ಶ್ರೀಲಂಕಾ ಸರಣಿ ಆತ್ಮಹತ್ಯಾ ದಾಳಿಯ ರೂವಾರಿಗಳ ಬದುಕು ಹೇಗಿತ್ತು ಗೊತ್ತಾ?
ಆಕೆ ಹೆಸರು ಫಾತಿಮಾ ಫಜ್ಲಾ. ತನ್ನ ಮನೆಯ ಎದುರು ಇರುವ ಆ ಮೂರಂತಸ್ತಿನ ಕಟ್ಟಡ ಫಜ್ಲಾಗೆ ಎಂದೂ ಕೆಟ್ಟ ಕುತೂಹಲಕ್ಕೆ ಕಾರಣ ಆಗಿರಲಿಲ್ಲ. ಕೊಲಂಬೋ ಉಪನಗರದ ಆ ಬಡಾವಣೆಯಲ್ಲಿ ಸ್ಥಿತಿವಂತರೇ ಹೆಚ್ಚು. ಆ ಮೂರಂತಸ್ತಿನ ಮನೆಯಲ್ಲಿ ಇರುವವರು ಆ ಪರಿಯ ಕುಖ್ಯಾತಿ ಪಡೆಯಬಹುದು ಎಂದು ಫಾತಿಮಾ ಫಜ್ಲಾಗೆ ಸಣ್ಣ ಊಹೆ ಕೂಡ ಇರಲಿಲ್ಲ.
ಮಹವೆಲ ಗಾರ್ಡನ್ಸ್ ನ ಬಿಳಿ ಬಣ್ಣದ ಸುಣ್ಣ ಬಳಿದಿದ್ದ ಮನೆಯಲ್ಲಿ ಆ ಸೋದರರು ವಾಸವಿದ್ದರು. ಶ್ರೀಲಂಕಾದಲ್ಲಿ ಕಳೆದ ಭಾನುವಾರ ಸಂಭವಿಸಿದ ಆತ್ಮಹತ್ಯಾ ದಾಳಿಗಳಲ್ಲಿ ಮುನ್ನೂರೈವತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರಲ್ಲಾ, ಆ ಸರಣಿ ದಾಳಿಯ ಪ್ರಮುಖ ರೂವಾರಿಗಳು ಈ ಸೋದರರು ಎಂಬುದು ಎಲ್ಲ ಕಡೆ ಹರಡಿರುವ ಸುದ್ದಿ. ಇದೀಗ ಆ ಬಡಾವಣೆಯಲ್ಲೇ ಇರುವ ಇತರರು ಈ ಮನೆಯಲ್ಲಿದ್ದವರು ಹೀಗಾ ಎಂದು ಅಚ್ಚರಿ ಪಡುತ್ತಿದ್ದಾರೆ.
ಮೂರು ಚರ್ಚ್, ನಾಲ್ಕು ಹೋಟೆಲ್ ಗಳಲ್ಲಿ ಆದ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಮೂವತ್ಮೂರು ವರ್ಷದ ಇನ್ಷಾಫ್ ಇಬ್ರಾಹಿಂ ತಾಮ್ರದ ಕಾರ್ಖಾನೆಯ ಮಾಲೀಕ. ಪಂಚತಾರಾ ಹೋಟೆಲ್ ಶಾಂಗ್ರಿ ಲಾದಲ್ಲಿ ತನ್ನನ್ನೇ ಸ್ಫೋಟಿಸಿಕೊಂಡ ಎಂದು ಆ ಕುಟುಂಬದ ಆಪ್ತ ಮೂಲಗಳು ಹೇಳಿವೆ.
ಇನ್ನು ಈ ಕುಟುಂಬದ ಮನೆ ಮೇಲೆ ಪೊಲೀಸರು ದಾಳಿ ನಡೆಸಿದಾಗ, ಇನ್ಷಾಫ್ ಇಬ್ರಾಹಿಂನ ಕಿರಿಯ ಸೋದರ ಇಲ್ಹಾಮ್ ಇಬ್ರಾಹಿಂ ತನ್ನನ್ನೇ ಸ್ಫೋಟಿಸಿಕೊಂಡಿದ್ದಾನೆ. ಆತ ಹಾಗೂ ಪತ್ನಿ, ಮೂವರು ಮಕ್ಕಳು ಆ ವೇಳೆ ಮೃತಪಟ್ಟಿದ್ದಾರೆ.

