ಬ್ಯಾಂಕಾಕಿನಲ್ಲಿ ವಾಯು ಮಾಲಿನ್ಯ, ಜನರ ಕಣ್ಣು, ಮೂಗಲ್ಲಿ ರಕ್ತಸ್ರಾವ
ಬ್ಯಾಂಕಾಕ್, ಫೆಬ್ರವರಿ 04: ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ನಲ್ಲಿ ವಾಯು ಮಾಲಿನ್ಯ ಅಪಾಯದ ಮಟ್ಟ ಮೀರಿದ್ದು, ಜನರ ಕಣ್ಣು, ಮೂಗಲ್ಲಿ, ಬಾಯಲ್ಲಿ ರಕ್ತಸ್ರಾವವಾಗುತ್ತಿರುವ ಚಿತ್ರಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ.
ಕೆಲ ಜನರ ಮೂಗಿನಿಂದ ರಕ್ತ ಒಸರುತ್ತಿದ್ದರೆ,ಕೆಲ ಜನರ ಕಣ್ಣುಗಳು ಕೆಂಪು ಬಣ್ಣಕ್ಕೆ ತಿರುಗುತ್ತಿವೆ. ಕೆಲವರು ತಮ್ಮ ಮೂಗಿನಿಂದ ರಕ್ತ ಜಿನುಗುತ್ತಿದೆ ಎಂದು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ದೆಹಲಿಯಲ್ಲಿ ಮತ್ತೆ ಸಮ-ಬೆಸ ಕಾರುಗಳ ಯೋಜನೆ ಶೀಘ್ರವೇ ಜಾರಿ
ಗಾಳಿಯಲ್ಲಿರುವ ವಿಷಕಾರಿ ಧೂಳಿನ ಕಣಗಳ ಪ್ರಮಾಣ PM 2.5 ಅಪಾಯ ಮಟ್ಟ ಮುಟ್ಟಿದೆ. ಬ್ಯಾಂಕಾಕಿನ 41ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಈ ಮಟ್ಟ ಸುರಕ್ಷಿತ ಮಟ್ಟ ಮೀರಿರುವುದು ಜನರಿಗೆ ತೊಂದರೆ ಉಂಟಾಗಲು ಕಾರಣ ಎಂದು ಥಾಯ್ಲೆಂಡ್ನ ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. PM 2.5ನಲ್ಲಿ ಧೂಳು, ಹೊಗೆ, ಮಾಲಿನ್ಯಯುಕ್ತ ದ್ರವ ಪದಾರ್ಥಗಳನ್ನು ಹೊಂದಿದ್ದು ವಾಯು ಗುಣಮಟ್ಟ ಇಂಡೆಕ್ಸ್ (ಎಕ್ಯೂಐ) ಪ್ರಮಾಣವನ್ನು ಅಧಿಕಾರಿಗಳು ಗಮನಿಸುತ್ತಿದ್ದಾರೆ.
ವಿಶ್ವದೆಲ್ಲೆಡೆ ನಗರ ಪ್ರದೇಶಗಳ ಮಾಲಿನ್ಯ ಪ್ರಮಾಣವನ್ನು ತಿಳಿಸುವ ಏರ್ ವಿಶ್ಯುವಲ್ ವೆಬ್ ತಾಣದ ಅಂಕಿ ಅಂಶದ ಪ್ರಕಾರ ಅತ್ಯಂತ ಮಾಲಿನ್ಯಯುಕ್ತ ನಗರಗಳ ಪಟ್ಟಿಯಲ್ಲಿ ನವದೆಹಲಿ ಮುಂದಿದ್ದರೆ, ಬ್ಯಾಂಕಾಕ್ 5ನೇ ಸ್ಥಾನದಲ್ಲಿದೆ.
ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಾಲಿನ್ಯ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರಿ ವಿರೋಧಿ ಅಭಿಯಾನ ಆರಂಭವಾಗಿದೆ. ಮಾಲಿನ್ಯದ ದುಷ್ಪರಿಣಾಮದಿಂದ ಪಾರಾಗಲು ಯಾವೆಲ್ಲ ರೀತಿಯ ಮಾಸ್ಕ್ಗಳನ್ನು ಧರಿಸುವುದು ಸುರಕ್ಷಿತ ಎಂಬ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಚೀನಾದಲ್ಲಿ ವಿಶ್ವದ ಎತ್ತರದ ವಾಯು ಮಾಲಿನ್ಯ ಶುದ್ಧೀಕರಣ ಘಟಕ
ವಾಯು ಮಾಲಿನ್ಯವನ್ನು ನಿಯಂತ್ರಣಕ್ಕೆ ತರಲು ಥಾಯ್ಲೆಂಡ್ ಸರ್ಕಾರವು ಮೋಡ ಬಿತ್ತನೆ ಮಾಡಿ ಕೃತಕ ಮಳೆ ಉಂಟು ಮಾದಲು ಯತ್ನಿಸಿತ್ತು. ಈ ಮೂಲಕದ ಮಾಲಿನ್ಯಕ್ಕೆ ಕಾರಣವಾದ ಸೂಕ್ಷ್ಮ ಮಾಲಿನ್ಯಕಾರಕಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಸರ್ಕಾರದ ಉದ್ದೇಶವಾಗಿತ್ತು. ಆದರೆ, ಮೋಡ ಬಿತ್ತನೆ ಯತ್ನ ವಿಫಲವಾಗಿದೆ. ಟ್ಯಾಂಕರ್ಗಳನ್ನು ಬಳಸಿ ಮುಗಿಲೆತ್ತರಕ್ಕೆ ನೀರು ಸಿಡಿಸುವ ಪ್ರಯತ್ನವೂ ಕೈಕೊಟ್ಟಿದೆ. ಸಾರ್ವಜನಿಕರು ಮಾಸ್ಕ್ ಧರಿಸಿ ಓಡಾಡುವುದು ಅನಿವಾರ್ಯವಾಗಿದೆ.