Breaking: ಲೇಖಕ ಸಲ್ಮಾನ್ ರಶ್ದಿ ವೆಂಟಿಲೇಟರ್ನಿಂದ ಹೊರಕ್ಕೆ
ನ್ಯೂಯಾರ್ಕ್, ಆಗಸ್ಟ್ 14: ನ್ಯೂಯಾರ್ಕ್ನಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಚಾಕುವಿನಿಂದ ಇರಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಲೇಖಕ ಸಲ್ಮಾನ್ ರಶ್ದಿಯನ್ನು ರಾತ್ರಿ ವೆಂಟಿಲೇಟರ್ನಿಂದ ಹೊರತೆಗೆಯಲಾಗಿದೆ ಎಂದು ವರದಿಗಳು ತಿಳಿಸಿವೆ.
ನ್ಯೂಯಾರ್ಕ್ನ ಬಫಲೋ ಬಳಿಯ ಚೌಟಕ್ವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತೀಯ ಮೂಲದ ಕಾದಂಬರಿಕಾರ ಮತ್ತು ಖ್ಯಾತ ಲೇಖಕ ಸಲ್ಮಾನ್ ರಶ್ದಿ ಮೇಲೆ 10-15 ಬಾರಿ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿತ್ತು. ಸಲ್ಮಾನ್ ರಶ್ದಿ ಕುತ್ತಿಗೆ ಭಾಗಕ್ಕೆ ತೀವ್ರ ಗಾಯಗಳಾಗಿದ್ದು ಹಲವು ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು.
ಲೇಖಕ ಸಲ್ಮಾನ್ ರಶ್ದಿಯನ್ನು ವೆಂಟಿಲೇಟರ್ನಿಂದ ಹೊರಗೆ ತೆಗೆಯಲಾಗಿದ್ದು, ಅವರು ಮಾತನಾಡುತ್ತಿದ್ದಾರೆ ಎಂದು ಚೌಟಕ್ವಾ ಸಂಸ್ಥೆಯ ಅಧ್ಯಕ್ಷರು ಟ್ವೀಟ್ನಲ್ಲಿ ತಿಳಿಸಿದ್ದಾರೆ. ಸಲ್ಮಾನ್ ರಶ್ದಿ ಮೇಲೆ ದಾಳಿ ನಡೆಸಿದ ಶಂಕಿತ ದಾಳಿಕೋರನ ಮೇಲೆ ನ್ಯೂಯಾರ್ಕ್ ನ್ಯಾಯಾಲಯವು ಕೊಲೆ ಯತ್ನದ ಆರೋಪವನ್ನು ಹೊರಿಸಿದೆ.
ಲೇಖಕರ ಕುತ್ತಿಗೆ ಮತ್ತು ಹೊಟ್ಟೆಗೆ ಸರಿಸುಮಾರು 10-15 ಬಾರಿ ಇರಿದಿದ್ದಾರೆ ಎಂದು ಪ್ರಾಸಿಕ್ಯೂಟರ್ಗಳು ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಹಾದಿ ಮಾತರ್ನ ವಿಚಾರಣೆಯ ಸಂದರ್ಭದಲ್ಲಿ ತಿಳಿಸಿದ್ದಾರೆ. ಶಂಕಿತ ಆರೋಪಿ ಹಾದಿ ಮಾತರ್ ಅವರ "ಶಿಯಾ ಉಗ್ರವಾದ" ಮತ್ತು ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ (IRGC) ಯ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ ಎನ್ನಲಾಗಿದೆ.
ನ್ಯೂಯಾರ್ಕ್ನ ಬಫಲೋ ಬಳಿಯ ಚೌಟಕ್ವಾದಲ್ಲಿ ನಡೆದ ಸಮಾರಂಭದಲ್ಲಿ ಲೇಖಕ ಸಲ್ಮಾನ್ ರಶ್ದಿ ಮಾತನಾಡಲಿದ್ದರು, ಈ ವೇಳೆ ಶಂಕಿತ ವ್ಯಕ್ತಿಯು ವೇದಿಕೆಯ ಮೇಲೆ ಧಾವಿಸಿ ಅವರನ್ನು ಚಾಕುವಿನಿಂದ ಇರಿದಿದ್ದಾನೆ. ಅಲ್ಲಿನ ಸಿಬ್ಬಂದಿ ಮತ್ತು ಇತರ ನಡುವೆ ಈ ಸಮಯದಲ್ಲಿ ಘರ್ಷಣೆ ನಡೆದಿತ್ತು. ಘಟನೆಯಲ್ಲಿ ಸಂದರ್ಶಕ ರಾಲ್ಫ್ ಹೆನ್ರಿ ರೀಸ್ ಕೂಡ ದಾಳಿಗೆ ಒಳಗಾಗಿದ್ದರು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಲ್ಮಾನ್ ರಶ್ದಿಯವರನ್ನು ವಿಮಾನದಲ್ಲಿ ಆಸ್ಪತ್ರೆಗೆ ಸಾಗಿಸಬೇಕಾಯಿತು. ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಕಣ್ಣು ಕಳೆದುಕೊಳ್ಳಬಹುದು, ಅವರ ತೋಳುಗಳಲ್ಲಿ ನರಗಳು ತುಂಡಾಗಿರಬಹುದು ಮತ್ತು ಅವನ ಯಕೃತ್ತು (liver) ಹಾನಿಗೊಳಗಾಗಿರಬಹುದು ಎಂದು ರಶ್ದಿ ಅವರ ಏಜೆಂಟ್ ಆಂಡ್ರ್ಯೂ ವೈಲ್ಲಿ ತಿಳಿಸಿದ್ದರು.
ಸಲ್ಮಾನ್ ರಶ್ದಿ ಮೇಲಿನ ದಾಳಿಗೆ ಪ್ರಪಂಚದಾದ್ಯಂತ ಆಕ್ರೋಶ ಉಂಟಾಗಿದೆ. ಯುಎಸ್ ಅಧ್ಯಕ್ಷ ಜೋ ಬೈಡೆನ್ ಈ "ಕೆಟ್ಟ ದಾಳಿ" ಯನ್ನು ಖಂಡಿಸಿದ್ದಾರೆ. ಬ್ರಿಟಿಷ್ ನಾಯಕ ಬೋರಿಸ್ ಜಾನ್ಸನ್ ಅವರು ದಾಳಿಯಿಂದ ಆತಂಕಗೊಂಡಿರುವುದಾಗಿ ತಿಳಿಸಿದ್ದಾರೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ದಾಳಿಯನ್ನು "ಖಂಡನೀಯ" ಮತ್ತು "ಹೇಡಿತನ" ಎಂದು ಕರೆದಿದ್ದಾರೆ.