ಪಾಕಿಸ್ತಾನದಲ್ಲಿ ಭುಗಿಲೆದ್ದ ಆಂತರಿಕ ಸಂಘರ್ಷಕ್ಕೆ 6 ಬಲಿ, 174 ಜನರಿಗೆ ಗಾಯ
ಇಸ್ಲಾಮಾಬಾದ್, ನವೆಂಬರ್ 26: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. 2017ರ ಚುನಾವಾಣಾ ಕಾಯ್ದೆಗೆ ತಿದ್ದುಪಡಿ ಮಾಡಿದ್ದನ್ನು ವಿರೋಧಿಸಿ ಪ್ರತಿಭಟನಾಕಾರರು ಬೀದಿಗಿಳಿದಿದ್ದು ಭದ್ರತಾ ಪಡೆಗಳೊಂದಿಗೆ ನೇರ ಸಂಘರ್ಷಕ್ಕೆ ಇಳಿದಿದ್ದಾರೆ.
ಇದರಿಂದ 6 ಜನರು ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇವರಲ್ಲಿ 111ಕ್ಕೂ ಹೆಚ್ಚು ಭದ್ರತಾ ಪಡೆ ಸಿಬ್ಬಂದಿಗಳು ಸೇರಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡುತ್ತಿದ್ದು, ಸೇನೆಯನ್ನು ರಾಜಧಾನಿಗೆ ಕರೆಸಿಕೊಳ್ಳಲಾಗಿದೆ.
2017ರ ಚುನಾವಾಣಾ ಕಾಯ್ದೆಗೆ ತಿದ್ದುಪಡಿ ಮಾಡಿದ್ದನ್ನು ವಿರೋಧಿಸಿ ನವೆಂಬರ್ 8ರಿಂದ ಇಸ್ಲಾಮಾಬಾದ್ ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ವಿವಿಧ ಧಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರು ಜನರು ರಾಜಧಾನಿಯನ್ನು ಸಂಪರ್ಕಿಸುವ ಹೆದ್ದಾರಿಗಳನ್ನೇ ಬಂದ್ ಮಾಡಿದ್ದಾರೆ.

ಸಚಿವರ ರಾಜೀನಾಮೆಗೆ ಒತ್ತಾಯ
ಚುನಾವಾಣಾ ಕಾಯ್ದೆಗೆ ತಿದ್ದುಪಡಿ ತಂದಿರುವ ಕಾನೂನು ಸಚಿವ ಝಾಹಿದ್ ಹಮೀದ್ ಅವರ ರಾಜೀನಾಮೆಗೆ ಪ್ರತಿಭಟನಾಕಾರರು ಬೇಡಿಕೆಯಿಟ್ಟಿದ್ದಾರೆ. ಜತೆಗೆ ರಾವಲ್ಪಿಂಡಿಯಲ್ಲಿ ಮಾಜಿ ಆಂತರಿಕ ಸಚಿವ ನಿಸಾರ್ ಅಲಿ ಅವರ ನಿವಾಸಕ್ಕೂ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದಾರೆ. ಕರಾಚಿ, ಲಾಹೋರ್, ಗುಜ್ರನ್ ವಾಲಾ, ಫೈಸಲಾಬಾದ್ ಸೇರಿ ದೇಶದ ಇತರ ಭಾಗಗಳಿಗೂ ಪ್ರತಿಭಟನೆ ಕ್ಷಿಪ್ರವಾಗಿ ವಿಸ್ತರಣೆಯಾಗಿದೆ.

ಹೈಕೋರ್ಟ್ ಮೆಟ್ಟಿಲೇರಿದ ಪ್ರತಿಭಟನೆ
ಪ್ರತಿಭಟನಾಕಾರರು ಹೆದ್ದಾರಿ ಬಂದ್ ಮಾಡಿದ್ದನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಈ ಆದೇಶವನ್ನು ಜಾರಿಗೊಳಿಸಲು ಆಂತರಿಕ ಸಚಿವ ಅಹ್ಸಾನ್ ಇಕ್ಬಾಲ್ ವಿಫಲವಾದ ಹಿನ್ನಲೆಯಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿತ್ತು.

ಹಿಂಸೆಗೆ ತಿರುಗಿದ ಪ್ರತಿಭಟನೆ
ಇದಾದ ಬಳಿಕ ಶನಿವಾರ 8,000 ಸಾವಿರಕ್ಕೂ ಹೆಚ್ಚು ಭದ್ರತಾ ಪಡೆಗಳು ಪ್ರತಿಭಟನಾಕಾರರನ್ನು ಚದುರಿಸಲು ಮುಂದಾದಾಗ ಕಾರ್ಯಾಚರಣೆ ಗಲಭೆಗೆ ತಿರುಗಿದೆ. ಈ ವೇಳೆ 6 ಜನರು ಮೃತಪಟ್ಟು, ಭಾನುವಾರದ ವೇಳೆಗೆ 200ಕ್ಕೂ ಹೆಜ್ಜು ಜನರು ಗಾಯಗೊಂಡಿದ್ದಾರೆ.

ನ್ಯೂಸ್ ಚಾನಲ್ ಬಂದ್
ದೇಶದಾದ್ಯಂತ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ಫೇಸ್ಬುಕ್, ಟ್ವಿಟರ್ ನಂಥ ಸಾಮಾಜಿಕ ಜಾಲತಾಣಗಳು ಹಾಗೂ ಖಾಸಗಿ ಸುದ್ದಿವಾಹಿನಿಗಳ ಪ್ರಸಾರವನ್ನು ಪಾಕಿಸ್ತಾನ ಸರ್ಕಾರ ಸ್ಥಗಿತಗೊಳಿಸಿದೆ.
ಜಲಫಿರಂಗಿ, ರಬ್ಬರ್ ಬುಲೆಟ್ ಮತ್ತು ಅಶ್ರುವಾಯು ಪ್ರಯೋಗಿಸುತ್ತಿರುವ ಭದ್ರತಾ ಪಡೆಗಳು ಪ್ರತಿಭಟನಾಕಾರರನ್ನು ಚದುರಿಸಲು ಹರ ಸಾಹಸ ಪಡುತ್ತಿದ್ದಾರೆ. ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ಪಾಕಿಸ್ತಾನ ಸರಕಾರಕ್ಕೆ ಗಂಡಾಂತರ ತಪ್ಪಿದ್ದಲ್ಲ.












Click it and Unblock the Notifications