ಶ್ರೀಲಂಕಾಗೆ ವಾಪಸ್ಸಾದ ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸೆ
ಕೊಲಂಬೋ, ಸೆಪ್ಟೆಂಬರ್ 03: ದ್ವೀಪ ರಾಷ್ಟ್ರ ಶ್ರೀಲಂಕಾದ ಭೀಕರ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ದೇಶದಿಂದ ಪಲಾಯನ ಮಾಡಿದ್ದ ಪದಚ್ಯುತ ಮಾಜಿ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಏಳು ವಾರಗಳ ನಂತರ ಶುಕ್ರವಾರ ದೇಶಕ್ಕೆ ಮರಳಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜಪಕ್ಸೆ ಅವರು ಮುಖ್ಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಮಂತ್ರಿಗಳು ಮತ್ತು ರಾಜಕಾರಣಿಗಳು ಹಾಗೂ ಅವರ ಪಕ್ಷದಿಂದ ಪುಷ್ಪಗುಚ್ಚ ನೀಡಿ ಬರಮಾಡಿಕೊಂಡರು. ಅವರು ವಿಮಾನದಿಂದ ಹೊರಬರುತ್ತಿದ್ದಂತೆ ಅವರಿಗೆ ಹಾರ ಹಾಕಲು ರಾಜಕಾರಣಿಗಳ ನೂಕುನುಗ್ಗಲು ಇತ್ತು ಎಂದು ಅಧಿಕಾರಿ ಎಎಫ್ಪಿಗೆ ತಿಳಿಸಿದರು.
ಮುಂದಿನ ವಾರ ಶ್ರೀಲಂಕಾಕ್ಕೆ ವಾಪಸ್ಸಾಗಲಿದ್ದಾರೆ ಗೋಟಬಯ ರಾಜಪಕ್ಸೆ
ರಾಷ್ಟ್ರದ ಹಿಂದೆಂದು ಕಂಡುಕೇಳರಿಯದ ಆರ್ಥಿಕ ಬಿಕ್ಕಟ್ಟಿನಿಂದ ಅವರ ವಿರುದ್ಧದ ಪ್ರತಿಭಟನೆಗಳ ನಂತರ ಜನಸಮೂಹವು ಅವರ ಅಧಿಕೃತ ನಿವಾಸಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿದ್ದರು. ಅವರ ಖಾಸಗಿ ಸ್ಥಳಗಳು, ಸ್ವಿಮ್ಮಿಂಗ್ಫೂಲ್ ಸೇರಿದಂತೆ ಇಡೀ ಮನೆಯನ್ನೇ ಜನರು ಆವರಿಸಿಕೊಂಡಿದ್ದರು. ಹೀಗಾಗಿ ಅವರು ಜುಲೈ ಮಧ್ಯದಲ್ಲಿ ಮಿಲಿಟರಿ ಬೆಂಗಾವಲಿನಲ್ಲಿ ಶ್ರೀಲಂಕಾದಿಂದ ಪಲಾಯನ ಮಾಡಿದ್ದರು.
ಅವರು ಸಿಂಗಾಪುರಕ್ಕೆ ಪಲಾಯನ ಮಾಡಿ ಅಲ್ಲಿಂದ ತಮ್ಮ ರಾಜೀನಾಮೆಯನ್ನು ಕಳುಹಿಸಿದ್ದರು. ಬಳಿಕ ಥೈಲ್ಯಾಂಡ್ಗೆ ಪಲಾಯನ ಮಾಡಿದ್ದರು. ಅಲ್ಲಿಂದ ಅವರು ಹಿಂದಿರುಗಲು ಅನುಕೂಲವಾಗುವಂತೆ ತಮ್ಮ ಉತ್ತರಾಧಿಕಾರಿ ರಾನಿಲ್ ವಿಕ್ರಮಸಿಂಘೆಗೆ ಮನವಿ ಸಲ್ಲಿಸಿದ್ದರು. 73 ವರ್ಷದ ಗೋಟಬಯ ರಾಜಪಕ್ಸೆ ಬ್ಯಾಂಕಾಕ್ನಿಂದ ಸಿಂಗಾಪುರದ ಮೂಲಕ ವಾಣಿಜ್ಯ ವಿಮಾನದಲ್ಲಿ ಆಗಮಿಸಿ, ತನ್ನ 52 ದಿನಗಳ ಸ್ವಯಂ-ಘೋಷಿತ ದೇಶಭ್ರಷ್ಟತೆಯ ಅವಧಿಯನ್ನು ಕೊನೆಗೊಳಿಸಿದರು.