ಶ್ರೀಲಂಕಾ ಪೊಲೀಸರು ಮಾಹಿತಿ ಬಹಿರಂಗ ಮಾಡಿಲ್ಲ
ಅದೇ ಬಡಾವಣೆಯಲ್ಲಿ, ಆ ಮನೆಯ ಎದುರಿಗೆ ಇರುವ ಫಾತಿಮಾ ಫಜ್ಲಾರನ್ನು ಮಾತನಾಡಿಸಿದರೆ, ಅವರು ನೋಡುವುದಕ್ಕೆ ಒಳ್ಳೆ ಜನ ಇದ್ದಂತೆಯೇ ಇದ್ದರು ಎನ್ನುತ್ತಾರೆ. ಇನ್ಷಾಫ್ ಇಬ್ರಾಹಿಂ ಮನೆ ಮುಂದೆ ಈಗ ಪಹರೆ ಹಾಕಲಾಗಿದೆ. ಅಂದಹಾಗೆ, ಶ್ರೀಲಂಕಾದ ಸ್ಥಳೀಯ ಮಾಧ್ಯಮಗಳಲ್ಲೂ ಈ ಸೋದರರ ಬಗ್ಗೆ ವರದಿ ಆಗಿದೆ. ಹಾಗೆ ನೋಡಿದರೆ, ಶ್ರೀಲಂಕಾದ ಅಧಿಕಾರಿಗಳು ಬಾಂಬರ್ಸ್ ಗಳ ಬಗ್ಗೆ ಯಾವುದೇ ಮಾಹಿತಿ ಬಹಿರಂಗ ಮಾಡಿಲ್ಲ. ಈ ಬಗ್ಗೆ ಯಾವುದೇ ಅಭಿಪ್ರಾಯವನ್ನೂ ಪೊಲೀಸರು ಹೇಳಿಲ್ಲ. ಈ ಸೋದರರ ತಂದೆ ಮೊಹ್ಮದ್ ಇಬ್ರಾಹಿಂರನ್ನು ಬಂಧಿಸಿ, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೊಹ್ಮದ್ ಅವರು ಸಂಬಾರ ಪದಾರ್ಥಗಳ ವ್ಯಾಪಾರಿ. ವ್ಯಾಪಾರ ಸಮುದಾಯದ ಆಧಾರ ಸ್ತಂಭ. ಅವರಿಗೆ ಆರು ಗಂಡುಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳು. ಸಮಾಜದಲ್ಲಿ ಅವರ ಬಗ್ಗೆ ಗೌರವ ಇದೆ.

ಬಡವರಿಗೆ ಸಹಾಯ ಮಾಡುವುದರಲ್ಲಿ ಹೆಸರುವಾಸಿ
ಅವರು ಬಡವರಿಗೆ ಆಹಾರ ಮತ್ತು ಹಣದ ಸಹಾಯ ಮಾಡುವುದರಲ್ಲಿ ಈ ಪ್ರದೇಶದಲ್ಲಿ ಬಹಳ ಹೆಸರುವಾಸಿ. ಅವರ ಮಕ್ಕಳು ಹೀಗೆ ಮಾಡುತ್ತಾರೆ ಅಂದರೆ ನಂಬಲು ಸಾಧ್ಯವಿಲ್ಲ ಎನ್ನುವವರೇ ಹೆಚ್ಚು. ಅವರಿಬ್ಬರು ಹೆಣ್ಣುಮಕ್ಕಳ ಬಗ್ಗೆ ಒಳ್ಳೆ ಮಾತನಾಡುತ್ತಲೇ, ಇವರಿಬ್ಬರು ಇಂಥ ಕೆಲಸ ಮಾಡಿದ್ದರಿಂದ ಎಲ್ಲ ಮುಸ್ಲಿಮರನ್ನೂ ಅನುಮಾನದಿಂದ ನೋಡುವಂತಾಗುತ್ತದೆ ಎನ್ನುತ್ತಾರೆ ಕೆಲವರು. ಮೂವತ್ತೊಂದು ವರ್ಷದ ಇಲ್ಹಾಮ್ ಇಬ್ರಾಹಿಂ ಆಗಾಗ ತನ್ನ ಉಗ್ರವಾದದ ಅಭಿಪ್ರಾಯವನ್ನು ಹೊರ ಹಾಕುತ್ತಿದ್ದ. ಸ್ಥಳೀಯವಾಗಿ ಇರುವ ನ್ಯಾಷನಲ್ ತೌಹೀದ್ ಜಮಾತ್ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದ. ಈಚೆಗಿನ ಸರಣಿ ಸ್ಫೋಟದ ಯೋಜನೆಯಲ್ಲಿ ಆ ಸಂಘಟನೆಯ ಪಾತ್ರ ಇದೆ ಎನ್ನುತ್ತವೆ ಮೂಲಗಳು.

