ತುರ್ತು ಪರಿಸ್ಥಿತಿ ಘೋಷಿಸಿದ ಪಾಕಿಸ್ತಾನ, ಇದಕ್ಕೆ ಕಾರಣವೇನು?
ಇಸ್ಲಮಾಬಾದ್, ಆಗಸ್ಟ್ 26: ಪಾಕಿಸ್ತಾನದ ಅನೇಕ ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ದೇಶದ ಪ್ರತಿಕೂಲ ಪರಿಸ್ಥಿತಿಯಿಂದಾಗಿ ಅಲ್ಲಿನ ಸರ್ಕಾರ ಅಧಿಕೃತವಾಗಿ "ರಾಷ್ಟ್ರೀಯ ತುರ್ತುಸ್ಥಿತಿ" ಘೋಷಿಸಿದೆ.
ಪಾಕಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್ಡಿಎಂಎ) ಇತ್ತೀಚಿನ ಮಾಹಿತಿಯ ಪ್ರಕಾರ, ಮಳೆ ಮತ್ತು ಪ್ರವಾಹದಿಂದ ಇದುವರೆಗೆ 343 ಮಕ್ಕಳು ಸೇರಿದಂತೆ 937 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ ಕನಿಷ್ಠ 30 ಮಿಲಿಯನ್ ಜನರು ಆಶ್ರಯವಿಲ್ಲದೆ ಸಂತ್ರಸ್ತರಾಗಿದ್ದಾರೆ ಎನ್ನಲಾಗಿದೆ.
ಬಂಧಿತ ಪಾಕಿಸ್ತಾನ ಉಗ್ರನ ಚಿಕಿತ್ಸೆಗೆ ನೆರವಾಗಲು ರಕ್ತದಾನ ಮಾಡಿದ ಭಾರತೀಯ ಸೇನಾ ಸಿಬ್ಬಂದಿ
ಜೂನ್ 14ರಿಂದ ಇಲ್ಲಿಯವರೆಗೆ ಪ್ರವಾಹ ಮತ್ತು ಮಳೆ ಸಂಬಂಧಿತ ಘಟನೆಗಳಿಂದ 306 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ಸಿಂಧ್ ಪ್ರಾಂತ್ಯದಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿವೆ. ಬಲೂಚಿಸ್ತಾನ್ 234 ಸಾವುಗಳನ್ನು ವರದಿ ಮಾಡಿದೆ. ಖೈಬರ್ ಪಖ್ತುಂಖ್ವಾ ಮತ್ತು ಪಂಜಾಬ್ ಕ್ರಮವಾಗಿ 185 ಮತ್ತು 165 ಸಾವುಗಳನ್ನು ದಾಖಲಿಸಿವೆ. ಪ್ರಸಕ್ತ ಮಾನ್ಸೂನ್ ಮಳೆಯಲ್ಲಿ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರದೇಶದಲ್ಲಿ ಒಂಬತ್ತು ಸಾವುಗಳು ವರದಿಯಾಗಿವೆ. ಅದೇ ಅವಧಿಯಲ್ಲಿ ಇಸ್ಲಾಮಾಬಾದ್ನಲ್ಲಿ ಒಂದು ಸಾವು ಸಂಭವಿಸಿದೆ ಎಂದು ಎನ್ಡಿಎಂಎಯನ್ನು ಉಲ್ಲೇಖಿಸಿ ಡಾನ್ ಪತ್ರಿಕೆ ವರದಿ ಮಾಡಿದೆ.
ಮಳೆಯ ಅಸಾಧಾರಣಾ ಹೆಚ್ಚಳವು ದೇಶದಾದ್ಯಂತ ಹಠಾತ್ ಪ್ರವಾಹವನ್ನು ಉಂಟುಮಾಡಿದೆ. ವಿಶೇಷವಾಗಿ ಪಾಕಿಸ್ತಾನದ ದಕ್ಷಿಣ ಭಾಗದಲ್ಲಿ ಸಿಂಧ್ನ 23 ಜಿಲ್ಲೆಗಳನ್ನು ವಿಪತ್ತು ಪೀಡಿತ ಎಂದು ಘೋಷಿಸಲಾಗಿದ್ದು, ಅದು ಸಹ ಈಗ ಮುಳುಗಡೆಯಾಗಿದೆ. ಅಸಹಜ ಮಳೆಯಿಂದ ಜನ ಸಾಮಾನ್ಯರ ಜೀವನ ದುಸ್ತರವಾಗಿದ್ದು, ಸರ್ಕಾರದಿಂದ ವಾರ್ ರೂಮ್ ಅನ್ನು ಸ್ಥಾಪಿಸಲಾಗಿದೆ. ಇದು ದೇಶಾದ್ಯಂತ ಪರಿಹಾರ ಕಾರ್ಯಾಚರಣೆಗಳನ್ನು ಮುನ್ನಡೆಸುತ್ತದೆ ಎಂದು ಹವಾಮಾನ ಇಲಾಖೆ ಸಚಿವ ಹೇಳಿದ್ದಾರೆ.