ಸರ್ವಪಕ್ಷಗಳ ರಾಷ್ಟ್ರೀಯ ಸರ್ಕಾರ ರಚನೆಗೆ ಮುಂದಾದ ಶ್ರೀಲಂಕಾ
ಅವರು ಥೈಲ್ಯಾಂಡ್ನ ಥಾಯ್ ಹೋಟೆಲ್ನಲ್ಲಿ ವಾಸಿಸುತ್ತಿದ್ದಾಗ ಶ್ರೀಲಂಕಾಗೆ ಮರಳಲು ಉತ್ಸುಕರಾಗಿದ್ದರು ಎಂದು ಅಲ್ಲಿನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು. ರಾಜಪಕ್ಸೆ ಅವರ ಅಲ್ಪಾವಧಿಯ ವೀಸಾವನ್ನು ವಿಸ್ತರಿಸಲು ಸಿಂಗಾಪುರ ನಿರಾಕರಿಸಿತು. ಹಾಗಾಗಿ ಅವರು ಆಗಸ್ಟ್ನಲ್ಲಿ ಥೈಲ್ಯಾಂಡ್ಗೆ ಪ್ರಯಾಣ ಬೆಳೆಸಿದರು. ಆದರೆ ರಕ್ಷಣಾ ಅಧಿಕಾರಿಗಳು ತಮ್ಮ ಸ್ವಂತ ಸುರಕ್ಷತೆಗಾಗಿ ಗೋಟಬಯ ತಂಗಿದ್ದ ತಮ್ಮ ಹೋಟೆಲ್ನಿಂದ ಹೊರಬರದಂತೆ ಸೂಚನೆ ನೀಡಿದ್ದರು. ನಂತರ ಅವರು ದೇಶಕ್ಕೆ ಹಿಂದಿರುಗಿದ ನಂತರ ಅವರನ್ನು ರಕ್ಷಿಸಲು ನಾವು ಹೊಸ ಭದ್ರತಾ ತಂಡವನ್ನೇ ರಚಿಸಿದ್ದೇವೆ. ಈ ತಂಡವು ಸೇನೆ ಮತ್ತು ಪೊಲೀಸ್ ಕಮಾಂಡೋಗಳ ಪಡೆಗಳನ್ನು ಒಳಗೊಂಡಿದೆ ಎಂದು ಅಧಿಕಾರಿ ಹೇಳಿದರು.
ಈ ಮಧ್ಯೆ ಪ್ರತಿಪಕ್ಷದ ರಾಜಕಾರಣಿಗಳು ರನಿಲ್ ವಿಕ್ರಮಸಿಂಘೆ ಅವರು ಪ್ರಬಲ ರಾಜಪಕ್ಸೆ ಕುಟುಂಬವನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಶ್ರೀಲಂಕಾದ ಸಂವಿಧಾನವು ಗೋಟಬಯ ಮತ್ತು ಅವರ ಹಿರಿಯ ಸಹೋದರ ಮತ್ತು ಸಹ ಮಾಜಿ ಅಧ್ಯಕ್ಷ ಮಹಿಂದಾ ಸೇರಿದಂತೆ ಮಾಜಿ ಅಧ್ಯಕ್ಷರಿಗೆ ಅಂಗರಕ್ಷಕರು, ವಾಹನ ಮತ್ತು ವಸತಿಗಳನ್ನು ಈಗಾಗಲೇ ನೀಡಿದೆ.
ಕ್ಯಾಲಿಫೋರ್ನಿಯಾದ ನ್ಯಾಯಾಲಯದಲ್ಲಿ ಪ್ರಕರಣ
ಗೋಟಬಯ ರಾಜಪಕ್ಸೆ ಅವರ ರಾಜೀನಾಮೆ ಮೂಲಕ ಅವರ ಕನಸಿನ ಅಧ್ಯಕ್ಷನ ಖುರ್ಚಿಯನ್ನು ಕೊನೆಗಾಣಿಸಿತು. ಆದರೆ ಈಗ ದೇಶಕ್ಕೆ ಬಂದಿರುವ ಗೋಟಬಯಗೆ ಮತ್ತೊಂದು ಕಂಟಕ ಎದುರಾಗಿದೆ. 2009ರ ದೇಶದ ಪತ್ರಿಕೆಯೊಂದರ ಸಂಪಾದಕ ಲಸಂತ ವಿಕ್ರಮತುಂಗೆ ಅವರ ಹತ್ಯೆಯಲ್ಲಿ ಅವರ ಪಾತ್ರವೂ ಸೇರಿದಂತೆ ಅನೇಕ ಆರೋಪಗಳ ಮೇಲೆ ಅವರ ಬಂಧನಕ್ಕೆ ಒತ್ತಾಯಿಸುವುದಾಗಿ ಹಕ್ಕುಗಳ ಕಾರ್ಯಕರ್ತರು ಹೇಳಿದ್ದಾರೆ.
