ಭಾರತಕ್ಕೆ ಪರಮಾಣು ಶಕ್ತಿ ತುಂಬಿದ ಶಾಂತಿಧೂತ: ವಿದೇಶಿ ಪತ್ರಿಕೆಗಳಲ್ಲಿ ವಾಜಪೇಯಿ
ಬೆಂಗಳೂರು, ಆಗಸ್ಟ್ 17: ಅಟಲ್ ಬಿಹಾರಿ ವಾಜಪೇಯಿ ಅವರ ಕುರಿತು ರಾಷ್ಟ್ರ ಮಾತ್ರವಲ್ಲ ಅಂತರರಾಷ್ಟ್ರ ವಲಯದಲ್ಲಿಯೂ ಭಾರಿ ಮನ್ನಣೆ ಇತ್ತು. ವಿದೇಶಾಂಗ ವ್ಯವಹಾರಗಳಲ್ಲಿ ಆಸಕ್ತಿ ಇದ್ದ ಅವರಿಗೆ ವಿದೇಶ ರಾಜಕಾರಣಿಗಳು ಆಪ್ತರಾಗಿದ್ದರು.
ಅವರು ಪ್ರಧಾನಿಯಾದ ಮೇಲೆ ಪಾಕಿಸ್ತಾನವೂ ಸೇರಿದಂತೆ ಹಲವು ರಾಷ್ಟ್ರಗಳೊಂದಿಗೆ ಭಾರತದ ಸಂಬಂಧವನ್ನು ಗಟ್ಟಿ ಮಾಡುವ ಪ್ರಯತ್ನ ಮಾಡಿದ್ದರು. ತಾವು ಹೋದ ರಾಷ್ಟ್ರದಲ್ಲಿ ತಮ್ಮದೊಂದು ಛಾಪು ಮೂಡಿಸದೇ ಬರುತ್ತಿರಲಿಲ್ಲ.
ಭಾರತ ಕಂಡ ಅಗ್ರಮಾನ್ಯ ರಾಜಕೀಯ ಮುತ್ಸದ್ದಿಗೆ ದೇಶದ ಮಾಧ್ಯಮ ವಲಯ ನುಡಿ ಗೌರವ ಸಲ್ಲಿಸಿದೆ. ಹಾಗೆಯೇ ಅಂತರರಾಷ್ಟ್ರೀಯ ಪತ್ರಿಕೆಗಳೂ ಕೂಡ ವಾಜಪೇಯಿ ಅವರ ಅಗಲಿಕೆಯನ್ನು ಪದಗಳ ಮೂಲಕ ಸ್ಮರಿಸಿದೆ ಯಾವ ಪತ್ರಿಕೆ ಏನು ಹೇಳಿದೆ ಇಲ್ಲಿದೆ ಮಾಹಿತಿ...

ವಾಜಪೇಯಿ ಅವರನ್ನು ಹೊಗಳಿದ ಪಾಕಿಸ್ತಾನ ಪತ್ರಿಕೆ
ಪಾಕಿಸ್ತಾನದ ಪ್ರಮುಖ ದಿನಪತ್ರಿಕೆ 'ಡಾನ್' ವಾಜಪೇಯಿ ಅವರನ್ನು ಪಾಕಿಸ್ತಾನದೊಂದಿಗೆ ಶಾಂತಿ ಪಕ್ಷಪಾತಿ ಎಂದು ಕರೆದಿದೆ. ವಾಜಪೇಯಿ ಅವರು ಪಾಕಿಸ್ತಾನದೊಂದಿಗೆ ಶಾಂತಿಯ ಹಸ್ತ ಚಾಚಿದ್ದನ್ನು ಅತಿಯಾಗಿ ಹೊಗಳಿರುವ ಪಾಕ್ ಪತ್ರಿಕೆ. ಅವರ ಪಾಕಿಸ್ತಾನದ ಭೇಟಿಗಳನ್ನು ನೆನಪು ಮಾಡಿದೆ. 'ತಪ್ಪು ಪಕ್ಷದ್ದ ಉತ್ತಮ ವ್ಯಕ್ತಿ' ಎಂದು ಹೇಳಿರುವ ಡಾನ್, 'ವಾಜಪೇಯಿ ಅವರು ಪಾಕಿಸ್ತಾನದಲ್ಲಿ ಚುನಾವಣೆ ಗೆಲ್ಲಬಲ್ಲರು' ಎಂದು ನವಾಜ್ ಷರೀಫ್ ಹೇಳಿದ್ದ ಮಾತುಗಳನ್ನು ಪುನರ್ ನೆಪಿಸಿದೆ. ಮೋದಿ ಅವರನ್ನು ಹಾಗೂ ಅವರ ಸಮಾಜ ಒಡೆಯುವ ನೀತಿಗಳನ್ನು ನಿಯಂತ್ರಣದಲ್ಲಿಡಬಹುದಾಗಿದ್ದ ಏಕೈಕ ನಾಯಕ ಅವರಾಗಿದ್ದರು ಎಂದು ಡಾನ್ ಹೇಳಿದೆ.