ನಿರಂತರ ಜೋರು ಮಳೆಯು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಕಷ್ಟಕರವಾಗಿದೆ. ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್ಗಳನ್ನು ತಲುಪಿಸುವ ಹೆಲಿಕಾಪ್ಟರ್ಗಳ ಹಾರಾಟವು ಇಲ್ಲಿ ಕಷ್ಟವಾಗಿದೆ. ಪಾಕಿಸ್ತಾನವು ತನ್ನ 8ನೇ ಮಾನ್ಸೂನ್ ಋತುಚಕ್ರವನ್ನು ಹಾದುಹೋಗುತ್ತಿದೆ. ಸಾಮಾನ್ಯವಾಗಿ ದೇಶವು ಕೇವಲ ಮೂರರಿಂದ ನಾಲ್ಕು ಚಕ್ರಗಳ ಮಾನ್ಸೂನ್ ಮಳೆಯನ್ನು ಹೊಂದಿರುತ್ತದೆ ಎಂದು ಸಚಿವರು ಇಸ್ಲಾಮಾಬಾದ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪಾಕಿಸ್ತಾನದ ಪ್ರಸ್ತುತ ಪರಿಸ್ಥಿತಿಯನ್ನು 2010 ರ ಪ್ರವಾಹದೊಂದಿಗೆ ಹೋಲಿಸಿದ ಸಚಿವ ರೆಹಮಾನ್, ಈ ವಾರದ ಆರಂಭದಲ್ಲಿ ಪ್ರಸ್ತುತ ಪರಿಸ್ಥಿತಿ ಅದಕ್ಕಿಂತ ಕೆಟ್ಟದಾಗಿದೆ. 2010 ರಲ್ಲಿ ನೀರು ಉತ್ತರದಿಂದ ಹರಿಯುತ್ತಿರಲಿಲ್ಲ. ಆಗ ಮಳೆಯು ಹೆಚ್ಚು ವಿನಾಶಕಾರಿಯಾಗಿತ್ತು. ಪಾಕಿಸ್ತಾನವು ಈ ಮಾನ್ಸೂನ್ನಲ್ಲಿ ಭಾರಿ ಮಳೆಯನ್ನು ಕಂಡಿದೆ. ಅಲ್ಲದೆ ಇದು ಸೆಪ್ಟೆಂಬರ್ನಲ್ಲಿ ಮತ್ತೊಂದು ಋತುವಿನ ಮಳೆಯ ಪುನರಾವರ್ತನೆಯ ಸಾಧ್ಯತೆಯನ್ನು ಕಾಣಬಹುದು ಎಂದು ಅಂಕಿಅಂಶಗಳು ಹೇಳಿವೆ ಎಂದು ಹೇಳಿದ್ದಾರೆ.
ಸೇತುವೆಗಳು ಮತ್ತು ರಸ್ತೆಗಳಿಗೆ ಹಾನಿ
ಭಾರೀ ಮಳೆಯಿಂದ ಉಂಟಾದ ಹಠಾತ್ ಪ್ರವಾಹಗಳಿಂದಾಗಿ ದೇಶದ ವಿವಿಧ ಪ್ರದೇಶಗಳಲ್ಲಿ ಸೇತುವೆಗಳು ಮತ್ತು ರಸ್ತೆಗಳು ಕೊಚ್ಚಿ ಹೋಗಿವೆ. ಸುಮಾರು 30 ಮಿಲಿಯನ್ ಜನರು ಆಶ್ರಯವಿಲ್ಲದೆ ಇದ್ದಾರೆ. ಅವರಲ್ಲಿ ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. ಅವರಿಗೆ ಇನ್ನೂ ಆಹಾರ ತಲುಪಿಸಲು ಸಾಧ್ಯವಾಗಿಲ್ಲ ಎಂದು ಸಚಿವ ರೆಹಮಾನ್ ಹೇಳಿದ್ದಾರೆ.