ವಿಕ್ರಮತುಂಗೆಯ ಹತ್ಯೆ, ತಮಿಳು ಖೈದಿಗಳಿಗೆ ಚಿತ್ರಹಿಂಸೆ
ಹೀಗಾಗಿ ಅವರು ಎಸಗಿದ ಅಪರಾಧಗಳಿಗಾಗಿ ನಾವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಆಗ್ರಹಿಸುತ್ತೇವೆ ಎಂದು ಶ್ರೀಲಂಕಾ ಯುವ ಪತ್ರಕರ್ತರ ಸಂಘದ ವಕ್ತಾರ ಥರಿಂದು ಜಯವರ್ಧನ ಹೇಳಿದ್ದಾರೆ. 2009ರಲ್ಲಿ ಶ್ರೀಲಂಕಾದಲ್ಲಿ ನಡೆದ ಅಂತರ್ಯುದ್ಧದ ಕೊನೆಯಲ್ಲಿ ವಿಕ್ರಮತುಂಗೆಯ ಹತ್ಯೆ ಮತ್ತು ತಮಿಳು ಕೈದಿಗಳಿಗೆ ಚಿತ್ರಹಿಂಸೆ ನೀಡಿದ ಆರೋಪವನ್ನು ಗೋಟಬಯ ರಾಜಪಕ್ಸೆ ಯುಎಸ್ ರಾಜ್ಯದ ಕ್ಯಾಲಿಫೋರ್ನಿಯಾದ ನ್ಯಾಯಾಲಯದಲ್ಲಿ ಎದುರಿಸುತ್ತಿದ್ದಾರೆ.
ಶಸ್ತ್ರಸಜ್ಜಿತ ಕಾವಲುಗಾರರ ನಿಯೋಜನೆ
ರಾಜಪಕ್ಸೆ ಅವರ ಕಿರಿಯ ಸಹೋದರ, ಮಾಜಿ ವಿತ್ತ ಸಚಿವ ಬೆಸಿಲ್ ಅವರು ಕಳೆದ ತಿಂಗಳು ವಿಕ್ರಮಸಿಂಘೆ ಅವರನ್ನು ಭೇಟಿಯಾಗಿ ಪದಚ್ಯುತ ನಾಯಕನನ್ನು ಹಿಂದಿರುಗಿಸಲು ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು. ಶುಕ್ರವಾರದಂದು ಪೊಲೀಸರು ರಾಜಪಕ್ಸೆ ಆಗಮಿಸುವ ಮುನ್ನ ಕೊಲಂಬೊದಲ್ಲಿ ಅವರಿಗೆ ನೀಡಲಾಗಿದ್ದ ಸರ್ಕಾರಿ ನಿವಾಸದ ಹೊರಗೆ ಸರಳ ಉಡುಪಿನ ಅಧಿಕಾರಿಗಳು ಮತ್ತು ಶಸ್ತ್ರಸಜ್ಜಿತ ಕಾವಲುಗಾರರನ್ನು ನಿಯೋಜಿಸಿದ್ದರು.
ದೀರ್ಘಾವಧಿಗೆ ಕಗ್ಗತ್ತಲಲ್ಲಿದ್ದ ಶ್ರೀಲಂಕಾ
ಅವರು ಮೊದಲು ಖಾಸಗಿ ನಿವಾಸಕ್ಕೆ ಭೇಟಿ ನೀಡುವ ನಿರೀಕ್ಷೆಯಿಂದ ಅವರ ಖಾಸಗಿ ಮನೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ದೇಶದ ಅಗತ್ಯ ಆಮದುಗಳಿಗೆ ಹಣಕಾಸು ಒದಗಿಸಲು ವಿದೇಶಿ ಕರೆನ್ಸಿ ಖಾಲಿಯಾದ ನಂತರ ದೀರ್ಘಾವಧಿಗೆ ದೇಶವು ಕಗ್ಗತ್ತಲಲ್ಲಿ ಮುಳುಗಿತ್ತು. ಅಲ್ಲದೆ ಗಗನಕ್ಕೇರುತ್ತಿದ್ದ ಹಣದುಬ್ಬರದ ಜೊತೆಗೆ ಆಹಾರ, ಇಂಧನ ಮತ್ತು ಔಷಧಗಳು ಸೇರಿದಂತೆ ಪ್ರಮುಖ ಸರಕುಗಳ ಕೊರತೆಯನ್ನು ಶ್ರೀಲಂಕಾವು ತಿಂಗಳುಗಳ ಕಾಲ ಸಹಿಸಿಕೊಂಡಿತ್ತು.