ದಿ ಟೆಲಿಗ್ರಾಫ್ ಅದ್ಭುತ ತಲೆ ಬರಹ
ಸದಾ ತನ್ನ ಚುರುಕಾದ ಕುಟುಕುವ ತಲೆಬರಹದಿಂದ ಖ್ಯಾತವಾಗಿರುವ ಟೆಲಿಗ್ರಾಫ್ ಪತ್ರಿಕೆ ವಾಜಪೇಯಿ ಅವರ ನಿಧನಕ್ಕೆ ಅದ್ಬುತ ಹೆಡ್ಲೈನ್ ನೀಡಿದೆ. ಪ್ರಸ್ತುತ ರಾಜಕೀಯಕ್ಕೂ ಸಲ್ಲುವಂತೆ 'ರಾಜಧರ್ಮ ರಿಮೈಂಡರ್' (ರಾಜಧರ್ಮ ನೆನಪಿಸುವಾತ) ಎಂದು ತಲೆ ಬರಹ ನೀಡಿದೆ. ತಮ್ಮದೇ ಪಕ್ಷದ ಮೋದಿಗೆ ರಾಜಧರ್ಮ ಪಾಲಿಸುವಂತೆ ಅಟಲ್ ಜೀ ಹೇಳಿದ್ದು ಆಗ ಬಹುದೊಡ್ಡ ಸುದ್ದಿಯಾಗಿತ್ತು.

ದಿ ವಾಷಿಂಗ್ಟನ್ ಪೋಸ್ಟ್ ವರದಿ
ಪರಮಾಣು ರೇಸ್ ಹಾಗೂ ಶಾಂತಿ ಎರಡನ್ನೂ ಪ್ರಾರಂಭಿಸಿದ್ದಾತ ಎಂದು ವಾಜಪೇಯಿ ಅವರನ್ನು ನ್ಯೂ ಯಾರ್ಕ್ ಟೈಮ್ಸ್ ಕರೆದಿದೆ. ನಿಷ್ಕಲ್ಮಷ ರಾಜಕಾರಣಿ ಎಂದು ಗುರುತಿಸಿರುವ ವಾಷಿಂಗ್ಟನ್ ಪೋಸ್ಟ್, ಅವರೊಬ್ಬ ಬಲಫಂಥೀಯ ರಾಜಕಾರಣಿ ಆಗಿದ್ದರು ಎಂದು ಕರೆದಿದೆ. ಅವರು ಮೂಡಿಸಿರುವ ಛಾಪು ಭಾರತ ರಾಜಕಾರಣದಲ್ಲಿ ಬಹಳ ಕಾಲ ಉಳಿಯಲಿದೆ ಎಂದು ವಾಷಿಂಗ್ಟನ್ ಪೋಸ್ಟ್ ಹೇಳಿದೆ.