Breaking: ಪಾಕಿಸ್ತಾನ; ಇಮ್ರಾನ್ ಖಾನ್ಗೆ ಮಧ್ಯಂತರ ಜಾಮೀನು
ಪ್ರತಿದಿನ ಅಗತ್ಯ ವಸ್ತುಗಳ ಕೊರತೆ
ಅಂತಾರಾಷ್ಟ್ರೀಯ ದಾನಿಗಳಿಂದ ಪರಿಹಾರದ ಅಗತ್ಯವನ್ನುಕೋರಿದ ಸಚಿವ ರೆಹಮಾನ್, ದೇಶಕ್ಕೆ ಪರಿಹಾರದ ಅಗತ್ಯವು ಬೇಕಾಗಿದೆ. ಇದು ನಮಗೆ ಪ್ರತಿಕೂಲ ಪರಿಸ್ಥಿತಿಯಾಗಿದೆ. ಮಳೆ ನಿಲ್ಲದ ಕಾರಣ ಪ್ರತಿದಿನ ಅಗತ್ಯ ವಸ್ತುಗಳ ಕೊರತೆ ಉಂಟಾಗುತ್ತಿದೆ. ಇನ್ನೂ ನೀರು ಪ್ರವಾಹವಾಗಿ ಬರುತ್ತಲೇ ಇದೆ. ನಿರಾಶ್ರಿತರ ಸಂಖ್ಯೆ ಬೆಳೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಬಲೂಚಿಸ್ತಾನ್ಗೆ 1,00,000 ಟೆಂಟ್ಗಳು ಬೇಕು
ಸಿಂಧ್ ಪ್ರಾಂತ್ಯಕ್ಕೆ ಒಂದು ಮಿಲಿಯನ್ಗೂ ಹೆಚ್ಚು ಆಶ್ರಯತಾಣಗಳು ಬೇಕಾಗಿವೆ. ಬಲೂಚಿಸ್ತಾನ್ಗೆ 1,00,000 ಟೆಂಟ್ಗಳು ಬೇಕಾಗಿವೆ. ಹೀಗಾಗಿ ಎಲ್ಲಾ ಟೆಂಟ್ ತಯಾರಕರನ್ನು ಸಜ್ಜುಗೊಳಿಸಲಾಗಿದೆ. ತಾತ್ಕಾಲಿಕ ಟೆಂಟ್ಗಳಿಗಾಗಿ ಬಾಹ್ಯ ದಾನಿಗಳನ್ನು ಸಹ ಸಂಪರ್ಕಿಸಲಾಗಿದೆ. ಏತನ್ಮಧ್ಯೆ, ಪಾಕಿಸ್ತಾನದ ಮಾಹಿತಿ ಸಚಿವ ಮರಿಯುಮ್ ಔರಂಗಜೇಬ್, ಸಾಗರೋತ್ತರ ಪಾಕಿಸ್ತಾನಿಗಳು ಸೇರಿದಂತೆ ಜಗತ್ತಿನ ಬೇರೆ ರಾಷ್ಟ್ರಗಳು ಮುಂದೆ ಬಂದು ಪಾಕಿಸ್ತಾನದ ಈ ನಿರ್ಣಾಯಕ ಸ್ಥಿತಿಯಲ್ಲಿ ತಮ್ಮ ಜನರಿಗೆ ಸಹಾಯ ಮಾಡುವಂತೆ ಒತ್ತಾಯಿಸಿದ್ದಾರೆ.
ಸಿಂಹಾಸನದ ಹೀನಾಯ ಆಟ: ಜಾಹಿದ್ ಹುಸೇನ್
ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ದಾಖಲಾದ ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ರಾಜಕೀಯ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಈ ಪ್ರಾಕೃತಿಕ ತುರ್ತು ಪರಿಸ್ಥಿತಿ ಬಂದಿದೆ. ಧಾರಾಕಾರ ಮಳೆಯಿಂದ ದೇಶದ ಬಹುಭಾಗ ಹಾನಿಯಾಗಿರುವಾಗ ರಾಜಕೀಯ ನಾಯಕರು ಸಿಂಹಾಸನದ ಹೀನಾಯ ಆಟದಲ್ಲಿ ತೊಡಗಿರುವುದನ್ನು ನೋಡುವುದಕ್ಕಿಂತ ದುರಂತವಾದುದೇನೂ ಇಲ್ಲ ಎಂದು ಡಾನ್ಗೆ ಬರೆಯುತ್ತಾ ಪಾಕಿಸ್ತಾನಿ ಅಂಕಣಕಾರ ಜಾಹಿದ್ ಹುಸೇನ್ ಹೇಳಿದ್ದಾರೆ.