ಏಕಾದಶಿ ಉಪವಾಸಕ್ಕೂ ನೊಬೆಲ್ ಪ್ರಶಸ್ತಿಗೂ ಎತ್ತಣಿಂದೆತ್ತಣ ಸಂಬಂಧವಯ್ಯಾ?
ಬೆಂಗಳೂರು, ಅಕ್ಟೋಬರ್ 14: ಏಕಾದಶಿ ಉಪವಾಸ ಅಂದರೆ ಮೂಗು ಮುರಿಯುವವರೇ ಹೆಚ್ಚು. ಅದಕ್ಕೆ ನೂರೆಂಟು ಪ್ರಶ್ನೆಗಳನ್ನು ಹಾಕಿ, ಅದರಿಂದ ಏನು ಲಾಭ ಹೇಳ್ರಿ ಎಂದು ಕಾಲೆಳೆಯುವವರಿಗೂ ಕಡಿಮೆ ಇಲ್ಲ. ಈ ಸಲದ ವೈದ್ಯಕೀಯ ನೊಬೆಲ್ ಸಿಕ್ಕಿರೋದು ಏಕಾದಶಿ ಉಪವಾಸಕ್ಕೆ ಅಂದರೆ ನಂಬ್ತೀರಾ? ಇದ್ಯಾವುದೋ ಹೊಸ ಕಥೆ ಶುರುವಿಟ್ಟುಕೊಂಡರು ಅಂತ ಅಂದುಕೊಳ್ಳಬೇಡಿ. ಈ ಲೇಖನ ಓದಿ.
ವೈದ್ಯಕೀಯ ಕ್ಷೇತ್ರದಲ್ಲಿನ ಸಾಧನೆಗಾಗಿ ಜಪಾನಿನ ವಿಜ್ಞಾನಿ ಡಾ.ಯೋಶಿನೊರಿ ಅವರಿಗೆ ನೊಬೆಲ್ ಸಂದಿದೆ. ಆಟೊಫಗಿ ಬಗೆಗಿನ ಅವರ ಸಂಶೋಧನೆಗೆ ಸಂದ ಗೌರವ ಇದಾಗಿದೆ. ಆಟೊಫಗಿ (Autophagy) ಅಂದರೆ 'ಸ್ವಯಂ ಭಕ್ಷಣೆ'. ಅದನ್ನು ಇನ್ನೂ ವಿಸ್ತರಿಸಿ ಹೇಳಬೇಕು ಅಂದರೆ, ತೊಂದರೆ ಇರುವ ಜೀವಕೋಶಗಳು ಮತ್ತು ಅನುಪಯುಕ್ತ ಪ್ರೊಟೀನ್ ಗಳನ್ನು ಮಾನವನ ದೇಹವು ಸ್ವಯಂ ಭಕ್ಷಣೆ ಮಾಡುವುದನ್ನು ಆಟೊಫಗಿ ಅಂತಾರೆ.
ಆಟೊಫಗಿ ತುಂಬ ಸಹಜವಾದ ಪ್ರಕ್ರಿಯೆ. ಉಪವಾಸ ಮಾಡಿದ ಸಂದರ್ಭದಲ್ಲಿ ಈ ಪ್ರಕ್ರಿಯೆ ತಾನಾಗಿಯೇ ಆಗುತ್ತದೆ. ಆಟೊಫಗಿ ವಿಫಲವಾದರೆ ಜೀವಕೋಶಗಳಿಗೆ ತೊಂದರೆಯಾಗುತ್ತದೆ. ಆ ಮೂಲಕ ವಿವಿಧ ಕಾಯಿಲೆಗಳು ಬರುತ್ತವೆ. ಕ್ಯಾನ್ಸರ್ ತಡೆಯುವುದಕ್ಕೆ, ನಿಯಂತ್ರಿಸುವುದಕ್ಕೆ ಆಟೊಫಗಿ ಪ್ರಕ್ರಿಯೆ ಬಹಳ ಮುಖ್ಯ. ಜತೆಗೆ ಬ್ಯಾಕ್ಟೀರಿಯಾ ಹಾಗೂ ವೈರಸ್ ನ ದಾಳಿಗೆ ತುತ್ತಾದ ಜೀವಕೋಶಗಳನ್ನು ಭಕ್ಷಣೆ ಮಾಡುವುದರಲ್ಲೂ ಇದು ಪ್ರಮುಖ ಪಾತ್ರ ವಹಿಸುತ್ತದೆ.[ಜೀವಕೋಶಗಳ ಸ್ವಯಂಭಕ್ಷಣೆ ಸಂಶೋಧಕನಿಗೆ ನೊಬೆಲ್!]