ಹಿಂದೂ ರಾಷ್ಟ್ರೀಯತೆಯ ಸಂಭಾವಿತ- ನ್ಯೂಯಾರ್ಕ್ ಟೈಮ್ಸ್
ಹಿಂದೂ ರಾಷ್ಟ್ರೀಯತೆಯ ಸಂಭಾವಿತ ಮುಖ ವಾಜಪೇಯಿ ನಿಧನ ಎಂದು ಪ್ರತಿಷ್ಠಿತ ನ್ಯೂಯಾರ್ಕ್ಸ್ ಟೈಮ್ಸ್ ವರದಿ ಮಾಡಿದೆ. ಗೋಧ್ರಾ ಹತ್ಯಾಕಾಂಡದ ಸಮಯದಲ್ಲಿ ವಾಜಪೇಯಿ, ಮೋದಿ ಅವರನ್ನು ವಿರೋಧಿಸಿದ್ದು, ಬಾಬ್ರಿ ಮಸೀದಿ ಧ್ವಂಸ ಪ್ರಕರಣವನ್ನು ಕರಾಳ ದಿನ ಎಂದು ಹೇಳಿದ್ದನ್ನು ಅದು ಉಲ್ಲೇಖಿಸಿದೆ. ನ್ಯೂಕ್ಲಿಯರ್ ಪರೀಕ್ಷೆ ಮತ್ತು ಪಾಕಿಸ್ತಾನದೊಂದಿಗೆ ಶಾಂತಿ ಮಾತುಕತೆಯನ್ನೂ ಅದು ಉಲ್ಲೇಖ ಮಾಡಿದೆ.

ಭಾರತಕ್ಕೆ ಪರಮಾಣು ಶಕ್ತಿ ತುಂಬಿದಾತ-ಬಿಬಿಸಿ
ಭಾರತಕ್ಕೆ ಪರಮಾಣು ಶಕ್ತಿ ತುಂಬಿದ ವಾಜಪೇಯಿ ನಿಧನ ಎಂದು ಬಿಬಿಸಿ ಹೆಡ್ಲೈನ್ ನೀಡಿದೆ. ದೀರ್ಘ ಲೇಖನ ಪ್ರಕಟಿಸಿರುವ ಅದು, ವಾಜಪೇಯಿ ನಡೆದು ಬಂದ ಹಾದಿಯ ಮಾಹಿತಿ ನೀಡಿದೆ.

ಎತ್ತರದ ರಾಜಕಾರಣಿ ಅಸ್ತಂಗತ- ದಿ ಗಾರ್ಡಿಯನ್
ದಿ ಗಾರ್ಡಿಯನ್ ಪತ್ರಿಕೆಯು ಸರಳ ಹೆಡ್ಲೈನ್ ನೀಡಿದೆಯಾದರೂ, ವಾಜಪೇಯಿ ಅವರು ಪಾಕಿಸ್ತಾನದ ಜೊತೆ ನಡೆಸಿದ ಶಾಂತಿ ಸಂಬಂಧ ಸುಧಾರಣೆಹ ಯತ್ನಗಳನ್ನು ಬಹುವಾಗಿ ಉಲ್ಲೇಖಿಸಿ ಹೊಗಳಿದೆ. ಭಾರತದ ಎತ್ತರದ ರಾಜಕೀಯ ವ್ಯಕ್ತಿ ಎಂದೂ ವಾಜಪೇಯಿ ಅವರನ್ನು ಗಾರ್ಡಿಯನ್ ಕರೆದಿದೆ. ಮೋದಿ, ರಾಹುಲ್ ಗಾಂಧಿ, ಪಾಕ್ ಸಭಾವ್ಯ ಪ್ರಧಾನಿ ಇಮ್ರಾನ್ ಖಾನ್ ಅವರ ಹೇಳಿಕೆಗಳನ್ನು ಪತ್ರಿಕೆ ದಾಖಲಿಸಿದೆ.












Click it and Unblock the Notifications