ಚೀನಾ ಮುಂದೆ ಪಾಕಿಸ್ತಾನಕ್ಕೆ ತಪರಾಕಿ ಬಾರಿಸಿದ ಸುಷ್ಮಾ ಸ್ವರಾಜ್!
ವುಝೆನ್(ಚೀನಾ), ಫೆಬ್ರವರಿ 27: ಚೀನಾ ಪ್ರವಾಸದಲ್ಲಿರುವ ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪುಲ್ವಾಮಾ ದಾಳಿಯನ್ನು ಕಟುವಾಗಿ ಖಂಡಿಸಿದ್ದಲ್ಲದೆ, ಭಾರತ ಉಗ್ರನೆಲೆಯನ್ನು ಧ್ವಂಸಗೊಳಿಸಿದ್ದನ್ನು ಸಮರ್ಥಿಸಿಕೊಂಡರು.
ಹದಿನಾರನೇ ರಷ್ಯಾ-ಭಾರತ-ಚೀನಾ(RIC) ವಿದೇಶಾಂಗ ಸಚಿವರ ಸಭೆಯಲ್ಲಿ ಮಾತನಾಡುತ್ತಿದ್ದ ಸುಷ್ಮಾ ಸ್ವರಾಜ್, ಪಾಕಿಸ್ತಾನದ ಕುಚುಕು ಗೆಳೆಯ ಚೀನಾ ಎದುರೇ ಪಾಕಿಸ್ತಾನಕ್ಕೆ ತಪರಾಕಿ ಬಾರಿಸಿದ್ದಾರೆ.
ದಿನದ ಮುಖ್ಯ ಸುದ್ದಿ: ಭಾರತದ ಪ್ರತೀಕಾರ ಹೇಗಿತ್ತು? ಪಾಕ್ ಪ್ರತಿಕ್ರಿಯೆ ಹೇಗಿತ್ತು?
"ಭಾರತದಲ್ಲಿ ಆಕ್ರೋಶ ಹೊತ್ತಿ ಉರಿಯುತ್ತಿರುವ ಸಮಯದಲ್ಲಿ ನಾನು ಚೀನಾಕ್ಕೆ ಭೇಟಿ ನೀಡಿದ್ದೇನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಅತ್ಯಂತ ಹೀನಾತಿಹೀನ ಭಯೋತ್ಪಾದಕ ದಾಳಿ ಅದು" ಎಂದು ಸ್ವರಾಜ್, ಪುಲ್ವಾಮಾ ಉಗ್ರದಾಳಿಯನ್ನು ಉಲ್ಲೇಖಿಸಿದರು.
ಈ ಸಂದರ್ಭದಲ್ಲಿ ಭಾರತ ಪಾಕಿಸ್ತಾನದ ಗಡಿದಾಟಿ, ವೈಮಾನಿಕ ದಾಳಿ ನಡೆಸಿದ್ದನ್ನು ಸಮರ್ಥಿಸಿಕೊಂಡ ಅವರು, ಮತ್ತಷ್ಟು ಭಯೋತ್ಪಾದಕ ದಾಳಿ ನಡೆಸಲು ಜೈಷ್ ಉಗ್ರರು ಹೊಂಚುಹಾಕಿದ್ದ ವಿಷಯ ತಿಳಿದು, ಸ್ವರಕ್ಷಣೆಗಾಗಿ ನಾವು ಉಗ್ರನೆಲೆಯನ್ನು ಧ್ವಂಸಗೊಳಿಸಿದೆವು ಎಂದು ಅವರು ಸಮಜಾಯಿಷಿ ನೀಡಿದ್ದಾರೆ.
ಭಯೋತ್ಪಾದನೆಯನ್ನು ವಿಶ್ವ ಸಹಿಸುವುದಿಲ್ಲ!