ಭಾರತೀಯ ಪರಂಪರೆಯಲ್ಲಿ ಹದಿನೈದು ದಿನಕ್ಕೊಮ್ಮೆ ಉಪವಾಸ ಮಾಡುವ ಪದ್ಧತಿ ಇದೆ. ಆ ದಿನವನ್ನು ಏಕಾದಶಿ ಅಂತಾರೆ. ಇದರಿಂದ ಜೈವಿಕವಾಗಿ ಆಗುವ ಉಪಯೋಗದ ಬಗ್ಗೆ ತಿಳಿಯದಿದ್ದರೂ ಅದೆಷ್ಟೋ ಮಂದಿ ಧಾರ್ಮಿಕ ಶ್ರದ್ಧೆಯಿಂದ ಏಕಾದಶಿ ಮಾಡಿಕೊಂಡು ಬರ್ತಿದ್ದಾರೆ. ಉಪವಾಸದಿಂದ ಆಟೊಫಗಿ ಉತ್ತೇಜಿತವಾಗುತ್ತದೆ. ಇದರಿಂದ ನಮ್ಮ ದೇಹವು ತೊಂದರೆಗೀಡಾದ ಜೀವಕೋಶ, ಅನುಪಯುಕ್ತ ಪ್ರೊಟೀನ್ಸ್ ಭಕ್ಷಣೆ ಮಾಡುತ್ತದೆ.
ಯಾವುದೇ ವೈಜ್ಞಾನಿಕ ಸಂಶೋಧನೆಗಳು ಹೊಸತೊಂದನ್ನು ಕಂಡುಹಿಡಿದಾಗ, ಒಂದಲ್ಲಾ ಒಂದು ರೀತಿ ಅದು ಭಾರತೀಯ ಪರಂಪರೆ ತಲೆತಲಾಂತರದಿಂದ ಅನುಸರಿಸಿಕೊಂಡು ಬಂದಿರುವ ಪದ್ಧತಿಗೆ ತಳುಕು ಹಾಕಿಕೊಳ್ಳುತ್ತದೆ. ಹದಿನೈದು ದಿನಕ್ಕೊಮ್ಮೆ ಪ್ರಾರ್ಥನೆ ಮತ್ತು ಪವಿತ್ರವಾದ ಕಾರ್ಯಗಳಲ್ಲಿ ತೊಡಗುವುದರಿಂದ ಮನಸ್ಸು, ಆತ್ಮಗಳಿಗೆ ಟಾನಿಕ್ ನಂತೆ ಆಗುತ್ತದೆ. ಅದೇ ರೀತಿ ಉಪವಾಸದಿಂದ ದೇಹಕ್ಕೆ ಹೊಸ ಚೈತನ್ಯ ದೊರೆಯುತ್ತದೆ.[ಏಳು ಜನ್ಮಗಳ ಅನುಬಂಧ ಬೆಸೆಯುವ 'ಸಪ್ತಪದಿ'ಯ ಮಹತ್ವ]
ದೇಹ ಹಾಗೂ ಮನಸ್ಸಿನ ಚಿಕಿತ್ಸೆಗಾಗಿ ನಮ್ಮ ಹಿರಿಯರು ಕಂಡುಕೊಂಡಿದ್ದು ಧಾರ್ಮಿಕ ಹಾದಿಯನ್ನು. ಈ ವಿಚಾರದಲ್ಲಿ ಅವರು ಕಂಡುಕೊಂಡ ಮಾರ್ಗಕ್ಕೆ ನಾವು ತಲೆಬಾಗಲೇಬೇಕು. ಅಧ್ಯಾತ್ಮದ ಔನ್ನತ್ಯ, ಆರೋಗ್ಯಪೂರ್ಣ ದೇಹ ಹಾಗೂ ಮನಸ್ಸು ಹೇಗೆ ಒಂದಕ್ಕೊಂದು ನಂಟು ಹೊಂದಿವೆ ಎಂದು ಇದರಿಂದಲೇ ತಿಳಿಯಬಹುದು.












Click it and Unblock the Notifications