152 ಬಂಡಾಯ ಯೋಧರಿಗೆ ಗಲ್ಲು ಶಿಕ್ಷೆ ಪ್ರಕಟ
ಢಾಕಾ, ನ.6: ಇಲ್ಲಿನ ನ್ಯಾಯಾಲಯವೊಂದು 2009ರಲ್ಲಿ ನಡೆದ ಸೇನಾ ಬಂಡಾಯ ಹಾಗೂ ನರಮೇಧದ ಸಂಬಂಧ ಮಂಗಳವಾರ ಮಹತ್ವದ ತೀರ್ಪು ನೀಡಿದೆ. ಸುಮಾರು 152 ಯೋಧರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.
ಇಡೀ ವಿಶ್ವದಲ್ಲಿ ಇಷ್ಟೊಂದು ಮಂದಿಗೆ ಸಾಮೂಹಿಕ ಮರಣದಂಡನೆ ನೀಡುತ್ತಿರುವುದು ಇದೇ ಮೊದಲು ಎನ್ನಲಾಗಿದೆ.ಗಲ್ಲು ಶಿಕ್ಷೆಗೊಳಗಾಗಿರುವವರ ಪೈಕಿ ಬಾಂಗ್ಲಾದೇಶ್ ರೈಫಲ್ಸ್ ಮಿಲಿಟರಿ ವಿಭಾಗದ ಮಾಜಿ ಸಹಾಯಕ ನಿರ್ದೇಶಕರಾಗಿದ್ದ ತೌಹಿದ್ ಅಹಮದ್ ಕೂಡ ಸೇರಿದಂತೆ 74 ಮಂದಿ ಹಿರಿಯ ಸೇನಾ ಅಧಿಕಾರಿಗಳಿದ್ದಾರೆ.
ಪ್ರಕರಣ ಸಂಬಂಧ ಒಟ್ಟು 820 ಯೋಧರು, 26 ನಾಗರಿಕರನ್ನು ವಿಚಾರಣೆಗೊಳಪಡಿಸಿರುವ ಬಾಂಗ್ಲಾದ ಮೆಟ್ರೋಪಾಲಿಟನ್ ವಿಭಾಗೀಯ ನ್ಯಾಯಾಲಯವು ದೊಡ್ಡ ಪ್ರಮಾಣದಲ್ಲಿ ಮರಣದಂಡನೆ ವಿಧಿಸಿದೆ. ಅಲ್ಲದೇ ಇತರೆ 158 ಮಂದಿಗೆ ಜೀವಾವಧಿ, 251 ಮಂದಿಗೆ 3 ರಿಂದ 10 ವರ್ಷ ಕಾರಾಗೃಹ ಶಿಕ್ಷೆ ನೀಡಲಾಗಿದೆ. ಪ್ರಕರಣದ 270 ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ತೀರ್ಪು ಹಿನ್ನೆಲೆಯಲ್ಲಿ ಕೋರ್ಟ್ ಸುತ್ತಮುತ್ತಲೂ ಬಿಗಿ ಭದ್ರತೆ ಒದಗಿಸಲಾಗಿತ್ತು. ಸಮೀಪವೇ ಇದ್ದ ಕೇಂದ್ರ ಕಾರಾಗೃಹದಿಂದ ಕೈದಿಗಳನ್ನು ವ್ಯಾನ್ಗಳ ಮೂಲಕ ಕರೆತರಲಾಯಿತು.
ಪ್ರಕರಣದ ಬರ್ಬರತೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಅಖ್ತರ್ ಉಜ್ಜಮನ್, ''ದೋಷಿಗಳು ಎಸಗಿರುವ ತಪ್ಪಿಗಾಗಿ ಅವರನ್ನು ಸಾಯುವ ವರೆಗೂ ಗಲ್ಲಿನಿಂದ ಕೆಳಗಿಳಿಸಕೂಡದು. ಅವರ ಮೃತ ದೇಹಗಳನ್ನು ಸಂಬಂಧಿಸಿದವರಿಗೆ ಕೊಡಬಾರದು,'' ಎಂದಿದ್ದಾರೆ.
ಮೇಜರ್ ಜನರಲ್ ಅಜೀಜ್ ಅಹಮದ್ ತೀರ್ಪಿನ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ''ಮಹತ್ವದ ತೀರ್ಪಿನಿಂದಾಗಿ ಮೃತರ ಕುಟುಂಬಕ್ಕೆ ಸಮಾಧಾನ ಸಿಗಲಿದೆ,'' ಎಂದು ಅಜೀಜ್ ತಿಳಿಸಿದ್ದಾರೆ.
ಸಂಬಳ ಮತ್ತಿತರ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ 2009ರ ಫೆಬ್ರವರಿಯಲ್ಲಿ ಅಧಿಕಾರಿಗಳ ವಿರುದ್ಧ ಬಂಡಾಯವೆದ್ದಿದ್ದ ಯೋಧರು, 74 ಅಧಿಕಾರಿಗಳನ್ನು ಸಜೀವ ದಹನ ಮಾಡಿದ್ದರು.












Click it and Unblock the Notifications