"ನಮ್ಮ ಭದ್ರತಾ ಪಡೆ ಮೇಲೆ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಈ ಘಟನೆಗೆ ಕಾರಣ ಪಾಕಿಸ್ತಾನ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ. ಇಂಥ ಘಟನೆಗಳು ನಡೆದಾಗ, ವಿಶ್ವವು ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದಿಲ್ಲ ಎಂಬುದನ್ನು ತೋರಿಸಿಕೊಡುವುದು ಅತ್ಯಗತ್ಯ"-ಸುಷ್ಮಾ ಸ್ವರಾಜ್, ವಿದೇಶಾಂಗ ಸಚಿವೆ
ಪಾಕಿಸ್ತಾನಕ್ಕೆ ತಪರಾಕಿ
"ಪುಲ್ವಾಮಾ ಘಟನೆಯ ನಂತರ, ಅಂತಾರಾಷ್ಟ್ರೀಯ ಒತ್ತಡವಿದ್ದರೂ ಪಾಕಿಸ್ತಾನ ಅದನ್ನು ಗಂಭೀರವಾಗಿ ಪರಿಗಣಿಸುವ ಬದಲು ಜೈಷ್ ಗೂ ಇದಕ್ಕೂ ಸಂಬಮಧವಿಲ್ಲ ಎಂಬಂತೆ ವರ್ತಿಸಿದೆ. ಅಲ್ಲದೆ ಘಟನೆಯ ಬಗ್ಗೆ ತನಗೂ, ಜೈಷ್ ಗೂ ಯಾವುದೇ ಸಂಬಂಧವಿಲ್ಲ ಎಂಬಂಥ ಮಾತನ್ನಾಡಿದೆ. ಇದನ್ನು ನಾವು ಸಹಿಸುವುದಿಲ್ಲ- ಸುಷ್ಮಾ ಸ್ವರಾಜ್, ವಿದೇಶಾಂಗ ಸಚಿವೆ
ಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ರೋಚಕ ಮಾಹಿತಿ
ನಾವು ದಾಳಿ ಮಾಡಿದ್ದೇಕೆ?
ತನ್ನದೇ ನೆಲದಲ್ಲಿ ಉಗ್ರರಿದ್ದರೂ, ಅವರನ್ನು ಹತ್ತಿಕ್ಕಲು ಪಾಕಿಸ್ತಾನ ಪ್ರಯತ್ನಿಸುತ್ತಿಲ್ಲ. ಜೈಷ್ ಇ ಮೊಹಮ್ಮದ್ ಸಂಘಟನೆ ಭಾರತದಲ್ಲಿ ಮತ್ತಷ್ಟು ಉಗ್ರದಾಳಿ ನಡೆಸುವ ಖಚಿತ ಮಾಹಿತಿ ಲಭ್ಯವಾದ ನಿಟ್ಟಿನಲ್ಲಿ ನಾವು ಸ್ವರಕ್ಷಣೆಗಾಗಿ ಜೈಷ್ ಉಗ್ರರ ನೆಲೆಯನ್ನು ಗುರಿಯಾಗಿರಿಸಿಕೊಂಡು ಏರ್ ಸ್ಟೈಕ್ ಮಾಡಿದ್ದೇವೆ. ಅಮಾಯಕರ ಪ್ರಾಣಹಾನಿ ತಪ್ಪಿಸುವ ಸಲುವಾಗಿ ಸೈನಿಕ ಕಾರ್ಯಾಚರಣೆಯನ್ನು ನಾವು ಕೈಗೊಂಡಿಲ್ಲ" -ಸುಷ್ಮಾ ಸ್ವರಾಜ್, ವಿದೇಶಾಂಗ ಸಚಿವೆ
ಒಂದೂವರೆ ನಿಮಿಷದಲ್ಲಿ ಮುಗಿದ ಆ ಆಪರೇಷನ್ ಬಗ್ಗೆ ತಿಳಿಯಬೇಕಾದ 10 ಸಂಗತಿ
ನಮ್ಮ ಗುರಿ ಉಗ್ರರ ಮೇಲೆ ಮಾತ್ರ
"ಇದು ಸೈನಿಕ ಕಾರ್ಯಾಚರಣೆಯಲ್ಲ. ಯಾವುದೇ ಸೇನೆಯನ್ನೂ ನಾವು ನಿಯೋಜಿಸಿರಲಿಲ್ಲ. ನಮ್ಮ ಉದೇಶ, ಗುರಿಯೇನಿದ್ದರೂ ಭಾರತದಲ್ಲಿ ಮತ್ತೊಂದು ಭಯೋತ್ಪಾದಕ ದಾಳಿ ನಡೆಸುವ ಮುನ್ನ ಜೈಷ್ ಉಗ್ರರನ್ನು ಮಟ್ಟಹಾಕುವುದಾಗಿತ್ತು. ಈಗಲಾದರೂ ಪಾಕಿಸ್ತಾನ ಜವಾಬ್ದಾರಿಯಿಂದ ಕೆಲಸ ಮಾಡಬೇಕು" -ಸುಷ್ಮಾ ಸ್ವರಾಜ್, ವಿದೇಶಾಂಗ ಸಚಿವೆ