ಅಭಿನಂದನ್ ಬಿಡುಗಡೆಯಾಗದಿದ್ದರೆ ಭಾರತ ದಾಳಿ ಮಾಡಲಿದೆ: ಗಡಗಡ ನಡುಗಿದ್ದ ಪಾಕ್ ಸೇನಾ ಮುಖ್ಯಸ್ಥ
ಇಸ್ಲಾಮಾಬಾದ್, ಅಕ್ಟೋಬರ್ 29: ಭಾರತೀಯ ಸೇನೆಯ ದಾಳಿಯ ಭಯದಿಂದ ಇಮ್ರಾನ್ ಖಾನ್ ಸರ್ಕಾರವು ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಕೂಡಲೇ ಬಿಡುಗಡೆ ಮಾಡಿತ್ತು ಎಂದು ಪಾಕಿಸ್ತಾನದ ಸಂಸತ್ನಲ್ಲಿ ಬುಧವಾರ ಮಾತನಾಡಿದ ಸಂಸದರೊಬ್ಬರು ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.
ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರು 2019ರ ಫೆಬ್ರವರಿಯಲ್ಲಿ ನಡೆದ ಮಹತ್ವದ ಸಭೆಯೊಂದರಲ್ಲಿ ತಮ್ಮ ಆತಂಕವನ್ನು ಹಂಚಿಕೊಂಡಿದ್ದರು. ಆ ರಾತ್ರಿ 9 ಗಂಟೆಯ ಒಳಗೆ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡದೆ ಹೋದರೆ ಪಾಕಿಸ್ತಾನದ ಮೇಲೆ ಭಾರತ ದಾಳಿ ನಡೆಸಲಿದೆ ಎಂದು ಹೇಳಿದ್ದರು ಎಂಬುದಾಗಿ ರಾಷ್ಟ್ರೀಯ ಸಂಸತ್ನಲ್ಲಿ ಮಾತನಾಡಿದ ಪಾಕಿಸ್ತಾನ್ ಮುಸ್ಲಿಂ ಲೀಗ್-ಎನ್ (ಪಿಎಂಎಲ್-ಎನ್) ಮುಖ್ಯಸ್ಥ ಅಯಾಜ್ ಸಾದಿಕ್ ತಿಳಿಸಿದ್ದಾರೆ.
ಪಾಕಿಸ್ಥಾನ್ ಪೀಪಲ್ಸ್ ಪಾರ್ಟಿ ಮತ್ತು ಪಿಎಂಎಲ್-ಎನ್ ಸೇರಿದಂತೆ ಸಂಸದೀಯ ಮುಖಂಡರು ಮತ್ತು ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಹಾಜರಿದ್ದ ಸಭೆಯಲ್ಲಿ ಮಾತನಾಡಿದ್ದ ಖುರೇಷಿ, ಪಾಕಿಸ್ತಾನದ ಗಡಿಯೊಳಗೆ ಪ್ರವೇಶಿಸಿ ಸಿಕ್ಕಿಬಿದ್ದಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರು ಎಂದು ಸಾದಿಕ್ ಸಂಸತ್ನಲ್ಲಿ ಹೇಳಿದ್ದಾರೆ. ಮುಂದೆ ಓದಿ.