ಇನ್ಷಾಫ್ ಇಬ್ರಾಹಿಂಗೆ ಯಾವುದೇ ಹಣಕಾಸಿನ ಸಮಸ್ಯೆ ಇರಲಿಲ್ಲ
ಆದರೆ, ಇಲ್ಹಾಮ್ ನ ಅಣ್ಣ ಇನ್ಷಾಫ್ ಹಾಗಿರಲಿಲ್ಲ. ಆತನ ಆಲೋಚನೆಗಳು ಉತ್ತಮ ರೀತಿಯಲ್ಲೇ ಇದ್ದವು. ಉದ್ಯಮಿ ಆಗಿದ್ದ ಆತ, ತನ್ನ ಸಿಬ್ಬಂದಿಯ ಕುಟುಂಬಕ್ಕೆ ಕಷ್ಟ ಬಂದರೆ ನೆರವಾಗುತ್ತಿದ್ದ. ಉದಾರಿಯಾಗಿದ್ದ. ದಾನ-ಧರ್ಮ ಮಾಡುತ್ತಿದ್ದ. ಇನ್ಷಾಫ್ ನ ಪತ್ನಿ ಸಿರಿವಂತ ಆಭರಣ ವ್ಯಾಪಾರಿಗಳ ಕುಟುಂಬಕ್ಕೆ ಸೇರಿದ್ದರಿಂದ ಹಣಕಾಸಿನ ಸಮಸ್ಯೆ ಇರಲಿಲ್ಲ. "ನನಗೆ ಈ ಸಂಗತಿ ಗೊತ್ತಾಗಿ ದಿಗ್ಭ್ರಾಂತನಾದೆ" ಎನ್ನುತ್ತಾರೆ ಇನ್ಷಾಫ್ ಇಬ್ರಾಹಿಂ ಕುಟುಂಬದ ಮನೆ ಬಳಿಯೇ ಇರುವ ಮತ್ತೊಬ್ಬ ವ್ಯಕ್ತಿ. ಬೌದ್ಧರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಶ್ರೀಲಂಕಾದಲ್ಲಿ ಕಳೆದ ಹತ್ತು ವರ್ಷಗಳಿಂದ ನೆಮ್ಮದಿ ನೆಲೆಸಿತ್ತು. ತಮಿಳು ಪ್ರತ್ಯೇಕತಾವಾದಿಗಳನ್ನು ಪೂರ್ಣವಾಗಿ ನಿಶ್ಶೇಷ ಮಾಡಿದ ನಂತರ ಮತ್ತೆ ಈ ಪುಟ್ಟ ದ್ವೀಪ ರಾಷ್ಟ್ರದಲ್ಲಿ ಆತಂಕ ತಲೆ ಎತ್ತಿದೆ.

ಜತೆಯಲ್ಲಿ ಇದ್ದವರು ನೆನಪಿಸಿಕೊಳ್ಳುವುದು ಹೀಗೆ
ಶ್ರೀಲಂಕಾವನ್ನು ಇಂಥ ದುಃಸ್ಥಿತಿಗೆ ತಳ್ಳಿದ ಈ ಸೋದರರ ಬಗ್ಗೆ ರಾಷ್ಟ್ರದಾದ್ಯಂತ ಆಕ್ರೋಶ ಇದೆ. ಆದರೂ ಸಮಾಜದ ವಿವಿಧ ಸ್ತರದಲ್ಲಿ ಇರುವವರು ಈ ಕುಟುಂಬವನ್ನು ನೆನಪಿಸಿಕೊಳ್ಳುತ್ತಾರೆ. ಇನ್ಷಾಫ್ ಇಬ್ರಾಹಿಂ ನಡೆಸುತ್ತಿದ್ದ ತಾಮ್ರದ ಕಾರ್ಖಾನೆಯು ಕೊಲಂಬೋದ ಹೊರ ಭಾಗದಲ್ಲಿ ಇತ್ತು. ಅದರಲ್ಲಿ ಬಾಂಗ್ಲಾದೇಶದ ಸರೋವರ್ ಕೆಲಸ ಮಾಡುತ್ತಿದ್ದವನು ಆತಂಕಕ್ಕೆ ಗುರಿ ಆಗಿದ್ದಾನೆ. "ಅವರು ಬಹಳ ಉದಾರಿಯಾಗಿದ್ದರು. ಬೇರೆ ಮಾಲೀಕರ ರೀತಿ ಇರುತ್ತಿರಲಿಲ್ಲ. ಅವರ ಬಳಿ ಕೆಲಸ ಮಾಡುವುದಕ್ಕೆ ಬಹಳ ಖುಷಿ ಆಗುತ್ತಿತ್ತು. ಈಗ ಮುಂದೆ ಏನು ಮಾಡಬೇಕು ಅಂತಲೇ ತಿಳಿಯುತ್ತಿಲ್ಲ" ಎಂದಿದ್ದಾನೆ.












Click it and Unblock the Notifications