡೆದ 11 ಗಂಟೆಗಳ ಸುದೀರ್ಘ ಸಭೆಯ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.
ಭಾರತ-ಚೀನಾ ಕಮಾಂಡರ್ಸ್ ಸಭೆ ಬಗ್ಗೆ ಸೇನಾ ವಕ್ತಾರರು ಹೇಳಿದ್ದೇನು?
ಜೂನ್.22ರಂದು ಭಾರತೀಯ ಸೇನೆಯ 14 ಕಾರ್ಪ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮತ್ತು ಚೀನಾ ಕಮಾಂಡರ್ ಜೊತೆಗೆ ಎರಡನೇ ಬಾರಿ ಮಹತ್ವದ ಸಭೆಯನ್ನು ನಡೆಸಲಾಯಿತು.
ಜೂನ್ ತಿಂಗಳ ಆರಂಭದಲ್ಲೇ ಮೊದಲ ಸಭೆ
ಲಡಾಖ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆ ಜೂನ್.06ರಂದು ಮೊದಲ ಬಾರಿಗೆ ಶಾಂತಿ ಮಾತುಕತೆ ನಡೆಸಲಾಯಿತು. ಚೀನಾದ ದಕ್ಷಿಣ ಕ್ಸಿನ್ ಜಿಯಾಂಗ್ ಜಿಲ್ಲೆಯ ಕಮಾಂಡರ್ ಮೇಜರ್ ಜನರಲ್ ಲಿಯು ಲಿನ್ ಹಾಗೂ ಭಾರತದ ಕಾರ್ಪ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ನೇತೃತ್ವದ ನಿಯೋಗದ ನಡುವೆ ಶಾಂತಿ ಮಾತುಕತೆ ನಡೆಯಿತು. ಪೂರ್ವ ಲಡಾಖ್ ನ ಚುಶುಲ್ ಸೆಕ್ಟರ್ ನಲ್ಲಿರುವ ಮೊಲ್ಡೋ ಪ್ರದೇಶದ ಗಡಿ ಸುರಕ್ಷತಾ ಚರ್ಚೆಯ ಕೇಂದ್ರದಲ್ಲಿ ಉಭಯ ರಾಷ್ಟ್ರಗಳ ಮಿಲಿಟರಿ ಕಮಾಂಡರ್ಸ್ ಚರ್ಚಿಸಿದ್ದರು. ಈ ವೇಳೆ ಗಡಿ ನಿಯಂತ್ರಣ ರೇಖೆಯ ಬಳಿ ನಿಯೋಜಿಸಿದ್ದ ಹೆಚ್ಚುವರಿ ಸೇನೆಯನ್ನು ವಾಪಸ್ ಕರೆಸಿಕೊಳ್ಳುವಂತೆ ಚೀನಾಗೆ ಭಾರತೀಯ ಕಮಾಂಡರ್ ತಾಕೀತು ಮಾಡಿದ್ದರು.
ಭಾರತಕ್ಕೆ ತದ್ವಿರುದ್ಧವಾಗಿ ನಡೆದುಕೊಂಡ ಚೀನಾ
ಭಾರತ-ಚೀನಾ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳುವುದಕ್ಕೆ ಸೇನಾ ಸಂಗ್ರಹವೇ ಮೂಲ ಕಾರಣವಾಗಿದೆ. ಉಭಯ ರಾಷ್ಟ್ರಗಳ ಗಡಿರೇಖೆಯಲ್ಲಿ ಹೆಚ್ಚಿಸುತ್ತಿರುವ ಚೀನಾ ಸೇನಾಪಡೆಯ ಪ್ರಮಾಣವನ್ನು ತಗ್ಗಿಸಬೇಕು. ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಮೊದಲ ಹಂತದ ಕಮಾಂಡರ್ ಸಭೆಯಲ್ಲಿ ಭಾರತವು ತಿಳಿಸಿತ್ತು. ಆದರೆ ಚೀನಾ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿತು. ಗಡಿಯಿಂದ ಚೀನಾ ತನ್ನ ಯೋಧರನ್ನು ವಾಪಸ್ ಕರೆಸಿಕೊಳ್ಳಲಿಲ್ಲ. ಬದಲಿಗೆ 10,000 ಸೈನಿಕರನ್ನು ಹೆಚ್ಚುವರಿಯಾಗಿ ಗಡಿಯಲ್ಲಿ ಸಂಗ್ರಹಿಸುವುದಕ್ಕೆ ಮುಂದಾಯಿತು.
ಶಸ್ತ್ರಾಸ್ತ್ರ ನಿಯಮ ಬದಲಿಸಿತಾ ಭಾರತೀಯ ಸೇನೆ?
ಲಡಾಖ್ ಪೂರ್ವ ಗಡಿ ಪ್ರದೇಶದಲ್ಲಿ ಚೀನಾ ತನ್ನ ಸೇನಾ ಸಂಗ್ರಹವನ್ನು ಹೆಚ್ಚಿಸುತ್ತಿದ್ದು, ಗಡಿಯಲ್ಲಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಿದೆ. ಈ ಹಿನ್ನೆಲೆ ಭಾರತೀಯ ಸೇನೆಯು ಶಸ್ತ್ರಾಸ್ತ್ರ ನಿಯಮವನ್ನು ಬದಲಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಅಂದರೆ ಫೀಲ್ಡ್ ಕಮಾಂಡರ್ಗಳಿಗೆ ತುರ್ತು ಸನ್ನಿವೇಶದಲ್ಲಿ ಬಂದೂಕನ್ನು ಬಳಸಲು ಅನುಮತಿ ನೀಡಲಾಗಿದೆ. ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿರುವುದಾಗಿ ತಿಳಿಸಿದ್ದರು. ಇದಾದ ಬಳಿಕ ಸೇನೆ ಈ ನಿರ್ಧಾರವನ್ನು ಕೈಗೊಂಡಿದೆ.
ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಕಾರಣ
ಕಳೆದ ಮೇ.5ರಂದು ಮೊದಲ ಬಾರಿಗೆ ಭಾರತ-ಚೀನಾ ಸೇನೆಗಳು ಲಡಾಖ್ ಗಡಿ ಪ್ರದೇಶದಲ್ಲಿ ಮುಖಾಮುಖಿಯಾಗಿದ್ದವು. ಜೂನ್.15 ಮತ್ತು 16ರಂದು ಉಭಯ ರಾಷ್ಟ್ರಗಳ ಸೇನೆ ನಡುವೆ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, 76 ಯೋಧರು ಗಾಯಗೊಂಡಿದ್ದರು. ಇದೊಂದು ಘಟನೆಯಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದ್ದು, ಲಡಾಖ್ ಗಡಿಯು ಬೂದಿ ಮುಚ್ಚಿದ ಕೆಂಡದಂತೆ ಆಗಿದೆ.