ಗಡಗಡ ನಡುಗಿದ್ದರು
'ಇಮ್ರಾನ್ ಖಾನ್ ಅವರು ಹಾಜರಾಗಲು ನಿರಾಕರಿಸಿದ್ದ ಸಭೆಯಲ್ಲಿ ಶಾ ಮೊಹಮ್ಮದ್ ಖುರೇಷಿ ಅವರು ಮಾತನಾಡಿದ್ದು ನನಗೆ ನೆನಪಿದೆ. ಸೇನಾ ಮುಖ್ಯಸ್ಥ ಬಾಜ್ವಾ ಅವರು ಸಭೆಯ ಕೊಠಡಿಗೆ ಬಂದಾಗ ಅವರ ಕಾಲುಗಳು ಗಡಗಡ ನಡಗುತ್ತಿದ್ದವು. ಅವರು ವಿಹ್ವಲರಾಗಿದ್ದರು. ದೇವರ ಇಚ್ಛೆ, ಅಭಿನಂದನ್ ಅವರನ್ನು ಕಳಿಸಿಬಿಡಿ. ಪಾಕಿಸ್ತಾನದ ಮೇಲೆ ರಾತ್ರಿ 9 ಗಂಟೆಗೆ ಭಾರತ ದಾಳಿ ಮಾಡಲು ಸಿದ್ಧತೆ ನಡೆಸಿದೆ ಎಂದು ವಿದೇಶಾಂಗ ಸಚಿವರು ಹೇಳಿದ್ದರು' ಎಂದು ಸಾದಿಕ್ ತಿಳಿಸಿದ್ದಾರೆ.

ಬೆಂಬಲ ಮುಂದುವರಿಸಲು ಆಗಲಿಲ್ಲ
ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಸೇರಿದಂತೆ ಎಲ್ಲ ವಿಚಾರಗಳಲ್ಲಿಯೂ ವಿರೋಧಪಕ್ಷಗಳು ಪಾಕಿಸ್ತಾನವನ್ನು ಬೆಂಬಲಿಸಿದ್ದವು. ಆದರೆ ಆ ಬೆಂಬಲವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ ಎಂದು ಕೂಡ ಅಯಾಜ್ ಸಾದಿಕ್ ತಿಳಿಸಿದ್ದಾರೆ.

ಅಭಿನಂದನ್ ಬಂಧಿಸಿದ್ದ ಪಾಕ್
ಭಾರತದ ಗಡಿಯೊಳಗೆ ಪ್ರವೇಶಿಸಿದ್ದ ಪಾಕಿಸ್ತಾನದ ಎಫ್-16 ಫೈಟರ್ ಜೆಟ್ಅನ್ನು ಬೆನ್ನಟ್ಟಿದ್ದ ವಿಂಗ್ ಕಮಾಂಡರ್ ಅಭಿನಂದನ್, ಪಾಕ್ ಗಡಿಯೊಳಗೆ ಹೋಗಿ ಅದರ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಅವರು ಪಾಕಿಸ್ತಾನದ ಸೇನೆಯ ವಶಕ್ಕೆ ಸಿಕ್ಕಿದ್ದರು. ಬಳಿಕ ಅವರನ್ನು ಮಾರ್ಚ್ 1ರಂದು ಅಟ್ಟಾರಿ-ವಾಘಾ ಗಡಿ ಮೂಲಕ ಭಾರತಕ್ಕೆ ಹಸ್ತಾಂತರಿಸಲಾಗಿತ್ತು.

ಪುಲ್ವಾಮಾ ದಾಳಿ ಪ್ರತೀಕಾರ
ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ಪಿಎಫ್ ಸೈನಿಕರನ್ನು ಕೊಂಡೊಯ್ಯುತ್ತಿದ್ದ ಸೇನಾ ವಾಹನದ ಮೇಲೆ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಆತ್ಮಾಹುತಿ ದಾಳಿ ನಡೆಸಿ 40 ಯೋಧರನ್ನು ಬಲಿ ತೆಗೆದುಕೊಂಡಿತ್ತು. ಅದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನದ ನೆಲೆಗಳಲ್ಲಿನ ಉಗ್ರರ ಶಿಬಿರಗಳ ಮೇಲೆ ಭಾರತ ವೈಮಾನಿಕ ದಾಳಿ ನಡೆಸಿತ್ತು. ಅದರ ಮರುದಿನ ಅಭಿನಂದನ್ ಪಾಕಿಸ್ತಾನದ ಗಡಿಯೊಳಗೆ ಸಿಕ್ಕಿಬಿದ್ದಿದ್ದರು.












Click it and Unblock the Notifications